ಬಳ್ಳಾರಿ: ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ, ಮಾಹಿತಿ ತಿಳಿಯಿರಿ
ಬಳ್ಳಾರಿ, ಜೂನ್. 07: ಪ್ರಸ್ತಕ ಸಾಲಿಗೆ ಕೇಂದ್ರ ಪುರಸ್ಕತ ಯೋಜನೆಯಾದ ದೀನ್ ದಯಾಳ್ ಅಂತ್ಯೋದಯ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಸ್ವಯಂ ಉದ್ಯೋಗ ಕೈಗೊಳ್ಳಲು ಸಾಲ ಸೌಲಭ್ಯಕ್ಕಾಗಿ 18 ವರ್ಷ ಮೇಲ್ಪಟ್ಟ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಾಲದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 24 ರೊಳಗಾಗಿ ಮಹಾನಗರ ಪಾಲಿಕೆ ವಲಯ ಕಚೇರಿ - 1ರ (ಹಳೇ ಕಟ್ಟಡದ) ಡೇ-ನಲ್ಮ್ ಶಾಖೆಗೆ ಸಲ್ಲಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಜಿ.ಖಲೀಲ್ಸಾಬ್ ಅವರು ತಿಳಿಸಿದ್ದಾರೆ.

ಸ್ವಯಂ ಉದ್ಯೋಗ ಕಾರ್ಯಕ್ರಮ (ವೈಯಕ್ತಿಕ):
ವೈಯಕ್ತಿಕ ಸ್ವಯಂ ಉದ್ಯೋಗ ಕೈಗೊಳ್ಳಲು ಗರಿಷ್ಠ ರೂ.2 ಲಕ್ಷದವರೆಗೆ ಸೇವಾ ವಲಯ ಬ್ಯಾಂಕ್ಗಳಿಂದ 100 ಅರ್ಹ ಅಭ್ಯರ್ಥಿಗಳಿಗೆ ಸಾಲ ಸೌಲಭ್ಯ ಹಾಗೂ ಸಾಲದ ಮೇಲೆ ಬಡ್ಡಿ ದರ ಶೇ.7ಕ್ಕಿಂತ ಮೇಲ್ಪಟ್ಟಿದ್ದರೆ ಬಡ್ಡಿ ಸಹಾಯಧನ ನೀಡಲಾಗುವುದು.
ಅರ್ಹತೆ
* ಅಭ್ಯರ್ಥಿ ಸ್ತ್ರೀ ಶಕ್ತಿ ಸ್ವ-ಸಹಾಯ ಸಂಘಗಳ ಸದಸ್ಯರಾಗಿರಬೇಕು ಅಥವಾ ಅವರ ಮನೆಯಲ್ಲಿ ಯಾರಾದರೂ ಒಬ್ಬರು ಸಂಘದ ಸದಸ್ಯರಾಗಿರಬೇಕು.
* ಸಾಲ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸುವಾಗ 18 ವರ್ಷ ವಯಸ್ಸು ತುಂಬಿರಬೇಕು.
ಸ್ವಯಂ ಉದ್ಯೋಗ ಕಾರ್ಯಕ್ರಮ(ಗುಂಪು)
ಎಸ್ಜೆಆರ್ಎಸ್ವೈ ಯೋಜನೆ ಹಾಗೂ ಡೇ-ನಲ್ಮ್ ಯೋಜನೆಯಡಿ ರಚಿತವಾದ 08 ಗುಂಪುಗಳು ಸ್ವಸಹಾಯ ಉದ್ದಿಮೆ/ಚಟುವಟಿಕೆಗಳನ್ನು ಪ್ರಾರಂಭಿಸಲು ರೂ.10 ಲಕ್ಷಗಳವರೆಗೆ ಸೇವಾ ವಲಯ ಬ್ಯಾಂಕುಗಳ ಮೂಲಕ ಸಾಲ ಸೌಲಭ್ಯ ಒದಗಿಸಲಾಗುವುದು. ಸಾಲದ ಮೇಲೆ ಬಡ್ಡಿ ದರ ಶೇ.7 ಕ್ಕಿಂತ ಮೇಲ್ಪಟ್ಟಿದ್ದರೆ ಬಡ್ಡಿ ಸಹಾಯಧನ ನೀಡಲಾಗುವುದು.
ಅರ್ಹತೆ
* ಗುಂಪಿನ ಎಲ್ಲಾ ಸದಸ್ಯರ ವಯಸ್ಸು 18 ವರ್ಷ ಪೂರೈಸಿರಬೇಕು.
* ಗುಂಪು ಚಟುವಟಿಕೆಗಳನ್ನು ಕೈಗೊಳ್ಳಲು ಸ್ವ-ಸಹಾಯ ಸಂಘ ಅಥವಾ ಕನಿಷ್ಟ 5 ಜನ ಸದಸ್ಯರ ಜೆ.ಎಲ್.ಜಿ ಗುಂಪು ಇರಬೇಕು ಹಾಗೂ ಸದರಿ ಸದಸ್ಯರು ಶೇ.70 ರಷ್ಟು ಬಡ ಕುಟುಂಬದವರಾಗಿರಬೇಕು.
ಸ್ವಸಹಾಯ ಸಂಘಗಳ ಬ್ಯಾಂಕ್ ಕ್ರೆಡಿಟ್ ಲಿಂಕೇಜ್
ಎಸ್ಜೆಆರ್ಎಸ್ವೈ ಯೋಜನೆ ಹಾಗೂ ಡೇ-ನಲ್ಮ್ ಯೋಜನೆಯಡಿ ರಚಿತವಾದ 126 ಗುಂಪುಗಳು ಖಾತೆ ಹೊಂದಿರುವ ಬ್ಯಾಂಕ್ಗಳ ಮೂಲಕ ಸಾಲ ಸೌಲಭ್ಯ ಕಲ್ಪಿಸುವುದು.
ಅರ್ಹತೆ
* ಸ್ವಸಹಾಯ ಗುಂಪುಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರಬೇಕು.
* ಆವರ್ತಕ ನಿಧಿ ಪಡೆದಿರಬೇಕು.
ಸ್ವಸಹಾಯ ಗುಂಪುಗಳ ರಚನೆ ಕಾರ್ಯಕ್ರಮ
ಬಳ್ಳಾರಿ ವ್ಯಾಪ್ತಿಯಲ್ಲಿ 10 ರಿಂದ 20 ಬಡ ಮಹಿಳೆಯರನ್ನೊಳಗೊಂಡ ಒಟ್ಟು 251 ಸ್ವ-ಸಹಾಯ ಗುಂಪುಗಳನ್ನು ರಚಿಸುವುದು.
ಅರ್ಹತೆ
* ಸದಸ್ಯತ್ವ ಬಯಸುವ ಎಲ್ಲರೂ 18ರಿಂದ 50 ವರ್ಷದೊಳಗಿರಬೇಕು.
* ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು.
* ಸದಸ್ಯತ್ವ ಬಯಸುವವರು ಕಡ್ಡಾಯವಾಗಿ ಬಡತನ ರೇಖೆಗಿಂತ ಕೆಳಗಿರಬೇಕು (ಶೇ.70ರಷ್ಟು ಬಿಪಿಎಲ್ ಕುಟುಂಬದವರಾಗಿರಬೇಕು).
ಲಗತ್ತಿಸಬೇಕಾದ ದಾಖಲಾತಿಗಳು
ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ರೇಷನ್ ಕಾರ್ಡ್, ಆಧಾರ್ಕಾರ್ಡ್, ಮತದಾರರ ಗುರುತಿನ ಚೀಟಿ, ಇತ್ತೀಚಿನ ಮೂರು ಭಾವ ಚಿತ್ರಗಳು, ವಿದ್ಯಾರ್ಹತೆ ಪ್ರಮಾಣ ಪತ್ರ ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸಬೇಕು.
ಮೇಲ್ಕಂಡ ಯೋಜನೆಯ ಮಾರ್ಗಸೂಚಿಯ ಅನ್ವಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ನಿಗದಿತ ದಾಖಲಾತಿಗಳನ್ನು ಸಲ್ಲಿಸದಿದ್ದಲ್ಲಿ ಅರ್ಜಿಗಳನ್ನು ತಿರಸ್ಕಾರ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮಹಾನಗರ ಪಾಲಿಕೆ ವಲಯ ಕಚೇರಿ - 1ರ (ಹಳೇ ಕಟ್ಟಡದ) ಡೇ-ನಲ್ಮ್ ಶಾಖೆ ಅಥವಾ ದೂ.08392-273479, 278168 ಗೆ ಸಂಪರ್ಕಿಸಬಹುದು.












Click it and Unblock the Notifications