ಕಡಲಲ್ಲೊಂದು ಬೊಗಸೆ ದಕ್ಕಿಸಿಕೊಂಡವರೇ, ನಿಮಗೆಲ್ಲ ಅಭಿನಂದನೆ
ಬೆಂಗಳೂರು : ದಕ್ಷಿಣ ಕನ್ನಡವೆಂದರದು ಬರಿ ನೆಲವಲ್ಲ , ಪ್ರತಿಭೆಯ ತವರು . ಕನ್ನಡದ ಮೊದಲ ಪತ್ರಿಕೆ ಮಂಗಳೂರು ಸಮಾಚಾರ, ಪದ್ಯಂ ವಧ್ಯಂ ಎಂದು ಹೊಸಗನ್ನಡ ಗದ್ಯಕ್ಕೆ ನಾಂದಿ ಹಾಡಿದ ಮುದ್ದಣ, ಸಣ್ಣಕಥೆಯನ್ನು ಕನ್ನಡಕ್ಕೆ ಪರಿಚಯಿಸಿದ ಪಂಜೆ ಮಂಗೇಶರಾಯ, ಮೊದಲ ಕಾದಂಬರಿ ಇಂದಿರಾಬಾಯಿ ಖ್ಯಾತಿಯ ಗುಲ್ವಾಡಿ ವೆಂಕಟರಾಯರು, ರಾಷ್ಟ್ರಕವಿ ಎನಿಸಿಕೊಂಡ ಮೊದಲಿಗ ಗೋವಿಂದ ಪೈ ...
ವೇದಿಕೆಯಲ್ಲಿ ನೆರೆದಿದ್ದ ದಕ್ಷಿಣ ಕನ್ನಡದ ಹತ್ತು ಗಣ್ಯರನ್ನು ಕಂಡಾಗ ಕವಿ ಶಿವರುದ್ರಪ್ಪ ಹಳೆಯ ನೆನಪುಗಳನ್ನು ಭಾವುಕರಾಗಿ ಮೆಲುಕು ಹಾಕಿದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ . ಅದು, ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ ದಕ್ಷಿಣ ಕನ್ನಡದ ಆಯ್ದ 10 ಮಂದಿಗೆ ಭಾರ್ಗವ ಪ್ರಶಸ್ತಿಯನ್ನು ನೀಡಿ ಪುರಸ್ಕರಿಸುವ ಸಮಾರಂಭ. ಬೆಂಗಳೂರಿನ ದಕ್ಷಿಣ ಕನ್ನಡ ಕನ್ನಡಿಗರ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಿತ್ತು .
ಭಾನುವಾರ ಸಂಜೆ ನಡೆದ ಕಾರ್ಯಕ್ರಮಕ್ಕೆ ರವೀಂದ್ರ ಕಲಾಕೇತ್ರ ವಿಶೇಷವಾಗಿ ಸಿಂಗರಗೊಂಡಿತ್ತು , ಅರ್ಥಾತ್ ಅಲ್ಲಿಗೆ ದಕ್ಷಿಣಕನ್ನಡದ ಪರಿಸರವೇ ಇಳಿದುಬಂದಿತ್ತು . ತೂಗುವ ತೆಂಗು, ಅಡಿಕೆ, ಬಾಳೆಗೊನೆಗಳು, ಬಗೆಬಗೆ ಹೂ ಹಣ್ಣು, ಗಿಡಮರ ಬಳ್ಳಿಗಳ ಚಿತ್ತಾರ. ವೇದಿಕೆಯ ಮೇಲೆ ಕುರ್ಚಿಯ ಬದಲಿಗೆ ಜಗುಲಿ. ಯಕ್ಷಗಾನ, ಕೊರಗರ ಕುಣಿತ. ಅಲ್ಲಿ , ಕಡಲೊಂದಿರಲಿಲ್ಲ . ಆದರೆ, ಕಡಲಿನ ಸಂಭ್ರಮ, ಅಬ್ಬರ, ಉತ್ಸಾಹ ನೆರೆದವರಲ್ಲಿತ್ತು . ಕಡಲಿನ ಘನತೆಯ ವ್ಯಕ್ತಿತ್ವದ ಹಿರೀಕರಿದ್ದರು.
ಕೆ. ಶ್ರೀಧರ ಆಚಾರ್ (ಪತ್ರಿಕೋದ್ಯಮ), ಕೆ. ಆನಂದ ಗಾಣಿಗ (ರಂಗಭೂಮಿ), ಕೋಳ್ಯೂರು ರಾಮಚಂದ್ರರಾವ್ (ಯಕ್ಷಗಾನ), ಯು.ಎಸ್. ವಾದಿರಾಜ (ಸಿನಿಮಾ), ಶಿವಮೊಗ್ಗ ಸುಬ್ಬಣ್ಣ (ಸುಗಮ ಸಂಗೀತ), ಪಿ. ಸದಾನಂದ ಮಯ್ಯ (ಉದ್ಯಮ), ವೈದೇಹಿ (ಸಾಹಿತ್ಯ), ಎಚ್. ಸೀತಾರಾಮ್ರಾವ್ (ಹೊಟೇಲ್ ಉದ್ಯಮ), ಎಂ.ಎಸ್. ಜನಾರ್ಧನ ಕಾರಂತ (ಸಮಾಜ ಸೇವೆ) ಹಾಗೂ ಡಾ. ಎಚ್. ಸದಾಶಿವ ಹಂದೆ (ವೈದ್ಯಕೀಯ ವಿಜ್ಞಾನ)- ಇವರುಗಳಿಗೆ ಶಿವರುದ್ರಪ್ಪ ನವರು ಶಾಲು ಹಾಗೂ ಸ್ಮರಣಿಕೆ ನೀಡುವ ಮೂಲಕ ಭಾರ್ಗವ ಪ್ರಶಸ್ತಿ ವಿತರಿಸಿದರು.
ನಾವೆಲ್ಲರು ಒಂದೇ ಜನ, ನಾವು ಕನ್ನಡಿಗರು
ಪ್ರಶಸ್ತಿ ಪುರಸ್ಕೃತರ ಪರವಾಗಿ ಮಾತನಾಡಿದ ಆನಂದ ಗಾಣಿಗ, ತಾಂತ್ರಿಕವಾಗಿ ದಕ್ಷಿಣ ಕನ್ನಡ ಇಬ್ಭಾಗವಾಗಿದ್ದರೂ ಭಾವನಾತ್ಮಕವಾಗಿ ನಾವೆಲ್ಲರೂ ಒಂದೇ ಎಂದರು. ಯಾವ ಹಾಡ ಹಾಡಲಿ ಎನ್ನುವ ಕವಿತೆ ಹಾಡುವ ಮೂಲಕ ಶಿವಮೊಗ್ಗ ಸುಬ್ಬಣ್ಣ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ, ರಾಜ್ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಶಾಸಕ ಕೆ. ಜಯಪ್ರಕಾಶ್ ಹೆಗ್ಡೆ , ಡಾ.ಪಿ. ವಿಷ್ಣುಮೂರ್ತಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಡೆಸಿಕೊಟ್ಟ ಕಾರ್ತವೀರ್ಯಾರ್ಜುನ ಯಕ್ಷಗಾನ ಪ್ರಸಂಗ ಕಾರ್ಯಕ್ರಮಕ್ಕೆ ಹೊಸ ಕಳೆ ನೀಡಿತು.
(ಇನ್ಫೋ ವಾರ್ತೆ)
ಮುಖಪುಟ / ಸಾಹಿತ್ಯ ಸೊಗಡು











Click it and Unblock the Notifications