Inforgaphics: ರಾಜ್ಯಕ್ಕೆ ಮತ್ತೆ ಅತ್ಯಧಿಕ ಮಳೆ ಆತಂಕ: IMD
ಬೆಂಗಳೂರು ಸೆಪ್ಟಂಬರ್ 07: ಕರ್ನಾಟಕದಾದ್ಯಂತ ಮಂದಿನ ಮೂರು ದಿನ ಭಾರಿ ಪ್ರಮಾಣದಲ್ಲಿ ಮಳೆ ಮುಂದುವರಿಯಲಿದೆ. ಈ ಪೈಕಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಕರ್ನಾಟಕದಲ್ಲಿ ಕಳೆದ ಎರಡು ವಾರದಿಂದ ಮುಂಗಾರಿನ ಆರ್ಭಟ ಜೋರಾಗಿದೆ. ಒಂದು ಭಾಗದಲ್ಲಿ ಕಡಿಮೆಯಾಗುವಷ್ಟರಲ್ಲಿ ಮತ್ತೊಂದು ಭಾಗದಲ್ಲಿ ವಿಪರೀತ ಮಳೆ ಬೀಳುತ್ತಿದೆ. ವಾರಗಟ್ಟಲೇ ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಆಗಿದೆ. ಉತ್ತರ ಒಳನಾಡಿನಲ್ಲಿ ವಾರ ಪೂರ್ತಿ ಕಡಿಮೆಯಾಗಿದ್ದ ಮಳೆ ಒಂದೇ ದಿನ ಅಬ್ಬರಿಸಿದ್ದು ಸಹ ಕಂಡು ಬಂದಿದೆ.
ಬೆಂಗಳೂರು ಮಳೆ ನಡುವೆ ಸಹಜ ಸ್ಥಿತಿಗೆ ಮರಳಿದ ವಿಮಾನಗಳ ಹಾರಾಟ
ರಾಜ್ಯದಲ್ಲಿ ಸೆಪ್ಟಂಬರ್ 10ರವರೆಗೆ ಜೋರು ಮಳೆ ಆಗಲಿದೆ. ಒಳನಾಡಿನ ಜಿಲ್ಲೆಗಳಾದ ಹಾಸನ ಮತ್ತು ಕೊಡಗು ಜಿಲ್ಲೆಗಳಿಗೆ ಗುರುವಾರ ಒಂದು ದಿನ ಮಾತ್ರ ರೆಡ್ ಅಲರ್ಟ್ ಕೊಡಲಾಗಿದೆ. ಉಳಿದ ದಿನ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದೇಶದ ಕೆಲವು ರಾಜ್ಯಗಳು ಮಳೆಯಿಂದ ಮುಕ್ತ
ಕರ್ನಾಟಕ ಸೇರಿದಂತೆ ದೇಶದ ಕೆಲವೇ ರಾಜ್ಯಗಳಲ್ಲಿ ಮಳೆ ಅಬ್ಬರ ಶುರುವಿಟ್ಟುಕೊಂಡಿದೆ. ಈ ಪೈಕಿ ಕರ್ನಾಟಕದಲ್ಲೇ ಅತಿ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ. ಕರ್ನಾಟಕ, ಆಂಧ್ರಪ್ರದೇಶ, ಗೋವಾ, ಅಂಡಮಾನ್, ಒಡಿಶಾ, ಜಾರ್ಖಂಡ್ ಹೊರತುಪಡಿಸಿದರೆ ಉಳಿದ ರಾಜ್ಯಗಳು ಮಳೆಯಿಂದ ಮುಕ್ತವಾಗಿದೆ. ಇಲ್ಲಿ ತುಂತುರು ಮಳೆ ದಾಖಲಾಗಿದೆ. ಈ ಮೊದಲು ಇದೇ ರಾಜ್ಯಗಳಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಅಬ್ಬರಿಸಿ ಅನೇಕ ಆವಾಂತರಗಳನ್ನು ಸೃಷ್ಟಿಸಿತ್ತು.
