ಧನ ತ್ರಯೋದಶಿ: ದೀಪ ದಾನ, ಚಿನ್ನ- ಬೆಳ್ಳಿ ಖರೀದಿ ಶ್ರೇಷ್ಠ
Recommended Video

ಇಂದು ಆಶ್ವಯುಜ, ಕೃಷ್ಣ ತ್ರಯೋದಶಿ. ಅಂದರೆ "ಧನ ತ್ರಯೋದಶಿ". ಈ ದಿನಕ್ಕೆ ಬಹಳ ಮಹತ್ವದಿಂದ ಇದೆ. ಪೌರಾಣಿಕ ಹಿನ್ನೆಲೆಯೂ ಇದೆ.
ಒಮ್ಮೆ ಲಕ್ಷ್ಮಿ- ನಾರಾಯಣರು ಭೂಮಿಯಲ್ಲಿ ಸಂಚರಿಸುತ್ತಾ ದಕ್ಷಿಣದ ದಿಕ್ಕಿಗೆ ಬರುತ್ತಾರೆ. ಆದರೆ ಮಹಾಲಕ್ಷ್ಮಿಯನ್ನು ಅಲ್ಲಿಯೇ ನಿಲ್ಲಿಸುವ ಮಹಾವಿಷ್ಣು, ವಿಶೇಷ ಕಾರ್ಯ ನಿಮಿತ್ತ ಮುಂದೆ ಒಬ್ಬನೇ ಹೋಗುತ್ತೇನೆ, ನೀನು ಬರಬೇಡ. ಇಲ್ಲಿಯೇ ಇರು ಎಂದು ಆಜ್ಞಾಪಿಸಿ ಹೊರಡುತ್ತಾನೆ.
ಆದರೆ, ಮೊದಲೇ ಚಂಚಲೆಯಾದ ಮಹಾಲಕ್ಷ್ಮಿ ಕುತೂಹಲ ತಡೆಯಲಾಗದೇ ಹೊರಟು ಬಿಡುತ್ತಾಳೆ. ಮಹಾಲಕ್ಷ್ಮಿ ಸಾಗುತ್ತಾ ಸಾಗುತ್ತ ಬಂದು ಒಂದು ಹೊಲ ನೋಡಿ, ಅಲ್ಲಿ ಬೆಳೆದ ಕಬ್ಬು ನೋಡಿ ಆಸೆ ಪಟ್ಟು ಅದನ್ನು ಕಿತ್ತು ತಿನ್ನುತ್ತಾಳೆ. ಅಲ್ಲಿ ಬೆಳೆದ ಹೂಗಳನ್ನು ಕಂಡು ಕಿತ್ತು, ತನ್ನನ್ನು ಆ ಹೂಗಳಿಂದ ಸಿಂಗರಿಸಿಕೊಳ್ಳುತ್ತಾಳೆ.
ಆಗ ಅಲ್ಲಿಗೆ ಬರುವ ಮಹಾವಿಷ್ಣು, ತನ್ನ ಮಾತನ್ನು ಮೀರಿ ಬಂದ ಲಕ್ಷ್ಮಿಯನ್ನು ಕಂಡು ಕೋಪಗೊಳ್ಳುತ್ತಾನೆ. ಯಾವ ರೈತನ ಬೆಳೆಯನ್ನು ನೀನು ತಿಂದೆಯೋ ಅದೇ ರೈತನ ಮನೆಯಲ್ಲಿ ಇನ್ನು ಹನ್ನೆರಡು ವರುಷ ನೆಲೆಸಿರು ಎಂದು ಹೇಳಿ ವೈಕುಂಠಕ್ಕೆ ಹೊರಟು ಹೋಗುತ್ತಾನೆ. ಮಹಾ ವಿಷ್ಣುವಿನ ಆಜ್ಞೆ ಪರಿಪಾಲಿಸಲು ತಾಯಿ ಮಹಾಲಕ್ಷ್ಮಿ ಆ ಬಡ ರೈತ್ನ ಮನೆಯಲ್ಲಿಯೇ ಹನ್ನೆರಡು ವರುಷಗಳ ಕಾಲ ನೆಲೆಸಿ ಬಿಡುತ್ತಾಳೆ!

ಕಷ್ಟ ನಿವಾರಿಸುವ ಮಹಾಲಕ್ಷ್ಮಿ
ಮಹಾಲಕ್ಷ್ಮಿಯು ಆ ರೈತನ ಹೆಂಡತಿಗೆ, ನನ್ನನ್ನು ನೀನು ವಿಧಿವತ್ತಾಗಿ ಪೂಜಿಸು. ಎಲ್ಲ ಕಷ್ಟಗಳನ್ನು ನಿವಾರಿಸಿ, ಒಳ್ಳೆಯದನ್ನು ಮಾಡುತ್ತೇನೆ. ನಿಮ್ಮನ್ನು ಉದ್ಧರಿಸುತ್ತೇನೆ ಎಂದು ಹೇಳುತ್ತಾಳೆ. ತಾಯಿ ಮಹಾಲಕ್ಷ್ಮಿಯ ಆದೇಶದಂತೆ ರೈತನ ಪತ್ನಿ ಪೂಜಿಸುತ್ತಾಳೆ. ಪರಿಣಾಮವಾಗಿ ರೈತ ತನ್ನ ಎಲ್ಲಾ ದಾರಿದ್ರ್ಯ ಕಳೆದುಕೊಂಡು ಶ್ರೀಮಂತ ಆಗುತ್ತಾನೆ.
ಧನ, ಧಾನ್ಯ, ಐಶ್ವರ್ಯ ಅವನ ಮನೆಯಲ್ಲಿ ತುಂಬಿ ತುಳುಕುತ್ತಾ ಇರುತ್ತದೆ. ಹೀಗೇ ಹನ್ನೆರಡು ವರುಷಗಳು ಕಳೆದೇ ಹೋಗುತ್ತದೆ. ಸಮಯ ಮುಗಿದ ಕಾರಣ ತನ್ನ ಪತ್ನಿಯನ್ನು ಕರೆದೊಯ್ಯಲು ಸಾಕ್ಷಾತ್ ಮಹಾವಿಷ್ಣು ಬರುತ್ತಾನೆ. ಆದರೆ ಆ ತಾಯಿ ಮಹಾಲಕ್ಷ್ಮಿಯನ್ನು ಕಳುಹಿಸಲು ರೈತ ತಯಾರು ಇರುವುದಿಲ್ಲ! ರೈತ ಹಠಕ್ಕೆ ಬೀಳುತ್ತಾನೆ. ಯಾವುದೇ ಕಾರಣಕ್ಕೂ ಸಹ ಲಕ್ಷ್ಮಿ ದೇವಿಯನ್ನು ಹೋಗಲು ಬಿಡುವುದಿಲ್ಲ ಎನ್ನುತ್ತಾನೆ.

ಮಾತು ಕೇಳದ ರೈತ
ಮಹಾವಿಷ್ಣುವು ಆ ರೈತನಿಗೆ ಬಿಡಿಸಿ ಹೇಳುತ್ತಾನೆ. ನೋಡು ಎಂಥೆಂಥಾ ಅತಿರಥ ಮಹಾರಥರೇ ಪ್ರಯತ್ನಿಸಿದರೂ ಸಹ ಅವರಲ್ಲಿ ನಿಲ್ಲದ ಈ ಚಂಚಲೆ ಲಕ್ಷ್ಮಿ ನಿನ್ನ ಬಳಿ ಹೇಗೆ ತಾನೆ ನಿಲ್ಲುತ್ತಾಳೆ ? ಕೇವಲ ನನ್ನ ಮಾತಿಗೆ ಕಟ್ಟು ಬಿದ್ದು ಈ ಹನ್ನೆರಡು ವರುಷಗಳು ನಿಮ್ಮ ಮನೆಯಲ್ಲಿ ನೆಲೆಸಿದಳು ಅಷ್ಟೆ. ಈಗ ಸಮಯ ಮುಗಿದಿದೆ, ಆದುದರಿಂದ ಮಹಾ ಲಕ್ಷ್ಮಿಯನ್ನು ಕಳುಹಿಸಿಕೊಡು ಎನ್ನುತ್ತಾನೆ.
ಏನೇ ಹೇಳಿದರೂ ಆ ರೈತ ಒಪ್ಪುವುದಿಲ್ಲ. ಆಗ ಸ್ವತಃ ಮಹಾಲಕ್ಷ್ಮಿಯೇ ಆ ರೈತನನ್ನು ಸಮಾಧಾನ ಮಾಡುತ್ತಾಳೆ. "ವತ್ಸಾ ನಾಳೆ ಆಶ್ವಯುಜ ಕೃಷ್ಣ ತ್ರಯೋದಶಿ. ನಿನ್ನ ಮನೆಯನ್ನು ಶುದ್ಧಿಗೊಳಿಸು ಹಾಗೂ ಸಂಧ್ಯಾ ಕಾಲದಲ್ಲಿ ಶುಚಿರ್ಭೂತನಾಗಿ ತುಪ್ಪದ ದೀಪ ಹಚ್ಚಿ ಒಂದು ತಾಮ್ರದ ಕಲಶದಲ್ಲಿ ನಾಣ್ಯಗಳನ್ನು ತುಂಬಿ ನನ್ನನ್ನು ಅದರಲ್ಲಿ ಆವಾಹನೆ ಮಾಡಿ, ಪೂಜಿಸು ನೀನು ಹಾಗೆ ಮಾಡಿದಲ್ಲಿ ನಾನು ವರ್ಷ ಪೂರ್ತಿ ನಿಮ್ಮ ಮನೆಯಲ್ಲಿ ನೆಲೆಸಿರುತ್ತೇನೆ" ಎಂದು ಹೇಳುತ್ತಾಳೆ.
ಆ ನಂತರ ಬೆಳಕಿನ ಸ್ವರೂಪದಲ್ಲಿ ದಶ ದಿಕ್ಕುಗಳಲ್ಲಿಯೂ ಹರಡಿ ಮಾಯ ಆಗುತ್ತಾಳೆ. ಅದರಂತೆ ಆ ರೈತ ಮರುದಿನ ಮಹಾಲಕ್ಷ್ಮಿಯನ್ನು ಆವಾಹನೆ ಮಾಡಿ, ಪೂಜಿಸುತ್ತಾನೆ. ಹಾಗೆ ಮತ್ತೆ ಮಹಾಲಕ್ಷ್ಮಿಯ ಅನುಗ್ರಹದಿಂದ ಧನ, ಧಾನ್ಯ, ಸಂಪತ್ತುಗಳಿಂದ ಸುಖ ಸಂತೋಷದಿಂದ ಇರುತ್ತಾನೆ.

