'ಬಿರಿಯಾನಿ ತಾ, ಜೊತೆಗೆ ತಿನ್ನುವ': ಮಗನ ಕೊನೆಯ ಮಾತು ನೆನೆದು ಬಿಕ್ಕಳಿಸಿದ ಬೆಳಗಾವಿಯ ಅರ್ಬಾಸ್ನ ತಾಯಿ
ಬೆಳಗಾವಿ, ಅಕ್ಟೋಬರ್ 05: "ನನ್ನ ಮಗ ನನಗೆ ಸೆಪ್ಟೆಂಬರ್ 28 ರಂದು ಸಂಜೆ 5 ಗಂಟೆಗೆ ಕರೆ ಮಾಡಿದ, ಎಷ್ಟು ಸಮಯಕ್ಕೆ ಮನೆಗೆ ಬರುತ್ತೀ ಎಂದು ಕೇಳಿದ. ಬರುವಾಗ ಬಿರಿಯಾನಿ ತೆಗೆದುಕೊಂಡು ಬಾ. ಜೊತೆಯಾಗಿ ತಿನ್ನುವಾ ಎಂದು ಕೂಡಾ ಹೇಳಿದ್ದ," ಇದು ತನ್ನ ಮಗ ಅರ್ಬಾಜ್ ಮುಲ್ಲಾನನ್ನು ಕಳೆದುಕೊಂಡ ತಾಯಿ ನಾಜಿಮಾ ಶೇಖ್ ಮಾತು.
ಸೆಪ್ಟೆಂಬರ್ 28 ರಂದು ಸಂಜೆ ಸುಮಾರು 7 ಗಂಟೆಗೆ ನಾಜಿಮಾ ಶೇಖ್ ಬೆಳಗಾವಿಯ ಅಜಾಮ್ ನಗರದಲ್ಲಿರುವ ತನ್ನ ಮನೆಗೆ ಬಂದಿದ್ದು, "ಬಿರಿಯಾನಿ ತನ್ನಿ ಜೊತೆ ತಿನ್ನುವಾ" ಎಂದಿದ್ದ ಮಗ ಮಾತ್ರ ಮನೆಯಲ್ಲಿ ಇರಲಿಲ್ಲ. ನಾಪತ್ತೆಯಾದ ಮಗನಿಗಾಗಿ ತಾಯಿ ನಾಜಿಮಾ ಶೇಖ್ ಒಂದು ಗಂಟೆಗಳ ಕಾಲ ಕಾದಿದ್ದಾರೆ. ಹಲವಾರು ಬಾರಿ ಕರೆಯನ್ನು ಮಾಡಿದ್ದು, ಆದರೆ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ರಾತ್ರಿ ಸುಮಾರು 8:30 ಯಿಂದ 8:53 ರ ಸಮಯದಲ್ಲಿ ಸುಮಾರು ಐದಾರು ಬಾರಿ ನಾಜಿಮಾ ತನ್ನ ಮಗನಿಗೆ ಕರೆ ಮಾಡಿದ್ದಾರೆ. ಬಳಿಕ ರಾತ್ರಿ ಸುಮಾರು 9 ಗಂಟೆಗೆ ಕರೆ ಬಂದಿದೆ.
ಆದರೆ ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಆಕೆಯ ಮಗನಲ್ಲಿ ಬೇರೆ ವ್ಯಕ್ತಿ. "ಯಾರೋ ಆತನ ಮೊಬೈಲ್ನಿಂದ ಕರೆ ಮಾಡಿದರು. ಖಾನಾಪುರ ರೈಲ್ವೇ ಹಳಿಯ ಮೇಲೆ ಒಂದು ಮೃತ ದೇಹವಿದೆ. ಅದರ ಪಕ್ಕದಲ್ಲಿ ಈ ಮೊಬೈಲ್ ದೊರೆಯಿತು," ಎಂದು ಕರೆ ಮಾಡಿದ ವ್ಯಕ್ತಿ ಹೇಳಿದ್ದಾರೆ ಎಂದು ತಾಯಿ ನಾಜಿಮಾ ತಿಳಿಸಿದ್ದಾರೆ. "ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ ಅಂದೇ ನನ್ನ ಮಗನ ಜನ್ಮ ದಿನ ಆಗಿತ್ತು," ಎಂದು ಹೇಳಿ ನಾಜಿಮಾ ಬಿಕ್ಕಳಿಸಿದ್ದಾರೆ.

