ಪರಿಸರಪ್ರೇಮಿ, ಗಾಂಧಿವಾದಿ ವಿನಯ್ ಸಕ್ಸೇನಾ; ದೆಹಲಿ ಲೆ. ಗವರ್ನರ್ ಬಗ್ಗೆ ಕಿರು ಪರಿಚಯ

ಅನಿಲ್ ಬೈಜಲ್ ರಾಜೀನಾಮೆ ಬಳಿಕ ಕೆಲವಾರು ದಿನಗಳಿಂದ ತೆರವಾಗಿದ್ದ ದೆಹಲಿ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ವಿನಯ್ ಕುಮಾರ್ ಸಕ್ಸೇನಾ ನೇಮಕವಾಗಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೂತನ ದೆಹಲಿ ಲೆಫ್ಟಿನೆಂಟ್ ಗವರ್ನರ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

ಕೇಂದ್ರ ಸರಕಾರದ ಮಧ್ಯಮ, ಸಣ್ಣ ಮತ್ತು ಕಿರು ಉದ್ದಿಮೆ ಸಚಿವಾಲಯದ ಅಡಿಯಲ್ಲಿ ಬರುವ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ ಛೇರ್ಮನ್ ಆಗಿರುವ ವಿನಯ್ ಕುಮಾರ್ ಸಕ್ಸೇನಾ ಅವರನ್ನು ಕೇಂದ್ರಾಡಳಿತ ಪ್ರದೇಶವಾದ ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿರುವುದು ಕುತೂಹಲ ಮೂಡಿಸಿದೆ.

ನೇರ ಮಾತು, ನಡೆ ನುಡಿಗಳ ವಿನಯ್ ಸಕ್ಸೇನಾ ಪ್ರಖರ ಗಾಂಧಿವಾದಿಯೂ ಹೌದು. ದೆಹಲಿ ಅಧಿಕಾರ ಹಂಚಿಕೆಯ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ಮಧ್ಯೆ ಹಲವು ವರ್ಷಗಳಿಂದ ತಿಕ್ಕಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿನಯ್ ಕುಮಾರ್ ಸಕ್ಸೇನಾ ಈಗ ಲೆ. ಗವರ್ನರ್ ಆಗುತ್ತಿದ್ದು, ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಲ್ಲರು ಎಂಬ ಕುತೂಹಲವಂತೂ ಇದೆ. ಕಾರ್ಪೊರೇಟ್ ವಲಯದಿಂದ ಹಿಡಿದು ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದ ಸಕ್ಸೇನಾ ಒತ್ತಡದ ಸಂದರ್ಭವನ್ನು ನಿಭಾಯಿಸಬಲ್ಲ ಚಾಕಚಕ್ಯತೆ ಹೊಂದಿದ್ದಾರೆಂದು ಹೇಳಲಾಗುತ್ತಿದೆ. ಅವರ ಬಗ್ಗೆ ಒಂದು ಕಿರು ಪರಿಚಯ ಇಲ್ಲಿದೆ.

 ಸಕ್ಸೇನಾ ಜೀವನ ಹಾದಿ

ಸಕ್ಸೇನಾ ಜೀವನ ಹಾದಿ

ಗುಜರಾತ್ ಮೂಲದ ವಿನಯ್ ಸಕ್ಸೇನಾ ಹುಟ್ಟಿದ್ದು 1958, ಮಾರ್ಚ್ 23ರಂದು. 64 ವರ್ಷದ ಸಕ್ಸೇನಾ ಉತ್ತರ ಪ್ರದೇಶದ ಕಾನಪುರ್ ವಿಶ್ವವಿದ್ಯಾಲಯದಲ್ಲಿ ಓದಿದವರು. ತಮ್ಮ ವೃತ್ತಿಜೀವನದಲ್ಲಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಹಲವು ಖಾಸಗಿ ಮತ್ತು ಸರಕಾರಿ ಕಂಪನಿಗಳಲ್ಲಿ ಉನ್ನತ ಹುದ್ದೆ ನಿಭಾಯಿಸಿದ್ದಾರೆ.

1984ರಲ್ಲಿ ಜೆಕೆ ಗ್ರೂಪ್ ಸಂಸ್ಥೆಗೆ ಸಹಾಯಕ ಅಧಿಕಾರಿಯಾಗಿ ಉದ್ಯೋಗ ಆರಂಭಿಸಿದ ಅವರು ಮುಂದೆ ಸಿಇಒ ಆಗಿ ಬೆಳೆದರು. ಅಭಿವೃದ್ಧಿಪರ ಚಟುವಟಿಕೆಯ ಉದ್ದೇಶದಿಂದ ಎನ್‌ಸಿಸಿಎಲ್ ಎಂಬ ಎನ್‌ಜಿಒ ಸ್ಥಾಪನೆ ಮಾಡಿ ಅಭಿವೃದ್ಧಿ ಯೋಜನೆಗಳಿಗೆ ಜನಬೆಂಬಲ ರೂಪಿಸುವ ಕೆಲಸ ಮಾಡಿದರು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯಸ್ಥರಾಗಿ ಹಲವು ಮಹತ್ತರ ಬದಲಾವಣೆಗಳನ್ನು ತಂದರು. ಪೆಟ್ರೋಲಿಯಂ, ಪೋರ್ಟ್, ಜಲಸಂಪನ್ಮೂಲ, ಸಾಮಾಜಿಕ ಅಭಿವೃದ್ಧಿ, ವಿಪತ್ತು ನಿರ್ವಹಣೆ, ಸ್ವಚ್ಛತಾ ಅಭಿವೃದ್ಧಿ ಇತ್ಯಾದಿ ಅನೇಕ ಕಾರ್ಯ ಮತ್ತು ಕ್ಷೇತ್ರಗಳಲ್ಲಿ ಅವರು ಅನುಭವ ಹೊಂದಿದ್ದಾರೆ.

 ಬ್ರಿಟನ್ ಮ್ಯೂಸಿಯಂ ಘಟನೆ

ಬ್ರಿಟನ್ ಮ್ಯೂಸಿಯಂ ಘಟನೆ

ವಿನಯ್ ಕುಮಾರ್ ಸಕ್ಸೇನಾ ಅಪ್ಪಟ ಗಾಂಧಿವಾದಿ ಮತ್ತು ಗಾಂಧಿಭಕ್ತ. ಇದಕ್ಕೆ ಉದಾಹರಣೆ 2008ರ ಒಂದು ಘಟನೆ. ಬ್ರಿಟನ್ ರಾಜಧಾನಿ ಲಂಡನ್ ನಗರದಲ್ಲಿರುವ ಮೇಡಮ್ ತುಸ್ಸಾದ್ ವ್ಯಾಕ್ಸ್ ಮ್ಯೂಸಿಯಂನಲ್ಲಿ (Madame Tussad's Wax Museum) ಮಹಾತ್ಮ ಗಾಂಧಿ ಪ್ರತಿಮೆಯನ್ನು ಯಾವುದೋ ಮೂಲೆಯ ಕಸದ ಬುಟ್ಟಿ ಬಳಿ ಇರಿಸಲಾಗಿತ್ತು. ಅದನ್ನು ಕಂಡ ವಿನಯ್ ಕುಮಾರ್ ಕೂಡಲೇ ಆಕ್ಷೇಪ ಎತ್ತಿದರು. ಕೂಡಲೇ ಅವರು ಅಂದಿನ ಪ್ರಧಾನಿ ಗಾರ್ಡನ್ ಬ್ರೌನ್‌ಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದರು.

"ದಕ್ಷಿಣ ಆಫ್ರಿಕಾದಲ್ಲಿ ಶತಮಾನದ ಹಿಂದೆ ಇದ್ದ ವರ್ಣಭೇದ ನೀತಿ ಬಗ್ಗೆ ಇಡೀ ವಿಶ್ವದ ಗಮನ ಸೆಳೆದಿದ್ದ ವ್ಯಕ್ತಿಗೆ ಮೇಲೆ ಈಗ ಅದೇ ಭೇದ ನೀತಿ ಮಾಡುತ್ತಿರುವುದು ವಿಪರ್ಯಾಸ ಎನಿಸುವುದಿಲ್ಲವೇ?" ಎಂದು ತಮ್ಮ ಪತ್ರದಲ್ಲಿ ಪ್ರಶ್ನೆ ಮಾಡಿದರು. ಸಕ್ಸೇನಾ ಬರೆದ ಈ ಪತ್ರದ ಪರಿಣಾಮವಾಗಿ ಮ್ಯೂಸಿಯಂ ವತಿಯಿಂದ ಅಧಿಕೃತವಾಗಿ ಕ್ಷಮೆ ಯಾಚನೆ ಆಯಿತು. ಅಷ್ಟೇ ಅಲ್ಲ, ವಿಶ್ವನಾಯಕರ ಹಾಲ್‌ನಲ್ಲಿ ಗಾಂಧಿ ಪ್ರತಿಮೆಯನ್ನು ಸೇರಿಸಲಾಯಿತು.

