2021ರ ಜುಲೈ ವಿಶೇಷ: ಮಳೆಗೆ ತೇಲುತಿಹವು ಕಾರು, ಬೈಕುಗಳು!
ನವದೆಹಲಿ, ಡಿಸೆಂಬರ್ 25: ಕಳೆದ 2021ರ ಜೂನ್ ತಿಂಗಳಿನಲ್ಲೇ ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಲಾಯಿತು. ಆದರೆ ಜನರ ಎದೆಯಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಭೀತಿ ಮಾತ್ರ ಕಡಿಮೆ ಆಗಿರಲಿಲ್ಲ. ತುತ್ತು ಅನ್ನ ಸಂಪಾದಿಸಲು ವಲಸೆ ಹೋಗಿದ್ದ ಕಾರ್ಮಿಕರು ಮರಳಿ ಗೂಡು ಸೇರುವುದಕ್ಕೆ ಶುರು ಮಾಡಿದರು.
ಜುಲೈ ತಿಂಗಳಿನಲ್ಲಿ ಬಿಹಾರದ ಬಹುಪಾಲು ವಲಸೆ ಕಾರ್ಮಿಕರು ತಮ್ಮೂರಿಗೆ ವಾಪಸ್ ಆಗುತ್ತಿರುವುದು ಸಖತ್ ಸುದ್ದಿ ಆಗಿತ್ತು. ಜುಲೈ ಹೊತ್ತಿಗೆ ಕೊವಿಡ್-19 ಲಸಿಕೆ ಕೊರತೆ ನೀಗಿದ್ದು, ವಿತರಣೆ ವೇಗ ಹೆಚ್ಚಿತು. ಪಾಕಿಸ್ತಾನದಲ್ಲಿ ಲಾಕ್ಡೌನ್ ನಿಯಮಗಳು ಕಠಿಣಗೊಂಡವು. ಉತ್ತರಾಖಂಡದಲ್ಲಿ ಮಳೆಯ ಅಬ್ಬರದಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಹೀಗೆ ಹಲವು ವಿಷಯಗಳನ್ನು ಸಾರಿ ಹೇಳಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು.
2021ರ ಜುಲೈ ತಿಂಗಳಿನಲ್ಲಿ ಸದ್ದು ಮಾಡಿ ಸುದ್ದಿ ಆಗಿರುವ ಚಿತ್ರಗಳು ಯಾವುವು?, ಮಾಧ್ಯಮಗಳಲ್ಲಿ ಸುದ್ದಿಯಾದ ಪ್ರಮುಖ ವಿಷಯಗಳು ಯಾವುವು?, ಫೋಟೋಗಳ ಹಿಂದಿನ ಕಥೆ ಏನಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.

ಕೊವಿಡ್-19 ಭೀತಿಯಲ್ಲಿ ಪಾಟ್ನಾದಿಂದ ಕಾರ್ಮಿಕರ ವಲಸೆ
ಬಿಹಾರದಲ್ಲೂ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖಗೊಂಡಿದ್ದು, ಲಾಕ್ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿತ್ತು. ನಗರಗಳಿಗೆ ದುಡಿಯಲು ಕಾರ್ಮಿಕರು ವಲಸೆ ಬಂದಿದ್ದರು. ಆದರೆ, ನಂತರದ ಬೆಳವಣಿಗೆಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಿತು. ಇದರಿಂದ ಮತ್ತೆ ಆತಂಕಗೊಂಡ ಸಾವಿರಾರು ವಲಸೆ ಕಾರ್ಮಿಕರು ಸ್ವಗ್ರಾಮಗಳಿಗೆ ವಾಪಸ್ ಆದರು. ಈ ವೇಳೆ ಪಾಟ್ನಾ ರೈಲ್ವೆ ನಿಲ್ದಾಣದಲ್ಲಿ ನೆರೆದ ಸಾವಿರಾರು ವಲಸೆ ಕಾರ್ಮಿಕರ ದಂಡು ಅಂದಿನ ಸ್ಥಿತಿ ಮತ್ತು ಕಾರ್ಮಿಕರ ಆತಂಕಕ್ಕೆ ಹಿಡಿದ ಕೈಗನ್ನಡಿ ಎನ್ನುವಂತಿತ್ತು.

