Year end 2022; ಕಾಶಿ ದರ್ಶನ ಮಾಡಲು ವಿಶೇಷ ರೈಲು ಸೇವೆ
ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರಂದು ಬೆಂಗಳೂರಿನ ಕೆ. ಎಸ್. ಆರ್ ರೈಲ್ವೆ ನಿಲ್ದಾಣದಲ್ಲಿ ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ್ ರೈಲು ಸೇವೆಗೆ ಚಾಲನೆ ನೀಡಿದರು. ಇದು ಕರ್ನಾಟಕ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.
ಕರ್ನಾಟಕದ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022-23ನೇ ಸಾಲಿನ ಬಜೆಟ್ನಲ್ಲಿ ಕಾಶಿಯ ಭವ್ಯತೆಯನ್ನು ಹೆಚ್ಚಿನ ಜನರು ನೋಡಲು ಅನುಕೂಲವಾಗುವಂತೆ ಕಾಶಿಗೆ ರಿಯಾಯಿತಿ ದರದ ಪ್ಯಾಕೇಜ್ ಘೋಷಣೆ ಮಾಡಿದ್ದರು.
ಈ ಯೋಜನೆಗೆ 'ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ್' ಎಂದು ಹೆಸರಿಡಲಾಯಿತು. ಈ ಯೋಜನೆಯನ್ನು ಮುಜರಾಯಿ ಇಲಾಖೆಯ ಮೂಲಕ ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ ರೈಲ್ವೆ ಇಲಾಖೆಯ ಜೊತೆ ಒಪ್ಪಂದವನ್ನು ಮಾಡಿಕೊಳ್ಳಲಾಯಿತು.
ಭಾರತ್ ಗೌರವ್ ಯೋಜನೆ ಘೋಷಣೆ; 2021ರ ನವೆಂಬರ್ನಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ 'ಭಾರತ್ ಗೌರವ್ ರೈಲು'ಗಳನ್ನು ಘೋಷಣೆ ಮಾಡಿದರು. ಭಾರತದ ಭವ್ಯ ಪರಂಪರೆ ಇತಿಹಾಸವನ್ನು ಜನರಿಗೆ ಪರಿಚಯ ಮಾಡಿಸುವ ಪ್ರಧಾನಿ ನರೇಂದ್ರ ಮೋದಿ ಕನಸಿನ ಯೋಜನೆಯ ಭಾಗವಾಗಿ ಈ ರೈಲುಗಳನ್ನು ಘೋಷಣೆ ಮಾಡಲಾಯಿತು.
ಈ ಯೋಜನೆ ಮೂಲಕ ಸ್ಥಳೀಯ ಪ್ರವಾಸೋದ್ಯಮಕ್ಕೆ ಸಹ ಸಾಕಷ್ಟು ಒತ್ತು ಸಿಗುತ್ತದೆ. ಪ್ರತಿ ರಾಜ್ಯದಿಂದ ವಿವಿಧ ಧಾರ್ಮಿಕ ಸ್ಥಳಗಳಿಗೆ ವಿಶೇಷ ರೈಲುಗಳನ್ನು ಓಡಿಸುವುದು ಯೋಜನೆಯ ಗುರಿಯಾಗಿದೆ. ಇದೇ ಮಾದರಿಯಲ್ಲಿ ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ್ ರೈಲು ಸೇವೆಗಳು ಆರಂಭವಾಯಿತು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಬಜೆಟ್ ಭಾಷಣದಲ್ಲಿ ಕಾಶಿ ಯಾತ್ರೆ ಮಾಡುವ ಜನರಿಗೆ ಅನುಕೂವಾಗುವಂತೆ 5 ಸಾವಿರ ರೂ. ಸಬ್ಸಿಡಿ ಘೋಷಣೆ ಮಾಡಿದರು. ಈ ರೈಲಿನ ಮೂಲಕ ಕಾಶಿಗೆ ಭೇಟಿ ನೀಡುವ ಭಕ್ತಾದಿಗಳಿಗೆ ಈ ಸೌಲಭ್ಯ ದೊರೆಯಲಿದೆ.
ಕಾಶಿ ಪ್ಯಾಕೇಜ್ ವಿವರಗಳು; ಬೆಂಗಳೂರು-ಕಾಶಿ ನಡುವೆ ಸುಗಮ ಮತ್ತು ಅನುಕೂಲಕ್ಕೆ ತಕ್ಕಂತೆ ರೈಲು ಪ್ರಯಾಣ, ಉಳಿದುಕೊಳ್ಳುವ ಮತ್ತು ದರ್ಶನ ಮಾಡುವ ಎಲ್ಲ ಸೌಲಭ್ಯಗಳನ್ನು ಕರ್ನಾಟಕ-ಭಾರತ್ ಗೌರವ್ ರೈಲು ಪ್ಯಾಕೇಜ್ ಒಳಗೊಂಡಿದೆ. ಸುಮಾರು 4,161 ಕಿ. ಮೀ. ಸಾಗುವ ರೈಲಿನ ಪ್ಯಾಕೇಜ್ 15 ಸಾವಿರ ರೂ.ಗಳು.