 ಅಭಿವೃದ್ಧಿ ಯೋಜನೆ ಪರ

ಅಭಿವೃದ್ಧಿ ಯೋಜನೆ ಪರ

ಗುಜರಾತ್‌ನಲ್ಲಿ ಸರದಾರ್ ಸರೋವರ್ ಯೋಜನೆ ಸೇರಿದಂತೆ ಹಲವು ಜಲವಿದ್ಯುತ್ ಯೋಜನೆಗಳಿಗೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಬಲವಾಗಿ ವಿರೋಧಿಸಿ ಜನಾಂದೋಲನ ರೂಪಿಸಿದ್ದರು. 1991ರಿಂದಲೂ ಅವರ ಹೋರಾಟ ನಡೆದಿತ್ತು. ಈ ಸಂದರ್ಭದಲ್ಲಿ ವಿನಯ್ ಕುಮಾರ್ ಸಕ್ಸೇನಾ ನ್ಯಾಷನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟೀಸ್ (ಎನ್‌ಸಿಸಿಎಲ್) ಎಂಬ ಎನ್‌ಜಿಒ ಆರಂಭಿಸಿ ಆ ಮೂಲಕ ಮೇಧಾ ಪಾಟ್ಕರ್ ಅವರ ನರ್ಮದಾ ಬಚಾವೊ ಆಂದೋಲನಕ್ಕೆ ಪ್ರತಿಯಾಗಿ ಅಣೆಕಟ್ಟು ನಿರ್ಮಾಣದ ಪರವಾಗಿ ಜನಬೆಂಬಲ ರೂಪಿಸುವ ಕೆಲಸ ಮಾಡಿದ್ದರು.

 ಹೊಸ ಪ್ರಯೋಗಗಳು

ಹೊಸ ಪ್ರಯೋಗಗಳು

ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಮುಖ್ಯಸ್ಥರಾಗಿ ವಿನಯ್ ಕುಮಾರ್ ಸಕ್ಸೇನಾ ಹಲವು ವಿನೂತನ ಯೋಜನೆಗಳನ್ನು ಆರಂಭಿಸಿದ ಕೀರ್ತಿ ಹೊಂದಿದ್ಧಾರೆ. ಪ್ರಧಾನಿ ಕರೆಯಂತೆ ಜೇನು ಕ್ರಾಂತಿಗೆ ಅಡಿಪಾಯ ಹಾಕಿದರು. ದೇಶದ ವಿವಿಧೆಡೆ ಬುಡಕಟ್ಟು ಜನಾಂಗದವರಿಗೆ ಜೇನು ಸಾಕಾಣಿಕೆಯ ಕೃಷಿ ತಲುಪಿಸಿದರು. ಪರಿಣಾಮವಾಗಿ ದೇಶದಲ್ಲಿ ಜೇನು ಉದ್ಯಮ ಗರಿಗೆದರಿತು. 2017ರಿಂದ ನಾಲ್ಕು ವರ್ಷಗಳಲ್ಲಿ ಅವರು ಒಂದೂವರೆ ಲಕ್ಷ ಜೇನು ಪೆಟ್ಟಿಗೆಗಳನ್ನು ಹಂಚಿಕೆ ಮಾಡಿದ ಶ್ರೇಯಸ್ಸು ಪಡೆದಿದ್ದಾರೆ. ಇವರ ಕಾರ್ಯದಿಂದ ಜೇನು ಕ್ರಾಂತಿಯ ಜೊತೆಗೆ ಬಹಳಷ್ಟು ಉದ್ಯೋಗಸೃಷ್ಟಿಯೂ ಆಯಿತು.

ಜೇನು ಕ್ರಾಂತಿ ಅಷ್ಟೇ ಅಲ್ಲ, ಮಡಿಕೆ ತಯಾರಿಸುವ ಕುಂಬಾರರು, ಚರ್ಮಕಾರ ಸಮುದಾಯಗಳಿಗೆ ಪುಷ್ಟಿ ನೀಡುವ ಹಲವು ಯೋಜನೆಗಳನ್ನು ಅವರು ಜಾರಿಗೆ ತಂದಿದ್ದಾರೆ. ಕರಕುಶಲ ಕೆಲಸಗಳಿಗೆ ಪುಷ್ಟಿ ಕೊಟ್ಟಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಖಾದಿ ಮಾಸ್ಕ್ ತಯಾರಿಸಿ ಹಲವರಿಗೆ ಆ ಮೂಲಕ ಉದ್ಯೋಗ ಸಿಗುವಂತೆ ಮಾಡಿದ್ಧಾರೆ. ಇವರ ಅವಧಿಯಲ್ಲಿ ಖಾದಿ ಗ್ರಾಮೋದ್ಯೋಗ ಮಂಡಳಿಯ ವಿವಿಧ ಯೋಜನೆಗಳಿಂದಾಗಿ 32 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+