Covid Fourth Wave: ಬೆಂಗಳೂರು ನಾಗರಿಕರೇ, ಮಾರ್ಗಸೂಚಿ ಮೇಲೆ ಗಮನವಿಡಿ, ಭಯ ಬಿಡಿ
ಬೆಂಗಳೂರು, ಏಪ್ರಿಲ್ 26: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಸಾರ್ವಜನಿಕ ವಲಯದಲ್ಲಿ ಆತಂಕವನ್ನು ಹುಟ್ಟು ಹಾಕುತ್ತಿದೆ. ಸಿಲಿಕಾನ್ ಸಿಟಿಯ ಜನರು ಈಗಾಗಲೇ ಕೋವಿಡ್-19 ಮೊದಲ ಅಲೆ, ಎರಡನೇ ಅಲೆ ಹಾಗೂ ಮೂರನೇ ಅಲೆಯನ್ನು ನೋಡಿದ್ದಾರೆ. ಈಗ ನಾಲ್ಕನೇ ಅಲೆ ಮುನ್ಸೂಚನೆ ಸಿಕ್ಕಿದೆ. ಆದರೆ ಈ ಬಗ್ಗೆ ಜನರು ಆತಂಕಪಡಬೇಕಾದ ಅಗತ್ಯವಿಲ್ಲ.
ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯು ಕ್ರಮೇಣ ಹೆಚ್ಚಳವಾಗುತ್ತಿರುವುದು ಜನರಲ್ಲಿ ಒಂದು ರೀತಿ ಭಯ ಹುಟ್ಟಿಸುತ್ತಿದೆ. ಆದರೆ ಕರ್ನಾಟಕ ಹಾಗೂ ಬೆಂಗಳೂರಿನ ಚಿತ್ರಣವು ಬೇರೆ ರಾಜ್ಯಗಳಿಗೆ ಹೋಲಿಸಿದರೆ ವಿಭಿನ್ನವಾಗಿದೆ.
ಕರ್ನಾಟಕದಲ್ಲಿ ಹಾಗಿದ್ದರೆ ಕೊರೊನಾವೈರಸ್ ನಾಲ್ಕನೇ ಅಲೆಯ ಬಗ್ಗೆ ಜನರು ಯಾವ ರೀತಿ ಜಾಗೃತರಾಗಿರಬೇಕು. ಸಿಲಿಕಾನ್ ಸಿಟಿಯ ಮಂದಿ ಏನೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು?, ಈ ಹಿಂದಿನ ಮೂರು ಅಲೆಗಳಿಂದ ಕಲಿತ ಪಾಠಗಳು ಜನರಿಗೆ ಯಾವ ರೀತಿ ಪ್ರಯೋಜನಕ್ಕೆ ಬರುತ್ತವೆ ಎನ್ನುವುದರ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಸಿಲಿಕಾನ್ ಸಿಟಿಯ ಜನರಿಗೆ ಕೋವಿಡ್ ಬಗ್ಗೆ ಆತಂಕ ಬೇಕಾಗಿಲ್ಲ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಬಗ್ಗೆ ಬೆಂಗಳೂರು ಸೇರಿದಂತೆ ರಾಜ್ಯದ ಜನರು ಯಾವುದೇ ರೀತಿ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಬೆಂಗಳೂರು ನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹೊರತಾಗಿ ಬೇರೆ ಯಾವುದೇ ಜಿಲ್ಲೆಗಳಲ್ಲಿ ಒಂದೇ ಒಂದು ಕೋವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿಲ್ಲ. ರಾಜ್ಯದಲ್ಲಿ ಕಳೆದ ಏಪ್ರಿಲ್ 25ರಂದು ಒಟ್ಟು 64 ಹೊಸ ಕೊರೊನಾವೈರಸ್ ಪ್ರಕರಣಗಳು ವರದಿಯಾಗಿದ್ದರೆ, ಅದರಲ್ಲಿ 63 ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿವೆ. ಉಳಿದ ಒಂದು ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪತ್ತೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದ ಉತ್ತರದ ರಾಜ್ಯಗಳಲ್ಲಿ ನಾಲ್ಕನೇ ಅಲೆಯ ಆತಂಕ
ಭಾರತದಲ್ಲಿ ಏಪ್ರಿಲ್ ಎರಡನೇ ವಾರದ ನಂತರದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಕ್ರಮೇಣ ಏರಿಕೆ ಕಂಡು ಬರುತ್ತಿದೆ. ಈ ರೀತಿ ಸೋಂಕಿತ ಪ್ರಕರಣಗಳ ಏರಿಕೆಗೆ ಉತ್ತರ ಭಾರತ ರಾಜ್ಯಗಳು ಕಾರಣವಾಗಿವೆ. ದೆಹಲಿ, ಹರಿಯಾಣ, ಉತ್ತರ ಪ್ರದೇಶದಲ್ಲಿ ಪ್ರಕರಣಗಳು ಹೆಚ್ಚಾಗಿವೆ. ಎರಡು ವಾರಗಳಿಂದ ಈ ರಾಜ್ಯಗಳಲ್ಲಿನ ಪ್ರಕರಣಗಳ ಏರಿಕೆಯು ಸೋಂಕಿತರ ಸಂಖ್ಯೆ ಹೆಚ್ಚಾಗುವುದಕ್ಕೆ ಮುಖ್ಯ ಕಾರಣವಾಗಿದೆ. ಈ ಪೈಕಿ ದೆಹಲಿಯಲ್ಲಿ ನಾಲ್ಕು ದಿನಗಳಿಂದ ಪ್ರತಿನಿತ್ಯ 1000ಕ್ಕಿಂತ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ.
ದೆಹಲಿಯಲ್ಲಿ ಕೋವಿಡ್-19 ಚಿತ್ರಣವೇ ಬದಲಾಗಿದೆ. 16 ದಿನಗಳಲ್ಲಿ 100ರ ಆಸುಪಾಸಿನಲ್ಲಿದ್ದ ಕೋವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆ 1000 ಗಡಿ ತಲುಪಿದೆ. ಕಳೆದ ಡಿಸೆಂಬರ್ ಮತ್ತು ಜನವರಿ ವೇಳೆಗೆ 12 ದಿನಗಳಲ್ಲಿ 2000 ಗಡಿ ದಾಟಿದ್ದ ಸಂಖ್ಯೆ ಅಲ್ಲಿಂದ ಮುಂದೆ 15 ದಿನಗಳಲ್ಲಿ 2 ರಿಂದ 5 ಸಾವಿರಕ್ಕೆ ಸೋಂಕಿತ ಪ್ರಕರಣಗಳು ಹೆಚ್ಚಾಗಿದ್ದವು.

ಕೊರೊನಾವೈರಸ್ ನಾಲ್ಕನೇ ಅಲೆಯ ಕುರಿತು ತಜ್ಞರ ಸಲಹೆಗಳೇನು?
''ಜನರು ಮಾಸ್ಕ್ ಬಳಸದಿದ್ದಾಗ ಸೋಂಕಿತ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿತ್ತು. ಈ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತಗಳು ಕಂಡುಬರುತ್ತವೆ, ಆದರೆ ಇಲ್ಲಿ ಸೋಂಕಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆಯು ಮುಖ್ಯವಾಗಿರುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿಯ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಡಾ ಲಲಿತ್ ಕಾಂತ್ ಸಲಹೆ ನೀಡಿದ್ದಾರೆ. ಈ ಹಂತದಲ್ಲಿ ಜ್ವರ, ಕೆಮ್ಮು, ನೆಗಡಿಯಂತಹ ಕೋವಿಡ್-19 ಸೋಂಕಿನ ಲಕ್ಷಣಗಳು ಕೇವಲ ಮೂರರಿಂದ ಐದು ದಿನಗಳಲ್ಲಿ ವಾಸಿಯಾಗುತ್ತದೆ,'' ಎಂದು ತಜ್ಞರು ಹೇಳುತ್ತಿದ್ದಾರೆ.

ಬೆಂಗಳೂರಿಗರೇ ಎಚ್ಚರಿಕೆಯಿರಿ ಆದರೆ ಭಯದ ಅಗತ್ಯವಿಲ್ಲ
ದೇಶದಲ್ಲಿ ಕೋವಿಡ್-19 ನಾಲ್ಕನೇ ಅಲೆಯ ಬಗ್ಗೆ ಗುಲ್ಲಾಗುತ್ತಿದೆ. ಆದರೆ ರಾಜ್ಯದ ವಸ್ತುಸ್ಥಿತಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಕರ್ನಾಟಕದಲ್ಲಿ ಕೋವಿಡ್-19 ಕುರಿತು ಜನರಿಗೆ ಆತಂಕ ಬೇಕಾಗಿಲ್ಲ. ಕೊರೊನಾವೈರಸ್ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವುದರ ಹೊರತಾಗಿಯೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ತೀರಾ ವಿರಳವಾಗಿದೆ. ಬೆರಳೆಣಿಕೆಯಷ್ಟು ಸೋಂಕಿತರು ಮಾತ್ರ ಆಸ್ಪತ್ರೆಗಳಿಗೆ ದಾಖಲಾಗುತ್ತಿದೆ. ಇನ್ನು ಸಾವಿನ ಸಂಖ್ಯೆಯಂತೂ ಇಂದಿಗೂ ಎರಡು ಅಂಕಿಯನ್ನು ಮೀರಿಲ್ಲ. ವಾಸ್ತವ ಸ್ಥಿತಿ ಹೀಗಿರುವಾಗ ಬೆಂಗಳೂರಿನ ಮಂದಿ ಕೋವಿಡ್-19 ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿದರೆ ಸಾಕಾಗುತ್ತದೆ. ಇಲ್ಲಿ ಆತಂಕಪಡಬೇಕಾದ ಯಾವುದೇ ಅಗತ್ಯವೂ ಇರುವುದಿಲ್ಲ.

ಬೆಂಗಳೂರಿಗರೇ ಮುಖಕ್ಕೆ ಮಾಸ್ಕ್ ಧರಿಸಿ ಸುರಕ್ಷಿತವಾಗಿರಿ
ಸಿಲಿಕಾನ್ ಸಿಟಿಯ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ ಮತ್ತು ಪ್ರಯಾಣ ಸಂದರ್ಭದಲ್ಲಿ ಜನರು ಮುಖಕ್ಕೆ ಮಾಸ್ಕ್ ಧರಿಸುವುದಕ್ಕೆ ಕಡ್ಡಾಯಗೊಳಿಸಲಾಗಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದು ದಂಡದೊಂದಿಗೆ ಶಿಕ್ಷಾರ್ಹವಾಗಿರುತ್ತದೆ. ಸ್ಥಳೀಯ ಅಧಿಕಾರಿಗಳು ಅದರ ಕಾನೂನುಗಳು, ನಿಯಮಗಳು ಅಥವಾ ನಿಬಂಧನೆಗಳಿಗೆ ಅನುಗುಣವಾಗಿ ಆದೇಶ ಹೊರಡಿಸುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜನರು ಕನಿಷ್ಠ 2 ಅಡಿ ದೈಹಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಿ. ರವಿಕುಮಾರ್ ಆದೇಶ ಹೊರಡಿಸಿದ್ದಾರೆ.

ಭಯ ಬಿಡಿ; ಮೂರನೇ ಡೋಸ್ ಪಡೆಯಿರಿ
ದೇಶದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಏಪ್ರಿಲ್ 10 ರಿಂದ ಕೋವಿಡ್-19 ಬೂಸ್ಟರ್ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈಗಾಗಲೇ ಘೋಷಿಸಿದೆ. ಮೊದಲ ಎರಡು ಅಲೆಗಳ ನಂತರ ಆರಂಭಿಸಲಾದ ಲಸಿಕೆ ವಿತರಣೆ ಅಭಿಯಾನದಿಂದ ಸಾವಿನ ಪ್ರಕರಣಗಳು ಮತ್ತು ತೀವ್ರ ಅಸ್ವಸ್ಥತೆಯ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಎರಡು ಡೋಸ್ ಲಸಿಕೆ ಪಡೆದುಕೊಂಡವರು ಮೂರನೇ ಡೋಸ್ ಲಸಿಕೆ ಪಡೆದುಕೊಳ್ಳುವುದಕ್ಕೂ ಅನುಮತಿ ನೀಡಲಾಗಿದೆ. ಈ ಹಂತದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಾವು ಎರಡನೇ ಡೋಸ್ ಪಡೆದುಕೊಂಡು 9 ತಿಂಗಳು ಕಳೆದಿದ್ದರೆ ಮೂರನೇ ಡೋಸ್ ಲಸಿಕೆಯನ್ನೂ ಪಡೆದುಕೊಳ್ಳಬಹುದು.

ರಾಜ್ಯದಲ್ಲಿ ಮೂರನೇ ಡೋಸ್ ಲಸಿಕೆಗೆ ಎಷ್ಟು?
ದೇಶದ ಖಾಸಗಿ ಕೋವಿಡ್-19 ಲಸಿಕೆ ಕೇಂದ್ರದಲ್ಲಿ ಕೋವಿಶೀಲ್ಡ್ ಬೂಸ್ಟರ್ ಲಸಿಕೆ ಒಂದು ಡೋಸ್ ದರವನ್ನು 600 ರೂಪಾಯಿ ಹಾಗೂ ಕೊವ್ಯಾಕ್ಸಿನ್ ಲಸಿಕೆಯ ಒಂದು ಡೋಸ್ ದರವನ್ನು 1200 ರೂಪಾಯಿಯಿಂದ 225 ರೂಪಾಯಿಗೆ ಕಡಿತಗೊಳಿಸಲಾಗಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನಾವಲ್ಲಾ ಮತ್ತು ಭಾರತ್ ಬಯೋಟೆಕ್ ಸಹ-ಸಂಸ್ಥಾಪಕಿ ಸುಚಿತ್ರಾ ಎಲಾ ಅವರು ಕೇಂದ್ರ ಸರ್ಕಾರದ ಜೊತೆ ನಡೆಸಿದ ಚರ್ಚೆಯ ನಂತರ ಟ್ವಿಟ್ಟರ್ನಲ್ಲಿ ಬೆಲೆ ಕಡಿತದ ಬಗ್ಗೆ ಘೋಷಿಸಿದ್ದಾರೆ.











Click it and Unblock the Notifications