Infographics: ಬೆಂಗಳೂರು ಚಳಿ ಚಳಿ, ಉಳಿದೆಡೆ ತಾಪಮಾನ ತಿಳ್ಕೊಳಿ!
ಬೆಂಗಳೂರು, ನವೆಂಬರ್ 15: ರಾಜ್ಯದ ಹಲವು ಭಾಗಗಳಲ್ಲಿ ಇಂದು ಭಾರೀ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಹಾಗೂ ಅಲ್ಲಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ ಪ್ರಮುಖ ಪಟ್ಟಣಗಳ ಕಳೆದ 24 ಗಂಟೆಗಳ ಅವಧಿಯ ತಾಪಮಾನ ವಿವರ ಇಲ್ಲಿದೆ.
ಬಿಬಿಎಂಪಿ ಮಳೆ ಮುನ್ಸೂಚನೆ: ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಅಧಿಕ ಮಳೆಯಾಗುತ್ತಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ 15.11.2021 ರಿಂದ 16.11.2021 ರ ಬೆಳಿಗ್ಗೆ 8:30 ರವರೆಗೆ ಗುಡುಗು ಸಮೇತ ಮಳೆಯಾಗಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಳದಿ ಎಚ್ಚರಿಕೆ ಇರುವ ಪ್ರದೇಶಗಳಲ್ಲಿ ಪ್ರತ್ಯೇಕ ಭಾರೀ ಮಳೆ (>64.5mm) ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ತಾಪಮಾನ ವಿವರ: ಬಾಗಲಕೋಟೆಯಲ್ಲಿ 5.3 ಮಿ.ಮಿ ಮಳೆಯಾಗಿದ್ದು, 27 ಡಿಗ್ರಿ ಸೆಲ್ಸಿಯಸ್ ತಾಪಮಾನವಿದೆ. ಶೇ 62ರಷ್ಟು ತೇವಾಂಶವಿದ್ದು ಗಾಳಿಯ ವೇಗ ಗಂಟೆಗೆ 20ಕಿ.ಮೀ ವೇಗದಲ್ಲಿದೆ. ಇನ್ನೂ ಬೆಂಗಳೂರಿನಲ್ಲಿ 10.9 ಮಿ.ಮೀ ಮಳೆಯಾಗಿದ್ದು, ತಾಪಮಾನ 25 ಡಿಗ್ರಿ ಸೆಲ್ಸಿಯಸ್ ಇದೆ. 82 ರಷ್ಟು ತೇವಾಂಶವಿದ್ದು ಗಾಳಿಯ ವೇಗ ಗಂಟೆಗೆ 21ಕಿ.ಮೀ ಇದೆ. ಮಂಗಳೂರಿನಲ್ಲಿ 0.7 ಮಿ.ಮೀ ಮಳೆಯಾಗಿದ್ದು, 32 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಶೇ71 ರಷ್ಟು ತೇವಾಂಶ ದಾಖಲಾಗಿದ್ದು ಗಾಳಿಯ ವೇಗ ಗಂಟೆಗೆ 20 ಕಿ.ಮೀ ಇದೆ. ಶಿವಮೊಗ್ಗದಲ್ಲಿ 19.4 ಮಿ.ಮೀ ಮಳೆಯಾಗಿದ್ದು ತಾಪಮಾನ 26 ಡಿ.ಸೆ ಇದೆ. ತೇವಾಂಶ ಶೇ71 ರಷ್ಟಿದ್ದು ಗಾಳಿವ ವೇಗ ಗಂಟೆಗೆ 08 ಕಿ.ಮೀ ಇದೆ. ಇನ್ನೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ16.7 ಮಿ.ಮೀ ಮಳೆಯಾಗಿದ್ದು, 26 ಡಿ.ಸೆ ತಾಪಮಾನ ಇದೆ. ತೇವಾಂಶ ಶೇ 69 ರಷ್ಟಿದ್ದು ಗಾಳಿಯ ವೇಗ 14 ಕಿ.ಮೀ ಇದೆ. ಇನ್ನಷ್ಟು ಪಟ್ಟಣಗಳ ತಾಪಮಾನ ವಿವರ ಮುಂದಿದೆ...
ಮಳೆ ಮುನ್ಸೂಚನೆ
ಬೆಂಗಳೂರು, ಕರಾವಳಿ ಕರ್ನಾಟಕದಲ್ಲಿ ನವೆಂಬರ್ 16 ರವರೆಗೆ ಮಳೆಯಾಗಲಿದೆ. ನವೆಂಬರ್ 14 ಬೆಳಗ್ಗೆ ಬೆಂಗಳೂರಿನಲ್ಲಿ ಬಿಸಿಲಿನಿಂದ ಕೂಡಿತ್ತಾದರೂ ಸಮಯ ಕಳೆದಂತೆ ಮೋಡ ಕವಿದ ವಾತಾವರಣ ಆವರಿಸಿತು. ಸೋಮವಾರವೂ (ನವೆಂಬರ್ 15) ಮಳೆ ತರಿಸುವ ಮೋಡಗಳು ಕಾಣಿಸಿಕೊಂಡಿವೆ. ಸೋಮವಾರ ಸಂಜೆಯಿಂದ ಬೆಂಗಳೂರಿನಲ್ಲಿ ಭಾರೀ ಮಳೆಯಾಗುತ್ತಿದ್ದು ಮಂಗಳವಾರದವರೆಗೆ (ನವೆಂಬರ್ 16) ನಗರದಲ್ಲಿ ಭಾರೀ ಮಳೆಯಾಗುವ ಸೂಚನೆ ನೀಡಲಾಗಿದೆ.
ಉಡುಪಿಯಲ್ಲಿ ಮಳೆಯ ಮುನ್ಸೂಚನೆ
ಭಾರತೀಯ ಹವಾಮಾನ ಇಲಾಖೆ (IMD) ಸಹ ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯಲ್ಲಿ ಮಳೆಯ ಮುನ್ಸೂಚನೆ ನೀಡಿದೆ. ಬೆಂಗಳೂರಿನಲ್ಲಿ ದಿನವಿಡೀ ಮೋಡ ಕವಿದ ವಾತಾವರಣವಿದ್ದು, ಭಾರೀ ಮಳೆಯಾಗುತ್ತಿದೆ. ಕರಾವಳಿ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ.
ಜಲಾಶಯ ಮಟ್ಟ ಏರಿಕೆ
ಸತತ ಮಳೆಯಿಂದಾಗಿ ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ ಜಲಾಶಯದಲ್ಲಿ 11 ವರ್ಷಗಳ ನಂತರ ಗರಿಷ್ಠ ಮಟ್ಟ ತಲುಪಿದೆ. ಜಲಾಶಯದ ಎರಡು ಕ್ರೆಸ್ಟ್ ಗೇಟ್ಗಳಿಂದ 900 ಕ್ಯೂಸೆಕ್ ನೀರು ಬಿಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರದಿಂದ ರಾಜ್ಯದ 14 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ, ರಾಜ್ಯದಲ್ಲಿ ಇಲ್ಲಿಯವರೆಗೆ 4 ಜನರು ಸಾವನ್ನಪ್ಪಿದ್ದಾರೆ ಮತ್ತು 15 ಕ್ಕೂ ಹೆಚ್ಚು ಮನೆಗಳು ಕುಸಿದಿವೆ.
ಮಂಡ್ಯ, ಮೈಸೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿತ್ರದುರ್ಗ ಜಿಲ್ಲೆಯ ಹೋಚಿ ಬೋರನಹಟ್ಟಿ ಗ್ರಾಮದಲ್ಲಿ ಭಾನುವಾರ ಮಳೆಯಿಂದಾಗಿ ಪಕ್ಕದ ಮನೆಯ ಗೋಡೆ ಕುಸಿದು ಗರ್ಭಿಣಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ.
ವಾಯುಭಾರ ಕುಸಿತ
ಕಳೆದ ವಾರ, ನಿರಂತರ ಮಳೆಯಿಂದಾಗಿ ಬೆಂಗಳೂರಿನ ಹವಾಮಾನವು ಗುರುವಾರ ಸುಮಾರು 18 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ. ಅಂದರೆ ಸುಮಾರು 7 ಡಿಗ್ರಿಗಳಷ್ಟು ಇಳಿಕೆಯಾಗಿದೆ. ಆ ಸಮಯದಲ್ಲಿ ಬೆಂಗಳೂರು ನಗರದಲ್ಲಿ ಗುರುವಾರ ಗರಿಷ್ಠ ತಾಪಮಾನ 19.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ಹೇಳಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚೆನ್ನೈ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹಕ್ಕೆ ಕಾರಣವಾಗಿದೆ. ಗುರುವಾರ ಸಂಜೆ ಉತ್ತರ ತಮಿಳುನಾಡು ಮತ್ತು ದಕ್ಷಿಣ ಆಂಧ್ರಪ್ರದೇಶ ಕರಾವಳಿಯ ನಡುವೆ ವಾಯುಭಾರ ಕುಸಿತ ಉಂಟಾಗಿದೆ.