ಬಂಧಿತ ಮಾಜಿ ಸಚಿವ ಡಿಕೆ ಶಿವಕುಮಾರ್ ಮುಂದಿನ ಆಯ್ಕೆಗಳೇನು?
Recommended Video
ನವದೆಹಲಿ, ಸೆ. 04: "ಮನಿಲಾಂಡ್ರಿಂಗ್ ಪ್ರಕರಣದಲ್ಲಿ ವಿಚಾರಣೆಗೆ ಸಹಕರಿಸುತ್ತಿಲ್ಲ" ಎಂಬ ಕಾರಣಕ್ಕೆ ಕರ್ನಾಟಕದ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ನಂತರ ತಿಹಾರ್ ಜೈಲುವಾಸವೂ ಪ್ರಾಪ್ತಿಯಾಗಿದೆ. ಸೆ.25ರಂದು ಜಾಮೀನು ರದ್ದಾಗಿದೆ. ಬಂಧನದ ಬಳಿಕ ಕಾಂಗ್ರೆಸ್ಸಿನ 'ಟ್ರಬಲ್ ಶೂಟರ್' ಮುಂದಿನ ಆಯ್ಕೆಗಳು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ...
ಮಂಗಳವಾರ(ಸೆ. 03) ರಾತ್ರಿ ಡಿಕೆ ಶಿವಕುಮಾರ್ ಅವರ ಬಂಧನವಾದ ಬಳಿಕ ಸಹಜ ಪ್ರಕ್ರಿಯೆಯಂತೆ ಅವರನ್ನು ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗಾಗಿ ಕರೆದೊಯ್ಯಲಾಗಿದೆ. ವೈದ್ಯರ ಪ್ರಮಾಣ ಪತ್ರ ಸಿಕ್ಕ ಬಳಿಕವಷ್ಟೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಶಿವಕುಮಾರ್ ರನ್ನು ದೆಹಲಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಇನ್ನಷ್ಟು ಕಾಲ ಕಸ್ಟಡಿಗೆ ಮನವಿ ಸಲ್ಲಿಸಬಹುದು.
ಆದರೆ, ಆಸ್ಪತ್ರೆಗೆ ಪರೀಕ್ಷೆಗೆಂದು ಬಂದಿರುವ ಡಿಕೆಶಿ ಆರೋಗ್ಯ ಸಮಸ್ಥಿತಿಯಲ್ಲಿಲ್ಲ ಎಂಬ ಪ್ರಾಥಮಿಕ ವರದಿಗಳು ಬಂದಿವೆ. ಅತಿಯಾದ ರಕ್ತದೊತ್ತಡ, ಎದೆನೋವು ಕಾಣಿಸಿಕೊಂಡಿದ್ದರಿಂದ ಐಸಿಯುನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಡಿಕೆಶಿ ಮುಂದಿರುವ ಆಯ್ಕೆಗಳು?
* ಜಾರಿ ನಿರ್ದೇಶನಾಲಯದ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಲಯ ಅಥವಾ ನ್ಯಾಯಾಧೀಶರ ಮುಂದೆ ಜಾಮೀನು ಅರ್ಜಿ ಸಲ್ಲಿಸಬಹುದು.
* ಯಾವುದೇ ಷರತ್ತು ವಿಧಿಸಿದರೂ ಒಪ್ಪಿ, ವಿಚಾರಣೆ ಎದುರಿಸುವೆ ಎಂದು ಜಾಮೀನು ಅರ್ಜಿಯಲ್ಲಿ ಕೋರಬಹುದು.
* ಇದೇ ವೇಳೆ ಡಿಕೆ ಶಿವಕುಮಾರ್ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗುವ ತನಕ ಆಸ್ಪತ್ರೆಯಲ್ಲೇ ಉಳಿದು ಜಾಮೀನಿಗಾಗಿ ಕಾಯಬಹುದು.
* ಇ.ಡಿ ವಿಶೇಷ ನ್ಯಾಯಾಲಯದಲ್ಲಿ ಜಾಮೀನು ಸಿಗದಿದ್ದರೆ, ಮತ್ತೊಮ್ಮೆ ಕನಿಷ್ಠ 14 ದಿನಗಳ ಕಾಲ ನ್ಯಾಯಾಂಗ ಬಂಧನ ಅಥವಾ ಇ.ಡಿ ವಶಕ್ಕೆ ಡಿಕೆ ಶಿವಕುಮಾರ್ ರನ್ನು ಕಳಿಸಬಹುದು.
ಬಂಧನ ನಂತರ ಡಿಕೆ ಶಿವಕುಮಾರ್ ಮುಂದಿನ ಆಯ್ಕೆಗಳೇನು?
ಜಾಮೀನು ಸಿಗದಿದ್ದರೆ
* ದೆಹಲಿ ಹೈಕೋರ್ಟಿನಲ್ಲಿ ಜಾಮೀನಿಗಾಗಿ ಅರ್ಜಿ ಹಾಕಬಹುದು. ಹೈಕೋರ್ಟಿನಲ್ಲಿ ಜಾಮೀನು ಸಿಗದಿದ್ದರೆ ಸುಪ್ರೀಂಕೋರ್ಟ್ ಮೊರೆ ಹೋಗಬಹುದು.
* "ಭ್ರಷ್ಟ್ರಾಚಾರಕ್ಕೆ ಸಂಬಂಧಿಸಿದ ಕೇಸ್ ಇದಾಗಿದ್ದು, ಡಿಕೆಶಿ ಈಗಾಗಲೇ 4 ದಿನ ವಿಚಾರಣೆಗೆ ಸಹಕರಿಸಿದ್ದಾರೆ, ಅನಗತ್ಯವಾಗಿ ಬಂಧನ ಮಾಡಲಾಗಿದ್ದು, ಇನ್ನೂ ಕಸ್ಟಡಿಗೆ ಏಕೆ ಕೇಳುತ್ತಿದ್ದಾರೆ" ಎಂದು ಕರ್ನಾಟಕದ ಕ್ರಿಮಿನಲ್ ವಕೀಲ ಶ್ಯಾಮಸುಂದರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇ.ಡಿ ತನಿಖೆ ರದ್ದು ಕೋರಿ ಸಲ್ಲಿಸಿರುವ ಅರ್ಜಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತನಿಖೆ ರದ್ದುಪಡಿಸುವಂತೆ ಕೋರಿ ಡಿಕೆಶಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಅರ್ಜಿ ಹಾಕಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮನ್ಸ್ ರದ್ದುಗೊಳಿಸಲು ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೆ.5ರಂದು ಕರ್ನಾಟಕ ಹೈಕೋರ್ಟಿನಲ್ಲಿ ನಡೆಯಲಿದೆ. ಸೆ.05ರಂದು ಸುಪ್ರೀಂಕೋರ್ಟಿನಲ್ಲೂ ವಿಚಾರಣೆ ನಡೆಯುವ ಸಾಧ್ಯತೆಯಿದೆ.

