ಸಿದ್ದು ಟೀಂ ಭಿನ್ನಾಭಿಪ್ರಾಯ ಜ್ವಾಲೆಗೆ ಕರಗಿ ಹೋಗುತ್ತದೆಯೇ ಮೈತ್ರಿ?
Recommended Video

ಕಾಂಗ್ರೆಸ್ ಹೈಕಮಾಂಡ್ ಗೆ ಸಿದ್ದರಾಮಯ್ಯ ತಲೆನೋವಾಗಿದ್ದಾರಾ? ಅಷ್ಟೇ ಅಲ್ಲ, ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರಕಾರದ ಪಾಲಿಗೆ ಸಿದ್ದರಾಮಯ್ಯ ಅವರ ಮಾತು ಹಾಗೂ ನಡೆ ಬುಲ್ಡೋಜರ್ ನಂತೆ ಆಗಿದೆಯಾ? ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ಎರಡೂ ಪ್ರಶ್ನೆಗಳಿಗೆ 'ಹೌದು' ಎಂಬ ಉತ್ತರವೇ ತಕ್ಷಣಕ್ಕೆ ಹೊಳೆಯುತ್ತದೆ.
ಮೈತ್ರಿ ಸರಕಾರದಲ್ಲಿನ ಸಮನ್ವಯ ಸಮಿತಿಗೆ ಸಿದ್ದರಾಮಯ್ಯ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಲಾಯಿತು. ಕೆಡವಲು ನಿಂತವರನ್ನೇ ಬೀಳದಂತೆ ನೋಡಿಕೊಳ್ಳಿ ಎಂದು ಕಾವಲಿಗೆ ನಿಲ್ಲಿಸಿದಂತಾಗಿತ್ತು ಪರಿಸ್ಥಿತಿ. ಇನ್ನು ಸಿದ್ದರಾಮಯ್ಯ ಅವರಿಗೆ ಯಾರೆಲ್ಲ ಆಪ್ತರು ಎಂಬ ಮಾತಿತ್ತೋ ಅಂಥವರನ್ನೆಲ್ಲ ಹುಡುಕಿ- ಹುಡುಕಿ ಮೂಲೆಗುಂಪು ಮಾಡಲಾಯಿತು.
"ಇನ್ನು ನನ್ನಿಂದ ಏನೂ ಆಗಲ್ಲ. ದೆಹಲಿಗೆ ಹೋಗಿ, ರಾಹುಲ್ ಗಾಂಧಿ ಅವರ ಹತ್ತಿರವೇ ಹೇಳಿಕೊಳ್ಳಿ" ಎಂದು ಸ್ವತಃ ಸಿದ್ದರಾಮಯ್ಯ ಹೇಳಿಕೊಳ್ಳುವಂತೆ ಪರಿಸ್ಥಿತಿ ಸೃಷ್ಟಿಯಾಯಿತು. ಈ ಎಲ್ಲದರ ಹಿಂದೆ ಪರಮೇಶ್ವರ್ ಅವರ ಕಾಲಾಂತರದ ಸಿಟ್ಟು ಕೆಲಸ ಮಾಡಿತೋ ಅಥವಾ ದೊಡ್ಡ ಗೌಡರು- ಕುಮಾರಣ್ಣ ತಮಗೆ ಬೇಕಾದಂತೆ ಸನ್ನಿವೇಶ ಸೃಷ್ಟಿಸಿದರೋ ಒಟ್ಟಿನಲ್ಲಿ ಮೈತ್ರಿ ಸರಕಾರದ ವಿಮಾನ ಟೇಕ್ ಆಫ್ ಆಗ್ತಾನೇ ಇಲ್ಲ.

ಪೂರಕ ಬಜೆಟ್ ಸಾಕು ಎಂಬ ಕವಣೆ ಕಲ್ಲು
ಯಾವಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಜೆಟ್ ಮಂಡಿಸುವ ಮಾತನಾಡಿದರೋ ಆ ಮಾತಿಗೆ ಕಾಯುತ್ತಿದ್ದರೇನೋ ಎಂಬಂತೆ ಮೊದಲ ಕವಣೆ ಕಲ್ಲು ಬೀಸಿದರು ಸಿದ್ದರಾಮಯ್ಯ. "ಇದು ಮೈತ್ರಿ ಸರಕಾರ ಕಣ್ರೀ. ನಾವು (ಕಾಂಗ್ರೆಸ್) ಈಗಾಗಲೇ ಪೂರ್ಣ ಪ್ರಮಾಣದ ಬಜೆಟ್ ಮಾಡಿದ್ದೇವೆ. ಏನೇನು ಯೋಜನೆ ಘೋಷಿಸಿದ್ದೆವೋ ಅದನ್ನು ಮುಂದುವರಿಸಿಕೊಂಡು, ಅವರು ಯಾವ ಯೋಜನೆ ಪರಿಚಯಿಸಬೇಕೋ ಅದಕ್ಕೆ ಪೂರಕ ಬಜೆಟ್ ಮಾಡಿದರೆ ಸಾಕು" ಅಂದರು ಸಿದ್ದು. ಅಲ್ಲಿಗೆ ನೋಡಿ ಹೊತ್ತಿಕೊಂಡಿತು ಬೆಂಕಿ.

ಬುದ್ಧಿವಂತಿಕೆ ಉತ್ತರ ಕೊಟ್ಟವರು ವೀರಪ್ಪ ಮೊಯಿಲಿ
ಆದರೆ ಕುಮಾರಸ್ವಾಮಿ ಹೇಳುತ್ತಿರುವುದು ಏನೆಂದರೆ, ಸರಕಾರ ಬದಲಾದಾಗ ಬಜೆಟ್ ಮಂಡಿಸುವುದು ರೂಢಿ. ಇನ್ನು ಹೊಸ ಶಾಸಕರು ಬಂದಿರುತ್ತಾರೆ. ಅವರಿಗೆ ಹೊಸ ಯೋಜನೆಗಳನ್ನು ಮಾಡಬೇಕಾಗುತ್ತದೆ. ಇವರಿಬ್ಬರ ವಾದಕ್ಕೆ ಸರಿಯಾದ ಹಾಗೂ ಬುದ್ಧಿವಂತಿಕೆ ಉತ್ತರ ನೀಡಿದವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ. ಇಬ್ಬರ ಮಾತಲ್ಲೂ ಸತ್ಯ ಇದೆ. ಆ ಬಗ್ಗೆ ನನಗೆ ಸಹಮತ ಇದೆ ಎಂದು ಉತ್ತರ ನೀಡಿದರು. ಆದರೆ ಈಗಿನ ಪರಿಸ್ಥಿತಿಯಲಿ ಮೈತ್ರಿ ಸರಕಾರದಲ್ಲಿ ಅಸಮಾಧಾನವೇ ಮೇಲುಗೈ ಆಗಿರುವಾಗ ತರ್ಕ ಯಾರಿಗೂ ಬೇಕಾದಂತೆ ಕಾಣುವುದಿಲ್ಲ.

ಒಳ್ಳೆಯವರಾಗುವ ಪ್ರಯತ್ನ ಇಬ್ಬರಿಂದಲೂ ಆಗುತ್ತಿದೆ
"ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ನಮ್ಮ ಆಯ್ಕೆ ಆಗಿರಲಿಲ್ಲ". "ನಾನು ಸಾಂದರ್ಭಿಕ ಶಿಶು". "ಲೋಕಸಭೆ ಚುನಾವಣೆ ತನಕ ಈ ಮೈತ್ರಿ ಸರಕಾರಕ್ಕೆ ಏನೂ ತೊಂದರೆ ಇಲ್ಲ". ಇಂಥ ಮಾತುಗಳೆಲ್ಲ ಮುಂದಿನ ಬೆಳೆವಣಿಗೆಗಳ ನಿರೀಕ್ಷಣಾ ಜಾಮೀನಿನಂತೆಯೇ ಗೋಚರಿಸುತ್ತವೆ. ಚುನಾವಣೆ ಎದುರಾದರೂ ಮುಜುಗರವಾಗದಂತೆ ಜನರ ಎದುರು ಮತ ಕೇಳುವಂತಿರಬೇಕು ಎಂಬ ಲೆಕ್ಕಾಚಾರ ಇದೆ. ಆ ಕಾರಣಕ್ಕೇ ಎರಡೂ ಪಕ್ಷದಿಂದ ತುಂಬ ಎಚ್ಚರಿಕೆ ಹೆಜ್ಜೆಗಳನ್ನು ಇಡಲಾಗುತ್ತಿದೆ. ಇದು ಬಹಳ ಕಾಲ ಇರುವ ಸರಕಾರ ಅಲ್ಲ ಎಂಬ ಕಾರಣಕ್ಕೇ ಎಷ್ಟು ಸಾಧ್ಯವೋ ಅಷ್ಟು ಜನರೆದುರು ಒಳ್ಳೆಯವರಾಗುವ ಪ್ರಯತ್ನ ಜೆಡಿಎಸ್ ಹಾಗೂ ಕಾಂಗ್ರೆಸ್ ನಿಂದ ಆಗುತ್ತಿದೆ.

ಚಳಿ ಕಾಯಿಸಲು ಹವಣಿಸುತ್ತಿರುವ ಬಿಜೆಪಿ
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಒಳಗಿರಲಿ ಅನ್ನೋದು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯದಲ್ಲಿ ಈ ಹಿಂದೆ ಅಧಿಕಾರ ಇಲ್ಲದೆ ಚಡಪಡಿಸಿದ್ದ ನಾಯಕರು ಹಾಗೂ ಸಿದ್ದರಾಮಯ್ಯರನ್ನು ಹಣಿಯಲು ಬಯಸುವವರ ಅಪೇಕ್ಷೆಯಷ್ಟೇ. ಆದ್ದರಿಂದಲೇ ಕಾಂಗ್ರೆಸ್ ನೊಳಗೆ ಭಿನ್ನಾಭಿಪ್ರಾಯ ಕೊತಕೊತ ಕುದಿಯುತ್ತಿದೆ. ಆ ಸ್ಥಿತಿಗೆ ತಮ್ಮ ಕೈಲಾದಷ್ಟು ಸೌದೆ ತುರುಕಿ, ಸೀಮೆ ಎಣ್ಣೆ ಸುರಿಯುತ್ತಿದ್ದಾರೆ ಸಿದ್ದರಾಮಯ್ಯ. ಈ ಸನ್ನಿವೇಶದಲ್ಲಿ ಸಾಧ್ಯವಾಗಿಬಿಟ್ಟರೆ, ಸರಕಾರ ಕೆಡವಿ, ಚಳಿ ಕಾಯಿಸಿಕೊಳ್ಳೋಣ ಎಂಬ ಇರಾದೆ ಬಿಜೆಪಿಯಲ್ಲಿದೆ.












Click it and Unblock the Notifications