ಗಣೇಶನ ಮೂರ್ತಿಯನ್ನು ನೀರಲ್ಲಿ ಮುಳುಗಿಸೋದು ಯಾಕೆ ಗೊತ್ತಾ?
Recommended Video

ಹಿಂದುಗಳ ಮಹತ್ವದ ಹಬ್ಬಗಳಲ್ಲೊಂದಾದ ಗಣೇಶ ಚತುರ್ಥಿ ಬಂದೇ ಬಿಟ್ಟಿದೆ. ಪ್ರಥಮ ಪೂಜಿತ ಗಣೇಶನ ತರಹೇವಾರಿ ಮೂರ್ತಿಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ.
ಇದೇ ಸೆಪ್ಟೆಂಬರ್ 13 ರಂದು, ಗುರುವಾರ ಗಣೇಶ ಚತುರ್ಥಿಯನ್ನು ವಿಶ್ವದಾದ್ಯಂತ ಹಿಂದುಗಳು ಅದ್ಧೂರಿಯಾಗಿ ಆಚರಿಸಲಿದ್ದು, ಅದಕ್ಕಾಗಿ ಸಕಲ ಸಿದ್ಧತೆ ನಡೆಯುತ್ತಿದೆ. ಪರಿಸರಕ್ಕೆ ಹಾನಿಯಾಗದಂಥ ಹಸಿರು ಗಣೇಶನ ಕುರಿತೂ ಅರಿವು ಮೂಡಿಸುವ ಕೆಲಸವೂ ಸಾಕಷ್ಟು ನಡೆಯುತ್ತಿದೆ.
ಅತ್ಯಂತ ಆಸ್ಥೆಯಿಂದ ಅಳೆದು ತೂಗಿ ತಂದ ಗಣೇಶನ ಮೂರ್ತಿಯನ್ನು ಹಬ್ಬದ ನಂತರ ನೀರಿನಲ್ಲಿ ಮುಳುಗಿಸುವಾಗ ಬೇಸರವಾಗೋದು ಸಹಜ. ಅಷ್ಟಕ್ಕೂ ಗಣೇಶನ ಮೂರ್ತಿಯನ್ನು ಮನೆಯಲ್ಲಿಯೇ ಇಟ್ಟುಕೊಂಡರೆ ತಪ್ಪೇನು? ಆ ವಿಗ್ರಹವನ್ನು ನೀರಿನಲ್ಲಿ ಮುಳುಗಿಸದೆ ಹೋದರೆ ಏನಾಗುತ್ತದೆ? ಇಲ್ಲಿದೆ ನೋಡಿ ಮಾಹಿತಿ.

ನೀರಿನಲ್ಲಿ ಮುಳುಗಿಸುವುದು ಸೂಕ್ತ
ಹಿಂದು ಪುರಾಣಗಳ ಪ್ರಕಾರ ದೇವಸ್ಥಾನದಲ್ಲಲ್ಲದೆ ಬೇರೆಲ್ಲೇ ಆದರೂ ಪೂಜೆ ಮುಗಿದ ತಕ್ಷಣ ಮಣ್ಣಿನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸುವ ಪರಿಪಾಠವಿದೆ. ದೇವಾಲಯದಲ್ಲಿ ವಿಗ್ರಹವನ್ನಿಟ್ಟು ಪ್ರತಿದಿನವೂ ಅದಕ್ಕೆ ಪೂಜೆ ನಡೆಯುತ್ತಿದ್ದರೆ ಸರಿ, ಇಲ್ಲವೆಂದರೆ ಪೂಜೆ ನಡೆಯದ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸುವುದು ಸೂಕ್ತ ಎನ್ನುತ್ತದೆ ಹಿಂದು ಪುರಾಣ.

