Get Updates
Get notified of breaking news, exclusive insights, and must-see stories!

ಸುಜ್ಞಾನದ ಪ್ರತೀಕ ಬೆಳಕಿನ ಹಬ್ಬ ದೀಪಾವಳಿ ಆಚರಣೆಯ ಮಹತ್ವ

ದೀಪಾವಳಿಯು ಭಾರತದ ವಿಶೇಷ ಹಬ್ಬವಾಗಿದ್ದು, ಸಾಮಾನ್ಯವಾಗಿ ಭಾರತಾದ್ಯಂತ ಈ ಹಬ್ಬವನ್ನು ಬಹಳ ಹರ್ಷೋಲ್ಲಾಸದಿಂದ ಆಚರಿಸುತ್ತಾರೆ. ಈ ದಿನದಂದು ಚಿಕ್ಕವರು ಮತ್ತು ದೊಡ್ಡವರು, ಬಡವರು ಮತ್ತು ಶ್ರೀಮಂತರು, ಗ್ರಾಮೀಣರು ಮತ್ತು ನಗರವಾಸಿಗಳ ಮುಖದಲ್ಲಿ ಖುಷಿ ಕಂಡು ಬರುತ್ತದೆ. ರಾತ್ರಿಯಂತೂ ದೀಪಗಳ ಅಲಂಕಾರವು ನೋಡುಗರ ಮನಸ್ಸನ್ನು ಸೂರೆಗೊಳ್ಳುತ್ತದೆ.

ಈ ಹಬ್ಬದ ಪ್ರಾರಂಭ ಯಾವಾಗ ಆಯಿತು? ಹೇಗೆ ಆಯಿತು? ಇದರ ಬಗ್ಗೆ ಅನೇಕ ವದಂತಿಗಳು ಅಥವಾ ಪೌರಾಣಿಕ ಕಥೆಗಳು ಪ್ರಚಲಿತವಾಗಿವೆ. ಒಂದು ಕಥೆಯ ಪ್ರಕಾರ - ಪ್ರಾಚೀನ ಕಾಲದಲ್ಲಿ ನರಕಾಸುರನೆಂಬ ರಾಕ್ಷಸನು ಇಡೀ ಸೃಷ್ಟಿಯಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿಕೊಂಡಿದ್ದನು. ಭಗವಂತನು ನರಕಾಸುರನನ್ನು ಕೊಂದು ಸೃಷ್ಟಿಯನ್ನು ಅವನ ಭಯದಿಂದ ಮುಕ್ತಗೊಳಿಸಿ ದೇವತೆಗಳನ್ನು ನರಕಾಸುರನ ಬಂಧನದಿಂದ ಬಿಡಿಸಿದನು.

ಆದ್ದರಿಂದ ದೀಪಾವಳಿಯ ಒಂದು ದಿನ ಮುಂಚಿನ ರಾತ್ರಿಯನ್ನು 'ನರಕ-ಚತುದರ್ಶಿ' ಎಂದು ಕರೆಯಲಾಗುತ್ತದೆ. ಇದನ್ನು ಚಿಕ್ಕ ದೀಪಾವಳಿ ಎಂದೂ ಸಹ ಕರೆಯುತ್ತಾರೆ. ಇದರ ಮುಂದಿನ ದಿನವನ್ನು ಅಂದರೆ 'ಕಾರ್ತಿಕ ಅಮಾವಾಸ್ಯೆ'ಯನ್ನು ದೊಡ್ಡ ದೀಪಾವಳಿ ಮಹೋತ್ಸವವಾಗಿ ಆಚರಿಸಲಾಗುತ್ತದೆ.

ಬಲಿ ಚಕ್ರವರ್ತಿಯ ಕತೆ

ಬಲಿ ಚಕ್ರವರ್ತಿಯ ಕತೆ

ದೈತ್ಯ ರಾಜನಾದ ಬಲಿಚಕ್ರವರ್ತಿಯು ಇಡೀ ಭೂಮಂಡಲದಲ್ಲಿ ತನ್ನ ರಾಜ್ಯವನ್ನು ಆಳುತ್ತಿದ್ದನು. ಆಗ ಭೂಮಿಯಲ್ಲಿ ರಾಕ್ಷಸೀತನವು ಹರಡುತ್ತಿತ್ತು. ಧರ್ಮನಿಷ್ಠೆಯು ಸಮಾಪ್ತಿಯಾಗುತ್ತಿತ್ತು. ಬಲಿಚಕ್ರವರ್ತಿಯು ಶ್ರೀಲಕ್ಷೀ ಸಮೇತವಾಗಿ ಎಲ್ಲಾ ದೇವಿ-ದೇವತೆಗಳನ್ನು ತನ್ನ ಕಾರಾಗೃಹದಲ್ಲಿ ಬಂಧಿಸಿದ್ದನು. ಆಗ ಭಗವಂತನು ಬಲಿಚಕ್ರವರ್ತಿಯ ಅಸುರಿ ಶಕ್ತಿಯ ಮೇಲೆ ವಿಜಯವನ್ನು ಸಾಧಿಸಿ ಶ್ರೀಲಕ್ಷೀ ಸಮೇತ ಎಲ್ಲಾ ದೇವಿ-ದೇವತೆಗಳನ್ನು ಕಾರಾಗೃಹದಿಂದ ಮುಕ್ತಗೊಳಿಸಿದ್ದನು.

ಇದರ ಸವಿನೆನಪಿಗಾಗಿ ಅಂದಿನಿಂದ ಪ್ರತಿವರ್ಷ ಈ ರಾತ್ರಿಯಂದು ದೀಪೋತ್ಸವವನ್ನು ಆಚರಿಸಲಾಗುತ್ತದೆ. ಮನೆಗಳ ಬಾಗಿಲುಗಳನ್ನು ತೆರೆದು ಶ್ರೀಲಕ್ಷ್ಮಿಯನ್ನು ಆಹ್ವಾನಿಸಲಾಗುತ್ತದೆ.

ಅರ್ಥ ಬೇರೆಯೇ ಇದ್ದೀತು!

ಅರ್ಥ ಬೇರೆಯೇ ಇದ್ದೀತು!

ಈ ಮೇಲಿನ ಎರಡೂ ಕಥೆಗಳ ಅರ್ಥವು ಬೇರೆಯೇ ಇರಬೇಕು. ಏಕೆಂದರೆ ಒಬ್ಬ ವ್ಯಕ್ತಿಯಿಂದ ಶ್ರೀಲಕ್ಷ್ಮೀ ಸಮೇತ ಎಲ್ಲಾ ದೇವಿ-ದೇವತೆಗಳನ್ನು ಅಥವಾ ಇಡೀ ಸೃಷ್ಟಿಯನ್ನು ಬಂಧಿಸುವುದು ಅಸಾಧ್ಯದ ಮಾತು. ಆದ್ದರಿಂದ ಈ ಎರಡೂ ಕಥೆಗಳಲ್ಲಿ ಐತಿಹಾಸಿಕ ವೃತ್ತಾಂತವನ್ನು ಲಾಕ್ಷಣಿಕ ಭಾಷೆಯಲ್ಲಿ ಒಂದು ರೂಪಕವನ್ನಾಗಿ ವರ್ಣಿಸಲಾಗಿದೆ. ಜ್ಞಾನ-ದೃಷ್ಟಿಯಂತೆ ನರಕಾಸುರನು ಮಾಯೆ ಅಥವಾ ಮನೋವಿಕಾರಗಳ ಸಮಾನಾರ್ಥವಾಗಿದೆ. ಕಾಮ, ಕ್ರೋಧ, ಲೋಭ, ಮೋಹ ಮತ್ತು ಅಹಂಕಾರಗಳನ್ನು ಭಗವದ್ಗೀತೆಯಲ್ಲಿ ನರಕದ ಹೆಬ್ಬಾಗಿಲುಗಳೆಂದು ವರ್ಣಿಸಲಾಗಿದೆ. ಇವುಗಳನ್ನು ಅಸುರರ ಲಕ್ಷಣಗಳೆಂದು ಹೇಳಲಾಗಿದೆ.