ಅಹಮದಾಬಾದ್ನಲ್ಲಿ ಕೊವಿಡ್-19 ಲಸಿಕೆಗಾಗಿ ವ್ಯಾಪಾರಿಗಳ ಸಾಲು
ಕೊರೊನಾವೈರಸ್ ಲಸಿಕೆ ವಿತರಣೆಯನ್ನು ಸಾರ್ವಜನಿಕವಾಗಿ ಸಮರೋಪಾದಿಯಲ್ಲಿ ನಡೆಸಲಾಗುತ್ತಿತ್ತು. ದೇಶದಲ್ಲಿ ಲಾಕ್ಡೌನ್ ನಿಯಮ ಸಡಿಲಗೊಳಿಸಿದ ಬೆನ್ನಲ್ಲೇ ಅಹಮದಾಬಾದ್ನಲ್ಲಿ ಬಟ್ಟೆ ಅಂಗಡಿಗಳನ್ನು ತೆರೆದ ಮಾಲೀಕರು ಹಾಗೂ ಕಾರ್ಮಿಕರಿಗೆ ಕೊವಿಡ್-19 ಲಸಿಕೆಯನ್ನು ನೀಡಲಾಗಿತ್ತು. ಈ ವೇಳೆ ಲಸಿಕೆ ಪಡೆಯುವುದಕ್ಕಾಗಿ ಅಂಗಡಿ ಮಾಲೀಕರು ಹಾಗೂ ಕಾರ್ಮಿಕರು ಸಾಲುಗಟ್ಟಿ ನಿಂತಿರುವ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಭಾಗಶಃ ಲಾಕ್ಡೌನ್ ಘೋಷಿಸಿದ ನೆರೆಯ ಪಾಕಿಸ್ತಾನ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ ಕರಾಚಿಯಲ್ಲಿ ಭಾಗಶಃ ಲಾಕ್ಡೌನ್ ಘೋಷಿಸಲಾಗಿತ್ತು. ಈ ವೇಳೆ ತಾತ್ಕಾಲಿಕ ಚೆಕ್ಪಾಯಿಂಟ್ನಲ್ಲಿ ಪೊಲೀಸರು ಕಾವಲು ಕಾಯುತ್ತಿದ್ದರು. ಪಾಕಿಸ್ತಾನದ ಸಿಂಧ್ ಪ್ರಾಂತೀಯ ಅಧಿಕಾರಿಗಳು ಜುಲೈ 31 ರಿಂದ ಆಗಸ್ಟ್ 8 ರವರೆಗೆ ಒಂಬತ್ತು ದಿನಗಳ ಕಾಲ ಭಾಗಶಃ ಲಾಕ್ಡೌನ್ ಅನ್ನು ಜಾರಿಗೊಳಿಸಲಾಗಿತ್ತು. ಅಂದಿನ ಹೊಸ ನಿರ್ಬಂಧಗಳ ಪ್ರಕಾರ, ಎಲ್ಲಾ ಪ್ರವಾಸಿ ರೆಸಾರ್ಟ್ಗಳು, ಬೀಚ್ಗಳು, ಹೋಟೆಲ್ಗಳು, ರೆಸ್ಟೋರೆಂಟ್ಗಳು, ಶಾಪಿಂಗ್ ಸೆಂಟರ್ಗಳು, ಪಾರ್ಕ್ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಬಂದ್ ಮಾಡಲಾಗಿತ್ತು.

ಉತ್ತರಾಖಂಡದಲ್ಲಿ ಮಳೆ ಹೊಡೆತಕ್ಕೆ ತತ್ತರಿಸಿದ ಜನಜೀವನ
ಕಳೆದ 2021ರ ಜುಲೈ ತಿಂಗಳಿನಲ್ಲಿ ಉತ್ತರ ಭಾರತದಲ್ಲಿ ಭಾರಿ ಮಳೆ ಆಯಿತು. ವರುಣನ ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಾಂಚಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಮನೆಗಳು, ವಾಹನಗಳೆಲ್ಲ ಜಲಾವೃತಗೊಂಡಿದ್ದವು. ಜುಲೈ ತಿಂಗಳಿನಲ್ಲಿ ಸುರಿದ ಮಳೆಯಿಂದ ಏಕಲವ್ಯ ಅಪಾರ್ಟ್ಮೆಂಟ್ನ ಹೊರಗೆ ವಾಹನಗಳು ಜಲಾವೃತಗೊಂಡಿದ್ದವು. ಮಳೆ ನೀರಿನ ಮಧ್ಯೆ ಕಾರುಗಳು ತೇಲುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.

ಪ್ರಧಾನಿಗೆ ಆಶೀರ್ವದಿಸಿದ ಕ್ರೀಡಾಪಟು ಮನ್ ಕೌರ್
2021ರ ಜುಲೈ 31ರ ಶನಿವಾರ ಚಂಡೀಗಢದ ಬಳಿಯ ಆಸ್ಪತ್ರೆಯಲ್ಲಿ 105 ವರ್ಷ ವಯಸ್ಸಿನ ಹಿರಿಯ ಕ್ರೀಡಾಪಟು ಮನ್ ಕೌರ್ ಹೃದಯ ಸ್ತಂಭನದಿಂದ ವಿಧಿವಶರಾದರು. ಕಳೆದ 2019ರ ಮಾರ್ಚ್ 8ರಂದು ಇದೇ ಮನ್ ಕೌರ್ ಅವರು ನಾರಿಶಕ್ತಿ ಪುರಸ್ಕಾರವನ್ನು ಸ್ವೀಕರಿಸಿದ್ದರು. ಅಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮನ್ ಕೌರ್ ಆಶೀರ್ವದಿಸುತ್ತಿರುವ ಫೋಟೋ ಸಖತ್ ವೈರಲ್ ಆಗಿತ್ತು.












Click it and Unblock the Notifications