ಮನುಷ್ಯ ನಂಬುವ ಆ ಯೋಗ ಯಾವುದು? ಆಧ್ಯಾತ್ಮದಲ್ಲಿ ಯೋಗ ಎಂದರೇನು..?
ನಾವೆಲ್ಲರೂ ಒಂದಲ್ಲ ಒಂದು ಕಾರಣಕ್ಕೆ ಯೋಗವನ್ನು ನಂಬುತ್ತೇವೆ. ಮತ್ತು ಮಾತು ಮಾತಿಗೂ ಯೋಗವಿರಬೇಕೆಂದು ಹೇಳುತ್ತಲೇ ಇರುತ್ತೇವೆ. ನಮ್ಮೊಂದಿಗೆ ಯೋಗ ಇರುತ್ತೋ ಇಲ್ಲವೋ ಆದರೆ ಯೋಗ್ಯತೆ ಎನ್ನುವುದು ಸದಾ ಇರಲೇ ಬೇಕು. ಮತ್ತು ಅದನ್ನು ಯಾರು ತಂದು ಕೊಡಲು ಸಾಧ್ಯವಿಲ್ಲ. ನಾವೇ ಸಂಪಾದಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಯಾವತ್ತೋ ಬರುವ ಯೋಗದ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ನಮ್ಮಲ್ಲಿರುವ ಯೋಗ್ಯತೆ ಕಳೆದು ಹೋಗದಂತೆ ನೋಡಿಕೊಳ್ಳುವುದು ಬಹುಮುಖ್ಯವಾಗಿದೆ.
ಪುರಾಣದಲ್ಲಿ ಯೋಗವನ್ನು ಬೇರೆ ಬೇರೆ ರೀತಿಯಲ್ಲಿ ನೋಡಬಹುದಾದರೂ ಇವತ್ತು ನಾವು ಯೋಗದ ಮೂಲಕ ನಮ್ಮ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ. ಆದರೆ ಕೆಲವರು ಯೋವೆಂದರೆ. ಅದು ಒಂಥರಾ ಅದೃಷ್ಟ. ಮತ್ತು ಮಾಡಿದ್ದೆಲ್ಲವೂ ಯಶಸ್ಸಾಗುವಂತೆ ನೋಡಿಕೊಳ್ಳುವ ಅಗೋಚರ ಶಕ್ತಿ ಎಂದು ನಂಬುತ್ತಾರೆ. ಹೀಗಾಗಿಯೇ ಎಲ್ಲೊ ಒಂದು ಕಡೆ ಆ ಅಗೋಚರ ಶಕ್ತಿಗೆ ಮೊರೆ ಹೋಗುತ್ತಲೇ ಇರುತ್ತಾರೆ.

ಯಶಸ್ಸು ಸಿಕ್ಕಾಗ ಯೋಗ ಎನ್ನುತ್ತೇವೆ. ಯಶಸ್ಸು ದಕ್ಕದೆ ಹೋದಾಗ ನಮಗೆ ಯೋಗವಿಲ್ಲವೆಂದು ವಿಷಾದಿಸುತ್ತೇವೆ. ಇನ್ನು ಯೋಗದ ಬಗ್ಗೆ ಹಲವು ರೀತಿಯ ವ್ಯಾಖ್ಯಾನಗಳನ್ನು ಆಧ್ಯಾತ್ಮದಲ್ಲಿ ಚಿಂತಕರು ಮಾಡುತ್ತಾರೆ. ಹಾಗಾದರೆ ನಿಜವಾಗಿಯೂ ಯೋಗ ಎಂದರೇನು?. ಯೋಗದ ಬಗ್ಗೆ ನಾವು ಏನೇ ಮಾತನಾಡಿದರೂ ಆಧ್ಯಾತ್ಮದಲ್ಲಿ ಅದಕ್ಕೊಂದು ಮಹತ್ವವಿದೆ. ಭಗವದ್ಗೀತೆಯಲ್ಲಿಯೂ ಯೋಗದ ಬಗ್ಗೆ ಹೇಳಲಾಗಿದೆ. ಯೋಗ ಎಂದರೆ ಇಂದ್ರಿಯ ನಿಗ್ರಹ. ಅದು ಸಿದ್ದಿಯನ್ನು ಪಡೆಯುವ ಮಾರ್ಗ ಎಂದು ಹೇಳಲಾಗಿದೆ.
ಆಧ್ಯಾತ್ಮದಲ್ಲಿ ಯೋಗ ಎಂದರೇನು ಗೊತ್ತಾ?
ಯೋಗ ಸಾಧನೆ ಮೂಲಕ ದೇವರ ಭಕ್ತಿಗೆ ಪಾತ್ರರಾಗಬಹುದು ಎಂಬುದು ಪುರಾಣದ ಕಥೆಗಳಲ್ಲಿ ನಾವು ತಿಳಿಯಬಹುದಾಗಿದೆ. ಯೋಗ ಎಂದರೆ ಆತ್ಮ ಮತ್ತು ಪರಮಾತ್ಮನ ನಡುವೆ ಸಂಬಂಧ ಕಲ್ಪಿಸುವ ಸಾಧನ ಎಂದೇ ಹೇಳಲಾಗುತ್ತದೆ. ಹಿಂದಿನ ಮಹರ್ಷಿಗಳು ಯೋಗದಿಂದಲೇ ದೇವರನ್ನು ಒಲಿಸಿಕೊಳ್ಳುತ್ತಿದ್ದರೆಂಬ ಕಥೆಗಳು ಜನಜನಿತವಾಗಿವೆ. ಯಾರು ದೇವರನ್ನು ಭಕ್ತಿಯಿಂದ ನೆನೆಯುವರೋ ಅವರು ಬಹುಬೇಗ ಯೋಗಸಿದ್ದಿಯನ್ನು ಪಡೆಯುತ್ತಾರೆ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ.
ಯೋಗ ಸಿದ್ದಿಸಬೇಕಾದರೆ, ಕೇವಲ ನಿಯಮ ಪಾಲನೆಯಲ್ಲಿ ಮಾತ್ರ ತೃಪ್ತಿ ಪಡಬೇಡಿ ನೀವು ಇನ್ನೂ ಮುಂದೆ ಹೋಗಬೇಕು. ನೀವು ಸಮಾಧಿಯಲ್ಲಿದ್ದು ಅನಿರ್ಬಂಧಿತವಾಗಿ ನಿಮ್ಮ ಹೃದಯದಲ್ಲಿ ಭಗವಂತನ ವಿಷ್ಣುರೂಪವನ್ನು ನೆನೆಯುತ್ತಾ ಇದ್ದರೆ ನಿಜವಾಗಿಯೂ ಯೋಗ ಸಿದ್ದಿಯು ಲಭಿಸುತ್ತದೆ. ಈ ಸಾಧನೆ ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಯೋಗದಲ್ಲಿ ತೊಡಗುವವರು ಮೊದಲಿಗೆ ವಿವಿಕ್ತವೂ, ಪವಿತ್ರವೂ ಆದ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಏಕಾಂಗಿಯಾಗಿದ್ದುಕೊಂಡು, ಊಟ ನಿದ್ರೆಗಳಲ್ಲಿ ಅತಿಯಾದ ಸಂಯಮವನ್ನು ಪಾಲಿಸಬೇಕು. ಅಲ್ಲದೆ ಈ ಬಗ್ಗೆ ಕಟ್ಟು ಕಟ್ಟಳೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಹೇಳಲಾಗಿದೆ.

ನಾಲ್ಕು ಯುಗಗಳಲ್ಲಿ ಯೋಗದ ಹಾದಿ ಹೇಗಿದೆ?
ಅರೆಮುಚ್ಚಿದ ಕಣ್ಣುಗಳ ದೃಷ್ಟಿಯನ್ನು ಮೂಗಿನ ತುದಿಯ ಮೇಲೆ ಕೇಂದ್ರೀಕರಿಸಬೇಕಂತೆ ಇದನ್ನು ಹಲವು ಋಷಿ ಮುನಿಗಳು ಮಾಡಿ ಸಿದ್ದಿಪಡೆದಿದ್ದಾರೆ. ಯೋಗದ ಕುರಿತಂತೆ ನೋಡುವುದಾದರೆ, ಸತ್ಯಯುಗದಲ್ಲಿ, ಸುವರ್ಣಯುಗದಲ್ಲಿ ಸದಾ ವಿಷ್ಣು ಧ್ಯಾನ ಮಾಡಬೇಕೆಂಬುದು ಯೋಗ ಪದ್ದತಿಯಾಗಿತ್ತು. ತ್ರೇತಾಯುಗದಲ್ಲಿ ಮಹಾಯಜ್ಞ ಯಾಗಾದಿಗಳನ್ನು ಮಾಡಿ ಯೋಗ ಸಾಧನೆ ಮಾಡಬೇಕಾಗಿತ್ತು. ಆ ನಂತರದ ದ್ವಾಪರಯುಗದಲ್ಲಿ ದೇವಸ್ಥಾನದ ಅರ್ಚನೆಯಿಂದ ಯೋಗಸಿದ್ದಿ ಸಾಧ್ಯವಾಗಿತ್ತು.
