ಹವಾಮಾನ ವರದಿ: ಯಾವ ಜಿಲ್ಲೆಯಲ್ಲಿ ತಾಪಮಾನ ಎಷ್ಟಿದೆ?
ಕರ್ನಾಟಕದ ಕರಾವಳಿ ದಕ್ಷಿಣ ಒಳನಾಡಿನಲ್ಲಿ ಮಾರ್ಚ್ 29ರವರೆಗೂ ಅಲ್ಲಲ್ಲಿ ಮಳೆಯಾಗಲಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಆದರೆ, ಬೆಳಗಾವಿಯ ಹಲವೆಡೆ ಕಳೆದೆರಡು ದಿನಗಳಿಂದ ಸಿಡಿಲು, ಗುಡುಗು ಆರ್ಭಟದ ಜೊತೆ ಜೋರಾಗಿ ಮಳೆ ಸುರಿದಿದೆ. ಇನ್ನು ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯ ಚಿಂಚೋಳಿ ತಾಲೂಕಿನಲ್ಲೂ ಮಳೆಯಾಗಿದೆ.
ಬೆಂಗಳೂರಿನ ಹೊರ ವಲಯದಲ್ಲಿ ಮಳೆ ನಿರೀಕ್ಷೆಯಿದ್ದರೂ ನಗರ ಪ್ರದೇಶದಲ್ಲಿ ಒಣಹವೆ ಮುಂದುವರೆಯಲಿದೆ ಹವಾಮಾನ ಇಲಾಖೆ ಉಸ್ತುವಾರಿ ನಿರ್ದೇಶಕ ಸುಂದರ್ ಮೇತ್ರಿ ಹೇಳಿದ್ದಾರೆ. ರಾಜ್ಯದ ಯಾವ ಜಿಲ್ಲೆಯಲ್ಲಿ ತಾಪಮಾನ ಎಷ್ಟಿದೆ? ಎಂಬುದರ ಸಚಿತ್ರ ವರದಿ ಇಲ್ಲಿದೆ ವಿನ್ಯಾಸ: ಭರತ್ ಎಚ್. ಸಿ
ಎಲ್ಲೆಲ್ಲಿ ಮಳೆ ಸಾಧ್ಯತೆ?
ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಾಮರಾಜನಗರ, ಹಾಸನ, ಕೊಡಗು, ಮೈಸೂರು ಶಿವಮೊಗ್ಗದಲ್ಲಿ ಮಳೆಯಾಗಲಿದ್ದು, ಉತ್ತರ ಒಳನಾಡಿನ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ.
ಗರಿಷ್ಠ ಹಾಗೂ ಕನಿಷ್ಠ ತಾಪಮಾನ
ಕಲಬುರಗಿಯಲ್ಲಿ 37.2 ಡಿಗ್ರಿ ಸೆಲ್ಸಿಯಸ್ ಅತಿ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ದಾವಣಗೆರೆಯಲ್ಲಿ 18.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ 34 ಡಿಗ್ರಿ ಸೆಲ್ಸಿಯಸ್, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.
ಕಳೆದ 24 ಗಂಟೆಗಳಲ್ಲಿ ಎಲ್ಲಿ ಹೆಚ್ಚು ಮಳೆ
ಕಳೆದ 24 ಗಂಟೆಗಳ ಮಳೆ ನಕ್ಷೆಯನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಿಸಿದೆ. ಇದರಂತೆ, ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಚೆಂಡಿಯಾ ಎಂಬಲ್ಲಿ ಅತ್ಯಧಿಕ 36 ಮಿ. ಮೀ ಮಳೆಯಾಗಿದೆ.
Recommended Video
ರಾಜ್ಯದ ಹಲವೆಡೆ ಮಳೆ ಸೂಚನೆ
ಕರ್ನಾಟಕದಲ್ಲಿ ಅತಿ ಹೆಚ್ಚು ಉಷ್ಣಾಂಶ ದಾಖಲಿಸುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿಯಲ್ಲಿ ಕಳೆದ ಎರಡು ದಿನಗಳಲ್ಲಿ ಚಿಂಚೋಳಿ ತಾಲೂಕಿನಲ್ಲಿ 12ಮಿ. ಮೀನಷ್ಟು ಮಳೆ ದಾಖಲಾಗಿದೆ. ಉಳಿದೆಡೆ ಜೋರು ಬಿಸಿಲು ಮುಂದುವರೆದಿದೆ. ಇದೇ ರೀತಿ ಬೆಳಗಾವಿ ಜಿಲ್ಲೆಯಲ್ಲೂ ಮಳೆಯಾಗಿದೆ. ಆದರೂ ಉತ್ತರ ಒಳನಾಡು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಬಿಸಿಲಿನ ತಾಪ ಕಡಿಮೆಯಾಗಿಲ್ಲ.