ಮಜರಾಯಿ ಇಲಾಖೆ ಐಆರ್ಸಿಟಿಸಿ, ಕೆಎಸ್ಟಿಡಿಸಿಯೊಂದಿಗೆ ಒಪ್ಪಂದ ಮಾಡಿಕೊಂಡು ಈ ಯೋಜನೆಯ ವಿಶೇಷ ರೈಲು ಬುಕ್ಕಿಂಗ್ ಸೌಲಭ್ಯ ಆರಂಭಿಸಿದೆ. ಐಆರ್ಸಿಟಿಸಿ ವೆಬ್ಸೈಟ್ ಮಾಹಿತಿ ಪ್ರಕಾರ ಈ ಪ್ಯಾಕೇಜ್ 7 ರಾತ್ರಿ ಮತ್ತು 8 ಹಗಲು ಇರಲಿದೆ. ಬೆಂಗಳೂರು-ವಾರಣಾಸಿ-ಅಯೋಧ್ಯೆ-ಪ್ರಯಾಗ್ರಾಜ್-ಬೆಂಗಳೂರು ಮಾರ್ಗದಲ್ಲಿ ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ್ ರೈಲು ಸಂಚಾರ ನಡೆಸಲಿದೆ.
ಬೆಂಗಳೂರಿನಿಂದ ಹೊರಡುವ ಈ ರೈಲು ಹುಬ್ಬಳ್ಳಿ, ಬೆಳಗಾವಿ ಮೂಲಕ ಸಂಚರಿಸುತ್ತಿದ್ದು, ಕಾಶಿಗೆ ಪ್ರಯಾಣಿಸುವ ಬೆಂಗಳೂರು ಅಷ್ಟೇ ಅಲ್ಲದೇ ಉತ್ತರ ಕರ್ನಾಟಕ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಈ ರೈಲು ಮೂಲಕ ಪ್ರಯಾಗ್ ರಾಜ್ ಮತ್ತು ಅಯೋಧ್ಯೆಗೂ ತೆರಳಬಹುದಾಗಿದೆ.
ಈ ಪ್ರವಾಸದ ಒಟ್ಟು ದರ 20,000 ರೂಪಾಯಿ. ಕರ್ನಾಟಕ ಸರ್ಕಾರದ 5,000 ರೂಪಾಯಿ ಸಬ್ಸಿಡಿ ಒದಗಿಸಲಿದೆ. ಆದ್ದರಿಂದ ದರ 15 ಸಾವಿರ ರೂ.ಗಳು. ಈ ರೈಲುಗಳ ಮೂಲಕ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ವೀಕ್ಷಣೆ ಮಾಡಬಹುದಾಗಿದೆ.
ವಿಶೇಷ ಬೋಗಿಗಳ ವಿನ್ಯಾಸ; ಮುಜರಾಯಿ ಇಲಾಖೆ ಭಾರತೀಯ ರೈಲ್ವೆಯ ಒಪ್ಪಿಗೆ ಪಡೆದು ಕರ್ನಾಟಕ-ಭಾರತ್ ಗೌರವ್ ಕಾಶಿ ದರ್ಶನ್ ರೈಲು ಯೋಜನೆಗೆ ವಿಶೇಷ ರೈಲು ಬೋಗಿಯನ್ನು ವಿನ್ಯಾಸಗೊಳಿಸಿದೆ. ರೈಲು 14 ಬೋಗಿಗಳನ್ನು ಹೊಂದಿದೆ. 11 ಬೋಗಿ ಪ್ರಯಾಣಿಕರಿಗೆ ಮೀಸಲು. ಒಂದು ಬೋಗಿಯನ್ನು ದೇವಸ್ಥಾನದ ಮಾದರಿಯಲ್ಲಿ ವಿನ್ಯಾಸಗೊಳಿಸಿ, ಭಜನೆ, ಪ್ರಾರ್ಥನೆ ಮಾಡಲು ಸಹ ಅವಕಾಶ ನೀಡಲಾಗಿದೆ.
ಜೀವನದಲ್ಲಿ ಒಮ್ಮೆಯಾದರೂ ಕಾಶಿಯಾತ್ರೆ ಮಾಡಬೇಕು ಎಂಬುದು ಬಹುಪಾಲು ಹಿಂದೂಗಳ ಆಸೆಯಾಗಿರುತ್ತದೆ. ಅದನ್ನು ಪೂರೈಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು ಎಂಬುದು ಮುಜರಾಯಿ ಇಲಾಖೆ ಆಶಯವಾಗಿತ್ತು. ಅದಕ್ಕೆ ತಕ್ಕಂತೆ ಈ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಗೆ ಜನರಿಂದ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.