52 ಪಶು ವೈದ್ಯಾಧಿಕಾರಿಗಳ ನೇಮಕಾತಿ; ಆನ್ಲೈನ್ನಲ್ಲಿ ಅರ್ಜಿ ಹಾಕಿ
ಬೆಂಗಳೂರು, ಮಾರ್ಚ್ 14; ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಪಶು ವೈದ್ಯಾಧಿಕಾರಿಗಳ ವಿಶೇಷ ನೇರ ನೇಮಕಾತಿ ಮಾಡುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾರ್ಚ್ 22ರ ಸಂಜೆ 5.30ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಪಶು ವೈದ್ಯಾಧಿಕಾರಿಗಳ 52 ಬ್ಯಾಕ್ಲಾಗ್ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ನಿಯಮದಡಿ ಭರ್ತಿ ಮಾಡಲಾಗುತ್ತಿದೆ. ಪರಿಶಿಷ್ಟ ಜಾತಿ 47, ಪರಿಶಿಷ್ಟ ಪಂಗಡ 5 ಹುದ್ದೆಗಳಿದ್ದು, ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
2017ರ ನೇಮಕಾತಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದಡಿ ಭರ್ತಿಯಾಗದೇ ಬಾಕಿ ಉಳಿದ ಹುದ್ದೆಗಳನ್ನು ಬ್ಯಾಕ್ ಲಾಗ್ ಹುದ್ದೆಯೆಂದು ಪರಿಗಣಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಬಳಿಕ ಯಾವುದೇ ಕಾರಣಕ್ಕೂ ಅರ್ಜಿಯಲ್ಲಿ ನೀಡಿರುವ ಮಾಹಿತಿ ಬದಲಾವಣೆಗೆ ಅವಕಾಶವಿಲ್ಲ. ಬದಲಾವಣೆ ಕೋರಿ ಮನವಿ ಸಲ್ಲಿಸಿದಲ್ಲಿ ಮನವಿ ತಿರಸ್ಕಾರ ಮಾಡಲಾಗುತ್ತದೆ.

ವಿದ್ಯಾರ್ಹತೆ; ಅರ್ಜಿ ಸಲ್ಲಿಕೆ ಮಾಡಲ ನಿಗದಿಪಡಿಸಿದ ಕೊನೆಯ ದಿನಾಂಕದ ಒಳಗಾಗಿ ಅಭ್ಯರ್ಥಿ ಯಾವುದೇ ಪಶು ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಅಥವ ಭಾರತದಲ್ಲಿ ಕಾನೂನು ಮೂಲಕ ಸ್ಥಾಪಿತವಾದ ಪಶು ವಿಶ್ವವಿದ್ಯಾಲಯ ಅಥವ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಿಂದ ಕನಿಷ್ಠ ಶೇ 50ರಷ್ಟು ಅಂಕಗಳೊಂದಿಗೆ ಬಿ. ವಿ. ಎಸ್. ಸಿ. ಅಥವ ಬಿ. ವಿ. ಎಸ್. ಸಿ. & ಎ. ಹೆಚ್. ಪದವಿ ಹೊಂದಿರಬೇಕು.
ಭಾರತೀಯ ಪಶು ವೈದ್ಯಕೀಯ ಪರಿಷತ್ತಿನ ಕಾಯ್ದೆ 1984ರ ಅಡಿಯಲ್ಲಿ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನಲ್ಲಿ ನೋಂದಣಿಯಾಗಿರಬೇಕು ಹಾಗೂ ಈ ನೋಂದಣಿ ಚಾಲ್ತಿಯಲ್ಲಿರಬೇಕು.
ವಯೋಮಿತಿ; ಅರ್ಜಿ ಸ್ವೀಕರಿಸಲು ನಿಗದಿಪಡಿಸಿದ ಅಂತಿಮ ದಿನಾಂಕ 22/3/2022ರಂದು ಅಭ್ಯರ್ಥಿಯು ಈ ಕೆಳಕಂಡ ಕನಿಷ್ಠ ವಯೋಮಿತಿಯನ್ನು ಹೊಂದಿರತಕ್ಕದ್ದು ಮತ್ತು ಗರಿಷ್ಠ ವಯೋಮಿತಿ ಮೀರಿರಬಾರದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ 40 ವರ್ಷಗಳು.
