ವರಸಿದ್ಧಿ ವಿನಾಯಕನ ವ್ರತಾಚರಣೆ ನಿಯಮ, ವಿಧಾನದ ಸಂಪೂರ್ಣ ಮಾಹಿತಿ

ಸಕಲ ವಿಘ್ನಗಳ ನಿವಾರಕನಾದ ಮಹಾ ಗಣಪತಿಯ ವಿಶೇಷ ಆರಾಧನೆಯ ದಿನ ಬಂದಿದೆ. ಭಾದ್ರಪದ ಶುದ್ಧ ಚತುರ್ಥಿ ದಿನದಂದು ಹಬ್ಬ ಇದೆ. ಅಂದು ಹಲವರು ರೂಢಿಯಂತೆ ಮಹಾಗಣಪತಿಯ ಮೂರ್ತಿಯನ್ನು ತಂದು ಮನೆಯಲ್ಲಿ ಸ್ಥಾಪಿಸಿ, ಪೂಜಿಸುತ್ತಾರೆ.

ಕೆಲವರು ಸಾರ್ವಜನಿಕವಾಗಿ ಗುಂಪಾಗಿ ಸೇರಿ ತಮ್ಮ ಇಷ್ಟದ ದೊಡ್ಡ ಜಾಗಗಳಲ್ಲಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಈ ಸಾರ್ವಜನಿಕ ಗಣಪತಿಯ ಪ್ರತಿಷ್ಠಾಪನೆ ಹಾಗೂ ಪೂಜಾ ವಿಧಾನ ಪ್ರಾರಂಭ ಆಗಿದ್ದು ಸ್ವಾತಂತ್ರ್ಯ ಹೋರಾಟಗಾರರಾದ ಬಾಲಗಂಗಾಧರ ತಿಲಕರ ಚಿಂತನೆಯ ಪ್ರತಿಫಲ ಎನ್ನುವ ವಿಚಾರ ಹಲವರಿಗೆ ತಿಳಿದಿದೆ.

In Pics : ಗೌರಿ-ಗಣೇಶನನ್ನು ಬರ ಮಾಡಿಕೊಳ್ಳೋಣ ಬನ್ನಿ

ಇಲ್ಲಿ ನಾವು ಬಹಳ ಮುಖ್ಯವಾಗಿ ತಿಳಿಯ ಬೇಕಾದ ವಿಚಾರ ಏನೆಂದರೆ, ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜಿಸುವ ವಿಧಾನ ಹಾಗೂ ಅದರ ಹಿನ್ನೆಲೆ. ಕಾರಣ ಏನೆಂದರೆ, ಸಾರ್ವಜನಿಕ ಸ್ಥಳಗಳಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವಲ್ಲಿ ಶ್ರದ್ಧೆ ಮುಖ್ಯ. ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಮಹಾ ಗಣಪತಿಗೆ ಶ್ರದ್ಧೆಯೂ ಬೇಕು. ಅದರ ಜೊತೆ ವಿಧಿ- ವಿಧಾನಗಳ ಶಾಸ್ತ್ರೋಕ್ತ ಆಚರಣೆ ಅವಶ್ಯ.

ನಾವು ಪ್ರತೀ ಮಾಸದಲ್ಲಿ ಕೃಷ್ಣ ಪಕ್ಷದ ಚತುರ್ಥಿಯಂದು ಸಂಕಷ್ಟಹರ ಗಣಪತಿಯ ಆರಾಧನೆ ಮಾಡುತ್ತೇವೆ. ಆದರೆ ಭಾದ್ರಪದ ಮಾಸದಲ್ಲಿ ಮಾತ್ರ ಶುಕ್ಲ ಪಕ್ಷದ ಚತುರ್ಥಿಯಂದು ಮಾಡುವ ವ್ರತವೇ ಈ ವರಸಿದ್ಧಿ ವಿನಾಯಕ ವ್ರತ. ಮನೆಗಳಲ್ಲಿ ಗಣಪತಿಯನ್ನು ಪೂಜಿಸುವ ಎಷ್ಟೋ ಜನರಿಗೆ ಈ ವಿಚಾರ ತಿಳಿದಿಲ್ಲ. ಗಣೇಶ ಚತುರ್ಥಿಯಂದು ಮನೆಗಳಲ್ಲಿ ಇಡುವ ಗಣಪತಿಗೆ ವರಸಿದ್ಧಿ ವಿನಾಯಕ ವೃತ ಪೂಜೆಯನ್ನು ಮಾಡಬೇಕು.

ಹೀಗಿರುವಾಗ ಆ ವ್ರತದ ಪ್ರಾಮುಖ್ಯ ಹಾಗೂ ಹಿನ್ನೆಲೆ ತಿಳಿದರೆ ಇನ್ನೂ ಶುಭಕರ ಅಲ್ಲವೇ?

ಧರ್ಮರಾಯನಿಗೆ ಸೂತ ಮಹರ್ಷಿಗಳು ತಿಳಿಸಿದ ವ್ರತ

ಧರ್ಮರಾಯನಿಗೆ ಸೂತ ಮಹರ್ಷಿಗಳು ತಿಳಿಸಿದ ವ್ರತ

ದುರ್ಯೋಧನನ ಕುತಂತ್ರಕ್ಕೆ ಬಲಿಯಾಗಿ ತನ್ನ ರಾಜ್ಯ, ಐಶ್ವರ್ಯ ಎಲ್ಲವನ್ನೂ ಕಳೆದುಕೊಂಡು ತನ್ನ ತಮ್ಮಂದಿರೊಂದಿಗೆ ಕಾಡಿನ ಪಾಲಾಗಿ ದುಃಖದಲ್ಲಿ ಇದ್ದ ಧರ್ಮರಾಯನನ್ನು ಸೂತ ಪುರಾಣಿಕ ಮಹರ್ಷಿಗಳು ಸಮಾಧಾನ ಮಾಡಿದರು. ಆಗ ಧರ್ಮರಾಯನು ಸೂತರ ಬಳಿ ತನ್ನ ಕಷ್ಟಗಳೆಲ್ಲಾಲ್ಲ ಪರಿಹಾರವಾಗಿ ರಾಜ್ಯ ತನಗೆ ಮರಳಿ ಸಿಗಲು ಉತ್ತಮ ವ್ರತ ಪೂಜೆ ಒಂದನ್ನು ತಿಳಿಸಲು ಪ್ರಾರ್ಥಿಸಿದ.

ಆಗ ಪೂಜ್ಯರು ಧರ್ಮರಾಜನಿಗೆ ಸಾಕ್ಷಾತ್ ಪರಶಿವನೇ ಕುಮಾರಸ್ವಾಮಿಗೆ ತಿಳಿಸಿದ ವರಸಿದ್ಧಿ ವಿನಾಯಕ ವ್ರತವನ್ನು ಮಾಡಲು ತಿಳಿಸಿದರು. ಅಷ್ಟೇ ಅಲ್ಲ ನಳ ಮಹಾರಾಜನಿಗೆ ದಮಯಂತಿ ಸಿಕ್ಕಿದ್ದು ಹಾಗೂ ಕೃಷ್ಣ ಪರಮಾತ್ಮನಿಗೆ ಶಮಂತಕ ಮಣಿ ಸಹಿತ ಜಾಂಬವತಿ ಲಭಿಸಿದ್ದು ಇದೇ ವ್ರತವನ್ನು ಆಚರಣೆ ಮಾಡಿದ್ದರಿಂದ. ಶ್ರೀರಾಮ, ಭಗೀರಥ ಕೂಡ ಈ ವ್ರತದ ಆಚರಣೆ ಮಾಡಿದ್ದಾರೆ.

ಎಲ್ಲರೂ ಆಚರಿಸುವ ವ್ರತ

ಎಲ್ಲರೂ ಆಚರಿಸುವ ವ್ರತ

ಈ ವ್ರತವನ್ನು ಬ್ರಾಹ್ಮಣ, ವೈಶ್ಯ, ಕ್ಷತ್ರಿಯ, ಶೂದ್ರ ಹೀಗೆ ಎಲ್ಲ ವರ್ಣದವರೂ ಮಾಡಬಹುದು. ಯಾವುದೇ ಜಾತಿ- ಧರ್ಮ- ಮತ- ಭೇದಗಳಿಲ್ಲದೆ ಎಲ್ಲರೂ ಆಚರಣೆ ಮಾಡಬಹುದು. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ತನಕ ಯಾರು ಬೇಕಾದರೂ ಈ ವ್ರತ ಮಾಡಬಹುದು.