ಈ ದಿನ ಸಾಲ ಕೊಡಬೇಡಿ, ಸಾಲ ತಗೋಬೇಡಿ
ಆದರೆ, ನೆನಪಿಡಿ ಈ ದಿನ ಯಾರಿಗೂ ಸಾಲ ಕೊಡಬಾರದು, ಯಾರಲ್ಲಿಯೂ ನೀವು ಸಾಲ ಮಾಡಬಾರದು. ಇನ್ನು ಬೇಕಾದಲ್ಲಿ ದಾನ ಮಾಡಿ. ಆ ದಾನದ ಪುಣ್ಯ ಹದಿಮೂರು ಪಟ್ಟು ಹೆಚ್ಚು ಬರುತ್ತದೆ.

ಅಪಮೃತ್ಯು ಪರಿಹಾರಕ್ಕಾಗಿ ಯಮಧರ್ಮ ರಾಜನ ದೀಪ
ಈ ತ್ರಯೋದಶಿಯಂದು ಯಮ ದೇವರ ಕುರಿತು ಸಹ ವಿಶೇಷ ಇದೆ. ಇಡೀ ವರ್ಷದಲ್ಲಿ ಯಮಧರ್ಮ ದೇವರ ಪೂಜೆಗಾಗಿ ಮೀಸಲಿರುವ ದಿನ ಇದು. ಧನ ತ್ರಯೋದಶಿಯಂದು ಯಾರು ದೀಪ ದಾನ ಮಾಡುತ್ತಾರೋ ಯಮಧರ್ಮ ರಾಜನ ಅನುಗ್ರಹದಿಂದ ಅವರ ಮನೆಯಲ್ಲಿ ಅಪಮೃತ್ಯುಗೆ ಗುರಿ ಆಗುವುದಿಲ್ಲ.
ಅಕ್ಕಿ ಅಥವಾ ಗೋಧಿ ಹಿಟ್ಟಿನಲ್ಲಿ ಮಾಡಿದ ಹಣತೆಯಲ್ಲಿ ನಾಲ್ಕು ಬತ್ತಿ ಸೇರಿಸಿ ಇಟ್ಟು, ಪರಿಶುದ್ಧ ಎಳ್ಳೆಣ್ಣೆ ಹಾಕಿ ಆ ದೀಪವನ್ನು ಗೋಶಾಲೆ, ಬಾವಿಯ ಬಳಿ ನದೀ ತೀರ ಅಥವಾ ದೇಗುಲದಲ್ಲಿ ಇತ್ಯಾದಿ ಸ್ಥಳಗಳಲ್ಲಿ ಇಡಬೇಕು. ಆದರೆ ನೆನಪಿಡಿ, ಸಂಧ್ಯಾ ಕಾಲದಲ್ಲಿ ಸ್ನಾನ ಮಾಡಿದ ನಂತರ ದಕ್ಷಿಣ ದಿಕ್ಕಿನತ್ತ ಮುಖ ಮಾಡಿ ದೀಪ ಹಚ್ಚಿ.
ಮೃತ್ಯು ದೇವತೆಯಾದ ಯಮಧರ್ಮ ರಾಜನನ್ನು ಕುರಿತು ಶ್ರದ್ಧೆಯಿಂದ ಅವನ ಸ್ಮರಿಸಿ ಪೂಜಿಸಿ ಬೇಡಿಕೊಂಡರೆ ಯಮ ಧರ್ಮ ರಾಜ ಸುಪ್ರೀತನಾಗಿ ಆಶೀರ್ವದಿಸುತ್ತಾನೆ ಎಂಬ ಪ್ರತೀತಿ ಇದೆ.

ಅತ್ಯುತ್ತಮ ಆರೋಗ್ಯಕ್ಕಾಗಿ ಧನ್ವಂತರಿ ಪೂಜೆ
ಪುರಾಣ ಆಚರಣೆಗಳ ಪ್ರಕಾರ, ಸಮುದ್ರ ಮಂಥನ ಮಾಡುವಾಗ ಇದೇ ಕೃಷ್ಣ ಪಕ್ಷ ತ್ರಯೋದಶಿಯಂದೇ ಧನ್ವಂತರಿ ಮಹಾವಿಷ್ಣು ಪ್ರಕಟ ಆಗಿರೋದು. ಮನುಷ್ಯರ ಸಕಲ ವಿಧ ವ್ಯಾಧಿಗಳನ್ನು ನಾಶ ಮಾಡುವ ಧನ್ವಂತರಿ ಪ್ರಕಟಗೊಂಡ ಸಮಯದಲ್ಲಿ ಕೈಯಲ್ಲಿ ಅಮೃತ ಕಲಶ (ಪಾತ್ರೆ) ಇತ್ತು. ಆದುದರಿಂದ ಅದರ ಪ್ರಭಾವ ಉತ್ತರ ಭಾರತದಲ್ಲಿ ಈ ತ್ರಯೋದಶಿಯಂದು ಹೊಸ ಪಾತ್ರೆಗಳನ್ನು ಖರೀದಿಸುವ ಪದ್ಧತಿ ಇದೆ.

ಬಂಗಾರ, ಬೆಳ್ಳಿ ಖರೀದಿ ಶ್ರೇಷ್ಠ
ಕೆಲ ನಂಬಿಕೆಗಳ ಪ್ರಕಾರ, ಈ ದಿವ್ಯ ಧನ ತ್ರಯೋದಶಿಯಂದು ಬಂಗಾರ ಅಥವಾ ವಸ್ತುಗಳನ್ನು ಖರೀದಿ ಮಾಡುವುದರಿಂದ ಅದು ಹದಿಮೂರು ಪಟ್ಟು ವೃದ್ಧಿಸುತ್ತದೆ. ಆದರೆ ಧನ ತ್ರಯೋದಶಿಯಂದು ಖರೀದಿ ಮಾಡುವುದೇ ಆದಲ್ಲಿ ಬೆಳ್ಳಿಯ ಖರೀದಿ ಅತ್ಯುತ್ತಮ ಎಂದು ತಿಳಿಸುತ್ತಾರೆ.

ಧನಿಯಾ ಕಾಳು ಖರೀದಿಸಿ
ಬೆಳ್ಳಿಯ ಪಾತ್ರೆಗಳು ಬೆಳ್ಳಿಯ ಕಲಶ ಖರೀದಿಸಲು ಈ ಧನ ತ್ರಯೋದಶಿ ಅತ್ಯುತ್ತಮ. ಇನ್ನು ಅಶಕ್ತರು ಪಂಚ ಲೋಹಗಳಲ್ಲಿ ಯಾವುದಾದರೂ ಪಾತ್ರೆಗಳನ್ನು ಖರೀದಿಸಬಹುದು. ಇನ್ನು ಇದೇ ದಿನ ಅಂಗಡಿಯಿಂದ ನಿಮ್ಮ ಕೈಲಾದಷ್ಟು ಸ್ವಲ್ಪ ಧನಿಯ ಕಾಳುಗಳನ್ನು ಖರೀದಿಸಿ ತಂದು, ಮನೆಯಲ್ಲಿ ಇಡುವುದು ಸಹ ಶ್ರೇಷ್ಠ ಎಂಬ ನಂಬಿಕೆಗಳಿವೆ.












Click it and Unblock the Notifications