ನೆನಪಿನ ಗಣಿಯಿಂದ ಎದ್ದುಬಂದ ರತ್ನಸಿಂಹಾಸನ
* ಟಿ. ಎಂ. ಸತೀಶ್
ಶ್ರೀ
ಚಾಮುಂಡಾ
ಕೃಪಾಲಬ್ಧ
ಶಾಶ್ವತೈಶ್ವರ್ಯ
ಭಾಸ್ಕರ
ಕರ್ನಾಟಕ
ಪೃಥ್ವೀ
ಸಾಮ್ರಾಜ್ಯ
ರತ್ನ
ಸಿಂಹಾಸನಾಧೀಶ್ವರ
ಯಾದವಾನ್ವಯ
ದುಗ್ಧಾಬ್ಧ
ಶರದ್ರಾಕಾ
ಸುಧಾಕರ
ಶ್ರೀ
ಚಾಮರಾಜ
ತನುಜ
ಶ್ರೀ
ಕೃಷ್ಣ
ಧರಣೇಶ್ವರ
ಕುಕ್ರಮಾಗತಂ
ರಮ್ಯಂ
ಭದ್ರ
ಪೀಠ
ಮುಪೇಯುಷಃ
ಕೌತೂಹಲಾನಿ
ಲೋಕಾನಾಂ
ದೋಗ್ಧಿ
ಛತ್ರಮಿದಂ
ತವ
ಇದು ಒಂದು ಆಶೀರ್ವಚನ ಶ್ಲೋಕ. ಮೈಸೂರು ಅರಮನೆಯಲ್ಲಿರುವ ಕರ್ನಾಟಕ ರತ್ನ ಸುವರ್ಣ ಸಿಂಹಾಸನದ ಛತ್ರದ ಮೇಲೆ ಶಾಸನ ರೂಪದಲ್ಲಿ ಬರೆಯಲಾಗಿರುವ ಈ ಶ್ಲೋಕದ ಅರ್ಥ:
ಶ್ರೀ ಚಾಮರಾಜರ ಪುತ್ರರಾದ ಶ್ರೀ ಕೃಷ್ಣ ಭೂಪಾಲರೇ, ನೀವು ಶ್ರೀ ಚಾಮುಂಡಾಂಬಿಕೆಯ ಕೃಪೆಯಿಂದ ಪಡೆದಿರುವ ಅಷ್ಟೈಶ್ವರ್ಯದಿಂದ ರಾರಾಜಿಸುತ್ತಿದ್ದೀರಿ. ನೀವು ಕರ್ನಾಟಕ ರತ್ನ ಸಿಂಹಾಸನಾಧೀಶ್ವರರೂ ಹೌದು. ಯದು ಕುಲ ಸಂಜಾತರಾದ ನೀವು ಪೂರ್ಣ ಚಂದ್ರರು. ತಾವು ವಂಶಪರಂಪರಾಗತವಾಗಿ ಪಡೆದಿರುವ ಈ ರತ್ನ ಸಿಂಹಾಸನದಲ್ಲಿರುವ ಬಂಗಾರದ ಕೊಡೆ (ಛತ್ರ) ಇಡೀ ಲೋಕವನ್ನೇ ನಿಬ್ಬೆರಗುಗೊಳಿಸುತ್ತದೆ.
ಮುಮ್ಮಡಿ ಕೃಷ್ಣರಾಜ ಒಡೆಯರಿಗಾಗಿ ಈ ಶಾಸನ ರೂಪದ ಆಶೀರ್ವಚನ ಶ್ಲೋಕವನ್ನು ಬರೆಯಲಾಗಿದೆ ಎಂಬುದು ಇದರಿಂದ ವೇದ್ಯವಾಗುತ್ತದೆ.
ರತ್ನ ಸಿಂಹಾಸನದ ಇತಿಹಾಸ : ಈ ಶ್ಲೋಕದಲ್ಲಿರುವ ಒಂದು ವಾಕ್ಯದಂತೆ ಕರ್ನಾಟಕ ರತ್ನ ಸಿಂಹಾಸನವು ಮೈಸೂರು ರಾಜ ಮನೆತನಕ್ಕೆ ವಂಶಪಾರಂಪರ್ಯವಾಗಿ ದತ್ತವಾದುದೆಂಬುದನ್ನು ಸಾರುತ್ತದೆ. ಆದರೆ ಈ ಸಿಂಹಾಸನದ ಬಗ್ಗೆ ಮತ್ತು ಸಿಂಹಾಸನವು ಮೈಸೂರು ಒಡೆಯರ ಕೈಗೆ ಬಂದ ಬಗ್ಗೆ ಹತ್ತಾರು ಕತೆಗಳಿವೆ.
ಒಂದು ಕತೆಯ ಪ್ರಕಾರ, ಈ ಸಿಂಹಾಸನಕ್ಕೆ ಪುರಾಣ ಕಾಲದಷ್ಟು ಇತಿಹಾಸ ಇದೆ. ದ್ವಾಪರ ಯುಗದಲ್ಲಿ ಹಸ್ತಿನಾಪುರವನ್ನಾಳಿದ ಪಾಂಡವರಿಗೆ ಸೇರಿದ್ದಂತೆ ಈ ಸಿಂಹಾಸನ. ಪಾಂಡವರಿಗೆ ಶ್ರೀರಕ್ಷೆಯಾಗಿ ನಿಂತಿದ್ದ ಯದುಕುಲ ನಂದನನಾದ ಶ್ರೀಕೃಷ್ಣ , ಕಲಿಯುಗದಲ್ಲಿ ಈ ಸಿಂಹಾಸನವು ಯದು ವಂಶಸ್ಥರಿಗೆ ದೊರಕುವಂತೆ ಹರಸಿದ್ದನಂತೆ. ಕಂಪಿಲ ರಾಜ ಎನ್ನುವಾತ ಹಸ್ತಿನಾಪುರದಲ್ಲಿದ್ದ ಈ ಸಿಂಹಾಸನವನ್ನು ಪೆನುಗೊಂಡೆಗೆ ತಂದು ಅನರ್ಹರ ಪಾಲಾಗದಂತೆ ಸಿಂಹಾಸನವನ್ನು ಭೂಮಿಯಲ್ಲಿ ಹೂತಿಟ್ಟಿದ್ದನಂತೆ. ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಲ್ಲೊಬ್ಬನಾದ ಹರಿಹರನಿಗೆ ಕ್ರಿಸ್ತ ಶಕ 1338ರಲ್ಲಿ ರಾಜರ್ಷಿಗಳಾದ ವಿದ್ಯಾರಣ್ಯರು ಈ ಸಿಂಹಾಸನವಿರುವ ಜಾಗವನ್ನು ತೋರಿಸಿದರು. 150 ವರ್ಷಗಳಿಗೂ ಹೆಚ್ಚು ಕಾಲ ವಿಜಯನಗರ ಸಿಂಹಾಸನಾಧೀಶ್ವರರು ಈ ಸಿಂಹಾಸನವನ್ನು ಬಳಸಿದರು.