ಇನ್ನು ಈ ವ್ರತಾಚರಣೆಯಿಂದ ಧನಾಕಾಂಕ್ಷಿಗೆ ಧನ, ವಿದ್ಯೆ ಬೇಕಾದವರಿಗೆ ಉತ್ತಮ ವಿದ್ಯೆ, ಆರೋಗ್ಯ ಅವಶ್ಯಕತೆ ಇರುವವರಿಗೆ ಉತ್ತಮ ಆರೋಗ್ಯ... ಹೀಗೆ ಭಕ್ತರ ನಾನಾ ವಿಧ ಬೇಡಿಕೆಗಳನ್ನು ಈಡೇರಿಸುವ ಅತ್ಯುತ್ತಮ ವ್ರತ ಇದಾಗಿದೆ.

ಯಾವ ಮೂರ್ತಿ ಶ್ರೇಷ್ಠ?

ಯಾವ ಮೂರ್ತಿ ಶ್ರೇಷ್ಠ?

ವರಸಿದ್ಧಿ ವಿನಾಯಕ ವ್ರತ ಆಚರಣೆ ಮಾಡುವಾಗ ಗಣಪತಿ ಮೂರ್ತಿ ಯಾವ ಪದಾರ್ಥದಿಂದ ತಯಾರು ಮಾಡಲಾಗಿದೆ ಎನ್ನುವುದು ಬಹಳ ಪ್ರಧಾನ! ಇಲ್ಲಿ ಪರಿಸರ ರಕ್ಷಣೆಯ ವಿಚಾರ ಇದ್ದರೂ ಅದರ ಹೊರತಾಗಿಯೂ ಗಣೇಶನ ಮೂರ್ತಿ ತಯಾರು ಮಾಡಲು ಬಳಸುವ ದ್ರವ್ಯ ಶುದ್ಧವಾಗಿರಬೇಕು, ಶ್ರೇಷ್ಠವಾದದ್ದೂ ಆಗಿರಬೇಕು.

ಮನೆಯಲ್ಲಿ ಮಾಡಿದ ಮೂರ್ತಿ ಶ್ರೇಷ್ಠ

ಮನೆಯಲ್ಲಿ ಮಾಡಿದ ಮೂರ್ತಿ ಶ್ರೇಷ್ಠ

ಅಂದಹಾಗೆ ಗಣಪತಿ ಮೂರ್ತಿಯನ್ನು ಮನೆಯಲ್ಲೇ ತಯಾರು ಮಾಡುವುದು ಶ್ರೇಷ್ಠ. ಶುಚಿಯಾಗಿ, ಆ ನಂತರ ಜೇಡಿ ಮಣ್ಣಿನಿಂದ ಮಾಡಿದರೆ ಒಳ್ಳೆಯದು. ಆದರೆ ಹಾಗೆ ಮಾಡಲು ಸಾಧ್ಯವಾಗದ ಪಕ್ಷದಲ್ಲಿ ಅಂಗಡಿಯಿಂದ ಖರೀದಿಸಿ ತರುವುದು ಅಂತಾದರೆ, ಶುಚಿಯಾಗಿ, ಆ ನಂತರ ಕಾಲಿಗೆ ಚಪ್ಪಲಿ, ಶೂ ಅಂತ ಹಾಕಿಕೊಳ್ಳದೆ ಅಂಗಡಿಗೆ ಹೋಗಬೇಕು.

ಬಟ್ಟಲು ಅಥವಾ ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿಕೊಂಡು, ಒಂದು ಬುಟ್ಟಿಯಲ್ಲಿ ಇಟ್ಟುಕೊಂಡು ಮನೆಗೆ ತರಬೇಕು. ಮೂರ್ತಿ ಭಗ್ನವಾಗದಂತೆ ಎಚ್ಚರ ವಹಿಸಿ.

