ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನೇಮಕಾತಿ, ವಿವರ
ಬೆಂಗಳೂರು, ಆಗಸ್ಟ್ 21: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊರ ಗುತ್ತಿಗೆ ಆಧಾರದ ಮೇಲೆ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಮಾಡಲು 31/8/2023 ಕೊನೆಯ ದಿನವಾಗಿದೆ.
ನಿರ್ದೇಶಕರ ಕಛೇರಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಬೆಂಗಳೂರು ಹೊರಗುತ್ತಿಗೆ ಆಧಾರದ ಮೇಲೆ ಕಾನೂನು ಸಮಾಲೋಚಕರು ಹುದ್ದೆಯನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳ ವೇತನ 35,000 ರೂ.ಗಳು.

ಈ ಹುದ್ದೆಯು ಸಂಪೂರ್ಣವಾಗಿ ತಾತ್ಕಾಲಿಕವಾಗಿದೆ. ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ನಂತರ ಕಾಲಕಾಲಕ್ಕೆ ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಅವಶ್ಯಕತೆಯಿದ್ದಲ್ಲಿ ಮುಂದುವರೆಸಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ.
ಅರ್ಹತೆಗಳ ವಿವರ; ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕರ್ನಾಟಕ ರಾಜ್ಯದಿಂದ ಮಾನ್ಯತೆ ಹೊಂದಿರುವ ವಿಶ್ವವಿದ್ಯಾಲಯದಿಂದ ಕಾನೂನು ವಿಷಯದಲ್ಲಿ ಪದವಿ ಹೊಂದಿರಬೇಕು. ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿ 3 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು.
ಅರ್ಜಿ ಸಲ್ಲಿಕೆ ಮಾಡುವವರು ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ 50 ವರ್ಷಗಳನ್ನು ಮೀರಿರಬಾರದು.
ಅಭ್ಯರ್ಥಿಗಳು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಪರಿಣಿತಿಯನ್ನು ಹೊಂದಿರಬೇಕು. ವಿದ್ಯಾರ್ಹತೆ, ಅನುಭವ ಮತ್ತು ವಯಸ್ಸಿನ ದೃಢೀಕರಣದೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕು.
ಅಭ್ಯರ್ಥಿಗಳು ಇಲಾಖೆಯ ವಿರುದ್ಧ ದಾಖಾಲಾಗಿರುವ ಎಲ್ಲಾ ವಿಧವಾದ ಪ್ರಕರಣಗಳಿಗೆ (ರಿಟ್ ಅರ್ಜಿ, ನಿಂದನಾ ಅರ್ಜಿ, ಮೇಲ್ಮನವಿ, ಸಿವಿಲ್ ಪ್ರಕರಣ, ಕ್ರಿಮಿನಲ್ ಪ್ರಕರಣ ಇತ್ಯಾದಿ) ಸಂಬಂಧಿಸಿದಂತೆ, ಮಾನ್ಯ ನ್ಯಾಯಲಯಗಳಲ್ಲಿ ಕಂಡಿಕೆವಾರು ಉತ್ತರಗಳು, ಆಕ್ಷೇಪಣಾ ಹೇಳಿಕೆಗಳು, ತಕರಾರು ಅರ್ಜಿಗಳನ್ನು ಸಲ್ಲಿಸಬೇಕಿದೆ.
ನ್ಯಾಯಾಲಯ ಪ್ರಕರಣಗಳನ್ನು ಕಾಲಕಾಲಕ್ಕೆ ಹಿಂಬಾಲಿಸಿ, ತ್ವರಿತವಾಗಿ ಇತ್ಯರ್ಥಪಡಿಸಬೇಕು. ನ್ಯಾಯಾಲಯದ ಪ್ರಕರಣಗಳಲ್ಲಿ ಇಲಾಖೆಗೆ ಕಾನೂನು ಅಭಿಪ್ರಾಯ ನೀಡಬೇಕು. ಅಧೀನ ಕಛೇರಿಗಳಲ್ಲಿನ ನ್ಯಾಯಾಲಯದ ಪ್ರಕರಣಗಳಲ್ಲಿ ಕಾನೂನು ಅಭಿಪ್ರಾಯವನ್ನು ನೀಡಬೇಕಿದೆ.
ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ ಸಿಬ್ಬಂದಿಗಳು ಮಾನ್ಯ ಉಚ್ಚ ನ್ಯಾಯಾಲಯ/ ಕರ್ನಾಟಕ ಆಡಳಿತ ನ್ಯಾಯ ಮಂಡಳಿಗಳಲ್ಲಿ ದಾಖಲಿಸಿರುವ ಸೇವಾ ಪ್ರಕರಣಗಳಲ್ಲಿ ಇಲಾಖೆಯ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ.
ಆಸಕ್ತ, ಅರ್ಹ ಅಭ್ಯರ್ಥಿಗಳು ವಿದ್ಯಾರ್ಹತೆ, ಅನುಭವ ಮತ್ತು ವಯಸ್ಸಿನ ದೃಢೀಕರಣದ ಜೊತೆ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ನಿಗದಿತ ನಮೂನೆಯ ಅರ್ಜಿಗಳು swachhamevajayate.orgನಲ್ಲಿ ಲಭ್ಯವಿದೆ.
ಅರ್ಜಿಗಳನ್ನು ಭರ್ತಿ ಮಾಡಿ ನಿರ್ದೇಶಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, 2ನೇ ಮಹಡಿ, ಕೆ. ಹೆಚ್. ಬಿ, ಕಟ್ಟಡ, ಕಾವೇರಿ ಭವನ, ಕೆ. ಜಿ., ರಸ್ತೆ, ಬೆಂಗಳೂರು-09 ವಿಳಾಸಕ್ಕೆ ದಿನಾಂಕ 31/08/2023ರ ಸಂಜೆ 5.30 ಗಂಟೆಯೊಳಗೆ ಸಲ್ಲಿಸತಕ್ಕದ್ದು. ನಂತರ ಬಂದ ಅರ್ಜಿಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.












Click it and Unblock the Notifications