ಫೀಸು ಕಟ್ಟೋಕೆ ಅಮ್ಮ ಬಳೆ ಮಾರಿದ್ದಳು-ಯುಆರ್ಎ
ಮೇ 11ರ ಅಮ್ಮಂದಿರ ದಿನದ ಸಂದರ್ಭದಲ್ಲಿ ಜ್ಞಾನ ಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ. ಯು. ಆರ್. ಅನಂತ ಮೂರ್ತಿಸಂದರ್ಶನವೊಂದರಲ್ಲಿ ತಮ್ಮ ಅಮ್ಮನನ್ನು ನೆನಪಿಸಿಕೊಂಡದ್ದು ಹೀಗೆ :
ನಾವು ಸಿಕ್ಕಾಪಟ್ಟೆ ಬಡತನದಲ್ಲಿ ಬೆಳೆದವರು. ಆದರೆ ನಮ್ಮಮ್ಮ ಯಾವಾಗಲೂ ಆತ್ಮ ಗೌರವವನ್ನು ಕಳೆದು ಕೊಳ್ಳದೇ ಬದುಕುವುದು ಹೇಗೆಂದು ಹೇಳಿಕೊಡುತ್ತಿದ್ದಳು. ಬಡತನದ ದಿನಗಳು. ನಮ್ಮಲ್ಲಿರುವ ಅಲ್ಪವನ್ನೇ ಪರರಿಗೂ ಉದಾರವಾಗಿ ಕೊಟ್ಟು ಸಂತೋಷವಾಗಿರುವುದನ್ನು ಹೇಳಿಕೊಡುತ್ತಿದ್ದಳು.
ಅದು ಜಗತ್ತಿನ ಎರಡನೇ ಮಹಾಯುದ್ಧದ ಸಮಯ. ಎಲ್ಲಿ ನೋಡಿದರೂ ಎಲ್ಲದಕ್ಕೂ ಬರ. ನಮ್ಮ ಅಪ್ಪ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಬಡತನವಿದ್ದರೂ ನಮ್ಮ ಮನೆಗೆ ಪ್ರತಿದಿನ ಒಬ್ಬರಲ್ಲ ಒಬ್ಬರು ನೆಂಟರು ಬರುತ್ತಿದ್ದರು. ಅವರಿಗೆ ಬಡಿಸುವುದರಲ್ಲಿ ಅಮ್ಮ ಎಂದೂ ಕೈ ಗಿಡ್ಡ ಮಾಡಿದ್ದೇ ಇಲ್ಲ.
ಆಕೆ ಜಾಣೆ ಮತ್ತು ಕ್ರಿಯಾಶೀಲಳಾಗಿದ್ದಳು. ಸಾರು ಮಾಡಲು ಮನೆಯಲ್ಲಿ ಬೇಳೆ ಇಲ್ಲದೇ ಇದ್ದರೆ ಸೌತೇ ಕಾಯಿ ಬೀಜವನ್ನು ರುಬ್ಬಿ ಅದರ ಸಾರು ಮಾಡುತ್ತಿದ್ದಳು. ನಮ್ಮ ಮನೆಯ ಜಂತಿಗೆ ಪ್ರತಿವರ್ಷವೂ ಸೌತೇ ಕಾಯಿ ತೂಗು ಹಾಕಿರುತ್ತಿದ್ದೆವು. ನನ್ನ ಎಸ್ಎಸ್ಎಲ್ಸಿ ದಿನಗಳು ನನಗೆ ಚೆನ್ನಾಗಿ ನೆನೆಪಿವೆ. ಆಗ ಹಣಕ್ಕೆ ತೀರಾ ಮುಗ್ಗಟ್ಟು ಇತ್ತು. ಪಬ್ಲಿಕ್ ಪರೀಕ್ಷೆಯ ಫೀಸು ಕಟ್ಟುವುದಕ್ಕೆ ಅಮ್ಮ ತನ್ನ ಕೈಯಲ್ಲಿದ್ದ ಬಳೆಗಳನ್ನು ಅಡವಿಟ್ಟಿದ್ದಳು. ಬಡತನದಿಂದಾಗಿ ನಮಗೆ ಎಂದೂ ದೈನೇಸಿ ಮನೋಭಾವನೆ ಮೂಡದಂತೆ ಆಕೆ ನಮ್ಮನ್ನು ನೋಡಿಕೊಳ್ಳುತ್ತಿದ್ದಳು.