ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ, ಈ ದೇಗುಲಗಳ ಕಥೆ ಏನು?
Recommended Video

ಬೆಂಗಳೂರು, ಸೆಪ್ಟೆಂಬರ್ 28: ಶಬರಿಮಲೆ ದೇಗುಲಗೊಳಗೆ ಮಹಿಳೆಯರ ಪ್ರವೇಶಕ್ಕೆ ಇದ್ದ ಅಡ್ಡಿ ಆತಂಕಗಳು ದೂರಾಗಿವೆ. ಮುಖ್ಯ ನ್ಯಾಯಮುರ್ತಿ ದೀಪಕ್ ಮಿಶ್ರಾ ಅವರಿದ್ದ ಸಾಂವಿಧಾನಿಕ ನ್ಯಾಯಪೀಠವು ಎಲ್ಲಾ ವಯೋಮಾನದ ಮಹಿಳೆಯರಿಗೆ ಪ್ರವೇಶಕ್ಕೆ ಅನುಮತಿ ನೀಡುವಂತೆ ಸೂಚಿಸಿ, ಐತಿಹಾಸಿಕ ತೀರ್ಪು ನೀಡಿದೆ.
ಈ ಮೂಲಕದ 800 ವರ್ಷಗಳ ಹಳೆ ಸಂಪ್ರದಾಯಕ್ಕೆ ಬ್ರೇಕ್ ಬೀಳಲಿದೆ. ಸುಪ್ರೀಂಕೋರ್ಟಿನ ಪಂಚ ಸದಸ್ಯರ ನ್ಯಾಯಪೀಠವು ನೀಡಿರುವ ತೀರ್ಪಿನ ವಿರುದ್ಧ ಟ್ರಾವಾಂಕೂರು ದೇವಸ್ವ ಮಂಡಳಿ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ.
ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 10 ರಿಂದ 50 ವರ್ಷ ವಯಸ್ಸಿನೊಳಗಿನ ಸ್ತ್ರೀಯರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಸಂಪ್ರದಾಯದ ಪ್ರಕಾರ ಮುಟ್ಟಾದ ಸ್ತ್ರೀಯು ಮನೆಯಲ್ಲಿನ ಪೂಜಾಗೃಹಕ್ಕೆ ಅಥವಾ ದೇವಾಲಯಕ್ಕೆ ಪ್ರವೇಶ ಮಾಡಬಾರದು. ಹೀಗಾಗಿ, ಋತುಮತಿಯಾದ ಹೆಣ್ಣು ಈ ದೇಗುಲದಲ್ಲಿ ಕಾಲಿಡುವಂತಿಲ್ಲ ಎಂದು ಅಯ್ಯಪ್ಪ ಸ್ವಾಮಿ ದೇಗುಲ ಮಂಡಳಿ ನಿಯಮ ರೂಪಿಸಿದೆ.
ಭಾರತದಲ್ಲಿ ದೇಗುಲಗಳಷ್ಟೇ ಅಲ್ಲದೆ, ಕೆಲವು ದರ್ಗಾಗಳಲ್ಲೂ ಮಹಿಳೆಯರಿಗೆ ಪ್ರವೇಶಕ್ಕೆ ನಿರ್ಬಂಧವಿದೆ. ಶಬರಿಮಲೆ ಅಲ್ಲದೇ, ಇನ್ನು ಅನೇಕ ದೇಗುಲಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿರಾಕರಿಸಲಾಗುತ್ತದೆ.
ಕೆಲವು ಸಂದರ್ಭ, ಕಾರಣಗಳಿಗಾಗಿ ಈ ದೇವಾಲಯಗಳಲ್ಲಿ ಪುರುಷರಿಗೆ ಪ್ರವೇಶವಿಲ್ಲ
ಸಂಪ್ರದಾಯ, ಕಟ್ಟುಪಾಡು, ರೀತಿ ರಿವಾಜು, ವಸ್ತ್ರ ಸಂಹಿತೆ, ನೀತಿ ನಿಯಮಗಳ ಅನುಸಾರ ಎಲ್ಲಾ ಧರ್ಮಗಳಲ್ಲೂ ಈ ರೀತಿ ನಿರ್ಬಂಧಗಳನ್ನು ಕಾಣಬಹುದು. ಈಗ ಶಬರಿಮಲೆಯ ತೀರ್ಪು ಮಿಕ್ಕ ಎಲ್ಲಾ ದೇಗುಲ, ದರ್ಗಾಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಶಬರಿಮಲೆ ಅಲ್ಲದೆ, ಯಾವೆಲ್ಲ ದೇಗುಲಗಳಲ್ಲಿ ಮಹಿಳೆಯರಿಗೆ ಪ್ರವೇಶ ನಿಷೇಧವಿದೆ ಮುಂದೆ ಓದಿ...

ಶನಿ ಸಿಂಗಾಪುರ್-ಕಲ್ಲಿನ ಮೂರ್ತಿ
ಶನಿ ಸಿಂಗಾಪುರ್-ಕಲ್ಲಿನ ಮೂರ್ತಿ ಇಲ್ಲಿರುವ ಕಲ್ಲಿನ ಮೂರ್ತಿಯನ್ನು ಯುವತಿಯೊಬ್ಬಳು ಮುಟ್ಟಿದ್ದ ಘಟನೆ ನಡೆದಿತ್ತು. ನಂತರ ದೇವಾಲಯದ ಆಡಳಿತವು ಶುದ್ಧೀಕರಿಸುವ ಕೆಲಸವನ್ನು ಮಾಡಿತ್ತು. ಇದು ದೇಶದೆಲ್ಲೆಡೆ ಭಾರೀ ಸುದ್ದಿಯಾಯಿತು. ಕಲ್ಲಿನ ಮೂರ್ತಿಯನ್ನು ಮಹಿಳೆಯರು ಮುಟ್ಟಬಾರದೆಂಬ ಕಾರಣಕ್ಕಾಗಿ ಅದನ್ನು ತುಂಬಾ ಸುರಕ್ಷಿತ ಪ್ರದೇಶದಲ್ಲಿ ಇಡಲಾಗಿದೆ.

ಹರ್ಯಾಣದ ಪುಷ್ಕರ್ ಕಾರ್ತಿಕೇಯ ದೇಗುಲ
ಕುರುಕ್ಷೇತ್ರ ಜಿಲ್ಲೆಯ ಪುಷ್ಕರ್ ನ ಪೆಹೋವಾ ಪಟ್ಟಣದಲ್ಲಿರುವ ಕ್ರಿ.ಪೂ 5ನೇ ಶತಮಾನದ ಕಾರ್ತಿಕೇಯ ದೇಗುಲ
ಈ ದೇವಾಲಯಗಳಲ್ಲಿ ಕಾರ್ತಿಕೇಯ ದೇವರನ್ನು ಬ್ರಹ್ಮಚಾರಿಯ ರೂಪದಲ್ಲಿ ಪೂಜಿಸುವ ಕಾರಣದಿಂದಾಗಿ ಈ ದೇವಾಲಯಗಳಿಗೆ ಮಹಿಳೆಯರಿಗೆ ಪ್ರವೇಶವಿಲ್ಲ. ಈ ದೇವಾಲಯಗಳಿಗೆ ಮಹಿಳೆಯರು ಪ್ರವೇಶಿಸಿದರೆ ಆಕೆಗೆ ವರ ಸಿಗುವ ಬದಲು ಶಾಪ ಸಿಗುತ್ತದೆ ಎಂದು ನಂಬಲಾಗಿದೆ.

ಶ್ರೀಪದ್ಮನಾಭ ದೇಗುಲ, ತಿರುವನಂತಪುರಂ
ವಿಶ್ವದ ಅತ್ಯಂತ ಶ್ರೀಮಂತ ದೇಗುಲಗಳಲ್ಲಿ ಒಂದೆನಿಸಿರುವ ಶ್ರೀಪದ್ಮನಾಭ ದೇಗುಲದ ಒಳ ಭಾಗದಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಇಲ್ಲಿನ ಖಜಾನೆ ತನಿಖೆಗೆ ಬಂದಿದ್ದ ಪುರಾತತ್ತ್ವ ಸರ್ವೇಕ್ಷಣ ಇಲಾಖೆಯ ಮಹಿಳಾ ಅಧಿಕಾರಿಯೂ ಪ್ರವೇಶ ನಿರಾಕರಿಸಲಾಗಿತ್ತು.

