Hemavathi Dam Water Level Today | ಹೇಮಾವತಿ ಅಣೆಕಟ್ಟು ಇಂದಿನ ನೀರಿನ ಮಟ್ಟ
ಹೇಮಾವತಿ ಅಣೆಕಟ್ಟು ಇತಿಹಾಸ
ಹೇಮಾವತಿ ನದಿಯು ಕಾವೇರಿ ನದಿಯ ಉಪನದಿಯಾಗಿದೆ. ಹಾಸನ ಜಿಲ್ಲೆಯ ಗೊರೂರು ಗ್ರಾಮದ ಬಳಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಕಾವೇರಿ ನದಿಯ ಮೇಲ್ಮುಖ ಭಾಗವಾಗಿ ಹೇಮಾವತಿ ಆಣೆಕಟ್ಟನ್ನು ಪರಿಗಣಿಸಲಾಗುತ್ತದೆ. ಹೇಮಾವತಿ ನದಿಗೆ ಬೃಹತ್ ಅಣೆಕಟ್ಟು ನಿರ್ಮಾಣಕ್ಕೆ ಸರ್ಕಾರ 1968ರಲ್ಲಿ ಮಂಜೂರಾತಿ ನೀಡಿದ್ದು,1979ರಲ್ಲಿ ಹಾಸನ ಜಿಲ್ಲೆಯ ಗೊರೂರಿನಲ್ಲಿ ಕಟ್ಟಲು ಕಾರ್ಯ ಆರಂಭವಾಯಿತು. 1985ರಲ್ಲಿ ಪೂರ್ಣಗೊಂಡಿತು.
ಚಿಕ್ಕಮಗಳೂರು ಜಿಲ್ಲೆಯ ಜಾವಳಿಯ ಪಶ್ಚಿಮ ಘಟ್ಟದ ಶ್ರೇಣಿಯಲ್ಲಿ ಉಗಮಿಸುವ ಈ ನದಿ, ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಕಾವೇರಿ ನದಿಯನ್ನು ಸೇರುತ್ತದೆ. ಕೃಷ್ಣರಾಜಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ ಬಳಿಯ ಸಂಗಮದಲ್ಲಿ ಕಾವೇರಿ ನದಿಯಲ್ಲಿ ಸೇರ್ಪಡೆಗೊಳ್ಳುತ್ತದೆ.
ಕಾವೇರಿಯ ನದಿಯ ಪ್ರಮುಖ ಉಪನದಿ ಹೇಮಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಹೇಮಾವತಿ ಅಣೆಕಟ್ಟನ್ನು ಎಡದಂಡೆ ಮತ್ತು ಬಲದಂಡೆ ಕಾಲುವೆಗಳಲ್ಲಿ ವಿಂಗಡಿಸಲಾಗಿದೆ. ಇದರ ಜೊತೆ ಏತ ನೀರಾವರಿಗಾಗಿ ಅರಕಲಗೂಡು, ಬಾಗೂರು-ನವಿಲೆ ಮುಂತಾದೆಡೆ ಕಾಲುವೆ ನಿರ್ಮಿಸಲಾಗಿದೆ.
