Pitru Paksha 2022: ಶ್ರಾದ್ಧ, ಪಿಂಡಪ್ರದಾನ ಮಾಡಲು ಒಳ್ಳೆಯ ಸ್ಥಳಗಳು ಇವು
ಸಾವನ್ನಪ್ಪಿದವರ ಆತ್ಮಗಳಿಗೆ ಮುಕ್ತಿ ಸಿಗಲು ಸರಿಯಾದ ರೀತಿಯಲ್ಲಿ ಅಂತ್ಯಕ್ರಿಯೆ, ಶ್ರಾದ್ಧ, ಪಿಂಡದಾನ, ಅಸ್ಥಿ ವಿಸರ್ಜನೆ ಇತ್ಯಾದಿ ವಿಧಿವಿಧಾನಗಳನ್ನು ನೆರವೇರಿಸಬೇಕು. ಇಲ್ಲದಿದ್ದರೆ ಮುಕ್ತಿ ಸಿಗುವುದಿಲ್ಲ ಎಂಬ ನಂಬಿಕೆ ಹಿಂದೂಗಳಲ್ಲಿದೆ.
ಶ್ರಾದ್ಧ, ಪಿಂಡದಾನ, ತರ್ಪಣ ಕ್ರಿಯೆಗಳಿಗೆ ಪಿತೃಪಕ್ಷ ಸರಿಯಾದ ಸಮಯ ಎಂದು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಶ್ರಾದ್ಧ ಮಾಡಿದರೆ ನಮ್ಮ ಮೂರು ತಲೆಮಾರುಗಳ ಆತ್ಮಗಳಿಗೆ ಮುಕ್ತಿ ಸಿಗುತ್ತದೆ.
ಪಿತೃಪಕ್ಷದ ಕೊನೆಯ ದಿನವಾದ ಮಹಾಲಯ ಅಮಾವಾಸ್ಯೆ ಬರುತ್ತದೆ. ಈ ವರ್ಷ ಇದು ಸೆಪ್ಟೆಂಬರ್ 25, ಭಾನುವಾರದಂದು ಇದೆ. ಅಮಾವಾಸ್ಯೆಯಾದ್ದರಿಂದ ಈ ದಿನದಂದು ಶ್ರಾದ್ಧ, ಪಿಂಡಪ್ರದಾನ, ತರ್ಪಣ ಬಿಡುವುದು ಬಹಳ ಉತ್ತಮ ಎನ್ನಲಾಗಿದೆ. ಈ ಕ್ರಿಯೆಗಳಿಗೆ ಕೆಲ ಸ್ಥಳಗಳನ್ನು ಶ್ರೇಷ್ಠವೆಂದು ಪರಿಭಾವಿಸಲಾಗಿದೆ. ಅಂಥ ಕೆಲ ಪ್ರಮುಖ ಸ್ಥಳಗಳು ಇಲ್ಲಿವೆ.

ಪಿಂಡದಾನ ಮಾಡಲು ಯಾವ ಸ್ಥಳ ಸೂಕ್ತ:
1) ವಾರಾಣಸಿ: ಉತ್ತರ ಪ್ರದೇಶದಲ್ಲಿ ಪವಿತ್ರ ಗಂಗಾ ನದಿಯ ತಟದಲ್ಲಿರುವ ವಾರಾಣಸಿ ಹಿಂದೂಗಳ ಅತ್ಯಂತ ಪ್ರಮುಖ ತೀರ್ಥ ಕ್ಷೇತ್ರಗಳಲ್ಲಿ ಒಂದಾಗಿದೆ. ಸಾಯುವುದರೊಳಗೆ ಹಿಂದೂಗಳ ಕೈಗೊಳ್ಳಬೇಕಾದ ತೀರ್ಥಯಾತ್ರೆಯ ಸ್ಥಳಗಳಲ್ಲಿ ಇದೂ ಒಂದು. ಕಾಶಿ ವಿಶ್ವನಾಥ ಸೇರಿದಂತೆ ಹಲವಾರು ಪ್ರಮುಖ ದೇವಸ್ಥಾನಗಳು ಇಲ್ಲಿವೆ. ಸಾವಿರಾರು ವರ್ಷಗಳಿಂದಲೂ ವಾರಾಣಸಿಯಲ್ಲಿ ಪಿಂಡದಾನ ಮಾಡಿಕೊಂಡು ಬರಲಾಗುತ್ತಿದೆ.
2) ಗಯಾ: ಬಿಹಾರದಲ್ಲಿರುವ ಗಯಾ ಇನ್ನೊಂದು ಹಿಂದೂಗಳ ಪವಿತ್ರ ಕ್ಷೇತ್ರ. ಇಲ್ಲಿಯ ಫಲ್ಗು ನದಿಯ ತಟದಲ್ಲಿ ಪಿಂಡದಾನ ಮಾಡುವ ಪದ್ಧತಿ ಇದೆ. ವಿಷ್ಣುವಿನ ಅವತಾರ ಇಲ್ಲಾಯಿತು ಎಂಬ ನಂಬಿಕೆ ಇದೆ. ಈ ನದಿಯಲ್ಲಿ ಮಿಂದು ನಂತರ ಪಿಂಡದಾನ ಮಾಡಲಾಗುತ್ತದೆ.
3) ಬದ್ರಿನಾಥ: ಅಲಕಾನಂದ ನದಿ ತಟದಲ್ಲಿರುವ ಬ್ರಹ್ಮ ಕಪಾಲ ಘಾಟಿಯು ಪಿಂಡದಾನಕ್ಕೆ ಶ್ರೇಷ್ಠ ಎಂದು ಪರಿಗಣಿತವಾಗಿದೆ. ಅಲಕಾನಂದ ನದಿಯಲ್ಲಿ ಮುಳುಗೆದ್ದು ಶ್ರಾದ್ಧ, ಪಿಂಡದಾನ ಮಾಡಬೇಕು. ವಿಧಿವಿಧಾನಗಳನ್ನು ನೆರವೇರಿಸಲು ಇಲ್ಲಿ ಬ್ರಾಹ್ಮಣರೂ ಲಭ್ಯ ಇರುತ್ತಾರೆ.

4) ಪುಷ್ಕರ: ರಾಜಸ್ಥಾನದ ಪುಷ್ಕರ ಸರೋವರ ಬಹಳ ಪವಿತ್ರ ಸ್ಥಳವೆನಿಸಿದೆ. ವಿಷ್ಣುವಿನ ನಾಬಿಯಿಂದ ಸರೋವರ ಸೃಷ್ಟಿಯಾಯಿತು ಎಂದು ಹೇಳಲಾಗುತ್ತದೆ. ಹಾಗೆಯೇ, ಬ್ರಹ್ಮದೇವ ಇಲ್ಲಿ ತಾವರೆ ಹೂವನ್ನು ಎಸೆದು ಹೋಗಿದ್ದರಿಂದ ಪುಷ್ಕರ ಸೃಷ್ಟಿಯಾಯಿತು ಎಂಬ ನಂಬಿಕೆಯೂ ಇದೆ.
ಈ ಕೆರೆಯ ಸುತ್ತ 52 ಘಾಟ್ಗಳು ಇದ್ದು, ಇಲ್ಲಿ ಪಿಂಡದಾನ ಮಾಡಬಹುದು. ಸಾಮಾನ್ಯವಾಗಿ ಅಶ್ವಿನಿ ಮಾಸದಲ್ಲಿ ಈ ಕಾರ್ಯ ನಡೆಯುತ್ತದೆ.
5) ಅಯೋಧ್ಯೆ: ರಾಮನ ಜನ್ಮಭೂಮಿ ಎನಿಸಿರುವ ಅಯೋಧ್ಯೆಯೂ ಕೂಡ ಪಿಂಡದಾನಕ್ಕೆ ಶ್ರೇಷ್ಠ ಜಾಗವೆನಿಸಿದೆ. ಇಲ್ಲಿಯ ಸರಯೂ ನದಿಯ ತಟದಲ್ಲಿರುವ ಭಾತ್ ಕುಂಡ್ ಪ್ರದೇಶದಲ್ಲಿ ಪಿಂಡದಾನ ಮಾಡಲಾಗುತ್ತದೆ.
6) ಶ್ರೀರಂಗಪಟ್ಟಣ: ಮಂಡ್ಯದ ಕಾವೇರಿ ನದಿ ತಟದಲ್ಲಿ ಶ್ರೀ ರಂಗನಾಥ ಸ್ವಾಮಿಯ ಸಾನಿಧ್ಯದಲ್ಲಿ ಪಿತೃಪಕ್ಷದಲ್ಲಿ ಶ್ರಾದ್ಧ, ಪಿಂಡ ಪ್ರದಾನ ಇತ್ಯಾದಿ ವಿಧಿ ವಿಧಾನಗಳನ್ನು ನೆರವೇರಿಸುವುದು ಶ್ರೇಷ್ಠ ಎಂದು ಭಾವಿಸಲಾಗಿದೆ. ಇಲ್ಲಿ ನಾರಾಯಣ ಬಲಿ ಪೂಜೆ ಮಾಡಿ ನಂತರ ಪಿಂಡದಾನ ಮಾಡಲಾಗುತ್ತದೆ.
ಪಿತೃ ದೋಷ ನಿವರಣೆಗೆ, ಪೂರ್ವಿಕರ ಶಾಪದಿಂದ ವಿಮೋಚನೆಯಾಗಲು, ಪೂರ್ವಿಕರ ಆತ್ಮಗಳಿಗೆ ಸದ್ಗತಿ ದೊರಕಿಸಿಕೊಡಲು, ದುಷ್ಟ ಆತ್ಮಗಳ ನಿವಾರಣೆ ಮಾಡಲು ಶ್ರೀರಂಗಪಟ್ಟಣದಲ್ಲಿ ಪಿಂಡದಾನ ಮತ್ತು ನಾರಾಯಣ ಬಲಿ ಮುಖ್ಯ ಕ್ರಿಯೆಯಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications