Year End Special 2024: ನರೇಂದ್ರ ಮೋದಿ ಪ್ರಮುಖ ತೀರ್ಮಾನಗಳು, ವಿಶ್ವ ನಾಯಕರ ಭೇಟಿ
2024ನೇ ವರ್ಷ ಅಂತ್ಯವಾಗುತ್ತಾ ಬಂದಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ವರ್ಷ ಬಹಳ ಪ್ರಮುಖವಾಗಿತ್ತು. ದೇಶದಲ್ಲಿ ಅವರ ನೇತೃತ್ವದಲ್ಲಿ ಲೋಕಸಭೆ ಚುನಾವಣೆ ಎದುರಿಸಲಾಯಿತು. ಎನ್ಡಿಎ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದಿತು. ನರೇಂದ್ರ ಮೋದಿ ಅವರು 3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದರು.
ಲೋಕಸಭೆ ಚುನಾವಣೆ, ವಿಶ್ವದ ವಿವಿಧ ದೇಶಗಳಿಗೆ ಭೇಟಿ, ಪ್ರಮುಖ ನಿರ್ಧಾರಗಳು ಸೇರಿ 2024ರಲ್ಲಿ ನರೇಂದ್ರ ಮೋದಿ ಪ್ರಮುಖ ತೀರ್ಮಾನಗಳು ಏನಾಗಿದ್ದವು ಎಂಬುದನ್ನು ನಾವು ವರ್ಷದ ವಿಶೇಷ ಲೇಖನದಲ್ಲಿ ತಿಳಿಯೋಣ. ಸದ್ಯ ಪ್ರಧಾನಿ ನರೇಂದ್ರ ಮೋದಿ ಕುವೈತ್ ಪ್ರವಾಸದಲ್ಲಿದ್ದು, ಶನಿವಾರ ಅಲ್ಲಿ ಭಾರತೀಯ ಕಾರ್ಮಿಕರನ್ನು ಭೇಟಿ ಮಾಡಿ, ಅವರ ಜೊತೆ ಊಟ ಸವಿದು, ಮಾತುಕತೆಯನ್ನು ನಡೆಸಿದ್ದಾರೆ.

3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ: 2024ರ ಲೋಕಸಭೆ ಚುನಾವಣೆ ಫಲಿತಾಂಶ ಜೂನ್ 4ರಂದು ಪ್ರಕಟವಾಯಿತು. ಜೂನ್ 9ರಂದು ದೇಶದ ಪ್ರಧಾನಿಯಾಗಿ 3ನೇ ಅವಧಿಗೆ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಮಾಡುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ಈ ಮೂಲಕ ದಿ. ಪಂಡಿತ್ ಜವಾಹರ್ಲಾಲ್ ನೆಹರು ದಾಖಲೆಯನ್ನು ಮೋದಿ ಮುರಿದರು. ನರೇಂದ್ರ ಮೋದಿ ನಾಯಕತ್ವದಲ್ಲಿಯೇ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಚುನಾವಣೆ ಎದುರಿಸಿತ್ತು. ಬಿಜೆಪಿ 240 ಸೀಟುಗಳಲ್ಲಿ ಜಯಗಳಿಸಿತು. ಎನ್ಡಿಎ ಮೈತ್ರಿಕೂಟದ ಮಿತ್ರಪಕ್ಷಗಳ ನೆರವಿನಿಂದ 293 ಸೀಟುಗಳ ಮೂಲಕ ಸರ್ಕಾರ ರಚನೆ ಮಾಡಿತು.
ಉಕ್ರೇನ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ: ರಷ್ಯಾ ಮತ್ತು ಉಕ್ರೇನ್ ಯುದ್ಧದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಮತ್ತು ರಷ್ಯಾಕ್ಕೆ ಭೇಟಿ ನೀಡಿದರು. ಉಭಯ ದೇಶಗಳ ಜೊತೆ ಉತ್ತಮ ಬಾಂಧವ್ಯವನ್ನು, ವ್ಯಾಪಾರ ಒಪ್ಪಂದವನ್ನು ಭಾರತ ಹೊಂದಿದೆ. ನರೇಂದ್ರ ಮೋದಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಕೈವ್ನಲ್ಲಿ ಭೇಟಿಯಾದರು, ಇದು ಉಕ್ರೇನ್ಗೆ ಭಾರತೀಯ ಪ್ರಧಾನಿಯ ಮೊದಲ ಭೇಟಿಯಾಗಿತ್ತು. ನರೇಂದ್ರ ಮೋದಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಮಾಡುವ ಮೂಲಕ ವಿಶ್ವದ ವಿವಿಧ ದೇಶಗಳ ಗಮನ ಸೆಳೆದರು.
ರಾಮ ಮಂದಿರ ಉದ್ಘಾಟನೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಜನವರಿ 22ರಂದು ಉದ್ಘಾಟನೆ ಮಾಡಿದರು. ದೇಶದ ಇತಿಹಾಸದಲ್ಲಿ ಇದೊಂದು ಪ್ರಮುಖವಾದ ಘಟನೆಯಾಗಿದೆ. ಕೋಟ್ಯಾಂತರ ಜನರ ಭಾವನೆ ಈ ರಾಮಮಂದಿರಲ್ಲಿ ಅಡಗಿದೆ. ಕಟ್ಟುನಿಟ್ಟಿನ ಧಾರ್ಮಿಕ ವಿಧಿ-ವಿಧಾನ ಕೈಗೊಂಡು, ಯಜಮಾನನಾಗಿ ನರೇಂದ್ರ ಮೋದಿ ರಾಮ ಮಂದಿರ ಉದ್ಘಾಟನೆಯ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಭಾರತದ ಇತಿಹಾಸದ ಧಾರ್ಮಿಕ ಕ್ಷೇತ್ರದಲ್ಲಿ ಇದು ಮಹತ್ವದ ಘಟನೆಯಾಗಿದೆ.
ಹರ್ಯಾಣ ವಿಧಾನಸಭೆ ಚುನಾವಣೆ: ಹರ್ಯಾಣ ರಾಜ್ಯದಲ್ಲಿ ಬಿಜೆಪಿ ಸೋಲು ಕಾಣಲಿದೆ ಎಂದು ಸಮೀಕ್ಷೆಗಳು ಅಂದಾಜಿಸಿದ್ದವು. ನಾಯಕತ್ವ ಬದಲಾವಣೆ, ಆಡಳಿತ ವಿರೋಧಿ ಅಲೆಯನ್ನು ಬಿಜೆಪಿ ಎದುರಿಸುತ್ತಿತ್ತು. ಆದರೆ ನರೇಂದ್ರ ಮೋದಿ ಪ್ರಚಾರದ ಕಾರಣದಿಂದ ರಾಜ್ಯದಲ್ಲಿ ಬಿಜೆಪಿ 43 ಸೀಟುಗಳಲ್ಲಿ ಜಯಗಳಿಸುವ ಮೂಲಕ 3ನೇ ಬಾರಿಗೆ ಅಧಿಕಾರ ಹಿಡಿಯಿರು. ನೂತನ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಪ್ರಮಾಣ ವಚನ ಸ್ವೀಕಾರ ಮಾಡಿದರು.
ಒಂದು ರಾಷ್ಟ್ರ ಒಂದು ಚುನಾವಣೆ: ಎನ್ಡಿಎ ಸರ್ಕಾರದ ಮಹತ್ವದ ವಿಧೇಯಕ 'ಒಂದು ರಾಷ್ಟ್ರ ಒಂದು ಚುನಾವಣೆ' ಡಿಸೆಂಬರ್ನ ಚಳಿಗಾಲದ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಮಂಡನೆಗೊಂಡಿತು. ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ನಡೆಸುವ ಕುರಿತು ನರೇಂದ್ರ ಮೋದಿ ಸದಾ ಹೇಳುತ್ತಿದ್ದರು. ಇದಕ್ಕೆ ಸಚಿವ ಸಂಪುಟದ ಒಪ್ಪಿಗೆಯನ್ನು ಪಡೆದು ವಿಧೇಯಕವನ್ನು ಲೋಕಸಭೆಯಲ್ಲಿ ಮಂಡನೆ ಮಾಡಲಾಯಿತು.












Click it and Unblock the Notifications