ಡಿಕೆಶಿ ವಿರುದ್ಧದ ಆರೋಪವೇನು?
ಮನಿಲಾಂಡ್ರಿಂಗ್ ಕಾಯ್ದೆ PMLA ಉಲ್ಲಂಘನೆ, ಹಣದ ಮೂಲದ ಬಗ್ಗೆ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಐಟಿ ಕಾಯ್ದೆ ಉಲ್ಲಂಘನೆ ಸೆಕ್ಷನ್ 277, 276 ಸಿ(1), 278, 193, 199, ಹಾಗೂ 120 (ಬಿ), ಲೇವಾದೇವಿ ನಿಯಂತ್ರಣ ಕಾಯ್ದೆ ಉಲ್ಲಂಘನೆ ಸೆಕ್ಷನ್ 120 ಬಿ ಅಡಿಯಲ್ಲಿ ಇಸಿಐಆರ್ ದಾಖಲೆ.

ಸಹ ಆರೋಪಿಗಳ ಹೇಳಿಕೆ ಡಿಕೆಶಿಗೆ ಮುಳುವಾಯಿತೇ?
ದೆಹಲಿಯ ಸಫ್ಜರ್ ದಂಗ್ ಎನ್ಕ್ಲೇವ್ ಅಪಾರ್ಟ್ಮೆಂಟ್ ನ 4 ಫ್ಲಾಟ್ ಗಳ ಉಸ್ತುವಾರಿಯನ್ನು ಶರ್ಮಾ ಟ್ರಾವೆಲ್ಸ್ ನ ಸುಶೀಲ್ ಕುಮಾರ್ ಶರ್ಮಾ ನೋಡಿಕೊಳ್ಳುತ್ತಿದ್ದಾರೆ. ಡಿಕೆಶಿ ಆಪ್ತ ರಾಜೇಂದ್ರ ಮನೆಯಲ್ಲಿ ದಾಳಿ ವೇಳೆ ಸಿಕ್ಕ ಡೈರಿಯಲ್ಲಿ ಹೈಕಮಾಂಡ್ ಗೆ ಹಣ ರವಾನೆಯಾಗಿರುವ ಆರೋಪ ಇದೆ. ಜೊತೆಗೆ ಹನುಮಂತಯ್ಯ, ಸಚಿನ್ ನಾರಾಯಣ್, ಆಂಜನೇಯುಲು ಎಂಬುವರು ನೀಡಿದ ಹೇಳಿಕೆಯೇ ಇಂದು ಡಿಕೆಶಿ ಬಂಧನಕ್ಕೆ ಕಾರಣವಾಗಿದೆ.











Click it and Unblock the Notifications