ಮುಂದಿನ 48ಗಂಟೆಯ ವಾತಾವರಣ ಹೇಗಿರಲಿದೆ?
ರಾಜ್ಯದ ಎಲ್ಲ ಭಾಗಗಳಲ್ಲೂ ಸೆ.10 ರವರೆಗೆ ಮಳೆ ಮುಂದುವರಿಯಲಿದ್ದು, ಅದರಲ್ಲೂ ಮುಂದಿನ 48 ಗಂಟೆ ರಾಜ್ಯದೆಲ್ಲೆಡೆ ಸಾಕಷ್ಟು ಮಳೆ ಆಗುವ ಸಂಭವವಿದೆ. ರೆಡ್ ಅಲರ್ಟ್ ಪಡೆದ ಹಾಸನ, ಕೊಡುಗ ಜಿಲ್ಲೆ ಹೊರುತಪಡಿಸಿದರೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡಪಿ, ಚಿಕ್ಕಮಗಳೂರು, ಮೈಸೂರು, ತುಮಕೂರು, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಭಾಗದಲ್ಲಿ ಜೋರು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರಿಗೆ ಸಾಧಾರಣ ಮಳೆ ನಿರೀಕ್ಷೆ
ಬೆಂಗಳೂರಲ್ಲಿ ಮುಂದಿನ 48 ಗಂಟೆಗಳೂ ಸಹ ಮೋಡ ಕವಿದ ಚಳಿಯ ವಾತಾವರಣವೇ ಮುಂದುವರಿಯಲಿದೆ. ಕೆಲವು ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗಲಿದೆ. ಕೆಲವೊಮ್ಮೆ ಗುಡುಗು ಮತ್ತು ಮಿಂಚಿನಿಂದ ಕೂಡಿದ ವ್ಯಾಪಕ ಮಳೆಯ ಸಂಭವವೂ ಇದೆ. ಇದರಿಂದ ಉಷ್ಣಾಂಶ ಕಡಿಮೆ ಇರಲಿದೆ. ಗರಿಷ್ಠ ತಾಪಮಾನ 26 ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ. ಇದರ ಹೊರತು ಬೆಂಗಳೂರಿನ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರ್ನಾಟಕ ರಾಜ್ಯದಲ್ಲಿನ ಗರಿಷ್ಠ ತಾಪಮಾನದ ವಿವರ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 64, ಗಾಳಿಯ ವೇಗ ಗಂಟೆಗೆ 34 ಕಿ.ಮೀ. ಇದೆ. ಬಾಗಲಕೋಟೆ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 62 ತೇವಾಂಶ ಇದ್ದು, ರಾಯಚೂರು 30ಡಿಗ್ರಿ ಸೆಲ್ಸಿಯಸ್ ಗರಿಷ್ಠ, 58 ರಷ್ಟು ತೇವಾಂಶ ಕಂಡು ಬಂದಿದೆ. ಚಿತ್ರದುರ್ಗ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 75 ರಷ್ಟು ತೇವಾಂಶ, ಕಲಬುರಗಿಯಲ್ಲಿ 31 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 77 ರಷ್ಟು ತೇವಾಂಶ ಇದೆ. ಚಿಕ್ಕಮಗಳೂರು 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ, 72 ರಷ್ಟು ತೇವಾಂಶ,
ಮಂಗಳೂರಿನಲ್ಲಿ 27 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 80 ತೇವಾಂಶ, ಶಿವಮೊಗ್ಗ 26 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 67 ತೇವಾಂಶ ಇದೆ. ಮೈಸೂರು 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 63 ತೇವಾಂಶ ಹಾಗೂ ಬಳ್ಳಾರಿ 30 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 61 ತೇವಾಂಶ ದಾಖಲಾಗಿದೆ.