ಕರ್ನಾಟಕದಲ್ಲಿ ಮಳೆ ಹೆಚ್ಚಾಗುವ ಸಾಧ್ಯತೆ; ಹವಾಮಾನ ಇಲಾಖೆ
ಬೆಂಗಳೂರು ಸೆಪ್ಟಂಬರ್ 05: ಕರ್ನಾಟಕ ರಾಜ್ಯಾದ್ಯಂತ ಈಗಾಗಲೇ ಅನೇಕ ಕಡೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಸಾಕಷ್ಟು ಆವಾಂತರ ಸೃಷ್ಟಿಸುತ್ತಿದೆ. ಈ ಮಳೆ ಮುಂದಿನ ಐದು ದಿನ ಅಂದರೆ ಸೆ. 11ರವರೆಗೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಭಾಗದಲ್ಲಿ ಕಳೆದ ಎರಡು ವಾರದಿಂದ ಮುಂಗಾರು ಆರ್ಭಟ ಶುರುವಿಟ್ಟುಕೊಂಡಿದೆ. ಮಧ್ಯೆ ಒಂದೊಂದು ದಿನ ಮಳೆ ಕಡಿಮೆ ಆಗುವ ಲಕ್ಷಣ ಕಂಡು ಬಂದರೂ ಮರುದಿನವೇ ಮತ್ತೇ ರಾಜ್ಯಾದ್ಯಂತ ಮುಂಗಾರಿನ ಆರ್ಭಟ ಹೆಚ್ಚಾಗುತ್ತಿದೆ. ಇದಕ್ಕೆ ಹವಾಮಾನದಲ್ಲಿ ಅಕಾಲಿಕ ಬದಲಾವಣೆಗಳು ಎಂದು ತಜ್ಞರು ಅಂದಾಜಿಸಿದ್ದಾರೆ.
ಟ್ರಾಫಿಕ್ ಕಿರಿಕಿರಿ, ಭಾರತದಲ್ಲಿ ಮುಂಬೈ ನಂ. 1, ಬೆಂಗಳೂರು ತೀರಾ ಹಿಂದಿಲ್ಲ
ಸೆಪ್ಟಂಬರ್ 11ರ ನಂತರ ಮಳೆ ಕಡಿಮೆಯಾಗುವ ಲಕ್ಷಣಗಳು ಸಹ ಇವೆ. ಅಷ್ಟರಲ್ಲಿ ಮತ್ತೆ ಹವಾಮಾನದಲ್ಲಿ ಏರಿಳಿತಗಳು ಕಂಡು ಬಂದರೆ ಮತ್ತೆ ಮಳೆ ಹೆಚ್ಚಾಗಬಹುದು. ಇಲ್ಲವೇ ಸಂಪೂರ್ಣವಾಗಿ ಇಳಿಕೆಯೂ ಆಗಬಹುದು. ಸದ್ಯದ ಹವಾಮಾನ ವರದಿ ಪ್ರಕಾರ ಮುಂದಿನ ಐದು ದಿನ ಕರವಳಿ ಜಿಲ್ಲೆಗಳಲ್ಲಿ ಹಾಗೂ ಮಲೆನಾಡಿನಲ್ಲಿ ಗುಡುಗು, ಮಿಂಚು ಸಹಿತ ಅತಿ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೇಶದಲ್ಲೇ ಕರ್ನಾಟಕಕ್ಕೆ ಹೆಚ್ಚು ಮಳೆ ನಿರೀಕ್ಷೆ
ಈ ಹಿಂದೆ ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳಲ್ಲಿ ಮುಂಗಾರು ಮಳೆ ಹೆಚ್ಚಾಗಿತ್ತು. ಆದರೆ ಇದೀಗ ದೇಶದ ಅಂಡಮಾನ್ ಮತ್ತು ನಿಕೋಬಾರ್, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ರಾಜಸ್ಥಾನ, ಆಂಧ್ರ ಪ್ರದೇಶ ಸೇರಿದಂತೆ ಅನೇಕ ಕಡೆಗಳಲ್ಲಿ ಸಾಧಾರಣ ಮಳೆ ನಿರೀಕ್ಷೆ ಇದೆ. ಆದರೆ ಕರ್ನಾಟಕದಲ್ಲಿ ಮಾತ್ರ ಬಾರಿಯಿಂದ ಅತೀ ಭಾರೀ ಮಳೆ ಆಗುವ ಲಕ್ಷಣಗಳು ಇವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗೆ ರೆಡ್ ಅಲರ್ಟ್
ಕರ್ನಾಟಕದ ವಿವಿಧೆಡೆ ಸೆ.11ರವರೆಗೆ ಮಳೆ ಮುಂದುವರಿಯಲಿದೆ. ಇದರಲ್ಲಿ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಿಗೆ ಹೆಚ್ಚು ಮಳೆ ಬೀಳಲಿದೆ. ಇನ್ನು ಕರಾವಳಿಯ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಗುರುವಾರ (ಸೆ.8)ದಂದು 'ರೆಡ್ ಅಲರ್ಟ್' ನೀಡಲಾಗಿದೆ. ಮಲೆನಾಡಿನ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಹಾಗೂ ಒಳನಾಡಿನ ಇನ್ನಿತರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಕೊಡಲಾಗಿದೆ.
ಬೆಂಗಳೂರಿಗೆ ಅಬ್ಬರದ ಮಳೆ ಸಾಧ್ಯತೆ
ರಾಜ್ಯ ರಾಜಧಾನಿ ಬೆಂಗಳೂರಿಗೆ ಮುಂದಿನ 48 ಕೆಲವು ಕಡೆಗಳ್ಲಲಿ ಮಾತ್ರ ಸಾಮಾನ್ಯದಿಂದ ಸಾಧಾರಣವಾಗಿ ಮಳೆ ಬರಲಿದೆ. ಹಲವು ಕಡೆಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬುಧವಾರ ಒಂದು ದಿನ ಬೆಂಗಳೂರು 'ಯೆಲ್ಲೋ ಅಲರ್ಟ್' ಪಡೆದಿದೆ. ಎಲ್ಲೆಡೆ ಮೋಡ ಕವಿದ ವಾತಾವರಣ ಕಂಡು ಬರುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 30ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ.
ಕರ್ನಾಟಕ ರಾಜ್ಯ ಪ್ರಮುಖ ನಗರಗಳ ತಾಪಮಾನ ಮಾಹಿತಿ
ಬೆಂಗಳೂರಿನಲ್ಲಿ 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 79, ಗಾಳಿಯ ವೇಗ ಗಂಟೆಗೆ 22ಕಿ.ಮೀ. ದಾಖಲಾಗಿದೆ. ಇನ್ನು ಬಾಗಲಕೋಟೆ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 80ತೇವಾಂಶ, ರಾಯಚೂರು 31ಡಿಗ್ರಿ ಸೆಲ್ಸಿಯಸ್ ಗರಿಷ್ಠ, 69ರಷ್ಟು ತೇವಾಂಶ, ಚಿತ್ರದುರ್ಗ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 83ರಷ್ಟು ತೇವಾಂಶ ಇದೆ. ಕಲಬುರಗಿಯಲ್ಲಿ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 76ರಷ್ಟು ತೇವಾಂಶ, ಚಿಕ್ಕಮಗಳೂರು 27ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 85ರಷ್ಟು ತೇವಾಂಶ ಇದೆ.
ಮಂಗಳೂರಿನಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 74ತೇವಾಂಶ, ಶಿವಮೊಗ್ಗ 30ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 80ತೇವಾಂಶ ಇದೆ. ಮೈಸೂರು 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 61 ತೇವಾಂಶ ಹಾಗೂ ಬಳ್ಳಾರಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 70ತೇವಾಂಶ ಕಂಡು ಬಂದಿದೆ.