ಈ ವಿಕಾರಿ ಗುಣಗಳ ಮೇಲೆ ಅಥವಾ ಅಸುರಿ ಲಕ್ಷಣಗಳ ಮೇಲೆ ವಿಜಯ ಪಡೆಯುವುದು ಬಹಳ ಕಷ್ಟಕರವಾಗಿದೆ. ಆದ್ದರಿಂದ ಇವುಗಳ ಹೆಸರೇ ರೂಪಕವಾಗಿ 'ಬಲಿ' ಎಂದು ಬಳಸಲಾಗಿದೆ. ಭಗವದ್ಗೀತೆಯಲ್ಲಿ ಮಾಯೆಯನ್ನು 'ಶತ್ರು' ಅಥವಾ 'ಬಲಿ' ಎಂದು ಕರೆಯಲಾಗಿದೆ. ಕಲಿಯುಗದ ಅಂತ್ಯದ ಸಮಯದಲ್ಲಿ ಪ್ರತಿಯೊಬ್ಬ ನರ-ನಾರಿಯರ ಮನಸ್ಸಿನಲ್ಲಿ ಈ ವಿಕಾರಿ ಗುಣಗಳ ರಾಜ್ಯಭಾರವಿದೆ. ಹಾಗಾಗಿ ಇಡೀ ಸೃಷ್ಟಿಯು ನರಕವಾಗಿ ಬಿಟ್ಟಿದೆ. ನರಕಾಸುರ ಅಥವಾ ಬಲಿಚಕ್ರವರ್ತಿಯ ಅಧಿಪತ್ಯವಿತ್ತೆಂದು ಹೇಳಲಾಗುತ್ತದೆ.

ಆಚರಣೆಯ ಹಿನ್ನೆಲೆ

ಆಚರಣೆಯ ಹಿನ್ನೆಲೆ

ಸತ್ಯಯುಗದಲ್ಲಿ ಭಾರತಭೂಮಿಯು ಸ್ವರ್ಗಭೂಮಿಯಾಗಿತ್ತು. ಇಲ್ಲಿಯ ನಿವಾಸಿಗಳು ದೇವಿ-ದೇವತೆಗಳಾಗಿದ್ದರು. ಆದರೆ ಜನ್ಮ-ಮರಣಗಳ ಚಕ್ರದಲ್ಲಿ ಬರುತ್ತಾ ಅವರು ಕಲಿಯುಗದ ಕೊನೆಯಲ್ಲಿ ಅವರು ಸೃಷ್ಟಿಯನ್ನು ನರಕವನ್ನಾಗಿ ಮಾಡುವಂತಹ ಮತ್ತು ನರ-ನಾರಿಯರನ್ನು ಅಸುರರನ್ನಾಗಿ ಮಾಡುವಂತಹ ಈ 'ಬಲಿ' (ವಿಕಾರಿಗುಣಗಳು)ಯ ಅಧೀನರಾಗಿದ್ದರು. ಆಗ ಕಲಿಯುಗದ ಅಂತ್ಯದಲ್ಲಿ ಪರಮಪಿತ ಪರಮಾತ್ಮನು ಈಶ್ವರೀಯ ಜ್ಞಾನವನ್ನು ನೀಡಿ ಈ ವಿಕಾರಿಗುಣಗಳೆಂಬ ನರಕಾಸುರನನ್ನು ಕೊಂದಿದ್ದನು. ಸತ್ಯಯುಗದಲ್ಲಿ ದೇವಿ-ದೇವತೆಗಳಾಗಿದ್ದ ಮಾನವಾತ್ಮರನ್ನು ಈ ನರಕಾಸುರನ ಬಂಧನದಿಂದ ಮುಕ್ತರನ್ನಾಗಿ ಮಾಡಿದ್ದನು.

