2024 ರಲ್ಲಿ ಮೋದಿ ಪ್ರಧಾನಿ ಆಗ್ಬೇಕಾ?, 2022 ರಲ್ಲಿ ಯೋಗಿಯನ್ನು ಗೆಲ್ಲಿಸಿ ಎಂದ ಅಮಿತ್ ಶಾ
ಲಕ್ನೋ, ಅಕ್ಟೋಬರ್ 29: "ಪ್ರಧಾನ ಮಂತ್ರಿ ನರೇಂದ್ರ ಮೋದಿಯನ್ನು 2024 ರಲ್ಲಿ ಮತ್ತೆ ಪ್ರಧಾನಿಯನ್ನಾಗಿ ಪಡೆಯಬೇಕಾದರೆ, ಯೋಗಿ ಆದಿತ್ಯನಾಥ್ರನ್ನು 2022 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲಿಸಿ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಸಾರ್ವಜನಿಕರಲ್ಲಿ ಮನವಿ ಮಾಡಿದರು.
'ಮೇರಾ ಪರಿವಾರ್-ಬಿಜೆಪಿ ಪರಿವಾರ್' (ನನ್ನ ಪರಿವಾರ ಬಿಜೆಪಿ ಪರಿವಾರ) ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ರಾಜ್ಯವು ಪ್ರಸ್ತುತ ರಾಷ್ಟ್ರೀಯ ರಾಜಕೀಯಕ್ಕೆ ಎಷ್ಟು ಪ್ರಮುಖವಾಗಿದೆ ಎಂಬುವುದನ್ನು ಒತ್ತಿ ಹೇಳಿದ್ದಾರೆ.
"ಪ್ರಧಾನ ಮಂತ್ರಿ ನರೇಂದ್ರ ಮೋದಿ 2024 ರಲ್ಲಿ ಮತ್ತೆ ಪ್ರಧಾನಿ ಆಗಿ ಆಯ್ಕೆ ಆಗಬೇಕಾದರೆ ನೀವು 2022 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ರನ್ನು ಗೆಲ್ಲಿಸುವುದು ಮುಖ್ಯ. ನಾವು ಉತ್ತರ ಪ್ರದೇಶವನ್ನು ನಂಬರ್ 1 ರಾಜ್ಯವನ್ನಾಗಿ ಮಾಡುತ್ತೇವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸರ್ಕಾರ ಇಲ್ಲದಿದ್ದರೆ, ಕೇಂದ್ರದಲ್ಲಿ ಬಿಜೆಪಿ ಇರಲು ಸಾಧ್ಯವಾಗುವುದಿಲ್ಲ. 2014 ಹಾಗೂ 2019 ರಲ್ಲಿ ಕೇಂದ್ರದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬರಬೇಕಾದರೆ ಅದಕ್ಕೆ ಮುಖ್ಯ ಕಾರಣ ಉತ್ತರ ಪ್ರದೇಶ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿಪ್ರಾಯಿಸಿದ್ದಾರೆ.

ಶೇಕಡ 90 ರಷ್ಟು ಭರವಸೆ ಪೂರೈಸಿದ್ದೇವೆ
"2017 ರಲ್ಲಿ ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಪೈಕಿ ಶೇಕಡ 90 ರಷ್ಟು ಭರವಸೆಯನ್ನು ಪೂರೈಸಿದೆ. ಉಳಿದ ಶೇಕಡ ಹತ್ತರಷ್ಟು ಕಾರ್ಯವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಎರಡು ತಿಂಗಳಿನಲ್ಲಿ ಪೂರೈಸಲಿದ್ದಾರೆ," ಎಂದು ಇದೇ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವರು ಭರವಸೆ ನೀಡಿದ್ದಾರೆ. "2017 ರಲ್ಲಿ ಬಿಜೆಪಿಯು ನೀಡಿದ ಭರವಸೆಗಳ ಪೈಕಿ ಶೇಕಡ 90 ರಷ್ಟು ಕಾರ್ಯವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜೀ ಹಾಗೂ ಅವರ ತಂಡವು ಪೂರೈಸಿದೆ. ಶೇಕಡ ನೂರರಷ್ಟು ಕಾರ್ಯವನ್ನು ಪೂರ್ಣ ಮಾಡುವಂತೆ ನಾನು ಯೋಗಿ ಜಿ ಗೆ ಹೇಳುತ್ತೇನೆ. ಬಿಜೆಪಿಯು ಎಲ್ಲಾ ಕಾರ್ಯವನ್ನು ಮಾಡುತ್ತದೆ ಎಂದು ಜನರು ಭರವಸೆ ಹೊಂದಬಹುದು," ಎಂದು ಕೂಡಾ ಅಮಿತ್ ಶಾ ಹೇಳಿದರು.

ಅಯೋಧ್ಯೆ ರಾಮ ಮಂದಿರ ನಿರ್ಮಾಣವಾಗುತ್ತೆ ಎಂದು ನಂಬಿದ್ದಿರಾ?
