ಭಂಡ ಧೈರ್ಯದ ಪೈಲಟ್ ಮತ್ತು ನಿಯತ್ತಿನ ಗುಂಡ
ಸಾಫ್ಟ್ ವೇರ್ ಕಂಪನಿಯಲ್ಲಿ 25 ವರ್ಷಗಳಿಂದ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಗುಂಡ ಮಹಾ ಪ್ರಾಮಾಣಿಕ, ಸತ್ಯವಂತ, ನಿಷ್ಠಾವಂತ, ಪ್ರಜ್ಞಾವಂತ. ಸತ್ಯ ಹರಿಶ್ಚಂದ್ರನ ವಂಶದಲ್ಲಿ ಜನಿಸಿದವನಂತೆ ವರ್ತಿಸುತ್ತಿದ್ದ. ನಿಯತ್ತು ಅಂದ್ರೆ ನಿಯತ್ತು. ಗಡಿಯಾರದ ನೆತ್ತಿಯ ಮೇಲೆ ಹೊಡೆದವನಂತೆ ಕಚೇರಿಗೆ ಬರುತ್ತಿದ್ದ ಮತ್ತು ಸಂಜೆ ಜಾಗ ಖಾಲಿ ಮಾಡುತ್ತಿದ್ದ.
ಆತನ ಹೆಂಡತಿ ಗುಂಡಿಗೆ ಆತನ ಮೇಲೆ ಭಾರೀ ಅಭಿಮಾನ, ಹಾಗೆಯೆ ಆತನ ನಿಯತ್ತು ಕಂಡು ಆಗಾಗ ಸಿಡಿದು ಬೀಳುತ್ತಿದ್ದಳು. ಒಂದು ಬಾರಿ ಆತ ತನ್ನ ಹೆಂಡತಿಯನ್ನು ಕರೆದುಕೊಂಡು ರಜಾ ದಿನಗಳನ್ನು ಕಳೆಯಲೆಂದು ಮಾಲ್ಡೀವ್ಸ್ ದ್ವೀಪಕ್ಕೆ ವಿಮಾನದಲ್ಲಿ ಹೊರಟ. ಮಾಲ್ಡೀವ್ಸ್ ದ್ವೀಪಗಳು ಹತ್ತತ್ತಿರ ಬರುತ್ತಿದ್ದಂತೆ ವಿಮಾನದಲ್ಲಿದ ಪೈಲಟ್ ಮೈಕ್ ಮುಖಾಂತರ ಎಚ್ಚರಿಕೆಯ ಗಂಟೆ ಬಾರಿಸಲು ಶುರು ಮಾಡಿದ.
"ಮಹಿಳೆಯರೆ ಮತ್ತು ಮಹನೀಯರೆ, ನಿಮಗೊಂದು ಕೆಟ್ಟ ಸುದ್ದಿಯಿದೆ. ವಿಮಾನದ ಇಂಜಿನ್ ನಲ್ಲಿ ದೋಷ ಕಂಡುಬಂದಿರುವುದರಿಂದ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆದರೆ, ಹೆದರುವ ಮತ್ತು ಗೊಂದಲಕ್ಕೀಡಾಗುವ ಅಗತ್ಯವಿಲ್ಲ. ಕೂಡಲೆ ನಿಮ್ಮ ಸೀಟ್ ಬೆಲ್ಟ್ ಬಿಗಿ ಮಾಡಿಕೊಳ್ಳಿ. ಹತ್ತಿರದಲ್ಲಿ ದ್ವೀಪವೊಂದು ಕಾಣಿಸುತ್ತಿದ್ದು, ಅಲ್ಲಿನ ಬೀಚ್ ಮೇಲೆ ಇಳಿಸಲು ಪ್ರಯತ್ನಪಡುತ್ತೇನೆ" ಎಂದು ಹೇಳುತ್ತಿದ್ದಂತೆ ಗೊಂದಲದ ನಡುವೆ ಮಂತ್ರ ಪಠನಗಳು ಶುರುವಾದವು.
ಮುಂದುವರಿಸಿದ ಭಂಡ ಧೈರ್ಯದ ಪೈಲಟ್, "ಮಹನೀಯರೆ, ಇಲ್ಲೊಂದು ಸಮಸ್ಯೆಯಿದೆ. ನಾವೇನೋ ಸುರಕ್ಷಿತವಾಗಿ ಈ ದ್ವೀಪದಲ್ಲಿ ಇಳಿಯಬಹುದು. ಆದರೆ, ನಿರ್ಜನ ಪ್ರದೇಶವಾಗಿದ್ದು, ಸರಕಾರದವರು ನಮ್ಮನ್ನು ಇಲ್ಲಿಂದ ಪಾರು ಮಾಡುವುದು ಕನಸಿನ ಮಾತು. ಮುಂದಿನ ಜೀವನವನ್ನು ಇಲ್ಲಿಯೇ ಕಳೆಯಲು ಮಾನಸಿಕವಾಗಿ ಸಿದ್ಧರಾಗಿರಿ" ಎಂದು ತನ್ನ ಸಂದೇಶವನ್ನು ತುಂಡರಿಸಿದ.
ಪೈಲಟ್ನ ಚಾಣಾಕ್ಷತನದಿಂದಾಗಿ ವಿಮಾನ ಸುರಕ್ಷಿತವಾಗಿ ಕಂಡು ಕೇಳರಿಯದ ದ್ವೀಪದ ಮೇಲೆ ಇಳಿಯಿತು. ಎಲ್ಲರಲ್ಲೂ ಹರ್ಷೋದ್ಘಾರ. ಮುಂದಿನ ಜೀವನ ಹೇಗೇ ಇರಲಿ, ಹಣ್ಣುಗಿಣ್ಣು ತಿಂದಾದರೂ ಬದುಕೋಣ ಎಂದು ಎಲ್ಲರೂ ಉಲ್ಲಸಿತರಾಗಿದ್ದರು. ಗುಂಡಿಯ ಮಂತ್ರ ಫಲಿಸಿತ್ತು. ಆದರೆ, ಗುಂಡ ಮಾತ್ರ ಮ್ಲಾನವದನನಾಗಿದ್ದ. ಏಕೆಂದು ಕೇಳಲು, "ಅಯ್ಯೋ, ಈ ತಿಂಗಳು 10ನೇ ತಾರೀಖಿನಿಂದು ಐಸಿಐಸಿಐ ಬ್ಯಾಂಕಿಗೆ 5 ಲಕ್ಷ ರು. ಕಟ್ಟಬೇಕಾಗಿತ್ತು!" ಎಂದಾಗ "ದಿಸ್ ಈಸ್ ಟೂ ಮಚ್" ಅಂದು ಪೈಲಟ್ ಅಲ್ಲೇ ಕುಸಿದುಬಿದ್ದ.












Click it and Unblock the Notifications