ಲೋಹದ ಗಣಪತಿ ಶ್ರೇಷ್ಠ, ಗೋಮಯದ ಮೂರ್ತಿ ಅತೀ ಶ್ರೇಷ್ಠ

ಲೋಹದ ಗಣಪತಿ ಶ್ರೇಷ್ಠ, ಗೋಮಯದ ಮೂರ್ತಿ ಅತೀ ಶ್ರೇಷ್ಠ

ಬಂಗಾರ, ಬೆಳ್ಳಿ, ತಾಮ್ರ, ಹಿತ್ತಾಳೆ ಹಾಗೂ ಕಂಚು ಈ ಪಂಚ ಲೋಹಗಳು ವಿಗ್ರಹ ಮಾಡಲು ಶ್ರೇಷ್ಠ. ಆದರೆ ಪೂಜೆಯ ನಂತರ ವಿಗ್ರಹವನ್ನು ನೀರಿನಲ್ಲಿ ವಿಸರ್ಜನೆ ಮಾಡುವ ಪದ್ಧತಿ ಇರುವುದರಿಂದ ಶುದ್ದವಾದ ಮಣ್ಣು ಅಥವಾ ಗೋಮಯ (ಹಸುವಿನ ಸಗಣಿ) ದಿಂದ ಮಾಡಿದ ವಿಗ್ರಹ ಪೂಜಿಸಲು ಅತೀ ಶ್ರೇಷ್ಠ.

ಅಷ್ಟೇ ಅಲ್ಲ ಆ ಗಣಪತಿ ವಿಗ್ರಹಕ್ಕೆ ಬಳಿಯುವ ಬಣ್ಣ ಸಹ ನೈಸರ್ಗಿಕ ಆಗಿರಬೇಕು ಎನ್ನುವುದು ನೆನಪಿರಲಿ. ಪರಮೇಶ್ವರನ ಪರಮ ಉತ್ತಮ ಸೃಷ್ಟಿ ಪರಿಸರ. ಅದನ್ನೇ ನಾಶ ಮಾಡುವ ಪರಿಕರಗಳಿಂದ ಪೂಜಿಸಿದರೆ ಪುಣ್ಯ ಲಭ್ಯ ಆಗದು.

ಬಿಳಿಯ ಬಣ್ಣದ ಗಂಧ ಬಳಸಿ

ಬಿಳಿಯ ಬಣ್ಣದ ಗಂಧ ಬಳಸಿ

ಸಾಮಾನ್ಯವಾಗಿ ಗಣಪತಿ ಪೂಜೆಯಲ್ಲಿ ಕೆಂಪು ಗಂಧ ಅಂದರೆ ರಕ್ತ ಚಂದನ ಬಳಸುತ್ತಾರೆ. ಆದರೆ ಈ ವರ ಸಿದ್ಧಿ ವಿನಾಯಕ ವ್ರತದಲ್ಲಿ ಶ್ವೇತ ಗಂಧಾಕ್ಷತ ಪುಷ್ಪೈಃ ಎಂದು ತಿಳಿಸಿದ್ದಾರೆ. ಅಂದರೆ ಬಿಳಿಯ ಬಣ್ಣದ ಗಂಧ ಬಳಸ ಬೇಕು ಎಂದು ಅರ್ಥ.

ಗರಿಕೆಗಳು ಮಹಾಗಣಪತಿಗೆ ಬಹಳ ಪ್ರೀತಿಯ ವಸ್ತು ಆದುದರಿಂದ ಕನಿಷ್ಠ ಮೂರು ಅಥವಾ ಇಪ್ಪತ್ತೆಂಟು ಅಥವಾ ನೂರೆಂಟು ಗರಿಕೆಗಳನ್ನು ಮಹಾ ಗಣಪತಿಗೆ ಈ ವ್ರತದಲ್ಲಿ ಸಮರ್ಪಿಸುವುದು ಶ್ರೇಷ್ಠ.

ಆದರೆ, ಆ ಗರಿಕೆಗಳು ಮಾರುಕಟ್ಟೆಯಲ್ಲಿ ದುಡ್ಡು ಕೊಟ್ಟು ಖರೀದಿ ಮಾಡಿದ್ದು ಅಲ್ಲ. ಸ್ವತಃ ನಿಮ್ಮ ಕೈಯ್ಯಾರೆ ಕಿತ್ತ ಗರಿಕೆಗಳು ಆಗಿರಬೇಕು ಹಾಗೂ ಗರಿಕೆಗಳನ್ನು ಶುದ್ಧವಾದ ಜಾಗದಿಂದ ಕಿತ್ತು, ಅದನ್ನು ನೀರಿನಲ್ಲಿ ತೊಳೆದು ಗಣಪತಿಗೆ ಸಮರ್ಪಿಸಬೇಕು. ಗಲೀಜು ಜಾಗಗಳಿಂದ ಕಿತ್ತ ಗರಿಕೆ ಪೂಜೆಗೆ ನಿಷಿದ್ಧ.

ಮೋದಕ ತಯಾರಿ ಹೇಗೆ

ಮೋದಕ ತಯಾರಿ ಹೇಗೆ

ಇನ್ನು ಮೋದಕಗಳನ್ನು ತಯಾರಿಸುವಾಗ ಸಾಮಾನ್ಯವಾಗಿ ಮೈದಾ ಹಿಟ್ಟು ಬಳಸಿ ಎಣ್ಣೆಯಲ್ಲಿ ಕರಿಯುತ್ತಾರೆ. ಆದರೆ ಅದರ ಬದಲು ಗೋಧಿ ಹಿಟ್ಟಿನಲ್ಲಿ ಕಲಸಿ, ತುಪ್ಪದಲ್ಲಿ ಕರಿಯುವುದು ಶ್ರೇಷ್ಠ. ಅಷ್ಟೇ ಅಲ್ಲ ಆ ಮೋದಕಗಳ ಒಳಗೆ ಸಕ್ಕರೆ ಬದಲು ಬೆಲ್ಲ ಬಳಸುವುದು ಉತ್ತಮ.

ಬಾಲ ಗಣಪತಿ ಹವನ ಶ್ರೇಷ್ಠ

ಬಾಲ ಗಣಪತಿ ಹವನ ಶ್ರೇಷ್ಠ

ಬಾಲ ಗಣಪತಿ ಹವನ ಎನ್ನುವ ವಿಶೇಷವಾದ ಕೇರಳ ಪದ್ಧತಿಯ ಹವನ ಒಂದು ಇದೆ. ಅದನ್ನು ಈ ಭಾದ್ರಪದ ಮಾಸದಲ್ಲಿ ಯಾವ ದಿನ ಬೇಕಾದರೂ ಆಗಲಿ ಆಚರಣೆ ಮಾಡಿದಲ್ಲಿ ಅತ್ಯಂತ ಶೀಘ್ರ ಹಾಗೂ ಬಯಸಿದ ಫಲಗಳನ್ನು ಪಡೆಯಬಹುದು. ಅದರಲ್ಲಿಯೂ ಅವಿವಾಹಿತರು ಶೀಘ್ರ ಹಾಗೂ ಉತ್ತಮ ವಿವಾಹ ಸಿದ್ಧಿಗಾಗಿ, ಇನ್ನು ಸಂತಾನ ಅಪೇಕ್ಷಿತರು ಉತ್ತಮ ಸಂತಾನ ಪ್ರಾಪ್ತಿಗಾಗಿ ಈ ಬಾಲಗಣಪತಿ ಹವನವನ್ನು ಆಚರಿಸುವುದು ಉತ್ತಮ.

ಸೂರ್ಯೋದಯಕ್ಕೆ ಮೊದಲೇ ಹೋಮ ಮುಗಿದಿರಬೇಕು

ಸೂರ್ಯೋದಯಕ್ಕೆ ಮೊದಲೇ ಹೋಮ ಮುಗಿದಿರಬೇಕು

ಆದರೆ, ಈ ಬಾಲ ಗಣಪತಿ ಹವನ ಮಾಡಿಸಲು ಬಹಳ ಶ್ರದ್ಧೆ ಹಾಗೂ ಆ ಹವನ ಪದ್ಧತಿಗಳನ್ನು ಸರಿಯಾಗಿ ತಿಳಿದಿರಬೇಕು. ಈ ಹವನವನ್ನು ಸೂರ್ಯೋದಯಕ್ಕೂ ಮುಂಚೆಯೇ ಮುಗಿಸಬೇಕು. ಅಂದರೆ ಅದರ ಪ್ರಾರಂಭ ಎಷ್ಟು ಮೊದಲು ಮಾಡಬೇಕು ಎನ್ನುವುದನ್ನು ಊಹಿಸಿಕೊಳ್ಳಬಹುದು. ಇನ್ನು ಈ ಹವನದ ಮೂಲ ಮಂತ್ರ ಉಪದೇಶ ಇದ್ದು, ಅದರ ನಿತ್ಯ ಅನುಷ್ಠಾನ ಮಾಡುವ ವೈದಿಕರ ಮೂಲಕ ಜಪ ಮಾಡಿಸಿ, ಆ ನಂತರ ಹವನ ಮಾಡಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+