Sankashti Chaturthi 2022 : ಸಂಕಷ್ಟ ಚತುರ್ಥಿ ದಿನಾಂಕ, ಮಹತ್ವ, ಪೂಜಾ ವಿಧಿ, ವ್ರತ ಕಥಾ ತಿಳಿಯಿರಿ
ಸೆಪ್ಟೆಂಬರ್ 13ರಂದು ವಿಘ್ನರಾಜ ಸಂಕಷ್ಟ ಚತುರ್ಥಿ ಇದೆ. ವಿಘ್ನರಾಜ ಸಂಕಷ್ಟಿ ಚತುರ್ಥಿಯನ್ನು ಮಹಾ ಗಣಪತಿಗೆ ಸಮರ್ಪಿಸಲಾಗಿದೆ. ವಿಘ್ನರಾಜ ಅಂದರೆ ಅಡೆತಡೆಗಳನ್ನು ನಿಯಂತ್ರಿಸುವವನು. ಆದ್ದರಿಂದ ಈ ದಿನ ಭಕ್ತರು ತಮ್ಮ ಜೀವನದಲ್ಲಿ ಅಡೆತಡೆಗಳನ್ನು ತೊಡೆದುಹಾಕಲು ಉಪವಾಸವನ್ನು ಮಾಡುವ ಮೂಲಕ ಗಣೇಶನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಸಂಸ್ಕೃತದಲ್ಲಿ ಸಂಕಷ್ಟಿ ಎಂದರೆ ವಿಮೋಚನೆ.
ಈ ದಿನ ಗಣೇಶನನ್ನು ಪೂಜಿಸುವುದರಿಂದ ಭಕ್ತನಿಗೆ ತೊಂದರೆ ನೀಡುವ ಸಮಸ್ಯೆಯನ್ನು ಗಣೇಶನು ತೆಗೆದುಹಾಕುತ್ತಾನೆ. ಸಮಸ್ಯೆಗಳಿಂದ ಮುಕ್ತಿ ನೀಡುತ್ತಾನೆ. ಸೆಪ್ಟೆಂಬರ್ 13, 2022 ರಂದು ಬೆಳಿಗ್ಗೆ 10:37 ಕ್ಕೆ ಚತುರ್ಥಿ ತಿಥಿ ಪ್ರಾರಂಭವಾಗುತ್ತದೆ. ಜೊತೆಗೆ ಸೆಪ್ಟೆಂಬರ್ 14, 2022 ರಂದು 10:25ಕ್ಕೆ ಚತುರ್ಥಿ ತಿಥಿ ಕೊನೆಗೊಳ್ಳುತ್ತದೆ. ಸಂಕಷ್ಟಿ ದಿನದಂದು ಚಂದ್ರೋದಯ 08:26ಕ್ಕೆ ಆಗಲಿದೆ.
ಈ ಚತುರ್ಥಿ ತಿಥಿಯಂದು ರಾತ್ರಿಯಲ್ಲಿ ಚಂದ್ರನನ್ನು ಪೂಜಿಸುವ ಮೂಲಕ ವ್ರತ ಮುಗಿಯುವುದು. ವಿಘ್ನರಾಜ ಸಂಕಷ್ಟಿ ಚತುರ್ಥಿಯಂದು ಸರ್ವಾರ್ಥ ಸಿದ್ಧಿ ಮತ್ತು ಅಮೃತ ಸಿದ್ಧಿ ಯೋಗ ರೂಪುಗೊಳ್ಳುತ್ತದೆ. ಈ ಎರಡೂ ಯೋಗಗಳಲ್ಲಿ ಗಣೇಶನ ಆರಾಧನೆಯು ಎರಡು ಪಟ್ಟು ಫಲಿತಾಂಶವನ್ನು ನೀಡುತ್ತದೆ. ಈ ಶುಭ ಯೋಗಗಳಲ್ಲಿ ವಿಘ್ನರಾಜನನ್ನು ಪೂಜಿಸುವುದರಿಂದ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ತೊಂದರೆಗಳು ನಿವಾರಣೆಯಾಗುತ್ತವೆ. ಈ ದಿನ ರಾತ್ರಿ 08:26 ಕ್ಕೆ ಚಂದ್ರೋದಯ ಇದೆ. ಉಪವಾಸ ಮಾಡುವವರು ಚಂದ್ರೋದಯದ ಸಮಯದಲ್ಲಿ ಚಂದ್ರನನ್ನು ಪೂಜಿಸಬೇಕು ಬಳಿಕ ಉಪವಾಸವನ್ನು ಪೂರ್ಣಗೊಳಿಸುತ್ತಾರೆ.
