ಹಿತ್ತಲಲ್ಲಿ ನೆಟ್ಟ ನುಗ್ಗೆ ಗಿಡದಿಂದ ಎಷ್ಟೊಂದು ಲಾಭವಿದೆ ಗೊತ್ತಾ..?
ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಲವು ತರಕಾರಿ, ಹಣ್ಣು, ಸೊಪ್ಪುಗಳ ಮೂಲಕ ದೇವರು ಅವಕಾಶ ನೀಡಿದ್ದರೂ ನಾವು ಅದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಇದಕ್ಕೆ ಕಾರಣ ಹಿತ್ತಲಗಿಡ ಮದ್ದಲ್ಲ ಎಂಬ ಧೋರಣೆ ಎಂದರೆ ತಪ್ಪಾಗಲಾರದು. ನಮ್ಮ ಸುತ್ತಮುತ್ತ ಸಿಗುವ ಗಿಡಮೂಲಿಕೆಗಳು ಮತ್ತು ತರಕಾರಿಗಳು ಎಷ್ಟು ಉಪಯೋಗಕಾರಿ ಎಂಬುದು ನಮಗೆ ಗೊತ್ತೇ ಆಗುವುದಿಲ್ಲ.
ಪಟ್ಟಣದಲ್ಲಿ ವಾಸಿಸುವವರನ್ನು ಹೊರತುಪಡಿಸಿ ಹೆಚ್ಚಿನವರಿಗೆ ಮನೆಯ ಹಿತ್ತಲಲ್ಲೇ ಖಾಲಿ ಜಾಗವಿದ್ದರೂ ಅದನ್ನು ಹಾಗೆಯೇ ಬಿಟ್ಟು ಬಿಡುತ್ತಾರೆ. ತಮ್ಮ ಕೆಲಸದ ನಡುವೆ ಬಿಡುವು ಸಿಕ್ಕಾಗ ಅಲ್ಲಿ ತರಕಾರಿ ಅಥವಾ ಸೊಪ್ಪು ಬೆಳೆಸಿದರೆ ದೇಹಕ್ಕೆ ಆರೋಗ್ಯ ನೀಡುವ ಶುದ್ಧ ತರಕಾರಿ ಸಿಗುವುದಲ್ಲದೆ, ಸಮಯವೂ ಕಳೆಯುತ್ತದೆ ಜತೆಗೆ ದೇಹಕ್ಕೆ ವ್ಯಾಯಾಮವೂ ಆಗುತ್ತದೆ. ಆದರೆ ನಮ್ಮಲ್ಲಿ ಹೆಚ್ಚಿನವರಿಗೆ ಆ ಬಗ್ಗೆ ಆಸಕ್ತಿಯೇ ಇಲ್ಲ. ತಂದು ತಿನ್ನುವುದಕ್ಕೆ ಹೊಂದಿಕೊಂಡಿರುವುದರಿಂದ ಬೆಳೆಸಿ ತಿನ್ನುವುದು ಕಷ್ಟವಾಗಿ ಕಾಣುತ್ತದೆ.

ಆದರೆ ಒಮ್ಮೆ ನಾವು ನಮ್ಮ ಮನೆಯ ಖಾಲಿ ಜಾಗದಲ್ಲಿ ಯಾವುದಾದರೊಂದು ಸಸ್ಯವನ್ನು ನೆಟ್ಟು ಅದನ್ನು ಆರೈಕೆ ಮಾಡುತ್ತಾ ಬಂದರೆ ನಮಗೆ ತಿಳಿಯದಂತೆ ನಮ್ಮಲ್ಲೊಂದು ಬದಲಾವಣೆ ಕಂಡು ಬರುತ್ತದೆ. ಗಿಡಗಳ ಒಡನಾಟ ಎಷ್ಟೊಂದು ಖುಷಿಕೊಡುತ್ತದೆ ಎಂಬುದು ಅರ್ಥವಾಗುತ್ತದೆ. ಅಷ್ಟೇ ಅಲ್ಲದೆ ಅದರಿಂದ ಮಾನಸಿಕ ನೆಮ್ಮದಿಯೂ ದೊರೆಯುತ್ತದೆ ಎಂಬುದು ಅರಿವಿಗೆ ಬರುತ್ತದೆ.