ಇನ್ನು ಈ ಸಂದರ್ಭದಲ್ಲೇ ಅಯೋಧ್ಯೆಯಲ್ಲಿ ಇರುವ ರಾಮ ಮಂದಿರದ ಬಗ್ಗೆ ಮಾತನಾಡಿದ ಅಮಿತ್ ಶಾ, "ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದು ಯಾರದರೂ ನಂಬಿದ್ದರಾ," ಎಂದು ಪ್ರಶ್ನಿಸಿದ್ದು "ಮಂದಿರ ನಾವು ಅಲ್ಲೇ ನಿರ್ಮಾಣ ಮಾಡುತ್ತೇವೆ, ಆದರೆ ಯಾವಾಗ ಎಂದು ಹೇಳುವುದಿಲ್ಲ," ಎಂದು ಬಿಜೆಪಿಯನ್ನು ಲೇವಡಿ ಮಾಡಿದ್ದ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಯುಪಿ ಸ್ಥಿತಿ ನೋಡಿ ನನ್ನ ರಕ್ತ ಕುದಿಯುತ್ತಿತ್ತು ಎಂದ ಶಾ
ಆ ಬಳಿಕ ವಿರೋಧ ಪಕ್ಷ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಅಮಿತ್ ಶಾ, "ಉತ್ತರ ಪ್ರದೇಶದಲ್ಲಿ ಹಲವಾರು ವರ್ಷಗಳ ಕಾಲ ಸಮಾಜವಾದಿ ಪಕ್ಷ ಹಾಗೂ ಬಹುಜನ ಸಮಾಜ ಪಕ್ಷ ಆಡಳಿತವನ್ನು ನಡೆಸಿದ್ದವು. ಈ ಎರಡು ಪಕ್ಷಗಳು ಉತ್ತರ ಪ್ರದೇಶವನ್ನು ವಿನಾಶ ಮಾಡುತ್ತು. ಆದರೆ ಬಿಜೆಪಿ ಆಡಳಿತವನ್ನು ವಹಿಸಿಕೊಂಡ ಬಳಿಕ ಉತ್ತರ ಪ್ರದೇಶವು ಸಂಪೂರ್ಣವಾಗಿ ಚೇತರಿಸಿದೆ. ಈಗ ಉತ್ತರ ಪ್ರದೇಶದ ದೇಶದ ಪ್ರಮುಖ ರಾಜ್ಯವಾಗಿದೆ," ಎಂದು ಅಮಿತ್ ಶಾ ಅಭಿಪ್ರಾಯಿಸಿದ್ದಾರೆ. "ಉತ್ತರ ಪ್ರದೇಶದ ಸ್ಥಿತಿಯನ್ನು ನೋಡಿ ನನ್ನ ರಕ್ತ ಕುದಿಯುತ್ತಿತ್ತು. ಪಶ್ಚಿಮ ಉತ್ತರ ಪ್ರದೇಶದಿಂದ ಜನರು ವಲಸೆ ಹೋಗಿದ್ದಾರೆ. ಆದರೆ ಈಗ ಯಾರು ಕೂಡಾ ವಲಸೆ ಹೋಗಲು ಆಸ್ಪದ ನೀಡಲು ಯಾರಿಗೂ ಧೈರ್ಯವಿಲ್ಲ. ಉತ್ತರ ಪ್ರದೇಶದಲ್ಲಿ ಯಾವುದೇ ಬಾಹುಬಲಿ ಇರಲಿಲ್ಲ ಈ ಬದಲಾವಣೆ ಮಾಡಿದ್ದು ಬಿಜೆಪಿ ಸರ್ಕಾರ," ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಅಖಿಲೇಶ್ ಟಾಂಗ್ ನೀಡಿದ ಅಮಿತ್ ಶಾ
"ಕಳೆದ ಐದು ವರ್ಷಗಳಿಂದ ತಮ್ಮ ಮನೆಗಳಲ್ಲಿ ಕುಳಿತಿದ್ದ ಜನರು ತಮ್ಮ ಸರ್ಕಾರ ರಚನೆ ಆಗುತ್ತದೆ ಎಂದು ಯೋಚಿಸಿಕೊಂಡು ಹೊರ ಬಂದಿದ್ದಾರೆ. ಈ ಸಂದರ್ಭದಲ್ಲಿ ಎಷ್ಟು ಸಮಯಗಳ ಕಾಲ ವಿದೇಶದಲ್ಲೇ ಇದ್ದರೂ ಎಂದು ನಾನು ಈ ಸಂದರ್ಭದಲ್ಲಿ ಅಖಿಲೇಶ್ ಯಾದವ್ರನ್ನು ಪ್ರಶ್ನಿಸಲು ಬಯಸುತ್ತೇನೆ. ಕೋವಿಡ್, ನೆರೆ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಎಲ್ಲಿದ್ದರು. ಅವರು ಆ ಸಂದರ್ಭದಲ್ಲಿ ಬರೀ ತಮ್ಮ ಕುಟುಂಬಕ್ಕಾಗಿ ಕೆಲಸ ಮಾಡಿದ್ದಾರೆ," ಎಂದು ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications