ದಸರೆಯಲ್ಲಿ ಕವಿಗೋಷ್ಠಿ, ಹಾಸ್ಯಮೇಳ ಶುರು
ಮೈಸೂರು, ಅ. 2: ಐತಿಹಾಸಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಇರುವ ಮೈಸೂರು ದಸರಾ ಮಹೋತ್ಸವ-2008ರ ಅಂಗವಾಗಿ ಏರ್ಪಡಿಸಿರುವ ದಸರಾ ಕವಿಗೋಷ್ಠಿ ಹಾಗೂ ಹಾಸ್ಯಮೇಳವು ಅ.2ರಿಂದ 6ರ ವರೆಗೆ ನಗರದ ವಿವಿಧ ಸ್ಥಳಗಳಲ್ಲಿ ಜರುಗಲಿದೆ.
ಕವಿಗೋಷ್ಠಿಯ ಉದ್ಘಾಟನಾ ದಿನವಾದ ಇಂದು ಕಿರಿಯ ಕವಿಗಳಿಗಾಗಿ ಚಿಗುರು ಕವಿಗೋಷ್ಠಿ ಕಾರ್ಯಕ್ರಮವನ್ನು ಮಹಾರಾಜ ಕಾಲೇಜಿನಲ್ಲಿ ಬೆಳಿಗ್ಗೆ 10.30 ಗಂಟೆಗೆ ಏರ್ಪಡಿಸಲಾಗಿತ್ತು. ಸ್ವರ್ಣಕಮಲ ರಾಷ್ಟ್ರಪ್ರಶಸ್ತಿ ವಿಜೇತ ಹಾಗೂ ಜಗತ್ತಿನ ಅತ್ಯಂತ ಕಿರಿಯ ಚಲನಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿ, ಬಾಲ ಪ್ರತಿಭೆಗಳನ್ನು ಹುರಿದುಂಬಿಸಿದರು.
ಅ. 3ರಂದು ಮಹಾರಾಜ ಕಾಲೇಜಿನಲ್ಲಿ ಬೆಳಿಗ್ಗೆ 10 ಗಂಟೆಗೆ ಚುಟುಕು ಕವಿಗೋಷ್ಠಿ, ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಕನ್ನಡ 'ಕವಿಕಾವ್ಯ ಪರಂಪರೆ ದರ್ಶಿನಿ' ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಕವಿಕಾವ್ಯ ಪರಂಪರೆ ದರ್ಶಿನಿ ಕಾರ್ಯಕ್ರಮವು ಅ.3ರಿಂದ 6ರ ವರೆಗೆ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ಇರುತ್ತದೆ. ಪ್ರವೇಶ ಉಚಿತವಾಗಿರುತ್ತದೆ.
ಅ.4ರಂದು ಬೆಳಿಗ್ಗೆ 10 ಗಂಟೆಗೆ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ಕಾಲೇಜು ಆವರಣದಲ್ಲಿ ಉದಯೋನ್ಮುಖ ಪ್ರತಿಭೆಗಳಿಗಾಗಿ 'ಅರಳು ಕವಿಗೋಷ್ಠಿ 'ಏರ್ಪಡಿಸಲಾಗಿದೆ. ಅ.5ರಂದು ಹಾಸ್ಯಮೇಳ ಕಾರ್ಯಕ್ರಮವಿದೆ. ಹ್ಯಾಸ್ಯಮೇಳವು ವಿನೋಬ ರಸ್ತೆಯಲ್ಲಿರುವ ಕಲಾಮಂದಿರದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30ರ ವರೆಗೆ ನಡೆಯಲಿದ್ದು, ಉಚಿತ ಪ್ರವೇಶ ನೀಡಲಾಗುತ್ತದೆ.
ಕವಿಗೋಷ್ಠಿಯ ಕೊನೆಯ ದಿನವಾದ ಅ.6ರಂದು ಮಧ್ಯಾಹ್ನ 3.30 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ದಸರಾ ಕವಿಗೋಷ್ಠಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕವಿಗೋಷ್ಠಿಯ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಷ್ಟ್ರಕವಿ ಡಾ. ಜಿ ಎಸ್ ಶಿವರುದ್ರಪ್ಪ ಅವರು ವಹಿಸಲಿದ್ದಾರೆ.
ಪೂರಕ ಓದಿಗೆ:












Click it and Unblock the Notifications