ಎಲ್ಲಾ ಅಡೆತಡೆಗಳ ನಿವಾರಣೆ
ಈ ದಿನದಂದು ಶಿವನು ತನ್ನ ಮಗ ಗಣೇಶನನ್ನು ಎಲ್ಲಾ ದೇವರುಗಳಿಗಿಂತ ಶ್ರೇಷ್ಠನೆಂದು ಘೋಷಿಸಿದನು ಎಂದು ನಂಬಲಾಗಿದೆ. ಪ್ರತಿ ತಿಂಗಳು, ಗಣಪತಿಯನ್ನು ಬೇರೆ ಬೇರೆ ಹೆಸರಿನಿಂದ ಪೂಜಿಸಲಾಗುತ್ತದೆ. ಈ ದಿನ ಭಕ್ತರು ಬೇಗ ಎದ್ದು ಸ್ನಾನ ಮಾಡಿದ ನಂತರ ಶುಭ್ರವಾದ ಬಟ್ಟೆಯನ್ನು ಧರಿಸುತ್ತಾರೆ. ನಂತರ ಅವರು ಪ್ರಾರ್ಥನೆಗಳನ್ನು ಸಲ್ಲಿಸುವ ಮೂಲಕ ಮತ್ತು ಸ್ಲೋಕಗಳನ್ನು ಪಠಿಸುವ ಮೂಲಕ ಗಣಪತಿಯನ್ನು ಪೂಜಿಸುತ್ತಾರೆ. ಭಕ್ತರು ವ್ರತ ಕಥಾ ಓದುವುದರೊಂದಿಗೆ ಸಂಜೆ ವ್ರತ ಪೂಜೆ ನಡೆಯುತ್ತದೆ. ವಿಘ್ನಹರ್ತದಿಂದ ತಮ್ಮ ಇಷ್ಟಾರ್ಥಗಳು ನೆರವೇರುತ್ತವೆ ಮತ್ತು ವಿಘ್ನಹರ್ತವು ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ ಎಂದು ಭಕ್ತರು ನಂಬುತ್ತಾರೆ.
ಯುಧಿಷ್ಠಿರನಿಗೆ ಕಥೆ ಹೇಳಿದ ಶ್ರೀ ಕೃಷ್ಣ
ಧರ್ಮಗ್ರಂಥಗಳ ಪ್ರಕಾರ, ಪಾಂಡವ ರಾಜ ಯುಧಿಷ್ಠಿರನು ವಿಘ್ನರಾಜ ಸಂಕಷ್ಟಿ ಗಣೇಶ ಚತುರ್ಥಿಗೆ ಸಂಬಂಧಿಸಿದ ಕಥೆಯನ್ನು ಹೇಳಲು ಶ್ರೀ ಕೃಷ್ಣನನ್ನು ಕೇಳಿದನು. ಆಗ ಶ್ರೀ ಕೃಷ್ಣ ಈ ಕಥೆಯನ್ನು ಹೇಳುತ್ತಾನೆ.
ಬಾಣಾಸುರನೆಂಬ ರಾಕ್ಷಸನಿದ್ದ. ಈತನಿಗೆ ಉಷಾ ಎಂಬ ಮಗಳಿದ್ದಳು. ಒಂದು ರಾತ್ರಿ ಅವಳು ಅನಿರುದ್ಧ ಎಂಬ ವ್ಯಕ್ತಿಯ ಬಗ್ಗೆ ಕನಸು ಕಂಡಳು. ಕನಸಿನ ನಂತರ ಅವಳು ಅನಿರುದ್ಧನನ್ನು ಭೇಟಿಯಾಗಲು ಉತ್ಸುಕಳಾಗಿದ್ದಳು. ಆದ್ದರಿಂದ ಎಲ್ಲಾ ನಿವಾಸಿಗಳ ಚಿತ್ರಗಳನ್ನು ಒಳಗೊಂಡಿರುವ ಮೂರು ಲೋಕಗಳ ರೇಖಾಚಿತ್ರಗಳನ್ನು ಮಾಡಲು ಚಿತ್ರಲೇಖಾ ಎಂಬ ತನ್ನ ಸ್ನೇಹಿತನನ್ನು ಕೇಳಿದಳು.
ಆ ಮೂಲಕ ಉಷಾ ಅನಿರುದ್ಧನನ್ನು ಹುಡುಕಲು ಪ್ರಾರಂಭಿಸಿದಳು. ಅವನ ಇರುವಿಕೆಯನ್ನು ಪತ್ತೆಹಚ್ಚಲು ಸಹಾಯ ಮಾಡಲು ಸ್ನೇಹಿತ ಚಿತ್ರಲೇಖಾರನ್ನು ಕೇಳಿದಳು. ಉಷಾ ಅನಿರುದ್ಧನ ಮೇಲೆ ಎಷ್ಟು ಮೋಹಿತಳಾಗಿದ್ದಳೆ ಎಂದರೆ ಮದುವೆ ಆದರೆ ಅವನನ್ನೇ ಆಗುವುದಾಗಿ ನಿರ್ಧರಿಸಿದಳು. ಜೊತೆಗೆ ಅವನ ಪತ್ತೆಯಿಲ್ಲದೆ ತಾನು ಬದುಕಲು ಸಾಧ್ಯವಿಲ್ಲ ಎಂದು ತನ್ನ ಸ್ನೇಹಿತನಿಗೆ ವಿವರಿಸಿದಳು.
ಚಿತ್ರಲೇಖಾ ಉಷಾಗೆ ಸಹಾಯ ಮಾಡಲು ನಿರ್ಧರಿಸಿದರು. ಇಬ್ಬರು ಅನಿರುದ್ಧನನ್ನು ಹುಡುಕಲು ಪ್ರಾರಂಭಿಸಿದರು. ಅಂತಿಮವಾಗಿ ಅನಿರುದ್ಧನನ್ನು ದ್ವಾರಿಕಾದಲ್ಲಿ ಕಂಡರು. ತರುವಾಯ ಅವಳು ರಾತ್ರಿಯಲ್ಲಿ ಅನಿರುದ್ಧನು ಮಲಗಿದ್ದಾಗ ಅವನನ್ನು ಅಪಹರಣ ಮಾಡಿ ಬಾಣಾಸುರನ ರಾಜ್ಯವನ್ನು ತಲುಪಿದಳು.
ಬಾಣಾಸುರರನನ್ನು ಸೋಲಿಸಿ ಅನಿರುದ್ಧನನ್ನು ರಕ್ಷಿಸಿದ ಶ್ರೀಕೃಷ್ಣ
ದ್ವಾರಿಕಾದಲ್ಲಿ ಅನಿರುದ್ಧನ ತಂದೆ ಪ್ರದ್ಯುಮ್ನ ತನ್ನ ಮಗ ನಾಪತ್ತೆಯಾದ ನಂತರ ಆತಂಕಗೊಂಡ. ಪ್ರದ್ಯುಮ್ಮನನು ಶ್ರೀ ಕೃಷ್ಣ ಮತ್ತು ರುಕ್ಮಿಣಿಯರ ಹಿರಿಯ ಮಗ. ಎಲ್ಲರೂ ಅನಿರುದ್ಧನನ್ನು ಹುಡುಕಿದರು. ಆದರೆ ಅನಿರುದ್ಧ ಪತ್ತೆಯಾಗಲಿಲ್ಲ. ಕೊನೆಗೆ ಅನಿರುದ್ಧನನ್ನು ಹುಡುಕಲು ಶ್ರೀಕೃಷ್ಣನು ಋಷಿ ಲೋಮಾಶ್ ಅವರ ಸಹಾಯವನ್ನು ಕೋರಿದ. ತಮ್ಮ ದಿವ್ಯ ಶಕ್ತಿಯ ಮೂಲಕ ಋಷಿಮುನಿಗಳು ಬಾಣಾಸುರನ ಮಗಳ ಬಗ್ಗೆ ತಿಳಿದು ನಡೆದ ಘಟನೆಯನ್ನು ವಿವರಿಸಿದರು. ಇದಕ್ಕೆ ಪರಿಹಾರವನ್ನೂ ಋಷಿಮುನಿಗಳು ಶ್ರೀಕೃಷ್ಣನಿಗೆ ತಿಳಿಸಿದರು. ಸಮಸ್ಯೆಯಿಂದ ಮುಕ್ತಿ ಹೊಂದಲು ವಿಘ್ನರಾಜ ಸಂಕಷ್ಟಿ ಚತುರ್ಥಿಯಂದು ವ್ರತವನ್ನು ಆಚರಿಸುವಂತೆ ಋಷಿ ಶ್ರೀಕೃಷ್ಣನಿಗೆ ಸೂಚಿಸಿದರು. ಈ ವ್ರತದ ಫಲವಾಗಿ ಕೆಲವು ದಿನಗಳ ನಂತರ ಶ್ರೀ ಕೃಷ್ಣನು ಬಾಣಾಸುರನನ್ನು ಯುದ್ಧದಲ್ಲಿ ಸೋಲಿಸಿದನು ಮತ್ತು ಅನಿರುದ್ಧನನ್ನು ರಕ್ಷಿಸಿದನು.
ಉಪವಾಸ, ಸಂಕಷ್ಟಿ ವ್ರತ ಕಥೆ ಪಠಣ
ಈ ಸಮಯದಲ್ಲಿ ಭಕ್ತರು ಭಾರೀ ಆಹಾರವನ್ನು ಸೇವಿಸುವುದನ್ನು ತಪ್ಪಿಸುತ್ತಾರೆ. ಹಾಲು ಮತ್ತು ತಾಜಾ ಹಣ್ಣುಗಳನ್ನು ಮಾತ್ರ ಸೇವಿಸುತ್ತಾರೆ. ರಾತ್ರಿ ಚಂದ್ರನ ದರ್ಶನ ಪಡೆದು ಉಪವಾಸವನ್ನು ಅಂತ್ಯಗೊಳಿಸುತ್ತಾರೆ. ಜನರು ದೇವರ ಮೂರ್ತಿ ಮತ್ತು ಮನೆಗಳಲ್ಲಿರುವ ದೇವರ ಕೋಣೆಯನ್ನು ಹೂವುಗಳಿಂದ ಅಲಂಕರಿಸುತ್ತಾರೆ. ದೇವರಿಗೆ ಸಿಹಿ ತಿಂಡಿಗಳನ್ನು ಅರ್ಪಿಸುತ್ತಾರೆ. ಭಕ್ತರು ಗಣಪತಿಗಾಗಿ ಎಳ್ಳು-ಬೆಲ್ಲದ ಲಾಡುಗಳು ಇತ್ಯಾದಿ ವಿಶೇಷ ನೈವೇದ್ಯಗಳನ್ನು ತಯಾರಿಸುತ್ತಾರೆ. ಚಂದ್ರೋದಯದ ಮೊದಲು, ಭಕ್ತರು ಗಣೇಶನನ್ನು ಪೂಜಿಸುತ್ತಾರೆ ಮತ್ತು ಸಂಕಷ್ಟಿ ವ್ರತ ಕಥಾವನ್ನು ಪಠಿಸುತ್ತಾರೆ. ಪೂಜೆ ಮತ್ತು ಚಂದ್ರೋದಯದ ನಂತರ, ಕುಟುಂಬ ಮತ್ತು ಸ್ನೇಹಿತರಿಗೆ ಪ್ರಸಾದವನ್ನು ವಿತರಿಸಲಾಗುತ್ತದೆ. ಸಂಕಷ್ಟಿ ಚತುರ್ಥಿಯಂದು ಕೆಂಪು ಬಣ್ಣದ ಬಟ್ಟೆ ಧರಿಸುವುದು ಮಂಗಳಕರ ಎಂದು ಹಲವರು ನಂಬುತ್ತಾರೆ.