ಹಿರಿಯನಟ ಅಶ್ವಥ್ ಗೆ ದಸರೆಯಲ್ಲಿ ಅವಮಾನ
ಮೈಸೂರು, ಅ. 1 : ಮೈಸೂರು ದಸರಾ ಉತ್ಸವದ ಅಂಗವಾಗಿ ನಗರದ ಕಲಾಮಂದಿರದಲ್ಲಿ ಏರ್ಪಡಿಸಲಾಗಿದ್ದ ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮ ಸಂಘಟಕರು ಹಿರಿಯ ನಟ ಅಶ್ವಥ್ ಅವರನ್ನು ಕಡೆಗಣಿಸಿ ಅವಮಾನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ವಿವರ
ದಸರಾ ಉತ್ಸವದ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿತ್ತು. ಮೈಸೂರಿನವರಾದ ಹಿರಿಯ ನಟ ಕೆ.ಎಸ್.ಅಶ್ವಥ್ ಅವರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಿಸಿರಲಿಲ್ಲ. ಆದರೆ ಸ್ಥಳೀಯರಾದ ಹಿರಿಯ ನಟ ಅಶ್ವಥ್ ರನ್ನು ಕಡೆಗಣಿಸಿ ಚಿತ್ಸೋತ್ಸವ ನಡೆಸುವುದು ತರವಲ್ಲ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ಅವರು ಕಾರ್ಯಕ್ರಮಕ್ಕೆ ತಾವು ಬರಬೇಕು ಎಂದು ಒತ್ತಾಯ ಮಾಡಿದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಬರಲು ಒಲ್ಲದ ಮನಸ್ಸಿನಿಂದ ಅಶ್ವಥ್ ಒಪ್ಪಿಕೊಂಡಿದ್ದರು.
ಆದರೆ ಅದಕ್ಕೂ ಮೂದಲು ಕಳೆದ ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ನಾನು ಕಾರ್ಯಕ್ರಮಕ್ಕೆ ಬರಲು ಸಾಧ್ಯವಿಲ್ಲ ಎಂದು ಅಶ್ವಥ್ ಖಡಾಖಂಡಿತವಾಗಿ ಸಚಿವರಿಗೆ ಹೇಳಿದ್ದರು. ಹಿರಿಯ ನಟರನ್ನು ಬಿಟ್ಟು ಕಾರ್ಯಕ್ರಮ ನಡೆಸುವುದು ಸೂಕ್ತವಲ್ಲ. ಆದ್ದರಿಂದ ನೀವು ಬರಲೇಬೇಕು ಎಂದು ಶೋಭಾ ಕರಂದ್ಸಾಜೆ ಹಠಹಿಡಿದಿದ್ದರಿಂದ, ಒಂದು ಗಂಟೆಗೆ ಮಾತ್ರ ಕಾರ್ಯಕ್ರಮಕ್ಕೆ ಬರುವುದಾಗಿ ಅಶ್ವಥ್ ಹೇಳಿದ್ದರು. ಅದರಂತೆ ಕಾರ್ಯಕ್ರಮಕ್ಕೆ ತೆರಳಿದ್ದರು.
ಆದರೆ ಕಾರ್ಯಕ್ರಮ ಸಂಘಟಕರೂ ಅಶ್ವಥ್ ಅವರನ್ನು ಕರೆದು ವೇದಿಕೆ ಮೇಲೆ ಕೂಡಿಸುವ ಗೋಜಿಗೆ ಹೋಗಲಿಲ್ಲ. ಆಗ ಶೋಭಾ ಅವರೇ ಬಂದು ವೇದಿಕೆಗೆ ಕೆರೆದುಕೊಂಡು ಹೋಗಿದ್ದಾರೆ. ವೇದಿಕೆ ಮೇಲೆ ಕುಳಿತಿದ್ದ ವ್ಯಕ್ತಿಗಳಿಗೆ ಪ್ರಾಸ್ತಾವಿಕ ಭಾಷಣದಲ್ಲಿ ಸ್ವಾಗತಿಸುವುದು ವಾಡಿಕೆ. ಆದರೆ ಸಂಘಟಕರೂ ಗೌರವ ಸೂಚಕವಾಗಿ ಒಂದೇ ಒಂದು ಬಾರಿ ಎತ್ತದಿರುವುದು ಅಶ್ವಥ್ ಅವರ ಮನಸ್ಸಿಗೆ ತೀವ್ರ ನೋವು ಉಂಟು ಮಾಡಿದೆ. ಹಿರಿಯ ನಟನಿಗೆ ಅವಮಾನಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಯಾವ ಪುರುಷಾರ್ಥಕ್ಕೆ ಆಹ್ವಾನಿಸಿದಿರಿ : ಅಶ್ವಥ್
ತಮಗಾಗಿರುವ ನೋವಿಗೆ ತೀವ್ರ ಬೇಸರದಿಂದ ಮಾತನಾಡಿದ ಹಿರಿಯ ನಟ ಅಶ್ವಥ್, ಅವಮಾನ ಮಾಡಲು ಬಲವಂತವಾಗಿ ಆಹ್ವಾನಿಸಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ. ನನಗೆ ಅನಾರೋಗ್ಯವಿದೆ. ಸಮಾರಂಭಕ್ಕೆ ಬರಲು ಆಗುವುದಿಲ್ಲ ಎಂದು ಸಚಿವರಿಗೆ ಹೇಳಿದರೂ ನೀವು ಬರಲೇಬೇಕು ಪಟ್ಟು ಹಿಡಿದರು. ಕಾರ್ಯಕ್ರಮಕ್ಕೆ ಹೋದೆ, ಅಲ್ಲಿ ನನ್ನನ್ನು ಮಾತನಾಡಿಸುವರು ಇಲ್ಲ. ವೇದಿಕೆ ಮೇಲೆ ಕುಳಿತ ನನಗೆ ಗೌರವ ಸೂಚಿಸುವ ವ್ಯವಧಾನವಿಲ್ಲ. ಹೀಗಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ನನ್ನನ್ನು ಆಹ್ವಾನಿಸಿರಿ ಎಂದು ಅಶ್ವಥ್ ನೋವಿನಿಂದ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಅಂದಿನ ಸಂಭ್ರಮಕ್ಕೆ ಸರಿಸಾಟಿಯಿಲ್ಲ
ದಸರಾಗೆ ಸಿದ್ದಗಂಗಾ ಶ್ರೀಗಳಿಂದ ಚಾಲನೆ












Click it and Unblock the Notifications