ನುಗ್ಗೆಯಿಂದ ಹತ್ತು ಹಲವು ಉಪಯೋಗ
ಮನೆ ಬಳಿ ಸ್ವಲ್ಪವೇ ಜಾಗವಿದ್ದರೆ ಸಾಕು ಅದರಲ್ಲೇ ಬೆಳೆಯಬಹುದಾದ ತರಕಾರಿ ಎಂದರೆ ಅದು ನುಗ್ಗೆ ಕಾಯಿ. ಗಿಡವಾಗಿ ಎತ್ತರಕ್ಕೆ ಬೆಳೆಯುವುದರಿಂದ ತೊಂದರೆ ನೀಡುವುದಿಲ್ಲ. ಇದರ ಸಂತನೋತ್ಪತ್ತಿ ಬೀಜದಿಂದಲೂ ಮಾಡಬಹುದು ಅಥವಾ ಕಾಂಡವೊಂದನ್ನು ನೆಟ್ಟರೂ ಇದು ಚಿಗುರೊಡೆದು ಬೆಳೆಯುತ್ತದೆ. ಇದರ ಕಾಯಿ ಮತ್ತು ಸೊಪ್ಪನ್ನು ತರಕಾರಿಯಾಗಿ ಉಪಯೋಗಿಸುವುದರಿಂದ ಆರೋಗ್ಯಕ್ಕೆ ಪೋಷಕ ಶಕ್ತಿ ನೀಡುತ್ತದೆ.
ಕ್ಯಾಲ್ಸಿಯಂ, ಕಬ್ಬಿಣ, ಎ ಮತ್ತು ಬಿ ಜೀವಸತ್ವಗಳು ನುಗ್ಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದರಿಂದಾಗಿ ಬೆಳವಣಿಗೆ ಅನುಕೂಲವಾಗಿದೆ. ಅದರಲ್ಲೂ ಮಕ್ಕಳ ಬೆಳವಣಿಗೆಗೆ ಪೋಷಕ ಶಕ್ತಿಯನ್ನು ನೀಡುತ್ತದೆ. ನುಗ್ಗೆ ಸೊಪ್ಪಿನಲ್ಲಿ ಎ ಮತ್ತು ಬಿ ಅನ್ನಾಂಗ ಹೆಚ್ಚಿನ ಪ್ರಮಾಣದಲ್ಲಿದೆ. ಇದನ್ನು ಪಲ್ಯ, ಸಾರು ಮಾಡಿ ತಿನ್ನುವ ಮೂಲಕ ಅಥವಾ ಎಳೆಯ ಸೊಪ್ಪನ್ನು ಚೆನ್ನಾಗಿ ತೊಳೆದು ಕುದಿಯುವ ನೀರಿನಲ್ಲಿ ಹಾಕಿ ಬೇಯಿಸಿ ಬಳಿಕ ರಸವನ್ನು ಕುಡಿಯುವುದು ಒಳ್ಳೆಯದು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

ನರ ದೌರ್ಬಲ್ಯ ನಿವಾರಿಸುವಲ್ಲಿ ಸಹಕಾರಿ
ಎರಡು ಚಮಚ ನುಗ್ಗೆ ರಸಕ್ಕೆ ಅಷ್ಟೇ ಹಾಲನ್ನು ಬೆರೆಸಿ ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತದೆ. ಗರ್ಭಿಣಿ ಸ್ತ್ರೀಯರು ನುಗ್ಗೆಯನ್ನು ಹೆಚ್ಚು ಪ್ರಮಾಣದಲ್ಲಿ ಬಳಸುವುದರಿಂದ ಅಗತ್ಯವಿರುವ ಸುಣ್ಣದ ಅಂಶ ಶರೀರಕ್ಕೆ ಸೇರುತ್ತದೆ. ಶರೀರದ ಶಕ್ತಿ ನೀಡಲು ಅವಶ್ಯಕವಾದ ಸಸಾರಜನಕ, ಅಮೈನೋ ಆಮ್ಲ ನುಗ್ಗೆಯಲ್ಲಿದೆ. ನಮ್ಮಲ್ಲಿ ಕಾಣಿಸಿಕೊಳ್ಳುವ ನರ ದೌರ್ಬಲ್ಯ ಹೋಗಲಾಡಿಸಲು, ಲೈಂಗಿಕ ಶಕ್ತಿ ವೃದ್ಧಿಸಲು ಸಹಕಾರಿಯಾಗಿದೆ. ಇಷ್ಟೇ ಅಲ್ಲದೆ, ಶ್ವಾಸಕೋಸದ ಸಮಸ್ಯೆಗಳನ್ನು ನಿವಾರಿಸಲು ಕರಿಮೆಣಸಿನ ಪುಡಿ, ನಿಂಬೆರಸವನ್ನು ಅರ್ಧ ಲೋಟ ನುಗ್ಗೆ ರಸಕ್ಕೆ ಸೇರಿಸಿ ಕುಡಿಯಬಹುದಾಗಿದೆ.
