ನಾಲ್ವಡಿ ಒಡೆಯರ ದಸರಾ
ಇಂದು ನಾವು ನೋಡುತ್ತಿರುವುದು ಪ್ರಜೆಗಳ ದಸರಾ. ಹಿಂದೆ ರಾಜರಾಳ್ವಿಕೆ ಇದ್ದ ಕಾಲದಲ್ಲಿ ಮೈಸೂರಿನಲ್ಲಿ ವೈಭವೋಪೇತವಾಗಿ ನಡೆಯುತ್ತಿದ್ದುದು ಪ್ರಭುಗಳ ದಸರಾ. ಪ್ರಜೆಗಳ ದಸರೆಗೆ ದೊರಕುತ್ತಿರುವ ಪ್ರಮಾಣದಲ್ಲಿ ಪ್ರಭುಗಳ ದಸರೆಗೆ ಪ್ರಚಾರ ಸಿಗುತ್ತಿರಲಿಲ್ಲವಾದರೂ ಮೈಸೂರು ಒಡೆಯರ ದಸರಾ ಮಹೋತ್ಸವ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದಿತ್ತು.
ಮೈಸೂರು ದಸರಾದ ಅಂದಿನ ಆ ವೈಭವ ನೋಡಲು ಎರಡು ಕಣ್ಣುಗಳು ಸಾಲುತ್ತಿರಲಿಲ್ಲ ಎನ್ನುತ್ತಾರೆ 90ರ ಹರೆಯದ ಮೈಸೂರು ನಿವಾಸಿ ಮಾ.ನಂ. ರಾಮಸ್ವಾಮಿ. ಕೃಷ್ಣರಾಜ ಒಡೆಯರ ಆಳ್ವಿಕೆಯ ಕಾಲದಲ್ಲಿ ತಾವು ಕಣ್ಣಾರೆ ಕಂಡ ದಸರೆಯ ಆ ರಾಜ ವೈಭವವನ್ನು ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನಾವು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.
ಮೈಸೂರು ದಸರಾ ಸಂಭ್ರಮದ ನಾಡ ಹಬ್ಬ. ಹಬ್ಬದ ಸಡಗರಕ್ಕೆ ಮೈಸೂರು ಎರಡು ವಾರ ಮೊದಲೇ ಸಜ್ಜಾಗುತ್ತಿತ್ತು. ಧರ್ಮ ಛತ್ರಗಳಲ್ಲಿ ಪ್ರವಾಸಿಗರಿಗೆ ತಂಗಲು ಅವಕಾಶ ಮಾಡಿಕೊಡಲಾಗುತ್ತಿತ್ತು. ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಪ್ರವಾಸಿಗರು ತಂಡೋಪ ತಂಡವಾಗಿ ಮೈಸೂರು ದಸರೆಯನ್ನು ಕಾಣಲು ಬರುತ್ತಿದ್ದರು. ಮೈಸೂರು ದಸರೆಗೆ ಈ ಖ್ಯಾತಿ ತಂದದ್ದು ಎರಡು ಆಕರ್ಷಣೆಗಳು. ಒಂದು ಜಂಬೂ ಸವಾರಿ. ಮತ್ತೊಂದು ಹತ್ತೂ ದಿನಗಳ ಕಾಲ ನಡೆಯುತ್ತಿದ್ದ ಸಾಂಸ್ಕೃತಿಕ ಹಾಗೂ ಕ್ರೀಡೋತ್ಸವ.
ನಾಡ ಹಬ್ಬದ ಸಲುವಾಗಿಯೇ ಮೈಸೂರು ಒಡೆಯರು ಹಮ್ಮಿಕೊಳ್ಳುತ್ತಿದ್ದ ಅನೇಕ ಉತ್ಸವಗಳು ನಾಡಿನ ಮೂಲೆ ಮೂಲೆಗಳಿಂದ ಜನರನ್ನು ಸೆಳೆದು ತರುತ್ತಿತ್ತು. ದಸರೆಯ ಕಾಲದ ದರ್ಬಾರು ಅತ್ಯಂತ ಪ್ರಾಮುಖ್ಯವಾಗಿತ್ತು. ಹೆನ್ರಿ ಇರ್ವಿನ್ ಅವರ ಸಲಹೆ ಹಾಗೂ ಪ್ಲಾನ್ನ ರೀತ್ಯ ನಿರ್ಮಿಸಲ್ಪಟ್ಟ ಮೈಸೂರು ಅರಮನೆಯ ದರ್ಬಾರು ಸಭಾಂಗಣ ಮೈಸೂರು ಒಡೆಯರಿಗೆ ವಂಶಪಾರಂಪರ್ಯವಾಗಿ ದತ್ತವಾದ ರತ್ನ ಖಚಿತ ಸಿಂಹಾಸನದಿಂದಾಗಿ ಅಮರಾವತಿಯ ಇಂದ್ರ ಸಭೆಯಂತೆ ಕಂಗೊಳಿಸುತ್ತಿತ್ತಂತೆ. (ನಾವೆಲ್ಲ ಸಿನಿಮಾದಲ್ಲಿ ಮಾತ್ರ ಇಂದ್ರ ಸಭೆ ನೋಡಿರುವುದು)
ಈ ಸುವರ್ಣ ಸಿಂಹಾಸನದಲ್ಲಿ ವಿರಾಜಮಾನರಾಗುತ್ತಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು, ದಸರೆಯ ಕಾಲದಲ್ಲಿ ಪ್ರತಿದಿನವೂ ಸಾಯಂಕಾಲ ರಾಜ ಸಭೆ ನಡೆಸುತ್ತಿದ್ದರು. ಗಾಯನ ಗೋಷ್ಠಿಗಳು, ಸಂಗೀತ ಕಾರ್ಯಕ್ರಮಗಳು, ಕುಸ್ತಿ, ಜಾನಪದ ನೃತ್ಯಗಳು, ಕತ್ತಿ ವರಸೆ, ಜಟ್ಟಿ ಕಾಳಗ, ಗಾರ ುಡಿ, ಇಂದ್ರಜಾಲ, ಬೊಂಬೆಯಾಟವೇ ಮೊದಲಾದ ಕಾರ್ಯಕ್ರಮಗಳು ನಡೆಯುತ್ತಿದ್ದವು.