ರಂಕಾಪುರ್ ದೇಗುಲ, ರಾಜಸ್ಥಾನ
ರಾಜಸ್ಥಾನದ ವಿಶ್ವ ಪ್ರಸಿದ್ಧ ರಂಕಾಪುರ್ ನ ಜೈನದೇಗುಲ ಕ್ರಿ.ಶ 15ನೇ ಶತಮಾನದಲ್ಲಿ ನಿರ್ಮಾಣಗೊಂಡಿದೆ. ಜೈನ ಐದು ಪ್ರಮುಖ ಯಾತ್ರಾಸ್ಥಳದಲ್ಲಿ ಇದು ಕೂಡಾ ಒಂದೆನಿಸಿದೆ. 24 ತೀರ್ಥಂಕರರಿಗೆ ಪ್ರತ್ಯೇಕ ದೇಗುಲಗಳಿವೆ. ಈ ದೇಗುಲಕ್ಕೆ ಋತುಮತಿಯಾದ ಸ್ತ್ರೀಯರು ಪ್ರವೇಶಿಸುವಂತಿಲ್ಲ. ಇದಲ್ಲದೆ, ಕೆಲ ಸಂದರ್ಭದಲ್ಲಿ ಮಹಿಳೆಯರಿಗೆ ಪ್ರವೇಶ ಸಿಕ್ಕರೂ ಕಠಿಣ ವಸ್ತ್ರಸಂಹಿತೆ ಕೂಡಾ ಜಾರಿಯಲ್ಲಿದೆ.

ನಿಜಾಮುದ್ದೀನ್ ದರ್ಗಾ, ದೆಹಲಿ
ದೆಹಲಿಯ ನಿಜಾಮುದ್ದೀನ್ ದರ್ಗಾದ ಕೆಲ ಭಾಗಗಳಿಗೆ ಮಹಿಳೆಯರ ಪ್ರವೇಶ ನಿರಾಕರಿಸಲಾಗಿದೆ. ಸುಮಾರು 700 ವರ್ಷಗಳಿಂದ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಎಲ್ಲಾ ಮಹಿಳಾ ಭಕ್ತರು ಒಂದು ಹಂತದ ತನಕ ಮಾತ್ರ ದರ್ಗಾದ ಒಳಗೆ ಪ್ರವೇಶಿಸಬಹುದು. ಧರ್ಮಗುರು ವಾಸವಿದ್ದರು ಎನ್ನಲಾದ ಒಳಗಿನ ಕೋಣೆಗೆ ಮಹಿಳೆಯರಿಗೆ ಪ್ರವೇಶವಿಲ್ಲ.

ಹಾಜಿ ಅಲಿ ದರ್ಗಾ, ಮುಂಬೈ
ಮುಂಬೈನ ಪ್ರಸಿದ್ಧ ಪ್ರಾರ್ಥನಾ ಸ್ಥಳ ಹಾಜಿ ಅಲಿ ದರ್ಗಾವನ್ನು 15ನೇ ಶತಮಾನದಲ್ಲಿ ನಿರ್ಮಿಸಲಾಗಿದೆ. ಇದನ್ನು ಸೂಫಿ ಸಂತ ಪಿರ್ ಹಾಜಿ ಅಲಿ ಬುಖಾರಿಗೆ ಅರ್ಪಿಸಲಾಗಿದೆ. ದರ್ಗಾದ ಒಳಗಿನ ಪ್ರದೇಶಕ್ಕೆ ಹೋಗಲು ಮಹಿಳೆಯರಿಗೆ ಅವಕಾಶವಿಲ್ಲ. ಶರಿಯಾ ಕಾನೂನಿನ ಪ್ರಕಾರ ಈ ಪ್ರದೇಶಕ್ಕೆ ಮಹಿಳೆಯರು ಪ್ರವೇಶಿಸುವುದು ಇಸ್ಲಾಂಗೆ ವಿರುದ್ಧವಾಗಿದೆ.

ಪಟ್ ಬೌಸಿ ಸತ್ರಾ, ಅಸ್ಸಾಂ
ಅಸ್ಸಾಂನ ಬರ್ಪೆಟಾ ಪಟ್ಟಣದಿಂದ 2 ಕಿ. ಮೀ ದೂರದಲ್ಲಿರುವ ಪತ್ ಬೌಸಿ ಪತ್ರಾದಲ್ಲಿ ವೈಷ್ಣವ ಗುರುಗಳನ್ನು ಪೂಜಿಸಲಾಗುತ್ತದೆ. ಮಂಟಾ ಶಂಕರದೇವ, ಮಹದೇವ ಮಂದಿರವಿದೆ. ಆದರೆ, 2010ರಲ್ಲಿ ರಾಜ್ಯಪಾಲ ಜೆಬಿ ಪಟ್ನಾಯಕ್ ಅವರು 20 ಮಹಿಳೆಯರನ್ನು ದೇಗುಲದೊಳಗೆ ಕರೆದೊಯ್ದು ಸಂಪ್ರದಾಯ ಮುರಿದಿದ್ದರು.ಆದರೆ, ಮತ್ತೊಮ್ಮೆ ಪ್ರವೇಶ ನಿಷೇಧ ಮುಂದುವರೆಸಲಾಗಿದೆ.












Click it and Unblock the Notifications