ಪಾಟೀಲ ಪುಟ್ಟಪ್ಪನವರಿಗೆ ಸಾಹಿತ್ಯ ಪರಿಷತ್ನ ಗೌರವ ಸದಸ್ಯತ್ವ
ಬೆಂಗಳೂರು: ಹಿರಿಯ ಪತ್ರ ಕರ್ತ ಹಾಗೂ ಬರಹಗಾರ ಡಾ।ಪಾಟೀಲ ಪುಟ್ಟಪ್ಪರಿಗೆ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಸದಸ್ಯತ್ವದ ಮನ್ನಣೆ ನೀಡಿದೆ.
ಪ್ರೊ. ಎಸ್.ವಿ.ಪರಮೇಶ್ವರ ಭಟ್ಟರ ನಿಧನ ದಿಂದ ತೆರವಾಗಿರುವ ಈ ಸ್ಥಾನಕ್ಕೆ ಪಾಟೀಲ ಪುಟ್ಟಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ। ಸಿ.ವೀರಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಾಪು ಎಂದೇ ಗುರುತಿಸಿಕೊಂಡಿರುವ ಪಾಟೀಲ ಪುಟ್ಟಪ್ಪನವರಿಗೆ ಗೌರವ ಸದಸ್ಯತ್ವದ ಮನ್ನಣೆಯ ಸಲುವಾಗಿ ನೆನಪಿನ ಕಾಣಿಕೆ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಗುವುದು.
ಸನ್ಮಾನದ ದಿನದಂದೇ ಪಾಪು ಅವರ ಗ್ರಂಥ ಪ್ರದರ್ಶನ ಕಾರ್ಯಕ್ರಮವಿರುತ್ತದೆ. ಜೊತೆಗೆ ಅವರ ಸಾಹಿತ್ಯ ಸಾಧನೆಗಳನ್ನು ಒಳಗೊಂಡ ‘ವಾಚಿಕೆ’ ಯನ್ನೂ ಪ್ರಕಟಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಪಾಟೀಲ ಪುಟ್ಟಪ್ಪನವರಿಗೆ ಗೌರವ ಸದಸ್ಯತ್ವ ಪ್ರದಾನ ಮಾಡುವ ದಿನಾಂಕವನ್ನು ಸದ್ಯದಲ್ಲೇ ನಿರ್ಧರಿಸಲಾಗುವುದು. ಕನ್ನಡ ಸಾಂಸ್ಕೃತಿಕ ಲೋಕ ದಲ್ಲಿ ಉನ್ನತ ಸಾಧನೆ ಮಾಡಿರುವ ಗಣ್ಯರಿಗೆ ಪರಿಷತ್ತು ‘ಗೌರವ ಸದಸ್ಯತ್ವ’ದ ಪುರಸ್ಕಾರ ವನ್ನು 1985ರಿಂದ ನೀಡುತ್ತ ಬಂದಿದೆ.
ವಕೀಲಿ ವೃತ್ತಿ, ಪತ್ರಿಕೋದ್ಯಮದಲ್ಲಿ ಹೆಸರು : ಪಾಪು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಅಮೆರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ. ನಂತರ ಕಾನೂನು ಪದವಿ ಗಳಿಸಿ ವಕೀಲಿ ವೃತ್ತಿ ಆರಂಭಿಸಿದರು. 1946-47ರ ಅವಧಿಯಲ್ಲಿ ‘ವಿಶಾಲ ಕರ್ನಾಟಕ’ ಪತ್ರಿಕೆಯ ಸಂಪಾದಕರಾದರು. ವಾರ ಪತ್ರಿಕೆಯಾಗಿದ್ದ ವಿಶಾಲ ಕರ್ನಾಟಕ ದಿನಪತ್ರಿಕೆಯಾಗಿದ್ದು ಪಾಪು ಅವರ ಸಂಪಾದಕತ್ವದಲ್ಲಿ. ನಂತರ ನವ ಯುಗ ಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು. 1954ರಲ್ಲಿ ‘ಪ್ರಪಂಚ’ ವಾರಪತ್ರಿಕೆ ಆರಂಭಿಸಿದರು.
ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಕಾವಲು ಸಮಿತಿಯ ಅಧ್ಯಕ್ಷಗಿರಿ ರಾಜ್ಯಸಭಾ ಸದಸ್ಯತ್ವಗಳ ಗೌರವ ದಕ್ಕಿಸಿಕೊಂಡ ಪಾಪು, ಪತ್ರಿಕೋದ್ಯಮದ ಶ್ರೇಷ್ಠ ಪ್ರಶಸ್ತಿಯಾದ ಟಿಯೆಸ್ಸಾರ್ ಪುರಸ್ಕಾರಕ್ಕೂ ಭಾಜನರಾದರು. ನಾಡೋಜ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳೂ ಇವರಿಗೆ ಸಂದಿವೆ.
(ಇನ್ಫೋ ವಾರ್ತೆ)