ಅನ್ಯ ಧರ್ಮದ ಯುವತಿಯ ಪ್ರೀತಿ ಮಾಡಿದ್ದಕ್ಕೆ ನಡೆಯಿತು ಕೊಲೆ
ಅರ್ಬಾಸ್ ಅನ್ಯ ಧರ್ಮದ ಯುವತಿಯನ್ನು ಯುವತಿಯನ್ನು ಪ್ರೀತಿ ಮಾಡಿದ ಕಾರಣಕ್ಕೆ ಆತನನ್ನು ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಆತನ ವಿರೂಪಗೊಂಡ ಮೃತ ದೇಹವು ಸೆಪ್ಟೆಂಬರ್ 28 ರಂದು ಖಾನಾಪುರ ರೈಲ್ವೆ ಹಳಿಯ ಮೇಲೆ ಲಭಿಸಿದೆ. ಅಪಘಾತ ಎಂದು ಬಿಂಬಿಸುವಂತೆ ಕೊಲೆ ಮಾಡಲಾಗಿದೆ ಎಂದು ಆತನ ಕುಟುಂಬವು ಆರೋಪ ಮಾಡಿದೆ. ಪ್ರಾಥಮಿಕವಾಗಿ ಅಸ್ವಾಭಾವಿಕ ಸಾವಿನಡಿಯಲ್ಲಿ ರೈಲ್ವೇ ಪೊಲೀಸರು ಪ್ರಕರಣ ದಾಖಲು ಮಾಡಿದ್ದರು. ಆದರೆ ಬಳಿಕ ಇದು ಕೊಲೆ ಎಂದು ತಾಯಿ ನಾಜಿಮಾ ಸೆಪ್ಟೆಂಬರ್ 29 ರಂದು ಆರೋಪ ಮಾಡಿದ ಹಿನ್ನೆಲೆ ಸಾವಿನ ಕೊಲೆ ಶಂಕೆ ವ್ಯಕ್ತಪಡಿಸಲಾಗಿದೆ. ಈ ಪ್ರಕರಣ ನಡೆದು ಈಗಾಗಲೇ ಒಂದು ವಾರವಾಗಿದೆ. ಆದರೆ ಯಾವುದೇ ಬಂಧನ ಇನ್ನೂ ಆಗಿಲ್ಲ.
Image Courtesy: print

ಶ್ರೀ ರಾಮ ಸೇನೆ ಹಿಂದೂಸ್ತಾನದ ಇಬ್ಬರ ವಿಚಾರಣೆ ನಡೆಸಿದ ಪೊಲೀಸರು
ಈ ಪ್ರಕಣಕ್ಕೆ ಸಂಬಂಧಿಸಿ ಪೊಲೀಸರು ಶ್ರೀ ರಾಮ ಸೇನೆ ಹಿಂದೂಸ್ತಾನದ ಇಬ್ಬರು ಕಾರ್ಯಕರ್ತರ ವಿಚಾರಣೆಯನ್ನು ನಡೆಸಿದ್ದಾರೆ. ಶ್ರೀ ರಾಮ ಸೇನೆಯ ಪ್ರಮೋದ್ ಮುತಾಲಿಕ್ರ ಸಂಘಟನೆ ಇದಾಗಿದ್ದು, ಈ ಸಂಘಟನೆಯ ಪುಂಡಲಿಕ್ ಮುಟಗೇಕರ್ ಹಾಗೂ ಪ್ರಶಾಂತ್ ಬಿರ್ಜೆರ ವಿಚಾರಣೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಈವರೆಗೂ ಯಾರ ಬಂಧನವೂ ನಡೆದಿಲ್ಲ. ಅರ್ಬಾಸ್ನ ಕೊಲೆ ಆರೋಪದ ಎಫ್ಐಆರ್ನಲ್ಲಿ ಇರುವ ಮೂವರು ಆರೋಪಿಗಳ ಪೈಕಿ ಇವರಿಬ್ಬರ ಹೆಸರು ಕೂಡಾ ಇದೆ. ಈ ಹಿಂದೆಯೇ ಶ್ರೀ ರಾಮ ಸೇನೆ ಹಿಂದೂಸ್ತಾನದ ಮುಖ್ಯಸ್ಥ ರಾಮಕಾಂತ ಈ ಪ್ರಕರಣದಲ್ಲಿ ತಮ್ಮ ಸಂಘಟನೆಯ ಕೈವಾಡವನ್ನು ಅಲ್ಲಗಳೆದಿದ್ದಾರೆ. ಹಿಂದುತ್ವದ ಪರವಾಗಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಕಾರಣಕ್ಕೆ ನಮ್ಮ ಸದಸ್ಯರನ್ನು ಗುರಿಯಾಗಿಸಲಾಗುತ್ತಿದೆ ಎಂದು ದೂರಿದ್ದಾರೆ. ಮುತಾಲಿಕ್ ಕೂಡಾ ಈ ಪ್ರಕರಣದಲ್ಲಿ ಸಂಘಟನೆಯ ಕೈವಾಡವನ್ನು ತಳ್ಳಿಹಾಕಿದ್ದಾರೆ.

ಪ್ರೀತಿ ಮಾಡಿದ್ದು ಆತನ ದೊಡ್ಡ ತಪ್ಪು ಎಂದ ನಾಜಿಮಾ
46 ವರ್ಷದ ನಾಜಿಮಾ ಬೆಳಗಾವಿಯ ಸರ್ಕಾರಿ ಶಾಲೆಯಲ್ಲಿ ಉರ್ದು ಶಿಕ್ಷಕಿ ಆಗಿದ್ದಾರೆ. 2017 ರಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದಾರೆ. ತನ್ನ ದೊಡ್ಡ ಮಗಳು ವಿದೇಶದಲ್ಲಿದ್ದು, ತನ್ನ ಮಗನ ಜೊತೆ ಬೆಳಗಾವಿಯಲ್ಲಿ ನಾಜಿಯಾ ವಾಸಿಸುತ್ತಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಬೆಳಗಾವಿ ನಗರದಿಂದ ಖಾನಾಪುರಕ್ಕೆ ಬಂದಿದ್ದರು. ಆ ಸಂದರ್ಭದಲ್ಲಿ ಹಿಂದೂ ಯುವತಿಯೊಂದಿಗೆ ಪ್ರೀತಿಯಾಗಿದೆ. ಇಬ್ಬರು ಪರಸ್ಪರ ಪ್ರೀತಿಸಿದ್ದಾರೆ. "ಬೇರೆ ಧರ್ಮದ ಯುವತಿಯನ್ನು ಪ್ರೀತಿ ಮಾಡಿದ್ದು ಆತನ ದೊಡ್ಡ ತಪ್ಪು," ಎಂದು ನಾಜಿಮಾ ಹೇಳಿದ್ದಾರೆ. ಆತನಿಗೆ ಅನ್ಯ ಧರ್ಮದ ಯುವತಿಯ ಜೊತೆ ಪ್ರೀತಿ ಇದೆ ಎಂದು ತಿಳಿದ ಕೂಡಲೇ ತಾಯಿ ನಾಜಿಮಾ ಮತ್ತೆ ಬೆಳಗಾವಿ ನಗರಕ್ಕೆ ಹೋಗುವ ನಿರ್ಧಾರ ಕೈಗೊಂಡಿದ್ದರು ಎನ್ನಲಾಗಿದೆ. ಫೆಬ್ರವರಿಯಲ್ಲಿ ನಗರಕ್ಕೆ ತೆರಳಿದ್ಧಾರೆ. "ಆದರೆ ಇಬ್ಬರೂ ಪರಸ್ಪರ ಒಬ್ಬರನ್ನು ಒಬ್ಬರು ಬಿಟ್ಟು ಇರಲಾರರು ಎಂಬಷ್ಟು ಪ್ರೀತಿಸುತ್ತಿದ್ದರು. ನನ್ನ ಮಗ ಮತ್ತೆ ಖಾನಪುರಕ್ಕೆ ಹೋಗುವ ಎಂದು ಒತ್ತಾಯ ಮಾಡಿದ. ಕಳೆದ ರಮಾಝಾನ್ ತಿಂಗಳಲ್ಲಿ ಆಕೆಯ ಕುಟುಂಬಕ್ಕೆ ನಾನು ವಿಷಯ ತಿಳಿಸಿದೆ," ಎಂದು ಹೇಳಿದ್ದಾರೆ.

ಎರಡು ಕುಟುಂಬ ಕೂತು ಪ್ರೇಮಿಗಳ ಮನವೊಲಿಸುವ ಯತ್ನ ಮಾಡಿದ್ದರು
ಅರ್ಬಾಜ್ ಮುಲ್ಲಾ ಹಾಗೂ ಆ ಹಿಂದೂ ಯುವತಿಯ ಕುಟುಂಬಸ್ಥರು ಜೊತೆಯಾಗಿ ಕೂತು ಇಬ್ಬರ ಮನವೊಲಿಕೆ ಮಾಡುವ ಯತ್ನ ಮಾಡಿದ್ದಾರೆ. ನೀವು ಸಂಬಂಧವನ್ನು ಬಿಡಬೇಕು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. "ನಮಗೆ ಈ ವಿಚಾರದಲ್ಲಿ ಬೆದರಿಕೆಗಳು ಬಂದವು. ಆದರೆ ನನ್ನ ಮಗ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಆದ್ದರಿಂದ ಜುಲೈ ತಿಂಗಳಿನಲ್ಲಿ ಮತ್ತೆ ಬೆಳಗಾವಿಗೆ ಹೋಗುವ ಎಂದು ನಾನು ಆತನಿಗೆ ಒತ್ತಾಯ ಮಾಡಿದೆ," ಎಂದು ನಾಜಿಮಾ ಹೇಳಿದ್ದಾರೆ. ಆ ಬಳಿಕ ಪುಂಡಲಿಕ ಇಬ್ಬರಿಗೂ ಜೀವ ಬೆದರಿಕೆ ಹಾಕಲು ಆರಂಭ ಮಾಡಿದರು. ಸೆಪ್ಟೆಂಬರ್ 25 ರಂದು ಪುಂಡಲಿಕನ ಕರೆ ಬಂದಿದ್ದು, ಅರ್ಬಾಜ್ ನಮ್ಮನ್ನು ನಮ್ಮಷ್ಟಕ್ಕೆ ಬಿಟ್ಟು ಬಿಡಿ ಎಂದು ಮನವಿ ಮಾಡಿದ್ದ ಎಂದು ತಾಯಿ ಹೇಳಿದ್ದಾರೆ. "ಈ ಬಗ್ಗೆ ಇತ್ಯರ್ಥ ಮಾಡಲು ಸೆಪ್ಟೆಂಬರ್ 26 ರಂದು ಭೇಟಿಯಾಗಲು ಖಾನಾಪುರಕ್ಕೆ ಬರಲು ಪುಂಡಲಿಕ ಹೇಳಿದ್ದ, ನಾವು ಬಸ್ನಲ್ಲಿ ಇರುವಾಗ ನಿಮ್ಮಗೆ ಸಾವಿರಾರು ಮಂದಿ ಥಳಿಸುವುದನ್ನು ತಪ್ಪಿಸಬೇಕಾದರೆ ಒಂದು ಸ್ಟಾಪ್ ಮುಂಚೆಯೇ ಇಳಿಯುವಂತೆ ಕರೆ ಮಾಡಿ ಹೇಳಿದ," ಎಂದು ಕೂಡಾ ತಾಯಿ ನಾಜಿಮಾ ಹೇಳಿದ್ದಾರೆ.