ಈ ಅತ್ಯಂತ ಮಹತ್ವಪೂರ್ಣವಾದ ಕಥೆಯ ಸ್ಮಾರಕವಾಗಿ ಇಂದಿಗೂ ಪ್ರತಿವರ್ಷ ಕಾರ್ತಿಕ ಕೃಷ್ಣ ಪಕ್ಷದ ಚತುದರ್ಶಿಯನ್ನು 'ಚಿಕ್ಕ ದೀಪಾವಳಿ'ಯನ್ನಾಗಿ ಆಚರಿಸಲಾಗುತ್ತದೆ. ಇದರ ನಂತರ ಶ್ರೀ ಲಕ್ಷೀ ಮತ್ತು ಶ್ರೀನಾರಾಯಣರ ದೈವಿ ರಾಜ್ಯ ಪ್ರಾರಂಭವಾಗುವ ಅಥವಾ ಸತ್ಯಯುಗ ಪ್ರಾರಂಭವಾಗುವ ಖುಷಿಯಲ್ಲಿ ಮುಂದಿನ ದಿನ ಅಮಾವಾಸ್ಯೆಯ ರಾತ್ರಿಯಂದು 'ದೊಡ್ಡ ದೀಪಾವಳಿ'ಯನ್ನು ಆಚರಿಸಲಾಗುತ್ತದೆ.

ಅಸುರೀತನದ ವಿರುದ್ಧ ದೇವತ್ವದ ವಿಜಯ

ಅಸುರೀತನದ ವಿರುದ್ಧ ದೇವತ್ವದ ವಿಜಯ

ಅನೇಕ ಜನರು ಹೇಳುವಂತೆ ದೀಪಾವಳಿಯ ಹಬ್ಬವು ರಾವಣನ ಮೇಲೆ ರಾಮನ ವಿಜಯದ ನಂತರ ರಾಮರಾಜ್ಯ ಪ್ರಾರಂಭವಾಗುವ ಸ್ಮರಣೋತ್ಸವವಾಗಿದೆ. ಇದು ಸಹ ಸರಿಯಾಗಿದೆ. ಏಕೆಂದರೆ ರಾವಣನು 10 ಮನೋವಿಕಾರಿ ಗುಣಗಳ ಸಂಕೇತವಾಗಿದ್ದು, ಅಸುರಿ ಶಕ್ತಿಯ ಪ್ರತೀಕನಾಗಿದ್ದಾನೆ. ಅಸುರಿ ಶಕ್ತಿಯ ಮೇಲೆ ಈಶ್ವರನ ಶಕ್ತಿಯ ವಿಜಯದ ಪ್ರತೀಕವೂ ಸಹ ದೀಪಾವಳಿ ಆಗಿದೆ.

ಜ್ಞಾನದೀಪ ಬೆಳಗಿಸಿಕೊಳ್ಳದೇ ಆಚರಿಸುವಂತಹ ದೀಪಾವಳಿ ನಿರರ್ಥಕ

ಜ್ಞಾನದೀಪ ಬೆಳಗಿಸಿಕೊಳ್ಳದೇ ಆಚರಿಸುವಂತಹ ದೀಪಾವಳಿ ನಿರರ್ಥಕ

ಇಂದು ಜನರು ಬಹಳ ವಿಜೃಂಭಣೆಯಿಂದ ದೀಪಾವಳಿಯನ್ನು ಆಚರಿಸುತ್ತಾರೆ. ಈ ಹಬ್ಬವು ಅಸುರಿ ಗುಣಗಳ ಮೇಲೆ ದೇವತ್ವದ ವಿಜಯದ ಪ್ರತೀಕವಾಗಿದೆ. ದೀಪಾವಳಿಯಂದು ಎಲ್ಲರೂ ತಮ್ಮ-ತಮ್ಮ ಮನೆಗಳನ್ನು, ಗಲ್ಲಿಗಳನ್ನು, ಅಂಗಡಿಗಳನ್ನು ದೀಪಗಳಿಂದ ಬೆಳಗಿಸುತ್ತಾರೆ. ಇದರ ಜೊತೆ-ಜೊತೆಗೆ ಮನಸ್ಸಿನ ಅಜ್ಞಾನದ ಕತ್ತಲನ್ನು ದೂರಮಾಡುವಂತಹ ಜ್ಞಾನದೀಪವನ್ನು ಬೆಳಗಿಸಿಕೊಳ್ಳುವುದು ಸಹ ಅವಶ್ಯಕವಾಗಿದೆ.

ಇಲ್ಲಿ ಅಮಾವಾಸ್ಯೆಯು ಅಜ್ಞಾನ ಅಂಧಕಾರದ ಪ್ರತೀಕವಾಗಿದೆ. ಆಧ್ಯಾತ್ಮಿಕ ಭಾಷೆಯಲ್ಲಿ ಕತ್ತಲನ್ನು ಅಜ್ಞಾನವೆಂದು ಕರೆಯುತ್ತಾರೆ. ಹಾಗಾಗಿ ಭಕ್ತರು ಭಗವಂತನಲ್ಲಿ ಈ ರೀತಿ ಮೊರೆ ಇಡುತ್ತಾರೆ - 'ದೇವರೇ, ನಮ್ಮನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದುಕೊಂಡು ಹೋಗು, ಕತ್ತಲಿನಿಂದ ಬೆಳಕಿನಡೆಗೆ ಕರೆದುಕೊಂಡು ಹೋಗು, ಮೃತ್ಯುವಿನಿಂದ ಅಮರತ್ವದೆಡೆಗೆ ಕರೆದುಕೊಂಡು ಹೋಗು.' ಯಾರು ಈ ದೀಪಾವಳಿಯಂದು ದೀಪದಾನ ಮಾಡುತ್ತಾರೆಯೋ ಅವರು ಅಕಾಲ-ಮೃತ್ಯುವಿನಿಂದ ದೂರವಾಗುತ್ತಾರೆ ಎಂಬ ಪ್ರತೀತಿಯೂ ಸಹ ಇದೆ. ದೀಪದಾನ ಮಾಡುವುದೆಂದರೆ 'ಜ್ಞಾನ-ದಾನ ಮಾಡುವುದು.

ದೀಪಾವಳಿಯೇ ಮಹಾರಾತ್ರಿಯಾಗಿದೆ

ದೀಪಾವಳಿಯೇ ಮಹಾರಾತ್ರಿಯಾಗಿದೆ

ಇಂದಿಗೂ ಸಹ ಸಾಧಕರು ದೀಪೋತ್ಸವದ ರಾತ್ರಿಯನ್ನು ಸಾಧನೆಯ ದೃಷ್ಟಿಕೋನದಿಂದ 'ಮಹಾರಾತ್ರಿ'ಯೆಂದು ಕಾಣುತ್ತಾರೆ. ಅವರ ಪ್ರಕಾರ ಈ ರಾತ್ರಿಯು ಸಾಧಕರಿಗೆ ಇನ್ನೂ ಹೆಚ್ಚಿನ ಶಕ್ತಿ ಮತ್ತು ಯುಕ್ತಿಯನ್ನು ತಂದುಕೊಡುತ್ತದೆ. ಆದ್ದರಿಂದ ಸಾಧಕರು ಈ ರಾತ್ರಿಯಂದು ಹೆಚ್ಚಿನ ಸಾಧನೆಯನ್ನು ಮಾಡುತ್ತಾರೆ. ಈ ಮಾನ್ಯತೆಯು ಕಲಿಯುಗದ ಘೋರ ಅಜ್ಞಾನರಾತ್ರಿಯ ಪ್ರತೀಕವಾಗಿದೆ. ಕಲಿಯುಗದ ಈ ತಮೋಪ್ರಧಾನ ಅಂತಿಮ ಚರಣದಲ್ಲಿ ಯಾರು ಪರಮಾತ್ಮನ ಮಾರ್ಗದಲ್ಲಿ ಅವನು ಹೇಳಿದಂತೆ ನಡೆಯುತ್ತಾರೆಯೋ ಅವರಿಗೆ ಸರ್ವಸಿದ್ಧಿಗಳು ದೊರೆಯುತ್ತವೆ.

ಭಕ್ತರ ಮಾನ್ಯತೆಯಂತೆ 'ಈ ರಾತ್ರಿಯಂದು ಮಲಗಿರುವವರು ಶ್ರೀಲಕ್ಷಿಯ ಆಶೀರ್ವಾದದಿಂದ ವಂಚಿತರಾಗಿ ಬಿಡುತ್ತಾರೆ.' ವಾಸ್ತವಿಕವಾಗಿ ಇದು ಆಧ್ಯಾತ್ಮಿಕ ಜಾಗೃತಿಯಾಗಿದೆ. ಕಲಿಯುಗದ ಅಂತಿಮ ಚರಣದಲ್ಲಿ ವ್ಯಕ್ತಿಯು ಅಜ್ಞಾನನಿದ್ರೆಯಲ್ಲಿ ಮಲಗಿದರೆ ಬರುವಂತಹ ಸತ್ಯಯುಗದ ಸ್ವರಾಜ್ಯದ ಸೌಭಾಗ್ಯವನ್ನು ಕಳೆದುಕೊಳ್ಳುವನು. ಆದ್ದರಿಂದ ದೀಪಾವಳಿಯ ಈ ರಾತ್ರಿಯಂದು ದೀಪದಾನ ಮಾಡುತ್ತಾರೆ.

ಸತ್ಯಯುಗದ ಸ್ಮಾರಕ

ಸತ್ಯಯುಗದ ಸ್ಮಾರಕ

ದೀಪಾವಳಿಯಂದು ಜನರು ಸಾಮಾನ್ಯವಾಗಿ ಹೊಸ ಬಟ್ಟೆಗಳನ್ನು ಧರಿಸಿಕೊಳ್ಳುತ್ತಾರೆ, ಹೊಸ ಪಾತ್ರೆಗಳನ್ನು ಖರೀದಿಸುತ್ತಾರೆ ಮತ್ತು ಹಳೆಯ ಲೆಕ್ಕಪತ್ರಗಳನ್ನು ಸಮಾಪ್ತಿ ಮಾಡಿ ಹೊಸ ಲೆಕ್ಕಪತ್ರಗಳನ್ನು ಇಡುತ್ತಾರೆ. ಇದು ಹೊಸ ಸೃಷ್ಟಿಯ ಆರಂಭದ ಪ್ರತೀಕವಾಗಿದೆ. ಹಾಗಾಗಿ ನಾವೆಲ್ಲರೂ ದೀಪಾವಳಿಯನ್ನು ಆಧ್ಯಾತ್ಮಿಕ ಹಿನ್ನೆಲೆಯಿಂದ ಆಚರಿಸಿ ನಮ್ಮ ಆತ್ಮದೀಪಗಳನ್ನು ಬೆಳಗಿಸಿ ಅನ್ಯರ ಆತ್ಮದೀಪಗಳನ್ನು ಬೆಳಗಿಸುವ ಸೇವೆಯನ್ನು ಮಾಡೋಣ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+