ಗಂಗಾ ಸಪ್ತಮಿ ಯಾವತ್ತು? ಪೂಜಾ ಮುಹೂರ್ತ ಮತ್ತು ಮಹತ್ವದ ವಿವರ ಇಲ್ಲಿದೆ
ಹಿಂದೂ ಧರ್ಮದಲ್ಲಿ ಗಂಗಾ ಸಪ್ತಮಿಯನ್ನು ಅತ್ಯಂತ ಪವಿತ್ರ ಮತ್ತು ಮಂಗಳಕರ ದಿನ ಎಂದು ಪರಿಗಣಿಸಲಾಗುತ್ತದೆ. ಇದನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ಆಚರಿಸಲಾಗುತ್ತದೆ. ಈ ವರ್ಷ, ಗಂಗಾ ಸಪ್ತಮಿಯನ್ನು ಏಪ್ರಿಲ್ 23 ರಂದು ಆಚರಿಸಲಾಗುವುದು. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನವನ್ನು ಗಂಗಾ ದೇವಿಯ ಪುನರುತ್ಥಾನವನ್ನು ಗುರುತಿಸುವ 'ಗಂಗಾ ಜಯಂತಿ' ಎಂದೂ ಕರೆಯಲಾಗುತ್ತದೆ.
ಗಂಗಾ ಸಪ್ತಮಿ 2026 ಮುಹೂರ್ತ:
ಗಂಗಾ ಸಪ್ತಮಿ ತಿಥಿ ಏಪ್ರಿಲ್ 22 ರ ರಾತ್ರಿ 10:49 ಕ್ಕೆ ಪ್ರಾರಂಭವಾಗಿ ಏಪ್ರಿಲ್ 23 ರಂದು ರಾತ್ರಿ 8:49 ಕ್ಕೆ ಮುಕ್ತಾಯವಾಗಲಿದೆ. ಉದಯ ತಿಥಿಯ ಪ್ರಕಾರ, ಗಂಗಾ ಸಪ್ತಮಿಯನ್ನು ಏಪ್ರಿಲ್ 23 ರಂದು ಆಚರಿಸಲಾಗುತ್ತದೆ.
ಮಧ್ಯಾಹ್ನ ಮುಹೂರ್ತ: ಬೆಳಿಗ್ಗೆ 11:01 ರಿಂದ ಮಧ್ಯಾಹ್ನ 1:38ರವರೆಗೆ
ಸ್ನಾನ ಮುಹೂರ್ತ: ಬೆಳಿಗ್ಗೆ 5:48 ರಿಂದ ಬೆಳಿಗ್ಗೆ 7:26 ರವರೆಗೆ
ಈ ದಿನ ಗಂಗೆ ಋಷಿ ಜಹ್ನುವಿನ ಕಿವಿಯಿಂದ ಹೊರ ಬಂದಳು ಎನ್ನುತ್ತದೆ ಕತೆ ಪುರಾಣ. ಹಾಗಾಗಿ ಈ ದಿನವನ್ನು ಜಾಹ್ನವಿ ಜಯಂತಿ ಎಂದು ಕೂಡಾ ಕರೆಯಲಾಗುತ್ತದೆ. ಪುರಾಣಗಳು ಗಂಗಾ ಸಪ್ತಮಿಯ ಬಗ್ಗೆ ವಿವಿಧ ಕಥೆಗಳು ಮತ್ತು ಮಹತ್ವಗಳನ್ನು ಸಾರಿ ಹೇಳುತ್ತವೆ.

ಗಂಗಾ ಸಪ್ತಮಿ ಕತೆ:
ಹಿಂದೂ ಧರ್ಮಗ್ರಂಥಗಳ ಪ್ರಕಾರ ಗಂಗಾ ನದಿಗೆ ಬಹಳ ಪ್ರಾಮುಖ್ಯತೆ ಇದೆ. ನಂಬಿಕೆಗಳ ಪ್ರಕಾರ, ವೈಶಾಖ ಮಾಸದ ಶುಕ್ಲ ಪಕ್ಷದ ಈ ದಿನ ಗಂಗಾ ದೇವಿಯು ಪುನರ್ಜನ್ಮ ಪಡೆದ ಶುಭ ಘಳಿಗೆ. ಗಂಗೆ ಬ್ರಹ್ಮನ ಕಮಂಡಲದಿಂದ ಹುಟ್ಟಿಕೊಂಡಳು ಎಂದು ಹೇಳಲಾಗುತ್ತದೆ. ನಂತರ ಅವಳು ತನ್ನ ಪವಿತ್ರ ನೀರಿನಿಂದ ವಿಷ್ಣುವನ್ನು ಪೂಜಿಸಿ ಸ್ವರ್ಗದಲ್ಲಿ ತನ್ನ ಸ್ಥಾನವನ್ನು ಪಡೆದಳು ಎನ್ನುತ್ತಾಳೆ.
ಸ್ಕಂದ ಪುರಾಣ ಮತ್ತು ಪದ್ಮ ಪುರಾಣದಂತಹ ಧಾರ್ಮಿಕ ಗ್ರಂಥಗಳು ಈ ದಿನದಂದು ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ಪರಿಹಾರವಾಗಿ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಹೇಳಲಾಗುತ್ತದೆ.
ಬ್ರಹ್ಮವೈವರ್ತ ಪುರಾಣ: ಇದರ ಪ್ರಕಾರ ಎಲ್ಲಾ ದೇವರುಗಳು ವಿಷ್ಣುವನ್ನು ಸ್ತುತಿಸಿದಾಗ, ಶಿವನು ಸಂಗೀತ ವಾದ್ಯಗಳೊಂದಿಗೆ ವಿಶೇಷ ರಾಗವನ್ನು ನುಡಿಸುತ್ತಾನೆ. ಶಿವನು ನುಡಿಸಿದ ಈ ರಾಗ ದೇವರುಗಳ ಕಣ್ಣುಗಳಿಂದ ಕಣ್ಣೀರು ಹರಿಯುವಂತೆ ಮಾಡುತ್ತದೆ. ದೇವತೆಗಳ ಕಣ್ಣೀರಿನಿಂದ ಇಡೀ ವೈಕುಂಠದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಈ ನೀರನ್ನೇ ಗಂಗೆ ಎಂದು ಕರೆಯಲಾಯಿತಂತೆ.
ಈ ದೈವಿಕ ನೀರು ನದಿಯ ರೂಪದಲ್ಲಿ ಭೂಮಿಗೆ ಇಳಿದಾಗ, ಅದು ಜಹ್ನು ಋಷಿಯ ಧ್ಯಾನಕ್ಕೆ ಅಡ್ಡಿ ಉಂಟು ಮಾಡುತ್ತದೆ. ಆಗ ಋಷಿ ಮುನಿಯು ಕೋಪಗೊಂಡು ಆ ನೀರನ್ನು ತನ್ನ ಕಿವಿಯ ಮೂಲಕ ಹೀರಿಕೊಳ್ಳುತ್ತಾನೆ. ನಂತರ, ದೇವತೆಗಳ ಆಜ್ಞೆಯ ಮೇರೆಗೆ, ಆ ನೀರನ್ನು ತನ್ನ ಬಲ ಕಿವಿಯಿಂದ ಹೊರಕ್ಕೆ ಬಿಡುಗಡೆ ಮಾಡುತ್ತಾನೆ. ಅಂದಿನಿಂದ, ಗಂಗೆಯನ್ನು ಜಹ್ನು ಋಷಿಯ ಮಗಳು ಎಂದೇ ಕರೆಯಲಾಗುತ್ತದೆ.
ಪೂರ್ವಜರ ಮೋಕ್ಷಕ್ಕಾಗಿ ವಿಶೇಷ ದಿನ:
ಪೂರ್ವಜರಿಗೆ ಪ್ರಾರ್ಥನೆ ಸಲ್ಲಿಸಲು ಈ ದಿನವು ಅತ್ಯಂತ ಮಹತ್ವದ್ದಾಗಿದೆ. ಎಂದು ಪರಿಗಣಿಸಲಾಗಿದೆ. ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ, ತರ್ಪಣ ಬಿಟ್ಟು ದಾನ ಧರ್ಮಗಳನ್ನು ಮಾಡಿದರೆ ನಮ್ಮ ಪೂರ್ವಜರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎನ್ನಲಾಗುತ್ತದೆ. ಮಾತ್ರವಲ್ಲ ಪಿತೃ ದೋಷದಿಂದಲೂ ಮುಕ್ತಿ ಸಿಗುತ್ತದೆ ಎನ್ನುವುದು ನಂಬಿಕೆ.
ಅಲ್ಲದೆ ಈ ದಿನ ಗಂಗಾ ದೇವಿಯನ್ನು ಪೂಜಿಸುವುದರಿಂದ ನಾವು ಮಾಡಿರುವ ಪಾಪ ಕರ್ಮಗಳು ಗಂಗೆಯಲ್ಲಿಯೇ ತೊಳೆದು ಹೋಗಿ ಪಾಪ ಮುಕ್ತರಾಗುತ್ತೇವೆ ಎಂದು ಕೂಡಾ ಹೇಳಲಾಗುತ್ತದೆ. ಈ ದಿನ ಮಾಡುವ ಪೂಜಾ ಫಲವಾಗಿ ಮನದ ಇಷ್ಟಾರ್ಥಗಳು ಈಡೇರುತ್ತವೆ ಎನ್ನುವುದು ಭಕ್ತರ ಗಾಢ ನಂಬಿಕೆ.
ಗಂಗಾ ಸಪ್ತಮಿಯಂದು ಏನು ಮಾಡಬೇಕು?:
* ಭಕ್ತರು ಬ್ರಹ್ಮ ಮುಹೂರ್ತದ ಸಮಯದಲ್ಲಿ ಎದ್ದು ಸ್ನಾನ ಮಾಡಬೇಕು. ಸಾಧ್ಯವಾದರೆ, ಗಂಗೆಯಲ್ಲಿಯೇ ಮಿಂದೇಳಬೇಕು. ಇದು ಸಾಧ್ಯವಿಲ್ಲ ಎಂದಾದರೆ ಮನೆಯಲ್ಲಿ ಸ್ನಾನದ ನೀರಿಗೆ ಗಂಗಾ ನೀರನ್ನು ಸೇರಿಸಿದರೂ ನಡೆಯುತ್ತದೆ.
* ಸ್ನಾನದ ನಂತರ, ಹೂವು, ಧೂಪ, ದೀಪಗಳು ಮತ್ತು ನೈವೇದ್ಯಗಳಿಂದ ಭಕ್ತರು ಗಂಗಾ ದೇವಿಯನ್ನು ಪೂಜಿಸಬೇಕು. ಗಂಗಾ ಸ್ತೋತ್ರ ಅಥವಾ 'ಓಂ ನಮಃ ಶಿವಾಯ' ಪಠಿಸುವುದು ಹೆಚ್ಚು ಪ್ರಯೋಜನಕಾರಿ ಎನ್ನಲಾಗಿದೆ.
* ಈ ದಿನದಂದು ಮಾಡುವ ದಾನ ಧರ್ಮಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಅಗತ್ಯವಿರುವವರಿಗೆ ಆಹಾರ, ಬಟ್ಟೆ, ನೀರು ಅಥವಾ ಹಣವನ್ನು ದಾನ ಮಾಡಿದರೆ ಆ ದಾನದ ಫಲ ಅತಿ ಶೀಘ್ರದಲ್ಲಿಯೇ ಸಿಗುತ್ತದೆ ಎಂದು ಹೇಳಲಾಗುತ್ತದೆ.
* ಈ ದಿನ ಪೂರ್ವಜರಿಗೆ ತರ್ಪಣ ಬಿಡುವುದು ಕೂಡಾ ಒಳ್ಳೆಯದು.
* ಸಂಜೆ ನೀರಿನ ಮೂಲಕ್ಕೆ ಅಥವಾ ಮನೆಯಲ್ಲಿ ದೀಪಗಳನ್ನು ಬೆಳಗಿಸುವುದರಿಂದ ಮನೆಯಲ್ಲಿ ಶಾಂತಿ ನೆಲೆಯಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)













Click it and Unblock the Notifications