ಇನ್ನು ಪುಂಡಲೀಕ ಏಳು ಸಾವಿರ ರೂಪಾಯಿ ನೀಡುವಂತೆ ತಾಯಿ ಹಾಗೂ ಮಗನ ಮುಂದೆ ಬೇಡಿಕೆ ಇಟ್ಟಿದ್ದ ಎಂದು ಹೇಳಲಾಗಿದೆ. ಹಾಗೆಯೇ "ಯುವತಿ ತನ್ನೊಂದಿಗೆ ಸಂಬಂಧವನ್ನು ತೊರೆದರೆ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದಾಗಿ ಅರ್ಬಾಜ್ ಬೆದರಿಕೆ ಹಾಕಿರುವುದಾಗಿ ಪುಂಡಲಿಕ ಹೇಳಿದ್ದ," ಎಂದು ತಾಯಿ ನಾಜಿಮಾ ಹೇಳಿದ್ದಾರೆ. ಹಾಗೆಯೇ ಆ ಇಬ್ಬರು ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಯುವತಿಯ ತಂದೆ, ಯುವತಿಯ ಫೋಟೋ, ಮೆಸೇಜ್ಗಳನ್ನು ಡಿಲೀಟ್ ಮಾಡುವಂತೆ ಒತ್ತಡ ಹೇರುತ್ತಿದ್ದರು ಎಂದು ಹೇಳಲಾಗಿದೆ. ಇನ್ನು ನಾವು ಅಲ್ಲಿಂದ ಬಂದ ಬಳಿಕ ಎರಡು ದಿನಗಳ ಕಾಲ ಯಾವುದಾದರೂ ಬೆದರಿಕೆ ಕರೆ, ಮೆಸೇಜ್ ಬರುತ್ತದೆಯೇ ಎಂದು ನನ್ನ ಮಗ ಮೊಬೈಲ್ ಅನ್ನು ನೋಡುತ್ತಲೇ ಇದ್ದ ಎಂದು ನಾಜಿಮಾ ಹೇಳಿದ್ದಾರೆ.

ಅರ್ಬಾಸ್ನನ್ನು ಯುವತಿ ಮದುವೆ ಆಗಲು ಸಿದ್ದವಾಗಿದ್ದಳು
ಈಗಾಗಲೇ ಮೂವರ ವಿರುದ್ದ ಎಫ್ಐಆರ್ ದಾಖಲು ಆಗಿದೆ. ಇನ್ನು ಪಿತೂರಿ ಮಾಡಿದ ಆರೋಪದ ಮೇಲೂ ಮೂವರ ಮೇಲೆ ದೂರು ದಾಖಲು ಮಾಡಬೇಕು ಎಂದು ಯುವಕನ ಕುಟುಂಬಸ್ಥರು ಆಗ್ರಹ ಮಾಡಿದ್ದಾರೆ. "ಅವರು ನನ್ನ ಮಗನನ್ನು ಕೊಂದ್ದು ಹಳಿಯ ಮೇಲೆ ಎಸೆದಿದ್ದಾರೆ, ಸಾಕ್ಷಿಯನ್ನು ನಾಶ ಮಾಡಿದ್ದಾರೆ. ಇದು ಅಪಘಾತ ಎಂಬಂತೆ ಬಿಂಬಿಸುವ ಯತ್ನವನ್ನು ಮಾಡಿದ್ದಾರೆ," ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಅರ್ಬಾಜ್ನ ಸಂಬಂಧಿ ಸಮೀರ್ ಮುಲ್ಲಾ, "ಯುವತಿಯು ನನ್ನ ಸಹೋದರನನ್ನು ವಿವಾಹವಾಗಲು ಸಿದ್ಧವಾಗಿದ್ದಳು. ಹಾಗಾಗಿ ಆಕೆಯ ತಾಯಿ ಹಾಗೂ ತಂದೆಯೇ ಈಗ ಆರೋಪಿದಾರರು. ಆಕೆ ನನ್ನ ಸಹೋದರನನ್ನು ತುಂಬಾ ಪ್ರೀತಿ ಮಾಡುತ್ತಿದ್ದಳು," ಎಂದು ತಿಳಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications