ಕೀರ್ತಿ ಮತ್ತು ಹೆಮ್ಮೆಗಾಗಿ ರಾಜ್ಯೋತ್ಸವ ಓಟ 2008
ಬೆಂಗಳೂರು, ಅ. 4 : ಬೆಂಗಳೂರು ಮೂಲದ ಕ್ರೀಡಾ ನಿರ್ವಹಣಾ ಸಂಸ್ಥೆ ಟ್ರಿಪಲ್ ಟ್ರೀ ಎಕ್ಸಿಬಿಷನ್ಸ್ ಅಂಡ್ ಸ್ಪೋರ್ಟ್ಸ್ಪ್ರೈವೇಟ್ ಲಿಮಿಟೆಡ್ 53ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮೊದಲ ಬಾರಿ ವಿನೂತನವಾದ 'ರಾಜ್ಯೋತ್ಸವ ಓಟ 2008' ಅನ್ನು ಬೆಂಗಳೂರು ಸೇರಿದಂತೆ ರಾಜ್ಯದ ಐದು ನಗರಗಳಲ್ಲಿ ಹಮ್ಮಿಕೊಳ್ಳಲಿದೆ. ಹತ್ತು ಕಿ.ಮೀ ಮತ್ತು ಐದು ಕಿ.ಮೀ ವಿಭಾಗಗಳಲ್ಲಿ ಭಾಗವಹಿಸಲು ಆಸಕ್ತಿ ಉಳ್ಳವರಿಗಾಗಿ ಅಕ್ಟೋಬರ್ 3ರಿಂದ ಆನ್ಲೈನ್ ನೊಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಈ ಓಟವನ್ನು ಕರ್ನಾಟಕ ಸರ್ಕಾರದ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯು (ಡಿವೈಎಸ್ಎಸ್) ಬೆಂಬಲಿಸಿದೆ. ಹಾಗೆಯೇ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಈ ಓಟಕ್ಕೆ ಮಾನ್ಯತೆ ನೀಡಿದೆ. ಈ ಓಟವನ್ನು ಏಕಕಾಲಕ್ಕೆ ಬೆಂಗಳೂರು, ಶಿವಮೊಗ್ಗ, ಚಿತ್ರದುರ್ಗ, ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ನಡೆಸಲಾಗುತ್ತಿದೆ. ಹಾಗೆಯೇ, ಈ ಐದು ನಗರಗಳಲ್ಲಿರುವ ಡಿವೈಎಸ್ಎಸ್ನ ಸ್ಥಳೀಯ ಕಚೇರಿಗಳಲ್ಲೂ ಓಡಲು ಆಸಕ್ತಿ ಹೊಂದಿರುವವರು ಹೆಸರನ್ನು ನೊಂದಾಯಿಸಬಹುದು.
ರಾಜ್ಯೋತ್ಸವ ಓಟ 2008ರ ಈ ಓಟವನ್ನು ಕರ್ನಾಟಕದ ನಿವಾಸಿಗಳಿಗಾಗಿ ಆಯೋಜಿಸಲಾಗಿದೆ. 'ಕೀರ್ತಿ ಓಟ' ಮತ್ತು 'ಹೆಮ್ಮೆ ಓಟ' ಎಂದು ಎರಡು ವಿಭಾಗಗಳಲ್ಲಿ ನಡೆಸಲಾಗುತ್ತಿದೆ. ಹೆಮ್ಮೆಯ ಓಟದ ವಿಭಾಗದಲ್ಲಿ ಸಂಭ್ರಮದ ಓಟ ಮತ್ತು ಸುವರ್ಣ ಓಟ ಎಂಬ ಮತ್ತೆರಡು ವಿಭಾಗಗಳಿವೆ. ಈ ವಿಭಾಗದಲ್ಲಿ ಎಲ್ಲರೂ ಉಚಿತವಾಗಿ ಪಾಲ್ಗೊಳ್ಳಬಹುದು. ಈ ಓಟದಲ್ಲಿ ಮೊದಲ ನೂರು ಸ್ಥಾನ ಪಡೆಯುವ ಸ್ಪರ್ಧಿಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು. ಕೀರ್ತಿ ಓಟದ ಅಡಿಯಲ್ಲಿ ಗಂಧದ ಓಟ ಮತ್ತು ಕಸ್ತೂರಿ ಓಟಗಳನ್ನು ಏರ್ಪಡಿಸಲಾಗಿದೆ. ಪ್ರಶಸ್ತಿ ಮತ್ತು ನಗದು ಬಹುಮಾನಗಳನ್ನು ಗೆಲ್ಲುವ ಅವಕಾಶಗಳು ಈ ಎರಡು ವಿಭಾಗದ ಓಟಗಳಲ್ಲಿವೆ. ಕೀರ್ತಿ ಓಟ ವಿಭಾಗದಲ್ಲಿ ಸ್ಪರ್ಧಿಸಲು ಪ್ರತಿಯೊಬ್ಬರು ತಲಾ 250 ರೂಪಾಯಿಗಳ ನೊಂದಣಿ ಶುಲ್ಕ ಪಾವತಿಸಬೇಕು.
ಆನ್ಲೈನ್ ಮೂಲಕ ನೊಂದಣಿ ಮಾಡಿಕೊಳ್ಳಲು www.rajyotsavaota.comಗೆ ಭೇಟಿ ನೀಡಿ. ಅಲ್ಲಿಂದ ನೊಂದಣಿ ವಿಭಾಗದಲ್ಲಿ ಕ್ಲಿಕ್ ಮಾಡಿ, ಆನ್ಲೈನ್ ವಿಭಾಗವನ್ನು ಪ್ರವೇಶಿಸಿ. ಅಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ನೊಂದಣಿ ಮಾಡಿಕೊಳ್ಳಬೇಕು. ಹಾಗೆಯೇ, ಓಟಕ್ಕೆ ಸಂಬಂಧಿಸಿದ ವಿವಿಧ ಮಾಹಿತಿಗಳೂ ಸಹ ಇದೇ ವೆಬ್ಸೈಟ್ನಲ್ಲಿ ಲಭ್ಯವಿದೆ.
ರಾಜ್ಯೋತ್ಸವ ಓಟಕುರಿತು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ರವಿಕುಮಾರ್, ಈಕ್ಯೂಟೊರ್ ಕಮ್ಯೂನಿಕೇಷನ್
ಮೊಬೈಲ್ : 91 99646 16589
ಇಮೇಲ್ : [email protected]












Click it and Unblock the Notifications