ವರ್ಕ್ ಫ್ರಂ ಹೋಂ ಬೇಕಾ ಬೇಡವಾ? ಮಳೆಯಲ್ಲೊಂದು ಚರ್ಚೆ
ಬೆಂಗಳೂರು, ಸೆ. 7: ನಿರಂತರ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿಹೋಗಿದೆ. ಮೂರು ತಿಂಗಳಿಂದ ಮಳೆಯ ಆರ್ಭಟ ನಡೆದಿದೆ. ಕಳೆದ ಕೆಲವು ದಿನಗಳಿಂದಂತೂ ಎಡಬಿಡದೆ ಭೀಕರ ಮಳೆಯಾಗುತ್ತಿರುವ ಪರಿಣಾಮ ನಗರದ ಕೆಲ ಪ್ರದೇಶಗಳು ಜಲಾವೃತಗೊಂಡಿವೆ. ಇನ್ನೂ ಕೆಲ ದಿನಗಳ ಕಾಲ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಇದೇ ವೇಳೆ, ಬೆಂಗಳೂರಿನ ಐಟಿ ವಲಯದಲ್ಲಿ ವರ್ಕ್ ಫ್ರಂ ಹೋಂ ಮಾಡುವ ಮರು ಆಲೋಚನೆ ಶುರುವಾಗಿದೆ. ಮಳೆಯಿಂದ ಬಾಧಿತವಾದ ಹಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವ ಅವಕಾಶ ಕಲ್ಪಿಸಿದೆ. ಆದರೆ ಈಗಲೂ ಬಹಳಷ್ಟು ಉದ್ಯೋಗಿಗಳು ಪ್ರವಾಹ ಪರಿಸ್ಥಿತಿಯಲ್ಲೇ ಕಚೇರಿಗಳಿಗೆ ಎಡತಾಕುತ್ತಿದ್ದಾರೆ.
ಹೊರ ವರ್ತುಲ ರಸ್ತೆ, ಅಥವಾ ಔಟರ್ ರಿಂಗ್ ರೋಡ್ ಹಾಗೂ ಅದಕ್ಕೆ ಹೊಂದಿಕೊಂಡಿರುವ ಪ್ರದೇಶಗಳು ಕೆರೆಯಂತಾಗಿವೆ. ಬೆಳ್ಳಂದೂರು ಬಳಿ ಕೆಲಸ ಮಾಡುವ ಐಟಿ ಉದ್ಯೋಗಿಗಳಂತೂ ಕೆಲಸ ಮುಗಿಸಿ ಮನೆಗೆ ಹೋಗಲು ಕೆಲವೊಮ್ಮೆ ನಾಲ್ಕೈದು ಗಂಟೆಯೇ ಆಗಿಹೋಗುತ್ತದೆ. ಈ ಪ್ರದೇಶದಲ್ಲಿ ಏಳೆಂಟು ಐಟಿ ಪಾರ್ಕ್ಗಳಿವೆ. ಸುಮಾರು 700 ಐಟಿ ಕಂಪನಿಗಳಿವೆ. ದೊಡ್ಡ ದೊಡ್ಡ ಐಟಿ ಉದ್ಯಮಿಗಳು ವಾಸಿಸುವ ಜಾಗ ಅದು.

ನೀರು ತುಂಬಿದ ರಸ್ತೆಯಲ್ಲಿ ವಾಹನ ಕೆಟ್ಟುಹೋದರಂತೂ ದೇವರೇ ಗತಿ. ಬೆಳ್ಳಂದೂರು ಸುತ್ತಮುತ್ತಲ ಪ್ರದೇಶದ ಪ್ರತಿಷ್ಠಿತ ಬಡಾವಣೆಯ ಜನರು ಟ್ರಾಕ್ಟರ್ನಲ್ಲಿ ಬೇರೆಡೆಗೆ ಸಾಗಬೇಕಾಗಿ ಬಂದಿದೆ. ಸ್ಟಾರ್ಟಪ್ ಕಂಪನಿಯ ಒಡೆಯರೊಬ್ಬರು ತಮ್ಮ ಇಡೀ ಕುಟುಂಬವನ್ನು ಟ್ರಾಕ್ಟರ್ನಲ್ಲಿ ಸಾಗಿಸಿದ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಅನ್ಅಕಾಡೆಮಿಯ ಸಿಇಒ ಗೌರವ್ ಮುಂಜಲ್, ಹೋಮ್ಲೇನ್ ಸಹಸಂಸ್ಥಾಪಕ ತನುಜ್ ಮೊದಲಾದವರು ತಮ್ಮ ಕುಟುಂಬ ಸದಸ್ಯರನ್ನು ಟ್ರಾಕ್ಟರ್ ಮೂಲಕ ಬೇರೆಡೆಗೆ ಸ್ಥಳಾಂತರ ಮಾಡಿದ್ದರು.
ವರ್ಕ್ ಫ್ರಂ ಹೋಮ್ ಚರ್ಚೆ
ಇದೀಗ ಇಂಥ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವರ್ಕ್ ಫ್ರಂ ಹೋಂ ವಿಚಾರದ ಬಗ್ಗೆ ಮತ್ತೆ ಚರ್ಚೆ ಹುಟ್ಟುಹಾಕಿದೆ. ಮಳೆಯಿಂದ ಎಂಥ ಅವಾಂತರ ಆಗಿದೆ. ಕಚೇರಿಗೆ ತಲುಪಲು ಎಷ್ಟು ಪ್ರಯಾಸಪಡಬೇಕಿದೆ. ದಿನಕ್ಕೆ ನಾಲ್ಕೈದು ಗಂಟೆ ಕಾಲ ಪ್ರಯಾಣಕ್ಕೇ ವ್ಯಯವಾಗುತ್ತದೆ. ಆದ್ದರಿಂದ ವರ್ಕ್ ಫ್ರಂ ಹೋಂ ಆಯ್ಕೆಯನ್ನು ಕೊಟ್ಟರೆ ಕಂಪನಿಗೂ ಲಾಭ, ಉದ್ಯೋಗಿಗಳಿಗೂ ಲಾಭ ಎಂಬುದು ಹಲವರ ವಾದ.

ಆದರೆ, ಮಳೆ, ಪ್ರವಾಹ ವರ್ಷವಿಡೀ ಇರುವುದಿಲ್ಲ, ಹಾಗೊಮ್ಮೆ ಹೀಗೊಮ್ಮೆ ಬರುತ್ತದೆ ಅಷ್ಟೇ. ಆ ಕಾರಣಕ್ಕೆ ವರ್ಕ್ ಫ್ರಂ ಹೋಂ ಕೊಡುವುದು ಸರಿಯಲ್ಲ. ಕಚೇರಿಗೆ ಹೋಗಿ ಕೆಲಸ ಮಾಡುವದೇ ಉತ್ತಮ ಎಂಬುದು ಇನ್ನೂ ಕೆಲವರ ಅನಿಸಿಕೆ.
ಕಳೆದ ವಾರ ಹೊರ ವರ್ತುಲ ರಸ್ತೆ ಕಂಪನಿಗಳ ಸಂಸ್ಥೆ (ORRCA) ಒಂದು ವಿಚಾರವನ್ನು ಎತ್ತಿತೋರಿಸಿತ್ತು. ತನ್ನ ವ್ಯಾಪ್ತಿಯಲ್ಲಿರುವ ಕಂಪನಿಗಳು ಆಗಸ್ಟ್ 30ರಂದು ಮಳೆ ಮತ್ತು ಪ್ರವಾಹದಿಂದ 225 ಕೋಟಿ ರೂ ನಷ್ಟ ಅನುಭವಿಸಿವೆ ಎಂದು ಒಆರ್ಆರ್ಸಿಇ ಕಳೆದ ಗುರುವಾರದಂದು ಹೇಳಿತ್ತು.
ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ಕೊಡಬೇಕೆಂದು ತನ್ನ ಸದಸ್ಯ ಕಂಪನಿಗಳಿಗೆ ಒಆರ್ಆರ್ಸಿಎ ಸಲಹೆ ನೀಡಿದೆ. ಆದರೆ, ಈ ರೀತಿ ಮಳೆ ಮತ್ತು ಪ್ರವಾಹ ಮಳೆಗಾಲದಲ್ಲಿ ಮಾತ್ರ ಇರುತ್ತದೆ ಎಂದು ಹೇಳುವ ಮೂಲಕ ವರ್ಕ್ ಫ್ರಂ ಹೋಂ ಖಾಯಂ ಆಗಿ ಇರುವುದು ಬೇಡ ಎಂದೂ ಅದು ಹೇಳಿದೆ.
ಕೋವಿಡ್ ಬಂದ ಬಳಿಕ ಬಹುತೇಕ ಐಟಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಅವಕಾಶ ಕೊಟ್ಟಿದ್ದವು. ಎರಡು ವರ್ಷಗಳ ಬಳಿಕ ಒಂದೊಂದಾಗಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಕಚೇರಿಗೆ ತರಲು ಪ್ರಯತ್ನ ಮಾಡತೊಡಗಿವೆ. ಮನೆಯಲ್ಲಿ ಕೆಲಸ ಮಾಡಿ ಒಗ್ಗಿಹೋದ ಉದ್ಯೋಗಿಗಳನ್ನು ಹಾಗೂ ಹೀಗೂ ಮಾಡಿ ಕಚೇರಿಯಲ್ಲಿ ಕೆಲಸ ಮಾಡಲು ಕಂಪನಿಗಳು ಉತ್ತೇಜನ ಮಾಡುತ್ತಿವೆ. ಸರಾಸರಿಯಾಗಿ ಶೇ. 30ರಷ್ಟು ಐಟಿ ಉದ್ಯೋಗಿಗಳು ಕಚೇರಿಯಿಂದ ಕೆಲಸ ಮಾಡಲು ಆರಂಭಿಸಿದ್ದರು. ಇದೇ ಹೊತ್ತಲ್ಲಿ ಈ ಮಳೆಯ ಪರಿಸ್ಥಿತಿ ಉದ್ಭವಿಸಿ ಮತ್ತೆ ಎಲ್ಲರೂ ಕಚೇರಿಗೆ ಹೋಗಲು ಹಿಂದೇಟು ಹಾಕುವಂತೆ ಮಾಡಿದೆ.
ಕಂಪನಿಗಳ ಆಕ್ರೋಶ
ಬೆಳ್ಳಂದೂರು ವ್ಯಾಪ್ತಿಯ ಐಟಿ ಕಂಪನಿಗಳ ಮುಖ್ಯಸ್ಥರಿಗಂತೂ ಈ ಸ್ಥಿತಿ ಇರಿಸುಮುರುಸು ತಂದಿದೆ. "ದೇಶದಲ್ಲೇ ನಾವು ಅತಿ ಹೆಚ್ಚು ತೆರಿಗೆ ಕಟ್ಟುತ್ತೇವೆ. ಆದರೂ ಕೂಡ ನಿರ್ಲಕ್ಷ್ಯ. ಈ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರವೇ ಮಧ್ಯಪ್ರವೇಶಿಸಬೇಕು. ಅದಕ್ಕಾಗಿ ಹೆಚ್ಚು ಬಜೆಟ್ ವಿನಿಯೋಗಿಸದಿದ್ದರೆ ಏನೂ ಪರಿಹಾರ ಸಾಧ್ಯವಾಗುವುದಿಲ್ಲ" ಎಂದು ಸಿಂಪ್ಲಿಲರ್ನ್ ಎಂಬ ಶಿಕ್ಷಣ ತಂತ್ರಜ್ಞಾನ ಸಂಸ್ಥೆಯ ಸಿಇಒ ಕೃಷ್ಣ ಕುಮಾರ್ ಹೇಳುತ್ತಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications