Heart Attack: ಪ್ರಭುತ್ವದ “ಪಿಂಚ್ ಹಿಟ್ಟರ್”ಗಳಿಗೆ ಒಂದಿಷ್ಟು ಪ್ರಶ್ನೆಗಳು: ರಾಜಾರಾಂ ತಲ್ಲೂರು
Heart Attack: ಪ್ರತೀ ಬಾರಿ ಅಕಾಲಿಕ ಹೃದಯಾಘಾತ, ಕುಸಿದು ಸಾವಿನ ಪ್ರಕರಣಗಳು ಸೆಲೆಬ್ರಿಟಿ ಮನೆಗಳಲ್ಲಿ ಸಂಭವಿಸಿದಾಗ, ಜನ ಆ ಕುರಿತು ಚರ್ಚೆನಡೆಸುತ್ತಾರೆ. ಅಂತಹ ಸಂದರ್ಭಗಳಲ್ಲೆಲ್ಲ, ನಾನು ಮೇಲೆ ಹೇಳಿದ ಪಿಂಚ್ ಹಿಟ್ಟರ್ಗಳು ಸ್ಲಾಗಿಂಗ್ ಆರಂಭಿಸುತ್ತಾರೆ!... ನೀವಿದನ್ನು ಗಮನಿಸಿದ್ದೀರಾ?
"ಲಸಿಕೆಗೂ ಇಂತಹ ಸಾವುಗಳಿಗೂ ದೇವರಾಣೆ ಸಂಬಂಧ ಇಲ್ಲ. ಅದನ್ನು ಊಹಿಸಲೂ ಕೂಡದು" ಎಂಬುದು ಈ ಹಿಟ್ಟಿಂಗಿನ ಬೇಸ್ ಲೈನ್. ಅದಕ್ಕೆ ಪೂರಕವಾಗಿ ಲೈಫ್ ಸ್ಟೈಲ್, ಮಾನಸಿಕ ಒತ್ತಡ, ಜಂಕ್ ಫುಡ್, ಸೆಡೆಂಟರಿ ಲೈಫ್ ಸ್ಟೈಲ್ ಎಂದೆಲ್ಲ ಪುಂಖಾನುಪುಂಕವಾಗಿ ಕಾರಣಗಳು ಹೊರಬರುತ್ತವೆ. ಇಂತಹ ಜನದ್ರೋಹಿಗಳಿಗೆ (ಜನದ್ರೋಹಿಗಳು ಯಾಕೆಂದರೆ, ತನ್ನ ಸಹ ಪ್ರಜೆಯೊಬ್ಬ ಅಕಾರಣವಾಗಿ, ಅಕಾಲಿಕವಾಗಿ ಸತ್ತಾಗ ದಿಕ್ಕು ತಪ್ಪಿಸುವ ಉದ್ದೇಶಪೂರ್ವಕ ಪ್ರಯತ್ನ ಅವರ ಕಡೆಯಿಂದ ಆಗುತ್ತಿರುತ್ತದೆ).. ಕೆಲವು ಸರಳವಾದ ಪ್ರಶ್ನೆಗಳು ಬೇಕೆಂದೇ ಹೊಳೆಯುವುದಿಲ್ಲ. ಅಂತಹ ಕೆಲವು ಪ್ರಶ್ನೆಗಳನ್ನು ಇಲ್ಲಿ ಆಗಾಗ ಕೇಳಿದ್ದೇನೆ. ಅವನ್ನು ಒಟ್ಟಾಗಿ ಮತ್ತೊಮ್ಮೆ ನೆನಪಿಸುತ್ತೇನೆ:

1. ಇಂತಹ ಸಾವುಗಳಿಗೆ ಕೋವಿಡ್ ಲಸಿಕೆ ಮಾತ್ರ ಕಾರಣ ಎಂದು ಯಾರೂ ಹೇಳುತ್ತಿಲ್ಲ. ಅದು ಕೋವಿಡ್ ಲಸಿಕೆ ಅಥವಾ ನೇರ ಕೋವಿಡ್ ಕಾರಣಕ್ಕೇ ಇರಬಹುದು. ಈಗ ಯಾರಿಗೂ ಗೊತ್ತಿಲ್ಲ. ಆದರೆ, ಕಣ್ಣೆದುರು ಸಾವುಗಳು ಈ ಪ್ರಮಾಣದಲ್ಲಿ ಸಂಭವಿಸುತ್ತಿರುವಾಗ ಆ ಬಗ್ಗೆ ಸಂಶೋಧನೆ ಆರಂಭಿಸಲು ಏನು ಧಾಡಿ? ಯಾವುದೋ ಜೀನು-ಅಥವಾ ದೇಹಪ್ರಕೃತಿ ಇಂತಹ ಸಾವುಗಳಿಗೆ ಕಾರಣ ಎಂದು ಸಂಶೋಧನೆಯ ಮೂಲಕ ಗುರುತಿಸಿದರೆ, ಅಂತಹ ವಲ್ನರೆಬಲ್ ಜೀವಗಳನ್ನು ರಕ್ಷಿಸಬಹುದಲ್ಲ? ಯಥಾರ್ಥ ಸಂಶೋಧನೆ ನಡೆದರೆ ಹುಳುಕು ಹೊರಬೀಳಬಹುದು, ಬೆಲೆ ತೆರಬೇಕಾಗಬಹುದು ಎಂಬ ಭಯವೇ? ಸರ್ಕಾರಗಳ ಈ ಉದ್ದೇಶಪೂರ್ವಕ ಮೌನಕ್ಕೆ ಜನರು ಜೀವ ತೆರಬೇಕೆ?
2. ಒಂದುವೇಳೆ ಮಾನಸಿಕ ಒತ್ತಡ, ಜಂಕ್ ಫುಡ್, ಸೆಡೆಂಟರಿ ಲೈಫ್ ಸ್ಟೈಲ್ಗಳೇ ಕಾರಣ ಎಂದಾದರೆ ಅವುಗಳ ಮೂರ್ತರೂಪವಾದ ರಾಜಕಾರಣಿಗಳು ಇಲ್ಲಿಯ ತನಕ ಯಾಕೆ ಈ ರೀತಿಯ ಪ್ರಕರಣಗಳಲ್ಲಿ ಬಲಿಯಾದ ಸುದ್ದಿಗಳು ಇಲ್ಲವೆಂಬಷ್ಟು ಕಡಿಮೆ? ಹೋಗಲಿ ಈ ದೊಡ್ಡದೊಡ್ಡ ನಾಯಕರು ನಿಜಕ್ಕೂ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆಯೆ? ಅದಕ್ಕೆ ಸಾಕ್ಷಿ ಏನು?
3. ಇಂತಹ ಅಕಾಲಿಕ ಸಾವುಗಳ ಬಗ್ಗೆ ಯಾವುದೇ ಸರ್ಕಾರಿ ಏಜನ್ಸಿಗಳಿಗೆ ಮಾಹಿತಿ ಹಕ್ಕಿನಡಿ ಅರ್ಜಿಗಳನ್ನು ಸಲ್ಲಿಸಿದರೆ ಸುಸೂತ್ರ ಉತ್ತರ ಕೊಡಲು, ಪಾರದರ್ಶಕವಾಗಿ ಮಾಹಿತಿಗಳನ್ನು ಹಂಚಿಕೊಳ್ಳಲು ಎಲ್ಲರೂ ಹಿಂದೇಟು ಹಾಕುತ್ತಿರುವುದು ಯಾಕೆ? ಇಂತಹ ಸಾವುಗಳನ್ನೆಲ್ಲ "ನೊಟಿಫೈಡ್" ಎಂದು ಪರಿಗಣಿಸಬೇಕೆಂದು, ಅಂತಹ ದೇಹಗಲ ಅಟಾಪ್ಸಿ ಆಗಬೇಕೆಂದು ಕರ್ನಾಟಕದಲ್ಲಿ ಸರ್ಕಾರ ಹೇಳಿತ್ತು. ಅದು ಕಾರ್ಯರೂಪಕ್ಕೆ ಬಂದಿದೆಯೆ?
4. ಕೋವಿಡ್ ಲಸಿಕೆಗಳ ದೀರ್ಘಕಾಲಿಕ ಪರಿಣಾಮಗಳನ್ನು ಸಂಶೋಧನೆಯ ಮೂಲಕ ಗುರುತಿಸುವುದು, ಸಾರ್ವಜನಿಕರ ಗಮನಕ್ಕೆ ತರುವುದು ಸರ್ಕಾರದ ಕರ್ತವ್ಯವಾಗಿತ್ತು. ಅಂತಹ ಸಂಶೋಧನೆಗಳ ವಿವರಗಳು ಯಾಕೆ ಬಹಿರಂಗಗೊಳ್ಳುತ್ತಿಲ್ಲ? ಕೋವಿಡ್ ಬಂದು ಆರು ವರ್ಷಗಳೇ ಕಳೆದವಲ್ಲ... ನಮ್ಮ ಮಾಧ್ಯಮಗಳು ಈ ಬಗ್ಗೆ ಯಾಕೆ ಮೌನ?
5. ಹೃದಯಾಘಾತ ಮೊದಲೂ ಸಾಕಷ್ಟು ಆಗುತ್ತಿತ್ತು, ಈಗ ಸ್ವಲ್ಪ ಜಾಸ್ತಿ ಆಗಿದೆ ಅಷ್ಟೇ ಅನ್ನುವವರು, ಮೊದಲೆಲ್ಲ 20-50 ಪ್ರಾಯವರ್ಗದಲ್ಲಿ, ಅದೂ ಸಾಕಷ್ಟು ಕಾರ್ಡಿಯಾಕ್ ಫಿಟ್ನೆಸ್ ಇರುವವರಲ್ಲಿ ಯಾಕೆ ಹಠಾತ್ ಆಗಿ ಹೆಚ್ಚಿದೆ ಎಂದು ಪ್ರಶ್ನಿಸುತ್ತಿಲ್ಲ? ಹಿಂದೆಯೂ ಈ ಪ್ರಾಯವರ್ಗದಲ್ಲಿ ಆ ಪ್ರಮಾಣದಲ್ಲಿ ಸಾವುಗಳಿದ್ದವೇ? ಈಗ ಬದಲಾಗಿರುವುದು ಏನು?
6. ಹೃದಯಾಘಾತ, ಕುಸಿದು ಬಿದ್ದು ಸಾವು ಮಾತ್ರವಲ್ಲದೇ ನರ ಸಂಬಂಧಿ ಹತ್ತಾರು ಅಪರೂಪದ ಕಾಯಿಲೆಗಳು ಇನ್ನಿತರ ಸಮಸ್ಯೆಗಳು (ಗಿಲ್ಲಾನ್ ಬಾರೆ ಸಿಂಡ್ರೋಂ, ಟ್ರಾನ್ಸ್ವರ್ಸ್ ಮಯಲೈಟಿಸ್ ಇತ್ಯಾದಿ) ಏಕಾಏಕಿ ಹೆಚ್ಚಿರುವುದಕ್ಕೆ ಕಾರಣ ಏನು? ಅವು ಕೋವಿಡ್ ಲಸಿಕೆಗಳ ಅಧಿಕೃತ ಅಡ್ಡ ಪರಿಣಾಮದ ಪಟ್ಟಿಯಲ್ಲಿ ಇರುವುದು ಕಾಕತಾಳೀಯವೆ?
7. ಹೋಗಲಿ, ಕೋವಿಡ್ ಕಾಲದ ಅಕ್ರಮಗಳ, ಗೋಲ್ಮಾಲ್ಗಳ ತನಿಖೆಗಳೆಲ್ಲ ಎಲ್ಲಿಗೆ ತಲುಪಿದವು? ಅವುಗಳ ವಿವರಗಳು ಸಾರ್ವಜನಿಕರಿಗೆ ಯಾವತ್ತಾದರೂ ಸಿಗುವ ಸಾಧ್ಯತೆಗಳಿವೆಯೆ? ತಪ್ಪಿತಸ್ಥರಿಗೆ ಶಿಕ್ಷೆ ನಿರೀಕ್ಷಿಸಬಹುದೆ ? ಇಂತಹ ಸಹಜ ಪ್ರಶ್ನೆಗಳನ್ನೆಲ್ಲ ಹುಟ್ಟಡಗಿಸಿ ಕೇವಲ ಭಜನೆಯಲ್ಲಿ ನಿರತರಾಗುವವರು ಈ ಪ್ರತಿಯೊಂದೂ ಅಕಾಲಿಕ ಸಾವುಗಳಲ್ಲಿ ಸಮಾನ ಪಾಲುದಾರರು. ಅವರೂ ಒಂದುದಿನ ತಮ್ಮ ಆತ್ಮಸಾಕ್ಷಿಗೆ ಉತ್ತರ ಕೊಟ್ಟುಕೊಳ್ಳಬೇಕಾಗುತ್ತದೆ. ಅವರ ಮನೆಯಲ್ಲೂ ಇಂತಹ "ವಲ್ನರೆಬಲ್" ಜೀವಗಳಿರಬಾರದೆಂದೇನಿಲ್ಲ.
ಬರಹ: ರಾಜಾರಾಂ ತಲ್ಲೂರು, ಹಿರಿಯ ಪತ್ರಕರ್ತ












Click it and Unblock the Notifications