ಹೇಮಾವತಿ ಅಣೆಕಟ್ಟು ಸಾಮರ್ಥ್ಯ:
ಉದ್ದ: 4692 ಮೀಟರ್ (15393.7 ಅಡಿ)
ಎತ್ತರ: 44.5 ಮೀಟರ್ (146 ಅಡಿ)
ಸಂಗ್ರಹ ಸಾಮರ್ಥ್ಯ: 105.63 ಕೋಟಿ ಸಿಎ03 (37 ಟಿ ಎಂಸಿ)
ಗೇಟುಗಳು: 6
ಅಚ್ಚುಕಟ್ಟು ಪ್ರದೇಶ: 2810 ಚದರ ಕಿಮೀ. (16000 ಎಕರೆ)
ಮುಳುಗಡೆ ಪ್ರದೇಶ: 46 ಹಳ್ಳಿಗಳು
ಹೇಮಾವತಿ ಅಣೆಕಟ್ಟಿನ ಉದ್ದೇಶ:
ಹೇಮಾವತಿ ಆಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರನ್ನು ನೀರಾವರಿ ಮತ್ತು ಕುಡಿಯುವ ನೀರುಬಳಕೆ - ಈ ಎರಡು ಉದ್ದೇಶಗಳಿಗೆ ಬಳಸಲಾಗುತ್ತಿದೆ. ಇಲ್ಲಿ ಹೆಚ್ಚುವರಿಯಾಗಿ ಸಂಗ್ರಹವಾಗಿ ನೀರು ಕೃಷ್ಣರಾಜಸಾಗರವನ್ನು ಸೇರುತ್ತದೆ. ಹಾಸನ, ತುಮಕೂರು, ಮಂಡ್ಯ, ಮೈಸೂರು ಜಿಲ್ಲೆಯ ಒಟ್ಟು 78,952 ಎಕರೆಗೆ ನೀರಾವರಿ ಸೌಲಭ್ಯ ಒದಗಿಸಲು ಯೋಜಿಸಲಾಗಿದೆ.
ಹೇಮಾವತಿ ಅಣೆಕಟ್ಟಿನ ಪ್ರವಾಸಿ ತಾಣ:
ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಶೆಟ್ಟಿಹಳ್ಳಿಯ ರೋಸರಿ ಚರ್ಚ್ ಮುಳುಗಡೆಯಾಗಿತ್ತು. ಈಗ ಹಿನ್ನೀರಿನ ಭಾಗದಲ್ಲಿ ನೀರು ತಗ್ಗಿದಾಗ, ಬೇಸಿಗೆಯ ಸಂದರ್ಭದಲ್ಲಿ, ಚರ್ಚ್ ಆಕರ್ಷಕ ತಾಣವಾಗಿ ಪ್ರವಾಸಿಗರನ್ನು ಕರೆಯುತ್ತದೆ. ಗೋರೂರು ಸಮೀಪದ ಹೇಮಾವತಿ ಅಣೆಕಟ್ಟು ನೋಡುಗರಿಗೆ ಅದರಲ್ಲೂ ಮಳೆಗಾಲದಲ್ಲಿ ಹರಿದು ಬರುವ ಪ್ರವಾಹದ ನೀರು ತೂಬು ಗೇಟುಗಳನ್ನು ತೆರೆದಾಗ ಧುಮ್ಮಿಕ್ಕಿ ಹಾಲ್ನೊರೆಯಂತೆ ಕಂಗೊಳಿಸುತ್ತದೆ. ಅಣೆಕಟ್ಟಿನ ಪಕ್ಕದಲ್ಲೇ ಇರುವ ಹಸಿರು ಹಾಸಿನ ಉಪವನ ವಾತಾವರಣದ ಹಾಗೂ ಸ್ಥಳದ ಸೌಂದರ್ಯವನ್ನು ವೃದ್ಧಿಸುತ್ತದೆ.
ಹಾಸನದಿಂದ 30 ಕಿ.ಮೀ ದೂರದಲ್ಲಿದ್ದು, ಹಾಸನವು ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಶಿವಮೊಗ್ಗ ಮತ್ತು ಮಂಗಳೂರಿನಿಂದ ರೈಲು ಸಂಪರ್ಕ ಹೊಂದಿದೆ. ಗೊರೂರಿನಲ್ಲಿ ಇತಿಹಾಸ ಪ್ರಸಿದ್ಧ ದೇಗುಲಗಳಿವೆ. ಪ್ರತಿವರ್ಷ ಅಕ್ಟೋಬರ್ ಹಾಗೂ ಮಾರ್ಚ್ ತಿಂಗಳುಗಳ ನಡುವೆ ಹೇಮಾವತಿಯನ್ನು ಸಂದರ್ಶಿಸಲು ಸೂಕ್ತವಾದ ಕಾಲ. ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ ತನಕ ಅಣೆಕಟ್ಟು ಹಾಗೂ ಪಾರ್ಕ್ ಬಳಿ ಪ್ರವೇಶ ಅವಕಾಶವಿರುತ್ತದೆ.