ಅಶೋಕ್ ಖೇಣಿಯವರೇ ಈಗ ಹೇಳಿ ನೈಸ್ ರೋಡ್ ಸೇಫ್ ಅಂತ !
ಬೆಂಗಳೂರು, ಜನವರಿ 09: ರಾಜಧಾನಿಯ ಪ್ರತಿಯೊಬ್ಬ ಪ್ರಜೆಯೂ ಕೇಳಬೇಕಿದೆ. ಅಶೋಕ್ ಖೇಣಿಯವರೇ ಈಗ ಹೇಳಿ ನಿಮ್ಮ ನೈಸ್ ರಸ್ತೆ ಅಷ್ಟು ಸುರಕ್ಷತವೇ ? ಯಾಕೆಂದರೆ ನೈಸ್ ರಸ್ತೆಯಲ್ಲಿ ಒಂಟಿಯಾಗಿ ಚಲಿಸುವ ಕಾರುಗಳ ಮೇಲೆ ಕಲ್ಲು ತೂರಿ ದರೋಡೆ ಮಾಡುವ ಗ್ಯಾಂಗ್ ನ ಸದಸ್ಯನೊಬ್ಬ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ನೈಸ್ ರಸ್ತೆಯಲ್ಲಿ ಕಾರುಗಳ ಮೇಲೆ ಕಲ್ಲು ತೂರಿ ದರೋಡೆ ಮಾಡುವ ಬಗ್ಗೆ ಕಾರು ಚಾಲಕ ಹರಿದು ಬಿಟ್ಟಿದ್ದ ಅಡಿಯೋ ಆಧರಿಸಿ ಹಾಗೂ ಈ ಹಿಂದೆ ನೈಸ್ ರಸ್ತೆಯಲ್ಲಿ ದಾಖಲಾಗಿದ್ದ ಅಪರಾಧ ಪ್ರಕರಣಗಳ ವರದಿ ಆಧರಿಸಿ ಒನ್ ಇಂಡಿಯಾ ಕನ್ನಡ ಡಿಸೆಂಬರ್ 22 ರಂದು " ನೈಸ್ ರಸ್ತೆ ಮೇಲ್ಸೇತುವೆಯಿಂದ ಕಲ್ಲು ಬೀಳುತ್ತೆ. ಇದು ಭಾನಾಮತಿ ಕಾಟವಲ್ಲ, ದರೋಡೆಕಾರರ ಆಟ" ಎಂಬ ತಲೆಬರಹದಡಿ ಒನ್ ಇಂಡಿಯಾ ಕನ್ನಡ ಸಮಗ್ರ ವರದಿ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ನೈಸ್ ರಸ್ತೆಯಲ್ಲಿ ದರೋಡೆ ಮಾಡುವ ಬಗ್ಗೆ ಹರಿದು ಬಿಟ್ಟಿದ್ದ ನಕಲಿ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ಆಧರಿಸಿ ನೈಸ್ ಸಂಸ್ಥೆ ಮುಖ್ಯಸ್ಥ ಅಶೋಕ್ ಖೇಣಿ ವಿಡಿಯೋ ಹರಿದುಬಿಟ್ಟವರ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. "ನೈಸ್ ರಸ್ತೆ ತುಂಬಾ ಸುರಕ್ಷಿತವಾಗಿದೆ. ವಿಡಿಯೋ ಹರಿಬಿಟ್ಟವರ ವಿರುದ್ಧ ಸೈಬರ್ ಪೊಲೀಸರಿಗೆ ದೂರು ನೀಡಿದ್ದೇನೆ. ನೈಸ್ ಸಂಸ್ಥೆಯ ಹೆಸರು ಹಾಳು ಮಾಡುವ ದುರುದ್ದೇಶದಿಂದ ಈ ಕೃತ್ಯ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ಆದರೆ ನೈಸ್ ರಸ್ತೆಯ ಬಗ್ಗೆ 'ಒನ್ ಇಂಡಿಯಾ ಕನ್ನಡ' ಪ್ರಕಟಿಸಿದ್ದ ವರದಿ ಸತ್ಯವಾಗಿದೆ. ಇದೀಗ ಅಶೋಕ್ ಖೇಣಿಯವರೇ ಈ ಪ್ರಕರಣದ ಬಗ್ಗೆ ಮಾತನಾಡಬೇಕಿದೆ.