ಈಗಿನ ಯುಗ ಕಲಿಯುಗವಾದುದರಿಂದ ಕಲಹ, ವೈಷಮ್ಯಗಳ ಯುಗ. ಪ್ರತಿಯೊಬ್ಬನಿಗೂ ತನ್ನದೇ ಆದ ಸಿದ್ಧಾಂತವಿದೆ, ತತ್ವವಿದೆ. ಹಾಗಾಗಿ ಇಂದಿಗೆ ಭಗವಂತನ ಪುಣ್ಯನಾಮ ಜಪವೇ ಸೂಕ್ತವಾಗಿದ್ದು, ಆ ಮೂಲಕ ಆತ್ಮ ಸಾಕ್ಷಾತ್ಕಾರವನ್ನು ಪಡೆಯಬಹುದು ಎಂಬುವುದಾಗಿ ಭಕ್ತಿ ವೇದಾಂತ ಸ್ವಾಮಿ ಪ್ರಭುಪಾದ ಅವರ ಅಭಿಪ್ರಾಯವಾಗಿದೆ. ಸ್ವಾಮಿ ಪ್ರಭುಪಾದರ ಪ್ರಕಾರ ಕಲಿಯುಗದಲ್ಲಿ ಯೋಗ ಪದ್ಧತಿಯನ್ನು ಆಚರಿಸುವುದು ತುಂಬಾ ಕಷ್ಟ. ಯೋಗ ಎಂದರೆ ಪರಮಾತ್ಮನಾದ ವಿಷ್ಣುವನ್ನು ಧ್ಯಾನ ಮಾಡುವುದು. ಆತ ನಮ್ಮ ಹೃದಯದಲ್ಲಿ ನೆಲೆಸಿದ್ದಾನೆ. ಆತನೆಡೆಗೆ ನಮ್ಮ ಗಮನವನ್ನು ಕೇಂದ್ರಿಕರಿಸಬೇಕಾದರೆ ನಮ್ಮ ಇಂದ್ರಿಯಗಳನ್ನು ನಿಗ್ರಹಿಸಬೇಕು.
ಯೋಗದಿಂದ ದೈಹಿಕ, ಮಾನಸಿಕ ಆರೋಗ್ಯ
ಇಂದ್ರಿಯಗಳು ರೊಚ್ಚಿಗೆದ್ದ ಕುದುರೆಗಳಂತೆ ಕೆಲಸ ಮಾಡುತ್ತವೆ. ಗಾಡಿಯ ಕುದುರೆಗಳನ್ನು ಹತೋಟಿಯಲ್ಲಿಡಲಾಗದಿದ್ದರೆ ಅಪಾಯ ತಪ್ಪಿದಲ್ಲ. ಆದುದರಿಂದ ಯೋಗ ಪದ್ದತಿಯೆಂದರೆ ಇಂದ್ರಿಯಗಳನ್ನು ನಿಯಂತ್ರಿಸುವುದು. ಈ ಇಂದ್ರಿಯಗಳನ್ನು ಹಾವುಗಳಿಗೆ ಹೋಲಿಸುತ್ತಾರೆ. ಹಾವಿಗೆ ಯಾರು ಮಿತ್ರ, ಯಾರು ಶತ್ರು ಎಂಬುವುದೇ ಗೊತ್ತಾಗುವುದಿಲ್ಲ. ಅದು ಯಾರನ್ನು ಬೇಕಾದರೂ ಕಚ್ಚಬಹುದು. ಹಾಗಾಗಿ ಇಂದ್ರಿಯಗಳನ್ನು ನಿಗ್ರಹಿಸುವ ಹೊರತು ಯೋಗ ಸಿದ್ದಿ ಅಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಅದು ಏನೇ ಇರಲಿ ಇವತ್ತಿನ ಪರಿಸ್ಥಿತಿಯಲ್ಲಿ ನಮಗೆ ಯಾರಿಗೂ ಹಿಮಾಲಯ ಪರ್ವತಕ್ಕೋ, ದಟ್ಟ ಕಾಡಿಗೋ ಹೋಗಿ ಯೋಗ ಸಿದ್ದಿಗಾಗಿ ತಪಸ್ಸು ಮಾಡಲು ಸಾಧ್ಯವಿಲ್ಲ. ಹೀಗಾಗಿ ನಮ್ಮಲ್ಲಿನ ಚಂಚಲ ಮನಸ್ಸನ್ನು ಕಟ್ಟಿ ಹಾಕಿ ಏಕಾಗ್ರತೆಯನ್ನು ಮೂಡಿಸಲು ಯೋಗ ಉಪಯುಕ್ತವಾಗಿದೆ. ಹೀಗಾಗಿ ನಮಗೆ ಬರುವ ಯೋಗದ ಬಗ್ಗೆ ಚಿಂತೆ ಮಾಡುವುದಕ್ಕಿಂತ ಯೋಗದ ಬಗ್ಗೆ ಚಿಂತನೆ ಮಾಡಿ ಅದರ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ವೃದ್ಧಿ ಮಾಡಿಕೊಳ್ಳುವುದೇ ಜಾಣತನವಾಗಿದೆ.












Click it and Unblock the Notifications