ನವರಾತ್ರಿ ಯುವಕರಿಗೆ ಶಕ್ತಿ, ಸದ್ಬುದ್ಧಿ ನೀಡಲಿ:ಎಂ.ಎನ್. ಜೋಯಿಸ್
ಮೈಸೂರು : ವಿಶ್ವವಿಖ್ಯಾತ ದಸರಾ ಮಹೋತ್ಸವ ಗುರುವಾರ ಬೆಳಗ್ಗೆ ವಿದ್ಯುಕ್ತವಾಗಿ ಆರಂಭಗೊಂಡಿತು. ಚಾಮುಂಡಿ ಬೆಟ್ಟದಲ್ಲಿ ನಾಡದೇವಿ ಶ್ರೀ ಚಾಮುಂಡಾಂಬಿಕೆಯ ಪೂಜೆಯಾಂದಿಗೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಎಂ.ಎನ್. ಜೋಯಿಸ್ ದಸರೆಗೆ ಚಾಲನೆ ನೀಡಿದರು.
ವ್ಯಕ್ತಿ, ಶಕ್ತಿ ಹಾಗೂ ಮುಕ್ತಿಯ ಸಂಕೇತವಾದ ನವರಾತ್ರಿ ಯುವಕರಿಗೆ ಶಕ್ತಿ ಮತ್ತು ಸದ್ಬುದ್ಧಿಯನ್ನು ನೀಡಿಲಿ. ದುಷ್ಟರ ನಿಗ್ರಹವಾಗಲಿ. ಶಿಷ್ಟರ ಪರಿಪಾಲನೆಯಾಗಲಿ, ಯುವಕರು ಭ್ರಷ್ಟಾಚಾರ ಬಡಿದೋಡಿಸಲಿ ಎಂದು ಜೋಯಿಸ್ ಹೇಳಿದರು.
ದಸರಾ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್. ವಿಶ್ವನಾಥ್ ಈ ಬಾರಿ ದಶಮಿಯ ದಿನ ಜಂಬೂಸವಾರಿ ನಡೆದೇ ತೀರುತ್ತದೆ. ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರೇ ಮೆರವಣಿಗೆ ಉದ್ಘಾಟಿಸುತ್ತಾರೆ ಎಂದು ಹೇಳಿದರು. ರಾಜ್ಕುಮಾರ್ ಅವರ ಅಪಹರಣದ ಹಿನ್ನೆಲೆಯಲ್ಲಿ ನಾಡ ಹಬ್ಬವನ್ನು ಬಹಳ ಸರಳವಾಗಿ ಆಚರಿಸಲಾಗುತ್ತಿದೆ ಎಂದೂ ಅವರು ಹೇಳಿದರು.
ನಿಗದಿತ ಕಾರ್ಯಕ್ರಮದಂತೆ ರಾಜ್ಕುಮಾರ್ ಅವರೇ ದಸರೆ ಉದ್ಘಾಟಿಸಬೇಕಾಗಿತ್ತು. ಆದರೆ, ಅವರ ಬಿಡುಗಡೆ ವಿಳಂಬವಾಗಿರುವ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಲಿಲ್ಲ ಎಂದರು.
ಸರಳತೆಯ ನಡುವೆಯೂ ವೈಭವ : ಸರಕಾರ ಸರಳ ದಸರಾ ಆಚರಣೆ ಎಂದು ಹೇಳಿಕೊಂಡಿದ್ದರೂ ಕೂಡ ಮೈಸೂರು ನಗರ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ. ಮೈಸೂರು ಅರಮನೆಯ ದೀಪಾಲಂಕಾರ ಎಲ್ಲರ ಗಮನ ಸೆಳೆಯುತ್ತಿದೆ. ವಸ್ತು ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಫಲಪುಷ್ಪ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಿಂದಲೇ ನಡೆಯುತ್ತಿವೆ.
ಖಾಸಗಿ ದರ್ಬಾರ್: ಸಂಪ್ರದಾಯದಂತೆ ರಾಜ ವಂಶಸ್ಥರಾದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು, ಖಾಸಗಿ ದರ್ಬಾರ್ ಆರಂಭಿಸಿದರು.