ನೈಸ್ ರಸ್ತೆಯಲ್ಲಿ ಒಂಟಿಯಾಗಿ ಓಡಾಡುವ ಕಾರುಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ನ ಸದಸ್ಯ ನೈಸ್ ರಸ್ತೆಯ ಪಾಟ್ರೋಲಿಂಗ್ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.#Bengaluru #NiceRoad pic.twitter.com/GIHZUXIQgI
— oneindiakannada (@OneindiaKannada) January 9, 2021
ದರೋಡೆಗೆ ಯತ್ನ:
ಶುಕ್ರವಾರ ಸಂಜೆ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡುತ್ತಿದ್ದ ವ್ಯಕ್ತಿಯ ಕಾರು ಮೇಲೆ ಕಲ್ಲು ತೂರಿ ದರೋಡೆಗೆ ಯತ್ನಿಸಿರುವ ಘಟನೆ ನೈಸ್ ರಸ್ತೆಯಲ್ಲಿ ನಡೆದಿದೆ. ಕನಕಪುರ ರಸ್ತೆಯ ಸಮೀಪ ಕುಟುಂಬವೊಂದು ಕಾರಿನಲ್ಲಿ ಪ್ರಯಾಣ ಮಾಡುತ್ತಿತ್ತು. ಮೂತ್ರ ವಿರ್ಸಜನೆ ಮಾಡಲು ಹೋದಾಗ ಇಬ್ಬರು ದರೋಡೆಕೋರರು ಕಾರಿನಲ್ಲಿದ್ದವರನ್ನು ಹೆದರಿಸಿ ದರೋಡೆ ಮಾಡಲು ಯತ್ನಿಸಿದ್ದಾರೆ. ಇದೇ ವೇಳೆಗೆ ನೈಸ್ ಪಾರ್ಟೋಲಿಂಗ್ ವಾಹನ ಬಂದಿದ್ದು, ದರೋಡೆಕೋರರನ್ನು ಹಿಡಿದುಕೊಳ್ಳಲು ಯತ್ನಿಸಿದೆ. ಶಿವಕುಮಾರ್ ಎಂಬಾತ ಸಿಕ್ಕಿಬಿದ್ದಿದ್ದು, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಇದೇ ವೇಳೆಗೆ ತಲಘಟ್ಟಪುರ ಠಾಣೆಯ ಹೊಯ್ಸಳ ಸಿಬ್ಬಂದಿ ನೈಸ್ ರಸ್ತೆಗೆ ತೆರಳಿ ದರೋಡೆಗೆ ಯತ್ನಿಸಿದ ಆರೋಪಿ ಶಿವಕುಮಾರ್ ನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ತಲಘಟ್ಟಪುರ ಪೊಲೀಸರು ತಿಳಿಸಿದ್ದಾರೆ.
ನೈಸ್ ರೋಡ್ ಮೇಲ್ಸೇತುವೆಯಿಂದ ಕಲ್ಲು ಬೀಳುತ್ತೆ !
ಪಾಟ್ರೋಲಿಂಗ್ :
ಇತ್ತೀಚೆಗೆ ಕತ್ತಲಾಗುತ್ತಿದ್ದಂತೆ ದರೋಡೆಕೋರರ ತಂಡ ನೈಸ್ ರಸ್ತೆಗೆ ಎಂಟ್ರಿ ಕೊಟ್ಟು , ಒಂಟಿಯಾಗಿ ಓಡಾಡುವ ಕಾರುಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದರು. ಈ ಕುರಿತ ಮಾಹಿತಿ ನೈಸ್ ಪಾಟ್ರೋಲಿಂಗ್ ವಾಹನದ ಸಿಬ್ಬಂದಿಗೂ ಸಿಕ್ಕಿತ್ತು. ಹೀಗಾಗಿ ಕಳೆದ ಒಂದು ವಾರದಿಂದ ದರೋಡೆಕೋರರಗಾಗಿ ಹೊಂಚಿ ಹಾಕಿ ಪಾಟ್ರೋಲಿಂಗ್ ನಡೆಸುತ್ತಿದ್ದರು. ಶುಕ್ರವಾರ ಸಂಜೆ ಕನಕಪುರ ರಸ್ತೆಯಲ್ಲಿ ದರೋಡೆ ಮಾಡಲು ಯತ್ನಿಸಿದಾಗ ಒಬ್ಬ ಸಿಕ್ಕಿಬಿದ್ದಿದ್ದು, ಆತನನ್ನು ಪೊಲೀಸರಿಗೆ ಒಪ್ಪಿಸುವ ವಿಡಿಯೋ ವೈರಲ್ ಆಗಿದೆ.
ತುಮಕೂರು ರಸ್ತೆಯಿಂದ ಹಿಡಿದು ಹೊಸೂರು ರಸ್ತೆ ಸಂಪರ್ಕಿಸುವ ನೈಸ್ ರಸ್ತೆಯ ಮೇಲ್ಸೇತುವೆಯಿಂದ ಇಳಿ ಸಂಜೆ ಮತ್ತು ರಾತ್ರಿ ಹೊತ್ತು ಕಲ್ಲು ಬೀಳುತ್ತವೆ..! ಭಾನಾಮತಿ ಕಾಟ ಎಂದು ಭಾವಿಸಬೇಡಿ. ಇದರ ಹಿಂದೆ ಭಯಾನಕ ಸಂಗತಿಯಿದೆ. ಸ್ವ ಅನುಭವದ ಮೇಲೆ ಕ್ಯಾಬ್ ಚಾಲಕ ಬಹಿರಂಗ ಪಡಿಸಿದ್ದು, ಅದು ಚಾಲಕರ ವಲಯದಲ್ಲಿ ವೈರಲ್ ಆಗಿತ್ತು. ಈ ಮೂಲಕ ನೈಸ್ ರಸ್ತೆಯ ದರೋಡೆ ಬಗ್ಗೆ ಚಾಲಕ ಎಚ್ಚರಿಕೆ ನೀಡಿದ್ದ. ಇದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ, ರಸ್ತೆಯಲ್ಲಿ ದರೋಡೆ ಮಾಡುವ ವಿಡಿಯೋ ವೈರಲ್ ಆಗಿತ್ತು. ನೈಸ್ ರಸ್ತೆಯಲ್ಲಿ ದರೋಡೆ ಎಂದು ಹಬ್ಬಿಸಲಾಗಿತ್ತು. ಇದರಿಂದ ಕುಪಿತಗೊಂಡಿದ್ದ ನೈಸ್ ರಸ್ತೆ ಮುಖ್ಯಸ್ಥ ಅಡಿಯೋ ಬಿಟ್ಟಿದ್ದ ಚಾಲಕನ ವಿರುದ್ಧ ದೂರು ನೀಡಿದ್ದರು. ನೈಸ್ ರಸ್ತೆ ಸುರಕ್ಷಿತವಾಗಿದೆ ಎಂದು ಬಡಾಯಿ ಕೊಚ್ಚಿಕೊಂಡಿದ್ದರು.
ಒನ್ ಇಂಡಿಯಾ ವರದಿ :
ಚಾಲಕನ ಅಡಿಯೋ ಹಾಗೂ ನೈಸ್ ರಸ್ತೆಯಲ್ಲಿ ಈ ಹಿಂದೆ ದಾಖಲಾಗಿದ್ದ ದರೋಡೆಕೋರರ ಅಪರಾಧ ಕೃತ್ಯ ಆಧರಿಸಿ ಒನ್ ಇಂಡಿಯಾ ಕನ್ನಡ ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪ್ರಕಟಗೊಂಡ ಹದಿನೈದು ದಿನದಲ್ಲಿ ನೈಸ್ ರಸ್ತೆಯ ದರೋಡೆಕೋರ ಗ್ಯಾಂಗ್ ನ ಒಬ್ಬ ಸದಸ್ಯ ಬಂಧನಕ್ಕೆ ಒಳಗಾಗಿದ್ದಾನೆ. ಮತ್ತೊಬ್ಬ ಆರೋಪಿ ತಪ್ಪಿಸಿಕೊಂಡಿದ್ದಾನೆ. ನೈಸ್ ರಸ್ತೆಯಲ್ಲಿ ಓಡಾಡುವ ಯುವ ಜೋಡಿಗಳನ್ನು ಟಾರ್ಗೆಟ್ ಮಾಡುವ ಗ್ಯಾಂಗ್ ಇದ್ದು, ನೈಸ್ ರಸ್ತೆಯಲ್ಲಿ ನಡೆಯುವ ಪಾತಕ ಕೃತ್ಯಗಳಿಗೆ ಪೊಲೀಸರು ಬ್ರೇಕ್ ಹಾಕಬೇಕಿದೆ. ನಮ್ಮ ರಸ್ತೆಯಂತಹ ಸುರಕ್ಷತಾ ರಸ್ತೆ ಎಲ್ಲೂ ಇಲ್ಲ ಎಂದಿದ್ದ ಅಶೋಕ್ ಖೇಣಿಯವರಿಗೆ ಈಗ ಸಾರ್ವಜನಿಕರೇ ಕೇಳಬೇಕಿದೆ. ಕಿ.ಮೀ. ಪ್ರಯಾಣಕ್ಕೆ ಐದು ರೂಪಾಯಿ ಟೋಲ್ ದರ ವಿಧೀಸುವ ಖೇಣಿಯವರೇ .. ನಿಮ್ಮ ನೈಸ್ ರಸ್ತೆಯಲ್ಲಿ ದರೋಡೆ ಆಗುತ್ತಿರುವುದು ಖರೆ, ಯಾವಾಗ ಸುರಕ್ಷತೆ ಕ್ರಮ ಕೈಗೊಳ್ಳುತ್ತೀರಿ ಅಂತ ಪ್ರಶ್ನಿಸಬೇಕಿದೆ.
ಹಿಂದೆಯೂ ಬಂಧನ:
ಮುಸುಕು ದಾರಿ ದರೋಡೆಕೋರರ ಗುಂಪು ನೈಸ್ ರಸ್ತೆಯಲ್ಲಿ ಸಾರ್ವಜನಿಕರನ್ನು ಅಡ್ಡಗಟ್ಟಿ ದರೋಡೆ ಮಾಡಿರುವ ಸಂಬಂಧ ಇತ್ತೀಚೆಗೆ ಎರಡು ಪ್ರಕರಣ ದಾಖಲಾಗಿದ್ದವು. ಮನು ಮತ್ತು ಪ್ರದೀಪ್ ಎಂಬ ಇಬ್ಬರು ಕಳೆದ ಫೆಬ್ರವರಿಯಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದರು. ಬೆಳಗಿನ ಜಾವ 1.30 ರ ಸುಮಾರಿಗೆ ಕಾರಿನಲ್ಲಿ ಹೋಗುವಾಗ ನೈಸ್ ರಸ್ತೆಯ ಯಲೇನಹಳ್ಳಿ ಮೇಲ್ಸೇತುವೆ ಸಮೀಪ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದರು. ಎರಡು ಬೈಕ್ ನಲ್ಲಿ ಬಂದಿದ್ದ ಮುಸುಕುದಾರಿ ಕಿರಾತರಕು ಕಾರಿನ ಗ್ಲಾಸು ಒಡೆದು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹನ್ನೆರಡು ಸಾವಿರ ನಗದು ಮತ್ತು ಚಿನ್ನದ ಸರ ದೋಚಿ ಪರಾರಿಯಾಗಿದ್ದರು. ಹುಳಿಮಾವು ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಇದಕ್ಕೂ ಮೊದಲೇ ತುಮಕೂರು ರಸ್ತೆ ಸಂಪರ್ಕಿಸು ನೈಸ್ ರಸ್ತೆಯಲ್ಲಿ ಮಧ್ಯ ರಾತ್ರಿ ಲಾರಿ ಚಾಲಕನನ್ನು ಅಡ್ಡಗಟ್ಟಿ ದರೋಡೆಕೋರರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಲಾರಿ ಚಾಲಕ ಮಂಜುನಾಥ್ ರಾಮಸಂದ್ರ ಮೇಲ್ಸೇತುವೆ ಸಮೀಪ ಹೋಗುವಾಗ ಅಡ್ಡಗಟ್ಟಿದ ನಾಲ್ವರು ಮುಸುಕುದಾರಿಗಳು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಈ ಕುರಿತು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಳೆದ ಜನವರಿಯಲ್ಲಿ ಕೇಸು ದಾಖಲಾಗಿತ್ತು.
ಹನ್ನೆರಡು ಡಕಾಯಿತರ ಸೆರೆ:
ಮೂರು ವರ್ಷದ ಹಿಂದೆ ನೈಸ್ ರಸ್ತೆ ಅಪರಾಧಗಳ ತಾಣವಾಗಿತ್ತು. 2017 ರಲ್ಲಿ ಯುವತಿ ಸೇರಿದಂತೆ ಹನ್ನೆರಡು ಡಕಾಯಿತರ ಗುಂಪನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದರು. ಸುಮಾರು ಇಪ್ಪತ್ತೈದಕ್ಕೂ ಹೆಚ್ಚು ದರೋಡೆ ಪ್ರಕರಣ ಪತ್ತೆ ಮಾಡಿದ್ದರು. ನೈಸ್ ರಸ್ತೆಯಲ್ಲಿ ಹೋಗುವ ದ್ವಿಚಕ್ರ ವಾಹನ ಸವಾರರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದರು. ನೈಸ್ ರಸ್ತೆಗೆ ಹೊಂದಿಕೊಂಡಂತೆ ಯಾವುದೇ ಪೊಲೀಸ್ ಠಾಣೆಗಳು ಇಲ್ಲ. ಹೀಗಾಗಿ ಇದು ಅಪರಾಧಿಗಳ ಪಾಲಿಗೆ ಸ್ವರ್ಗವಾಗಿದೆ. ವ್ಹೀಲಿಂಗ್ ಮಾಡುವುದು, ಒಂಟಿಯಾಗಿ ಪ್ರಯಾಣಿಸುವರನ್ನು ದರೋಡೆ ಮಾಡುವ ಪ್ರಕರಣಗಳು ನಿರಂತರ ವರದಿಯಾಗುತ್ತಿವೆ. ಇಲ್ಲಿ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಾದ ನೈಸ್ ರಸ್ತೆ ಟೋಲ್ ವಸೂಲಿ ಬಿಟ್ಟರೆ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ.