ನ್ಯಾಷನಲ್ ಹೆರಾಲ್ಡ್ ಹಗರಣ ಏನು? ರಾಹುಲ್, ಸೋನಿಯಾ ಮೇಲಿನ ಆರೋಪವೇನು?
What is National Herald case in Kannada? : ಈಗ್ಗೆ ಕೆಲವಾರು ವರ್ಷಗಳಿಂದ ನ್ಯಾಷನಲ್ ಹೆರಾಲ್ಡ್ ಹಗರಣದ ಸದ್ದು ಆಗಾಗ್ಗೆ ಕೇಳಿಬರುತ್ತಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಆರೋಪಿಗಳಾಗಿರುವುದರಿಂದ ಬಹಳ ಗಮನ ಸೆಳೆದಿದೆ. ಇದು ಎರಡು ಸಾವಿರ ಕೋಟಿ ರೂ ಮೊತ್ತದ ಆಸ್ತಿ ದುರುಪಯೋಗವಾಗಿದೆ ಎನ್ನಲಾದ ಪ್ರಕರಣವಾಗಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹೆಸರಿನಲ್ಲಿ ನಡೆದ ಅವ್ಯವಹಾರ ಇದಾಗಿದೆ. 2010ರಲ್ಲಿ ಈಗಿನ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ನೀಡಿದ ಕ್ರಿಮಿನಲ್ ಕಂಪ್ಲೇಂಟ್ ಆಧರಿಸಿ ಪ್ರಕರಣ ಆರಂಭವಾಗಿದೆ. ಆರಂಭದಲ್ಲಿ ಸಿಬಿಐ ತನಿಖೆ ನಡೆಸಿದರೂ ಈಗ ಜಾರಿ ನಿರ್ದೇಶನಾಲಯದಿಂದ ತನಿಖೆ ಆಗುತ್ತಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಜಾಮೀನು ಪಡೆದು ಬಂಧನದಿಂದ ಬಚಾವಾಗಿದ್ದಾರೆ.
ಸದ್ಯ ಮುಂದಿನ ವಾರ 2022, ಜೂನ್ 8ರಂದು ಸೋನಿಯಾ ಗಾಂಧಿ ಅವರನ್ನು ವಿಚಾರಣೆಗೆ ಇಡಿ ಸಮನ್ಸ್ ನೀಡಿದೆ. ರಾಹುಲ್ ಗಾಂಧಿಗೂ ಸಮನ್ಸ್ ನೀಡಲಾಗಿದೆ. ಸದ್ಯ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅವರು ವಿಚಾರಣೆ ಮುಂದಿನ ವಾರ ಹಾಜರಾಗುವುದು ಅನುಮಾನ. ರಾಹುಲ್ ಗಾಂಧಿ ವಿದೇಶದಲ್ಲಿರುವುದರಿಂದ ಅವರೂ ಕೂಡ ಕಾಲಾವಕಾಶ ಕೋರಿದ್ದಾರೆ.

ನ್ಯಾಷನಲ್ ಹೆರಾಲ್ಡ್ ಇತಿಹಾಸ:
ಸ್ವಾತಂತ್ರ್ಯಪೂರ್ವದಲ್ಲಿ 1938ರಲ್ಲಿ ಜವಾಹರಲಾಲ್ ನೆಹರೂ ಹುಟ್ಟುಹಾಕಿದ್ದು ನ್ಯಾಷನಲ್ ಹೆರಾಲ್ಡ್ ಪತ್ರಿಕೆ. ಅಸೋಷಿಯೇಟೆಡ್ ಜರ್ನಲ್ಸ್ ಲಿ (ಎಜೆಎಲ್) ಸಂಸ್ಥೆ ಈ ಪತ್ರಿಕೆಯನ್ನು ಮುದ್ರಿಸುತ್ತಿತ್ತು. ಆಗ ಐದು ಸಾವಿರ ಸ್ವಾತಂತ್ರ್ಯ ಹೋರಾಟಗಾರರು ಈ ಎಜೆಎಲ್ನ ಷೇರುದಾರರಾಗಿದ್ದರು. ಕಂಪನಿ ಯಾರೊಬ್ಬ ವ್ಯಕ್ತಿಯ ಮಾಲಕತ್ವದಲ್ಲಿರಲಿಲ್ಲ. ಇಂಗ್ಲೀಷ್ನಲ್ಲಿ ನ್ಯಾಷನಲ್ ಹೆರಾಲ್ಡ್, ಹಿಂದಿಯಲ್ಲಿ 'ನವಜೀವನ್' ಮತ್ತು ಉರ್ದು ಭಾಷೆಯಲ್ಲಿ 'ಕ್ವಾಮಿ' ಪತ್ರಿಕೆಗಳನ್ನು ಮುದ್ರಿಸುವುದಾಗಿ ಎಜೆಎಲ್ ತಿಳಿಸಿತ್ತು. ಹಣಕಾಸು ಕಷ್ಟದ ಪರಿಸ್ಥಿತಿಯಿಂದ ಈ ಮೂರು ಪತ್ರಿಕೆಗಳ ಮುದ್ರಣ ನಿಲ್ಲಿಸಲಾಯಿತು.

ಯಂಗ್ ಇಂಡಿಯಾ:
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಎಜೆಎಲ್ ಮುದ್ರಿಸಿದರೆ, ಎಜೆಎಲ್ನ ಒಡೆತನವು ಯಂಗ್ ಇಂಡಿಯಾ ಕಂಪನಿಗೆ ಸೇರಿದೆ. ಆದರೆ, ಯಂಗ್ ಇಂಡಿಯಾ ಕಂಪನಿ ಸ್ಥಾಪನೆಯಾಗಿದ್ದು 2010ರಲ್ಲಿ. ಇದರಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಪಾಲು ಶೇ. 7.6ರಷ್ಟಿದೆ. ಉಳಿದ ಪಾಲು ಮೋತಿಲಾಲ್ ವೋರಾ ಮತ್ತು ಆಸ್ಕರ್ ಫರ್ನಾಂಡಿಸ್ ಅವರ ಬಳಿ ಇದೆ.
ಆದರೆ, ಎಜೆಎಲ್ ಸಂಸ್ಥೆಯನ್ನು ಯಂಗ್ ಇಂಡಿಯಾ 2010ರಲ್ಲಿ ಖರೀದಿಸಿತು. ಆಗ ಎಜೆಎಲ್ನಲ್ಲಿ ಇದ್ದದ್ದು 1057 ಷೇರುದಾರರು. ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಮತ್ತು ಮಾಜಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶ ಮಾರ್ಕಂಡೇಯ ಕಟ್ಜು ಮೊದಲಾದವರು ಷೇರುದಾರರಾಗಿದ್ದರು. ಇವರೆಲ್ಲರಿಗೂ ತಮ್ಮ ತಂದೆಯಂದಿರ ಮೂಲಕ ಎಜೆಎಲ್ನ ಷೇರುಗಳು ವರ್ಗಾವಣೆಯಾಗಿದ್ದವು. ಆದರೆ, 2010ರಲ್ಲಿ ಎಜೆಎಲ್ನ ಎಲ್ಲಾ ಷೇರುಗಳನ್ನು ಯಂಗ್ ಇಂಡಿಯಾಗೆ ವರ್ಗಾವಣೆ ಮಾಡಲಾಗಿತ್ತು. ಈ ಬಗ್ಗೆ ಎಜೆಎಲ್ ಷೇರುದಾರರ ಅನುಮತಿ ಪಡೆಯುವುದಿರಲಿ, ಅವರಿಗೆ ಸುಳಿವು ಕೊಡದ ರೀತಿಯಲ್ಲಿ ಷೇರುಗಳ ವರ್ಗಾವಣೆ ಆಯಿತು ಎಂಬ ಆರೋಪ ಇದೆ.

ಅವ್ಯವಹಾರದ ಆರೋಪ ಏನು?
