ರಕ್ಷಾ ಬಂಧನ: ಮಹಿಳಾ ಕಾನ್ಸ್ಸ್ಟೇಬಲ್ಸ್ರಿಂದ ರಾಖಿ ಕಟ್ಟಿಸಿಕೊಂಡ ಗೃಹ ಸಚಿವರು
ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯ ಅನನ್ಯವಾದದ್ದು. ಪದಗಳಲ್ಲಿ ಅದನ್ನು ವಿವರಿಸಲು ಅಸಾಧ್ಯ. ಒಡಹುಟ್ಟಿದವರ ನಡುವಿನ ಸಂಬಂಧಕ್ಕೆ ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಹೀಗಾಗಿ ಇಂದು (ಆಗಸ್ಟ್ 11) ಸಹೋದರ-ಸಹೋದರಿಯರ ಪ್ರೀತಿಯ ಹಬ್ಬವಾದ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ದೇಶದೆಲ್ಲೆಡೆ ರಕ್ಷಾ ಬಂಧನದ ಆಚರಣೆಯಲ್ಲಿ ಸಹೋದರ ಸಹೋದರಿಯರು ನಿರತರಾಗಿದ್ದಾರೆ. ಜೊತೆಗೆ ಪ್ರಮುಖ ರಾಜಕೀಯ ವ್ಯಕ್ತಿಗಳೂ ಕೂಡ ತುಂಬಾ ವಿಶೇಷವಾಗಿ ರಕ್ಷಾ ಬಂಧನವನ್ನು ಆಚರಿಸಿದ್ದಾರೆ. ಜೊತೆಗೆ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ನವದೆಹಲಿಯ ತಮ್ಮ ನಿವಾಸದಲ್ಲಿ ಮಕ್ಕಳೊಂದಿಗೆ ರಕ್ಷಾಬಂಧನವನ್ನು ಆಚರಿಸಿದರು. ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಿಸುವ ಸ್ವಚ್ಛತಾ ಕಾರ್ಮಿಕರು,ತೋಟದ ಕೆಲಸಗಾರರು, ವಾಹನ ಚಾಲಕರ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ್ದು ವಿಶೇಷವಾಗಿತ್ತು.
'ಸಹೋದರಿ ಬೇಕಾಗಿದ್ದಾರೆ' ಡೇಟಿಂಗ್ ಆ್ಯಪ್ನಲ್ಲಿ ಹೀಗೊಂದು ಪೋಸ್ಟ್
ಸೋದರ, ಸೋದರಿಯರ ನಡುವಿನ ಬಾಂಧವ್ಯದ ಮಹತ್ವ ಸಾರುವ ರಕ್ಷಾಬಂಧನ ಹಬ್ಬ, ನಾಡಿನೆಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಈ ವೇಳೆ ಗೃಹಸಚಿವ ಆರಗ ಜ್ಞಾನೇಂದ್ರ 'ಕೂ' ಮಾಡಿದ್ದಾರೆ. ಇದರಲ್ಲಿ ಇಬ್ಬರು ಮಹಿಳಾ ಕಾನ್ಸ್ಟೇಬಲ್ಗಳು ತಮಗೆ ರಾಖಿ ಕಟ್ಟಿ ಶುಭಕೋರಿದ್ದಾರೆಂದು ಬರೆದುಕೊಂಡಿದ್ದಾರೆ.
'ನಿನ್ನೆ ಇಬ್ಬರು ಮಹಿಳಾ ಕಾನ್ಸ್ಟೇಬಲ್ಗಳು ರಾಖಿ ಕಟ್ಟಿ ಶುಭ ಕೋರಿದರು. ಅವರಿಗೂ ರಕ್ಷಾಬಂಧನದ ಶುಭಾಶಯ ಕೋರಲಾಯಿತು' ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹಂಚಿಕೊಂಡಿದ್ದಾರೆ.
ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ರಕ್ಷಾ ಬಂಧನದ ಶುಭ ಕೋರಿದ್ದಾರೆ. ''ನಾಡಿನ ಸಮಸ್ತ ಜನತೆಗೆ ರಕ್ಷಣೆಯ ಮತ್ತು ಸಹೋದರತ್ವದ ಸಂಕೇತದ ಹಬ್ಬವಾಗಿರುವ ರಕ್ಷಾ ಬಂಧನದ ಹಾರ್ದಿಕ ಶುಭಾಶಯಗಳು. ಹರಸಿ, ಆಶೀರ್ವದಿಸಿ, ಆರೈಕೆ ಮಾಡಿ ಧೈರ್ಯವನ್ನು ತುಂಬುವ ಸಹೋದರಿಯರ ಕಾಳಜಿ ಮತ್ತು ಕನಿಕರ ನಿಜಕ್ಕೂ ಅವಿಸ್ಮರಣೀಯವಾದದ್ದು" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂ ಮಾಡಿ ಶುಭ ಕೋರಿದ್ದಾರೆ.
ಅಣ್ಣ-ತಮ್ಮ ಅಂತ ಕರೆಯಲು ರಕ್ತ ಹಂಚಿಕೊಂಡು ಹುಟ್ಟಿರಬೇಕು ಅಂತ ಏನಿಲ್ಲ. ಮನಸ್ಸಿನ ಭಾವನೆಯಿಂದ ಕರೆಯುವ ಪ್ರತಿಯೊಬ್ಬರು ಸಹೋದರ- ಸಹೋದರಿಯರೇ ಆಗಿರುತ್ತಾರೆ. ಕನಸುಗಳು ನೂರಿರಲಿ, ಸಂರಕ್ಷಣೆ ಹೊಣೆ ನನಗಿರಲಿ ಎಂಬ ಸಂದೇಶ ಸಾರುವ ಸಹೋದರತೆಯ ಸಂಭ್ರಮದ ಹಬ್ಬಕ್ಕೆ ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳು' ಎಂದಿದ್ದಾರೆ ಸಚಿವ ಮುರುಗೇಶ್ ನಿರಾಣಿ.
ನಾಡಿನ ಸಮಸ್ತ ಸಹೋದರ ಸಹೋದರಿಯರಿಗೆ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು. ಭ್ರಾತೃತ್ವ, ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿ ಆಚರಿಸಲ್ಪಡುವ ರಕ್ಷಾಬಂಧನ ಎಲ್ಲರ ಬಾಳಿನಲ್ಲಿ ಸಂತಸದ ಹೊಂಬೆಳಕನ್ನು ಮೂಡಿಸಲಿ ಎಂದು ಪ್ರಾರ್ಥಿಸುವೆ' ಎಂದು ಅಶ್ವಥ್ ನಾರಾಯಣ್ ಅವರು ಕೂ ಮಾಡಿದ್ದಾರೆ.
Recommended Video