ಸೊಪ್ಪಿನ ರಸ ಸೇವಿಸುವುದರಿಂದ ಮಧುಮೇಹ, ರಕ್ತಹೀನತೆಯ ನಿಯಂತ್ರಣವಲ್ಲದೆ ಕಾಮಾಲೆ ಮತ್ತು ಜಂತು ಹುಳು ನಿವಾರಣೆ ಸಾಧ್ಯವಾಗುತ್ತದೆ. ಹೆಣ್ಣು ಮಕ್ಕಳು ಕೂದಲು ಸೊಂಪಾಗಿ ಬೆಳೆಯಬೇಕೆಂದು ಆಸೆ ಪಡುತ್ತಾರೆ ಇದನ್ನು ಈಡೇರಿಸಿಕೊಳ್ಳಲು ನುಗ್ಗೆ ಸೊಪ್ಪಿನಿಂದ ಸಾಧ್ಯವಿದೆ. ಅದು ಹೇಗೆಂದರೆ ನುಗ್ಗೆ ಸೊಪ್ಪನ್ನು ಅರೆದು ಕೊಬ್ಬರಿ ಎಣ್ಣೆಗೆ ಸೇರಿಸಿ ತಲೆಗೆ ಹಚ್ಚಿ ಸ್ನಾನ ಮಾಡಬೇಕು. ಇದರಿಂದ ತಲೆಯ ಹೊಟ್ಟು ಕೂಡ ಕಡಿಮೆಯಾಗಲಿದೆ.
ನಿತ್ಯದ ತರಕಾರಿ ಸಮಸ್ಯೆ ನೀಗಿಸುತ್ತದೆ
ಇನ್ನು ನುಗ್ಗೆರಸ ಮತ್ತು ನಿಂಬೆರಸವನ್ನು ಸೇರಿಸಿ ಮುಖಕ್ಕೆ ಹಚ್ಚುತ್ತಾ ಬಂದರೆ ಕಾಂತಿ ಮೂಡಲು ಸಾಧ್ಯವಾಗುತ್ತದೆ. ಇಡ್ಲಿ, ದೋಸೆ, ಚಪಾತಿಯನ್ನು ನುಗ್ಗೆ ಸೊಪ್ಪು ಸೇರಿಸಿ ಮಾಡಿದರೆ ದೇಹಕ್ಕೆ ಶಕ್ತಿ ಸಿಗುತ್ತದೆ. ಒಟ್ಟಾರೆ ನುಗ್ಗೆಯ ಕಾಯಿ, ಸೊಪ್ಪು, ಹೂ ಎಲ್ಲವೂ ತರಕಾರಿಯಾಗಿ ಉಪಯೋಗಿಸಲು ಸಾಧ್ಯವಾಗುವುದರಿಂದ ಇದಕ್ಕೆ ಮನೆಯ ಹಿತ್ತಲಲ್ಲಿ ಜಾಗ ನೀಡಿದರೆ ಹಿತ್ತಲ ಗಿಡವೂ ಮದ್ದು ಮಾತ್ರವಲ್ಲದೆ, ತರಕಾರಿಯಾಗಿಯೂ ಉಪಯೋಗವಾಗುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.












Click it and Unblock the Notifications