ಹಾನಗಲ್ ವಿಧಾನಸಭಾ ಉಪ ಚುನಾವಣೆಯ ಕಣದಲ್ಲಿ ಬಿಜೆಪಿ ಗೆಲುವಿಗೆ ಎದುರಾಗಿರುವ ಕಂಟಕಗಳು!
ಬೆಂಗಳೂರು, ಅ.27: ಇಡೀ ಆಡಳಿತ ಯಂತ್ರ ಹಾನಗಲ್ಗೆ ವರ್ಗಗೊಂಡಿದೆ. ಉಪ ಚುನಾವಣೆಯ ಕಣ ರಂಗೇರಿದೆ. ಸಿಎಂ ಬಸವರಾಜ ಬೊಮ್ಮಾಯಿ ಹಾದಿಯಾಗಿ ಇಡೀ ಸರ್ಕಾರದ ಆಡಳಿತ ಯಂತ್ರ ಶಿಫ್ಟ್ ಆಗಿದೆ. ಹಾನಗಲ್ ಉಪ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿರುವ ಕಾಂಗ್ರೆಸ್ನ ಘಟಾನುಘಟಿ ನಾಯಕರು ಅಖಾಡಕ್ಕೆ ಇಳಿದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಸಮರ ಎನ್ನುವುದಕ್ಕಿಂತಲೂ ಮೂರು ತಿಂಗಳ ಹಿಂದಷ್ಟೇ ಸಿಎಂ ಆಗಿ ಅಧಿಕಾರ ವಹಿಸಿಕೊಂಡಿರುವ ಬಸವರಾಜ ಬೊಮ್ಮಾಯಿ ಅವರ ಭವಿಷ್ಯದ ಮೊದಲ ಅಗ್ನಿ ಪರೀಕ್ಷೆ. ಹಾನಗಲ್ ಅಳಿಯನಾಗಿರುವ ಬೊಮ್ಮಾಯಿ ಶತಾಯ ಗತಾಯ ಗೆಲುವು ಸಾಧಿಸಲು ಅಲ್ಲಿಯೇ ಮೊಕ್ಕಾಂ ಹೂಡಿದ್ದಾರೆ. ಆದರೆ ಅಲ್ಲಿನ ವಾಸ್ತವ ಚಿತ್ರಣವೇ ಬೇರೆಯದ್ದೇ ಇದೆ.
ರಾಜ್ಯ ರಾಜಕಾರಣದಲ್ಲಿ ಬದಲಾವಣೆಯ ಪರ್ವದಿಂದ ಅನಿರೀಕ್ಷಿತವಾಗಿ ಮುಖ್ಯಮಂತ್ರಿ ಸ್ಥಾನ ಬಸವರಾಜ ಬೊಮ್ಮಾಯಿ ಅವರಿಗೆ ಒಲಿದಿತ್ತು. ಸಿಎಂ ಆಗಿ ಮೂರು ತಿಂಗಳು ಆದ ಬಳಿಕ ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಎದುರಾಗಿದೆ. ಆಡಳಿತರೂಢ ಬಿಜೆಪಿ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದೇ ಆದಲ್ಲಿ ಬಸವರಾಜ ಬೊಮ್ಮಾಯಿ ಖುರ್ಚಿ ಮತ್ತಷ್ಟು ಗಟ್ಟಿಯಾಗಲಿದೆ ಏಕೆ? ಮುಂದೆ ಓದಿ...
ಅಳಿಯ ಬೊಮ್ಮಾಯಿ ಭವಿಷ್ಯ
ಬೊಮ್ಮಾಯಿ ರಾಜಕೀಯ ಭವಿಷ್ಯದ ಹೊಸ ಹಾದಿಯೇ ಸೃಷ್ಠಿಯಾಗಲಿದೆ. ಉಪ ಚುನಾವಣೆಯಲ್ಲಿ ಪಕ್ಷ ಗೆಲ್ಲುವುದು ಆಡಳಿತ ರೂಢ ಸಿಎಂನ ಸಾಮರ್ಥ್ಯವನ್ನು ಅಳೆಯುವ ಒಂದು ವಿಧಾನವನ್ನಾಗಿ ಪಕ್ಷಗಳು ಪರಿಗಣಿಸುತ್ತವೆ. ಸಾರ್ವತ್ರಿಕ ಚುನಾವಣೆಗೆ ಹೋಲಿಸಿದರೆ ಉಪ ಚುನಾವಣೆಗೆ ಮಹತ್ವವೇ ಕೊಡುವ ಹಾಗಿಲ್ಲ, ಹಾಗಂತ ಉಪ ಚುನಾವಣೆಯ ಫಲಿತಾಂಶವನ್ನು ತೆಗೆದು ಹಾಕುವಂತಿಲ್ಲ. ಯಡಿಯೂರಪ್ಪ, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದ ವೇಳೆ ಅವರ ಖುರ್ಚಿ ಗಟ್ಟಿಗೊಳಿಸಿದ್ದು ಉಪ ಚುನಾವಣೆ ಕಣದ ಫಲಿತಾಂಶಗಳು ಎಂಬುದಕ್ಕೆ ಅನೇಕ ನಿದರ್ಶನಗಳಿವೆ.
ಉಪ ಚುನಾವಣೆ ಫಲಿತಾಂಶ ಮುಖ್ಯ ಏಕೆ?
ಸಿದ್ದರಾಮಯ್ಯ ಸಿಎಂ ಆದ ವೇಳೆ ಅವರನ್ನು ಪದಚ್ಯುತಗೊಳಿಸವ ಪ್ರಯತ್ನವನ್ನು ವಿಫಲಗೊಳಿಸಿದ್ದು ಉಪ ಚುನಾವಣೆ ಫಲಿತಾಂಶವೇ. ಇದೇ ವರ್ಷ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನಗಳು ಎದುರಾದಾಗ, ಶಿರಾ ಉಪ ಚುನಾವಣೆ ಕಣದಲ್ಲಿ ಕಮಲ ಅರಳಿಸಿ ಯಡಿಯೂರಪ್ಪ ಕುರ್ಚಿ ಭದ್ರ ಪಡಿಸಿಕೊಂಡಿದ್ದರು. ಸಿಎಂ ಖುರ್ಚಿಯಿಂದ ಇಳಿಸುವ ಡೆಡ್ಲೈನ್ ಮುಂದಕ್ಕೆ ಹೋಗಿದ್ದು ಕಣ್ಣೆದುರು ಇದೆ. ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಇದು ಅನ್ವಯಿಸುತ್ತದೆ. ಸಿಎಂ ಆಗಿ ಮೂರು ತಿಂಗಳು ಕಳೆದಿವೆ. ಉತ್ತರ ಕರ್ನಾಟಕದವರು, ಮಿಗಿಲಾಗಿ ಹಾನಗಲ್ ಕ್ಷೇತ್ರದ ಅಳಿಮಯ. ಬಿಜೆಪಿ ಅನೇಕ ಸಲ ಗೆಲುವು ಸಾಧಿಸಿರುವ ಕ್ಷೇತ್ರ ಹಾನಗಲ್. ಈ ಎಲ್ಲಾ ಕಾರಣಗಳಿಗಾಗಿ ಹಾನಗಲ್ ಕ್ಷೇತ್ರ ಬಸವರಾಜ ಬೊಮ್ಮಾಯಿ ಪಾಲಿಗೆ ದೊಡ್ಡ ಅಗ್ನಿ ಪರೀಕ್ಷೆಯಾಗಿದೆ. ಹಾನಗಲ್ ಕ್ಷೇತ್ರದಲ್ಲಿ ಗೆಲುವು ಸಾಧಿಸಲೇಬೇಕು ಎಂಬ ಅನಿವಾರ್ಯತೆ ಎದುರಾಗಿದೆ. ಆದರೆ ಹಾನಗಲ್ ಕ್ಷೇತ್ರದ ವಾಸ್ತವ ಚಿತ್ರಣ ಬೇರೆಯದ್ದೇ ಹೇಳುತ್ತಿದೆ.
ಉದಾಸಿ ಕೋಟೆಗೆ ಬೇಧಿಸಿದ್ದ ಮಾನೆ
ಹಾನಗಲ್ ಕ್ಷೇತ್ರದ ವಿಚಾರಕ್ಕೆ ಬಂದರೆ ಅರು ಬಾರಿ ಶಾಸಕರಾಗಿ ಆಯ್ಕೆಯಾಗಿ ಮಂತ್ರಿಯಾಗಿದ್ದವರು ಸಿಎಂ ಉದಾಸಿ. ಕೋವಿಡ್ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರು ಮೃತಪಟ್ಟಿದ್ದರು. ಯಡಿಯೂರಪ್ಪ ಅವರನ್ನು ನಂಬಿಕೊಂಡು 2004 ರಲ್ಲಿ ಬಿಜೆಪಿಗೆ ಕಾಲಿಟ್ಟಿದ್ದ ಉದಾಸಿ ಯಡಿಯೂರಪ್ಪ ಅವರ ಕೆಜೆಪಿ ಸೇರಿ ಒಮ್ಮೆ ಸೋತಿದ್ದರು. ಯಡಿಯೂರಪ್ಪ ಜತೆಗೆ ಮರಳಿ ಬಿಜೆಪಿ ಸೇರ್ಪಡೆಯಾಗಿ ಗೆಲುವು ಸಾಧಿಸಿದ್ದರು. ವಿಪರ್ಯಾಸವೆಂದರೆ ಕಳೆದ 2018 ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಆರು ಸಾವಿರ ಮತಗಳಿಂದ ಜಯ ಗಳಿಸಿದ್ದರು. ಪರಾಭವಗೊಂಡಿದ್ದು ಕಾಂಗ್ರೆಸ್ ಪಕ್ಷದ ಶ್ರೀನಿವಾಸ್ ಮಾನೆ. ಮೂರು ಬಾರಿ ಆರರಿಂದ ಐದು ಸಾವಿರ ಮತಗಳ ಅಂತರದಲ್ಲಿ ಸೋಲು ಕಂಡಿದೆ ಕಾಂಗ್ರೆಸ್. ಈ ಬಾರಿ ಹಾನಗಲ್ ಕ್ಷೇತ್ರದಲ್ಲಿ ಮತ್ತೆ ಕಮಲ ಅರಳುತ್ತದೆ ಎಂದು ಸ್ಪಷ್ಟವಾಗಿ ಹೇಳಲು ಸಾಧ್ಯವೇ ಇಲ್ಲ. ಯಾಕೆಂದರೆ ಕ್ಷೇತ್ರದಲ್ಲಿ ಆಗಿರುವ ಬದಲಾವಣೆ.
ಶ್ರೀನಿವಾಸ್ ಮಾನೆಯ ಪ್ರಭಾವ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಅರು ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದವರು ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ. ಕೊರೊನಾ ಸಮಯದಲ್ಲಿ ಕ್ಷೇತ್ರದಲ್ಲಿ ಓಡಾಡಿ ಅನೇಕರಿಗೆ ಆರ್ಥಿಕ ನೆರವು ನೀಡಿದ್ದಾರೆ. ಆಟೋ ಚಾಲಕರು, ಕೂಲಿ ಕಾರ್ಮಿಕರಿಗೆ ನೆರವಾಗಿ ಸುದ್ದಿಯಾಗಿದ್ದರು. ಈ ಮೂಲಕ ತನ್ನ ವರ್ಚಸ್ಸು ಬೆಳೆಸಿಕೊಂಡಿದ್ದರು. ಹೀಗಾಗಿ ಶ್ರೀನಿವಾಸ್ ಮಾನೆ ಪರ ಜನಪರ ಒಲವು ಹೆಚ್ಚಿದೆ. ಯಡಿಯೂರಪ್ಪ ಅವರು ಸಿಎಂ ಕುರ್ಚಿಯಿಂದ ಇಳಿದಿದ್ದಾರೆ. ಸಿ.ಎಂ. ಉದಾಸಿ ಕುಟುಂಬಕ್ಕೆ ಬಿಜೆಪಿ ಟಿಕೆಟ್ ನೀಡಿ ಕಣಕ್ಕೆ ಇಳಿಸಬೇಕೆಂಬ ಯಡಿಯೂರಪ್ಪ ಅಂತರಾಳದ ಆಸೆಗೆ ಬಿಜೆಪಿ ನಾಯಕರು ತಣ್ಣೀರು ಎರಚಿದ್ದಾರೆ. ಹೀಗಾಗಿ ಉದಾಸಿ ಕುಟುಂಬ, ಕುಟುಂಬದ ವರ್ಚಸ್ಸಿನ ಮೇಲೆ ಬೀಳುತ್ತಿದ್ದ ಮತಗಳು ಈ ಬಾರಿ ಬಿಜೆಪಿಗೆ ಬೀಳುತ್ತವೆ ಎಂಬುದು ಅನುಮಾನ. ಬಿಜೆಪಿ ಪಕ್ಷದ ಅಭ್ಯರ್ಥಿ ಶಿವರಾಜ್ ಸಜ್ಜನರ್ ಹಾವೇರಿಯಲ್ಲಿ ಬಿಜೆಪಿ ಶಾಸಕರಾಗಿದ್ದರೂ ಹಾನಗಲ್ನ ಸಂಪಕ ಕಡಿಮೆ. ಸಹಕಾರಿ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರ ಆರೋಪ ಹೊತ್ತಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ವಿಚಾರದಲ್ಲಿ ನೋಡುವುದಾರೆ, ಕಾಂಗ್ರೆಸ್ ಅಭ್ಯರ್ಥಿಯ ಹೆಚ್ಚು ವರ್ಸಸ್ಸು ಬೆಳೆಸಿಕೊಂಡಿದ್ದಾರೆ. ಇದು ಕೂಡ ಬಿಜೆಪಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ.
Recommended Video
ಅಗ್ನಿ ಪರೀಕ್ಷೆಯಲ್ಲಿ ಬೊಮ್ಮಾಯಿ ಗೆಲ್ಲುತ್ತಾರಾ
ಸಮಾಜವಾದಿ ಹಿನ್ನೆಲೆಯಿಂದ ಬಂದ ಸಿ.ಎಂ. ಉದಾಸಿ ಆರು ಬಾರಿ ಹಾನಗಲ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸ್ವಾತಂತ್ರ್ಯ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕೆ ಇಳಿದು 1983 ರಲ್ಲಿ ಗೆಲುವು ಸಾಧಿಸಿದ್ದ ಉದಾಸಿ ಬಳಿಕ ಜನತಾದಳ ಸೇರಿದ್ದರು. ಜನತಾದಳ ಇಬ್ಬಾಗವಾದ ಬಳಿಕ ಜೆಡಿಯು ಪ್ರತಿನಿಧಿಸಿದ್ದ ಉದಾಸಿ ದಿವಂಗತ ಮಾಜಿ ಸಿಎಂ ಜೆ.ಎಚ್. ಪಟೇಲರ ಅನುಯಾಯಿಯಾಗಿ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದರು. ಹಾನಗಲ್ ಕ್ಷೇತ್ರದಲ್ಲಿಸಿಎಂ ಉದಾಸಿ ಸೊಸೆ ರೇವತಿ ಉದಾಸಿ ಅವರಿಗೆ ಟಿಕೆಟ್ ತಪ್ಪಿದೆ. ಯಡಿಯೂರಪ್ಪ ಅಧಿಕಾರದಿಂದ ಕೆಳಗೆ ಇಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯ ಹೆಚ್ಚಿರುವ ವರ್ಚಸ್ಸು ಬಿಜೆಪಿ ಪಾಲಿಗೆ ಬಿಸಿ ತುಪ್ಪಾವಾಗಿದೆ. ಇದೆಲ್ಲವನ್ನೂ ಮೀರಿ ಬಸವರಾಜ ಬೊಮ್ಮಾಯಿ ತನ್ನ ತವರು ಜಿಲ್ಲೆಯ ಉಪ ಚುನಾವಣೆ ಕಣದಲ್ಲಿ ಗೆಲವು ಸಾಧಿಸುವುದು ದೊಡ್ಡ ಸವಾಲಾಗಿ ಪರಿಣಿಸಿದೆ. ಇದೆಲ್ಲವು ಗೊತ್ತಿತ್ತು ಬೊಮ್ಮಾಯಿ ಗೆಲುವಿನ ಪ್ರತಿಷ್ಠೆಗೆ ಬಿದ್ದಿದ್ದಾರೆ. ಈ ಅಗ್ನಿ ಪರೀಕ್ಷೆಯಲ್ಲಿ ಬೊಮ್ಮಾಯಿ ಗೆಲ್ಲುತ್ತಾರಾ? ಸೋಲುತ್ತಾರಾ? ಎಂಬುದು ಉಪ ಚುನಾವಣೆ ಕಣದ ಫಲಿತಾಂಶದ ಬಳಿಕ ಗೊತ್ತಾಗಲಿದೆ.