ತಿಂಗಳಿಡೀ ಅರಿಶಿನ ಕುಂಕುಮ; ಹೂವು ವೀಳೆಯದೆಲೆ

ಬಂತು ನಾಡಿಗೆ
ಬಂತು ಬೀಡಿಗೆ
ಬಂತು ಶ್ರಾವಣ
ಓ ಬಂತು ಶ್ರಾವಣ
ದ.ರಾ.ಬೇಂದ್ರೆಯವರ ಈ ಸಾಲುಗಳಂತೆ ಶ್ರಾವಣ ಕಾಲಿಟ್ಟೇ ಬಿಟ್ಟಿದೆ. ಆಶಾಢ ಕಳೆದು ಶ್ರಾವಣದ ಸಂಭ್ರಮ ಎಲ್ಲೆಲ್ಲೂ ಮನೆ ಮಾಡಿದೆ. ಆಶಾಢದ ಧೂಳಿಂದ ಮೈಕೊಡವಿ ಎದ್ದ ಜನ ಶುಭ ಕಾರ್ಯಗಳಿಗೆ ಅಣಿಯಾಗುತ್ತಿದ್ದಾರೆ. ಹಬ್ಬಗಳು, ಮದುವೆ, ಸಂಭ್ರಮಗಳು ಮತ್ತೆ ಕಾಣಿಸಿಕೊಳ್ಳಲಿವೆ. ಮನೆ ಮುಂದೆ ಶ್ರಾವಣದ ದೀಪ ತನ್ನ ಬೆಳಕು ಚೆಲ್ಲಲಿದೆ.
ಕನಸು ಕುಡಿಯೊಡೆಯುವ ಈ ಕಾಲಕ್ಕೆ ಒಂದಾದರೊಂದಂತೆ ಹಬ್ಬಗಳ ಸರಣಿ. ಹಿಂದೂಗಳು ಮತ್ತು ಎಲ್ಲರೂ ಒಟ್ಟಾಗಿ ಆಚರಿಸುವ ರಾಷ್ಟ್ರೀಯ ಹಬ್ಬವಿರುವ ಈ ತಿಂಗಳು ಶುಭದಾಯಕ ಎಂಬುದು ಹಿರಿಯರ ಮಾತು. ಜೊತೆಗೆ ಭಾವನೆಗಳ ಬಂಧ ಬೆಸೆಯುವ ಹಬ್ಬದ ಆಚರಣೆಯಿರುವುದೂ ವಿಶೇಷ.
ಶ್ರಾವಣ ಆರಂಭಗೊಳ್ಳುವ ದಿನದಿಂದಲೂ ಮನೆಯಲ್ಲಿ ಒಂದಲ್ಲಾ ಒಂದು ಪೂಜೆ ಪುನಸ್ಕಾರ ನಡೆದೇ ಇರುತ್ತದೆ. ಹಬ್ಬದ ವಾತಾವರಣ ಇಡೀ ಮನೆಗೆಲ್ಲ ಸಂತಸದ ಓಕುಳಿ ಎರಚಿರುತ್ತದೆ. ಜೊತೆಗೆ ಬಗೆ ಬಗೆಯಾದ ಅಡುಗೆ, ತಿಂಡಿಗಳು ಹಬ್ಬಕ್ಕೆ ಸಾಥ್ ನೀಡಿರುತ್ತದೆ.
ಸಮುದ್ರ ಮಂಥನ ನಡೆದ ಈ ತಿಂಗಳಿನಲ್ಲಿ ಹಾಲಾಹಲ ಕುಡಿದು ಜಗವನ್ನು ಕಾಪಾಡಿದ ಶಿವನನ್ನು ಸ್ಮರಿಸುವ ಶ್ರಾವಣ ಸೋಮವಾರ ದೇವಸ್ಥಾನಗಳಿಗೆ ಭಕ್ತಿಭಾವದಿಂದ ಲಗ್ಗೆ ಇಡುವ ಜನ ಸಾವಿರಾರು. ಜೊತೆಗೆ ಶ್ರಾವಣ ಶನಿವಾರದ ಊಟ ಎಲ್ಲರ ಮನೆಗೂ ಸುಗ್ಗಿ ಇದ್ದಂತೆ. ಇದರೊಂದಿಗೆ ಶ್ರಾವಣ ಮಂಗಳವಾರ, ಶ್ರಾವಣ ಶುಕ್ರವಾರವೂ ಸೇರಿಕೊಳ್ಳುತ್ತದೆ.
ಮಂಗಳಗೌರಿ ವೃತ, ವರಮಹಾಲಕ್ಷ್ಮಿ ಪೂಜೆ, ನಾಗರ ಪಂಚಮಿ, ಸ್ನೇಹಿತರ ದಿನ, ರಕ್ಷಾ ಬಂಧನ, ಸ್ವಾತಂತ್ರ್ಯ ದಿನಾಚರಣೆ, ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬಗಳು ಈ ತಿಂಗಳಿಗೆ ಮಹತ್ವ ತಂದು ಕೊಡುತ್ತವೆ.












Click it and Unblock the Notifications