ಅರ್ಜಿಗಳನ್ನು ಸಲ್ಲಿಸುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ 270 ರೂ. (250 ಅರ್ಜಿ ಶುಲ್ಕ, ಅಂಚೆ ಶುಲ್ಕ 20) ಶುಲ್ಕವನ್ನು 25/3/2022ರ ಒಳಗಾಗಿ ಅಂಚೆ ಕಚೇರಿ ಕರ್ತವ್ಯದ ಅವಧಿಯೊಳಗೆ ಪಾವತಿ ಮಾಡಬೇಕು. ಅರ್ಜಿ ಶುಲ್ಕವನ್ನು ವಾಪಸ್ ನೀಡುವುದಿಲ್ಲ. ನಿಗದಿತ ದಿನಾಂಕದ ನಂತರ ಸಲ್ಲಿಸಿದ ಅರ್ಜಿ ಶುಲ್ಕವನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಅರ್ಹತಾ ಷರತ್ತುಗಳು
* ಭಾರತೀಯ ನಾಗರೀಕನಾಗಿರತಕ್ಕದ್ದು
* ಒಬ್ಬ ಜೀವಂತ ಪತ್ನಿಗಿಂತ ಹೆಚ್ಚು ಮಂದಿ ಪತ್ನಿಯಯನ್ನು ಹೊಂದಿದ ಪುರುಷ ಅಭ್ಯರ್ಥಿ, ಈಗಾಗಲೇ ಇನ್ನೊಬ್ಬ ಪತ್ನಿ ಇರುವ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಅಭ್ಯರ್ಥಿಯು ಸರ್ಕಾರದ ಪೂರ್ವಾನುಮತಿಯನ್ನು ಪಡೆಯದ ಹೊರತು ನೇಮಕಾತಿಗೆ ಅರ್ಹರಲ್ಲ.
* ಅಭ್ಯರ್ಥಿಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯವಂತರಾಗಿರಬೇಕು ಮತ್ತು ಅವರ ನೇಮಕಾತಿಯು ಕರ್ತವ್ಯ ದಕ್ಷ ನಿರ್ವಹಣೆ ಆತಂಕವನ್ನು ಉಂಟು ಮಾಡುವ ಸಂಭವ ಇರುವ ಯಾವುದೇ ದೈಹಿಕ ನ್ಯೂನತೆಯಿಂದ ಮುಕ್ತವಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ ವಿಳಾಸ http://www.ahvs.kar.nic.in/kn-home.html
ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ; ಕೊಪ್ಪಳ ಜಿಲ್ಲೆಯ ತಾವರಗೇರಾ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಡಿ ದೀನ್-ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಸಮುದಾಯ ಸಂಪನ್ಮೂಲ ವ್ಯಕ್ತಿಗಳ ಒಂದು ಹುದ್ದೆ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಈ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಸ್ವ-ಸಹಾಯ ಸಂಘಗಳ ಸದಸ್ಯರಿಂದ ಅರ್ಜಿ ಕರೆಯಲಾಗಿದೆ.
ಅರ್ಹ ಅಭ್ಯರ್ಥಿಯನ್ನು ಸಂದರ್ಶನದ ಮೂಲಕ ನೇಮಕ ಮಾಡಿಕೊಳ್ಳಲಾಗುತ್ತದೆ . ಕಾರ್ಯಾಲಯದ ಅವಧಿಯಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಆಯ್ಕೆಯಾದ ಅಭ್ಯರ್ಥಿಗೆ ಮಾಸಿಕ 8 ಸಾವಿರ ರೂ. ಗೌರವಧನ ಹಾಗೂ 2 ಸಾವಿರ ರೂ.ಗಳ ಪ್ರಯಾಣ ಭತ್ಯೆಯನ್ನು ನೀಡಲಾಗುತ್ತದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗೆ 18 ರಿಂದ 45 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ಅಭ್ಯರ್ಥಿ ಕನಿಷ್ಟ ಪಿಯುಸಿ ತೇರ್ಗಡೆಯಾಗಿರಬೇಕು. ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು (ಪ್ರಮಾಣ ಪತ್ರ ಹೊಂದಿರಬೇಕು).
ಅಭ್ಯರ್ಥಿ ತಾವರಗೇರಾ ಪಟ್ಟಣ ಪಂಚಾಯತಿಯ ಸ್ವ-ಸಹಾಯ ಸಂಘದಲ್ಲಿ ಕನಿಷ್ಟ ಮೂರು ವರ್ಷದಿಂದ ಸದಸ್ಯರಾಗಿರಬೇಕು ಅಥವಾ ಪ್ರದೇಶ ಮಟ್ಟದ ಒಕ್ಕೂಟದ ಸದಸ್ಯರಾಗಿರಬೇಕು. ಸ್ವ-ಸಹಾಯ ಸಂಘದಲ್ಲಿ ಆಂತರಿಕ ಸಾಲ ಪಡೆದು ಸಕಾಲದಲ್ಲಿ ಮರು ಪಾವತಿಸಿರಬೇಕು. ಕಟ್ ಬಾಕಿದಾರರಾಗಿರಬಾರದು. ಹೆಚ್ಚಿನ ಮಾಹಿತಿಗೆ ತಾವರಗೇರಾ ಪಟ್ಟಣ ಪಂಚಾಯತಿ ಕಚೇರಿಯನ್ನು ಸಂಪರ್ಕಿಸಬಹುದು.












Click it and Unblock the Notifications