2010ರ ಡಿಸೆಂಬರ್ 16ರಂದು ಎಜೆಎಲ್ ಸುಮಾರು 90.1 ಕೋಟಿ ರೂ ಸಾಲ ಹೊಂದಿತ್ತು. ಆಗ ಕಾಂಗ್ರೆಸ್ ಪಕ್ಷ 90.25 ಕೋಟಿ ರೂ ಸಾಲವನ್ನು ಎಜೆಎಲ್ಗೆ ನೀಡಿತು. ಅದರೆ, ಈ ಹಣ ವಸೂಲಿ ಮಾಡುವ ಅಧಿಕಾರವನ್ನು ಯಂಗ್ ಇಂಡಿಯಾಗೆ ನೀಡಿತ್ತು. ಯಂಗ್ ಇಂಡಿಯಾದ ಮಾಲಕತ್ವಕ್ಕೆ ಎಜೆಎಲ್ ಒಳಪಡಬೇಕಾಯಿತು. ಎಜೆಎಲ್ನ ಶೇ. 99.99 ರಷ್ಟು ಷೇರುಗಳು ಯಂಗ್ ಇಂಡಿಯಾಗೆ ವರ್ಗಾವಣೆ ಆದವು.
2010, ಡಿಸೆಂಬರ್ 13ರಂದು ಯಂಗ್ ಇಂಡಿಯಾದ ಮೊದಲ ಆಡಳಿತ ಮಂಡಳಿ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ನಿರ್ದೇಶಕರಾಗಿ ನೇಮಕ ಮಾಡಲಾಯಿತು.
ಎಜೆಎಲ್ನ ಎಲ್ಲಾ ಷೇರುಗಳನ್ನು ಖರೀದಿಸುವ ಉದ್ದೇಶದಿಂದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಇಬ್ಬರೂ ರತನ್ ದೀಪ್ ಟ್ರಸ್ಟ್ ಮತ್ತು ಜನಹಿತ್ ನಿಧಿ ಟ್ರಸ್ಟ್ ಮೂಲಕ ಹೆಚ್ಚುವರಿ ಷೇರುಗಳನ್ನು ಅಕ್ರಮ ರೀತಿಯಲ್ಲಿ ಖರೀದಿ ಮಾಡಿದ್ದರು.

2000 ಕೋಟಿ ಹಗರಣ ಹೇಗೆ?
ವಿವಿಧ ಭಾಷೆಗಳಲ್ಲಿ ಪತ್ರಿಕೆ ನಡೆಸುವ ಷರತ್ತಿನ ಮೇರೆಗೆ 1962ರಲ್ಲಿ ಎಜೆಎಲ್ಗೆ ಭೂಮಿ ನೀಡಲಾಗಿತ್ತು. ಹೆರಾಲ್ಡ್ ಹೌಸ್ ಕಟ್ಟಡ ಇರುವ ಜಾಗ ಇದೆಯೇ ಆಗಿದೆ. ಆದರೆ ಮೂರು ಪತ್ರಿಕೆಗಳು ಬಂದ್ ಆದರೂ ಎಜೆಎಲ್ ಸುಪರ್ದಿಯಲ್ಲಿ ಜಮೀನು ಇದ್ದದ್ದು ಅಕ್ರಮ ಎಂಬುದು ಸುಬ್ರಮಣಿಯನ್ ಸ್ವಾಮಿ ಆರೋಪ. ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇರುವ ಜಾಗದ ಮೌಲ್ಯ ಈಗ ಎರಡು ಸಾವಿರ ಕೋಟಿ ರೂ ಇದೆ.

ಸುಬ್ರಮಣಿಯನ್ ಸ್ವಾಮಿ ಕೇಸ್ ದಾಖಲು:
ಸುಬ್ರಮಣಿಯನ್ ಸ್ವಾಮಿ 2012ರಲ್ಲಿ ನ್ಯಾಷನಲ್ ಹೆರಾಲ್ಡ್ ಹಗರಣ ಸಂಬಂಧ ಕ್ರಿಮಿನಲ್ ದೂರು ದಾಖಲಿಸಿದರು. ಅಕ್ರಮ ರೀತಿಯಲ್ಲಿ ಎಜೆಎಲ್ ಅನ್ನು ಖರೀದಿ ಮಾಡಲಾಗಿದೆ. ಅಕ್ರಮವಾಗಿ ಷೇರುಗಳನ್ನು ವರ್ಗಾಯಿಸಲಾಗಿದೆ. ಅಕ್ರಮವಾಗಿ ಜಮೀನು ಹೊಂದಲಾಗಿದೆ ಎಂದು ತಮ್ಮ ದೂರಿನಲ್ಲಿ ಅರೋಪಿಸಿದರು. ಮೊದಲಿಗೆ ಸಿಬಿಐ ತನಿಖೆ ನಡೆಸಿತು. ಇದರಲ್ಲಿ ಹಣಕಾಸು ಅಕ್ರಮದ ಸುಳಿವು ಬಂದದ್ದರಿಂದ ಜಾರಿ ನಿರ್ದೇಶನಾಲಯದಿಂದ ತನಿಖೆ ಆಗುತ್ತಿದೆ.
2015ರಲ್ಲಿ ಪ್ರಕರಣ ಮುಂದುವರಿಸುವಂತೆ ಸುಬ್ರಮಣಿಯನ್ ಸ್ವಾಮಿಗೆ ಸುಪ್ರೀಂ ಕೋರ್ಟ್ ತಿಳಿಸುತ್ತದೆ. ಸುಬ್ರಮಣಿಯನ್ ಸ್ವಾಮಿ ದಾಖಲು ಮಾಡಿದ ಕೇಸ್ನಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮೋತಿಲಾಲ್ ವೋರಾ, ಆಸ್ಕರ್ ಫರ್ನಾಂಡಿಸ್, ಪತ್ರಕರ್ತ ಸುಮನ್ ದುಬೇ, ಸ್ಯಾಮ್ ಪಿತ್ರೋಡ ಅವರ ಹೆಸರು ಇದೆ.

ರಾಹುಲ್ ಗಾಂದಿಗೆ ಜಾಮೀನು
ಪಾಟಿಯಾಲ ಹೌಸ್ ನ್ಯಾಯಾಲಯವು 2015ರಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂದಿಗೆ ಜಾಮೀನು ನೀಡಿತು. 2016ರಲ್ಲಿ ಪ್ರಕರಣ ರದ್ದು ಮಾಡುವಂತೆ ಕೋರಿ ಇವರು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಅದರೆ, ಕೋರ್ಟ್ ಕಲಾಪದಲ್ಲಿ ವ್ಯಕ್ತಿಗತವಾಗಿ ಹಾಜರಾಗುವುದರಿಂದ ಎಲ್ಲಾ ಐವರು ಆರೋಪಿಗಳಿಗೆ ವಿನಾಯಿತಿ ನೀಡಲಾಯಿತು.
2018ರಲ್ಲಿ ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಇರುವ ಜಾಗಕ್ಕೆ 56 ವರ್ಷಗಳಿಂದ ನೀಡಲಾಗಿದ್ದ ಲೀಸ್ ಅನ್ನು ಕೇಂದ್ರ ಸರಕಾರ ನಿಲ್ಲಿಸಿತು. ಮೂಲ ಉದ್ದೇಶದಂತೆ ಯಾವ ಪತ್ರಿಕೆಯೂ ಮುದ್ರಣ ಆಗುತ್ತಿಲ್ಲದಿರುವುದರಿಂದ ಲೀಸ್ ಅಂತ್ಯಗೊಳಿಸಲಾಗಿತ್ತು. ನವದೆಹಲಿಯ ಲ್ಯಾಂಡ್ ಅಂಡ್ ಡೆವಲಪ್ಮೆಂಟ್ ಪ್ರಾಧಿಕಾರ ಈ ಜಮೀನಿನ ಸುಪರ್ದಿಗೆ ಪಡೆಯಲು ಪ್ರಯತ್ನಿಸಿತು. ಅದರಂತೆ ಎಜೆಎಲ್ಗೆ ಸ್ಥಳ ತೆರವು ಮಾಡಿ ಜಮೀನು ಹಸ್ತಾಂತರ ಮಾಡುವಂತೆ ಆದೇಶ ನೀಡಲಾಯಿತು. ಆದರೆ, 2019ರಲ್ಲಿ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿ ಎಜೆಎಲ್ ವಿರುದ್ಧ ಮುಂದಿನ ಸೂಚನೆ ಬರುವವರೆಗೂ ಯಾವುದೇ ಕ್ರಮ ಕೈಗೊಳ್ಳದಂತೆ ತಡೆ ನೀಡಿತು.
(ಒನ್ಇಂಡಿಯಾ ಸುದ್ದಿ)
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications