ಪ್ರೇಮಿಗಳ ರಕ್ಷಣೆಗೆ ನಿಂತ ಅಗ್ನಿ ಶ್ರೀಧರ್, ಕೋಡಿಹಳ್ಳಿ
ಬೆಂಗಳೂರು, ಫೆ.14: ''ಪ್ರೇಮಿಗಳೇ ಮಸ್ತ್ ಮಜಾ ಮಾಡಿ. ನಿಮ್ಮ ರಕ್ಷಣೆಗೆ ನಾವಿದ್ದೇವೆ'' ಎಂದು ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮತ್ತು ಪತ್ರಕರ್ತ ಅಗ್ನಿ ಶ್ರೀಧರ್ ಪ್ರೇಮಿಗಳ ದಿನದಂದು ಎಂಜಿ ರಸ್ತೆಯಲ್ಲಿ ಪ್ರೇಮಿಗಳನ್ನು ಹುರಿದುಂಬಿಸಿದರು.
ಪ್ರೇಮಿಗಳನ್ನು ಅಡ್ಡಿಪಡಿಸುವವರಿಗೆ ಚಾಟಿ ಏಟು ಕೊಟ್ಟು ಬುದ್ಧಿ ಕಲಿಸುತ್ತೇವೆ . ಪ್ರೇಮ ಹರಿಯುವ ನೀರಿದ್ದಂತೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಿಜವಾದ ಪ್ರೇಮಿಗಳಿಗೆ ನಾವು ರಕ್ಷಣೆ ನೀಡುತ್ತೇವೆ. ಪ್ರೇಮಿಗಳಿಗೆ ಹಿಂಸೆ ಕೊಡುವುದನ್ನು ನಾವು ಸಹಿಸುವುದಿಲ್ಲ. ಪ್ರೇಮಿಗಳು ಭಗ್ನ ಪ್ರೇಮಿಗಳು ಎಲ್ಲರಿಗೂ ನಾವು ರಕ್ಷಣೆ ನೀಡುತ್ತೇವೆ. ಕರ್ನಾಟಕದ ನಾನಾ ಜಿಲ್ಲೆಗಳಿಂದ ಸುಮಾರು 4 ಕೋಟಿ ರುಗಳಷ್ಟು ಹೂವಿನ ವಹಿವಾಟು ನಡೆದಿದೆ. ಪ್ರೇಮಿಗಳಿಂದ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಹಾಗಾಗಿ ನಮ್ಮ ಅನ್ನದಾತರಾದ ಪ್ರೇಮಿಗಳನ್ನು ನಾವು ಬೆಂಬಲಿಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.
ಪತ್ರಕರ್ತ ಅಗ್ನಿ ಶ್ರೀಧರ್ ಮಾತನಾಡುತ್ತಾ, ಪ್ರೇಮಿಗಳಿಗೆ ತೊಂದರೆ ಕೊಡುವುದು ಮಾನಸಿಕ ಅಸ್ವಸ್ಥರು ಮಾಡುವ ಕೆಲಸ. ಶ್ರೀರಾಮಸೇನೆಯ ಮುತಾಲಿಕ್ ತರಹದವರು ಇದಕ್ಕೆ ಸಂಕೇತ ಇದ್ದಂತೆ. ಪ್ರಗತಿಪರ ಚಿಂತನೆಯನ್ನು ತಡೆಯುವ ಶ್ರೀರಾಮಸೇನೆಯಂತಹ ಸಂಘಟನೆಗಳನ್ನು ನಿಷೇಧಿಸಬೇಕು. ನಾವು ಎಚ್ಚೆತ್ತುಕೊಳ್ಳದಿದ್ದರೆ ಮತ್ತೆ ಶಿಲಾಯುಗಕ್ಕೆ ಹೋಗುತ್ತೇವೆ ಎಂದು ಆಗ್ರಹಿಸಿದರು.
ಸುಮಾರು 500ಕ್ಕೂ ಹೆಚ್ಚು ಯುವ ಸ್ವಾತಂತ್ರ್ಯ ವೇದಿಕೆ ಕಾರ್ಯಕರ್ತರು ನಗರದ ಬೇರೆ ಬೇರೆ ಸ್ಥಳಗಳಲ್ಲಿನ ಕಾಲೇಜು, ಪಬ್, ಪಾರ್ಕ್ ಗಳಲ್ಲಿನ ಪ್ರೇಮಿಗಳ ರಕ್ಷಣೆಗೆ ದೌಡಾಯಿಸಿದರು. ಪ್ರೇಮಿಗಳ ಸ್ವರ್ಗವಾದ ಬೆಂಗಳೂರಿನ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗಳಲ್ಲೂ ಕಾರ್ಯಕರ್ತರು ಪ್ರೇಮಿಗಳ ರಕ್ಷಣೆಗೆ ನಿಂತಿದ್ದಾರೆ. ಈ ಒಂದು ಆಂದೋಲನದಲ್ಲಿ ಮಾಜಿ ಶಾಸಕಿ ಬಿ.ಟಿ.ಲಲಿತಾನಾಯಕ್, ರೈತ ಸಂಘದ ಕಾರ್ಯಕರ್ತರು ಭಾಗವಹಿಸಿದ್ದರು.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ












Click it and Unblock the Notifications