ಮಣ್ಣಿನಿಂದ ಮಣ್ಣಿಗೆ
ಮಣ್ಣಿನಿಂದ ರೂಪು ತಾಳಿದ್ದು ಮತ್ತೆ ಮಣ್ಣನ್ನೇ ಸೇರಬೇಕು ಎಂಬ ನೀತಿಯೂ ಇದರಲ್ಲಿದೆ. ನಿರಾಕಾರವನ್ನು ಪೂಜಿಸಲು ಸಾಧ್ಯವಾಗದವರು ಸಾಕಾರ ದೇವರನ್ನಾಗಿ ಮೂರ್ತಿಯನ್ನು ಪೂಜಿಸುತ್ತಾರೆ. ಆದ್ದರಿಂದಲೇ ವಿವಿಧ ರೀತಿಯ ಮೂರ್ತಿಗಳನ್ನು ಮಾಡಿ ಅದರಲ್ಲಿ ದೇವರನ್ನು ಕಾಣುತ್ತೇವೆ. ಆದರೆ ಮಣ್ಣಿನಿಂದ ಮಾಡಿದ ಯಾವುದೇ ಮೂರ್ತಿಯನ್ನೇ ಆದರೂ ನೀರಿನಲ್ಲಿ ಮುಳುಗಿಸುವ ಮೂಲಕ ಅದು ಮತ್ತೆ ಮಣ್ಣು ಸೇರುವಂತೆ ಮಾಡುವಂತೆ ಪುರಾಣಗಳು ಹೇಳುತ್ತವೆ.

ಮುಳುಗಿಸದಿದ್ದರೆ....
ಅಕಸ್ಮಾತ್ ಆ ಮೂರ್ತಿಯನ್ನು ಮುಳುಗಿಸಲು ಇಷ್ಟವಿಲ್ಲದಿದ್ದರೆ ಅದನ್ನು ಮನೆಯಲ್ಲೇ ಇಟ್ಟುಕೊಂಡು ಪ್ರತಿದಿನ ಪೂಜೆ, ಮಂತ್ರಾದಿಗಳು ನಡೆಯಬೇಕು. ಪೂಜೆಯಿಲ್ಲದೆ ಹಾಗೆಯೇ ಮೂರ್ತಿಯನ್ನು ಇಟ್ಟುಕೊಳ್ಳುವುದು ಶ್ರೇಯಸ್ಕರವಲ್ಲ. ಆದ್ದರಿಂದಲೇ ನಿರ್ದಿಷ್ಟ ದಿನಗಳ ಕಾಲ ಮೂರ್ತಿಯನ್ನು ಪೂಜಿಸಿ ನಂತರ ಅದ್ಧೂರಿ ಕಾರ್ಯಕ್ರಮಗಳೊಂದಿಗೆ ಅದನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ.

ಮಾಲಿನ್ಯ ತಡೆಯತ್ತ ಹೆಜ್ಜೆ
ಆದರೆ ಇತ್ತೀಚಿನ ದಿನಗಳಲ್ಲಿ ಅದ್ಧೂರಿ ಆಚರಣೆಗಳಿಗೆ ಜೋತುಬಿದ್ದು ಮಣ್ಣಿನ ಬದಲಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸಿ ತಯಾರಿಸುತ್ತಿರುವ ಗಣೇಶನ ಮೂರ್ತಿಯಿಂದಾಗಿ ಪರಿಸರ ಮಾಲಿನ್ಯವಾಗುತ್ತಿದೆ. ಮೂರ್ತಿ ಮಣ್ಣಾಗದೆ, ನೀರಿನಲ್ಲಿ ಕರಗದೆ ಉಳಿಯುತ್ತದೆ. ಪರಿಸರ ಸ್ನೇಹಿ ಗಣೇಶನನ್ನೇ ಬಳಸುವಂತೆ ಎಲ್ಲೆಲ್ಲೂ ಅರಿವು ಮೂಡಿಸುವ ಕಾರ್ಯ ನಡೆಯುತ್ತಿದ್ದು, ಕೊಂಚ ಮಟ್ಟಿಗೆ ಸುಧಾರಣೆಯೂ ಕಂಡುಬರುತ್ತರುವುವದು ಶ್ಲಾಘನೀಯ.












Click it and Unblock the Notifications