'ವಂದೇ ಭಾರತ್ ಮಿಷನ್' ವಿಶ್ವದ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆ
ಬೆಂಗಳೂರು, ಆಗಸ್ಟ್ 12 : 'ವಂದೇ ಭಾರತ್ ಮಿಷನ್' ವಿಶ್ವಮಟ್ಟದಲ್ಲಿ ಕಳೆದ 30 ವರ್ಷಗಳಲ್ಲಿ ನಡೆದ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆಯಾಗಿದೆ. ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಲು ಸರ್ಕಾರ ಕೈಗೊಂಡ ಬೃಹತ್ ಕಾರ್ಯಾಚರಣೆ ಇದಾಗಿದೆ.
ಕೊರೊನಾ ವೈರಸ್ ಸೋಂಕು ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಯಿತು. ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನಗಳ ಸಂಚಾರ ಸಂಪೂರ್ಣವಾಗಿ ರದ್ದಾಯಿತು. ಆಗ ಸರ್ಕಾರ ವಿದೇಶದಿಂದ ಭಾರತೀಯರನ್ನು ಕರೆತರಲು 'ವಂದೇ ಭಾರತ್ ಮಿಷನ್' ಕೈಗೊಂಡಿತು.
ಲಾಕ್ ಡೌನ್ ಪರಿಣಾಮ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಲಾಯಿತು. ವಿವಿಧ ದೇಶಗಳಲ್ಲಿ ಸಿಲುಕಿದ್ದ ಭಾರತೀಯರು ಸ್ವದೇಶಕ್ಕೆ ಬರಲು ಪರದಾಡುತ್ತಿದ್ದರು. ಆಗ ಸರ್ಕಾರ ಅವರನ್ನು ಕರೆತರಲು ವಿಶೇಷ ಕಾರ್ಯಾಚರಣೆ ನಡೆಸಿತು.

ಕೇಂದ್ರ ವಿದೇಶಾಂಗ ಇಲಾಖೆ ನೀಡುವ ಮಾಹಿತಿ ಪ್ರಕಾರ ಇದುವರೆಗೂ ವಿವಿಧ ದೇಶಗಳಲ್ಲಿ ಸಿಲುಕಿದ್ದ 9.5 ಲಕ್ಷ ಭಾರತೀಯರು ದೇಶಕ್ಕೆ ವಾಪಸ್ ಆಗಿದ್ದಾರೆ. ವಿದೇಶಾಂಗ ಇಲಾಖೆ ಇಂತಹ ಮಹತ್ವದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದೆ.
ವಿದೇಶಾಂಗ ಇಲಾಖೆ ವಕ್ತಾರ ಅನುರಾಗ್ ಶ್ರೀವಾಸ್ತವ್ ಈ ಕುರಿತು ಮಾಹಿತಿ ನೀಡಿದ್ದಾರೆ. "ವಂದೇ ಭಾರತ್ ಮಿಷನ್ ಅಡಿ ನಾವು 1 ಮಿಲಿಯನ್ ಜನರನ್ನು ಕರೆತರುವ ಸನಿಹದಲ್ಲಿದ್ದೇವೆ. 9.5 ಲಕ್ಷ ಜನರು ಈಗಾಗಲೇ ವಾಪಸ್ ಆಗಿದ್ದಾರೆ" ಎಂದು ಹೇಳಿದ್ದಾರೆ.
ಕೋವಿಡ್ ಸೋಂಕಿನ ಭೀತಿಯ ಕಾರಣ ವಿಮಾನಗಳ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖವಾಯಿತು. ಇದರಿಂದಾಗಿ ವಿಮಾನಯಾನ ಕಂಪನಿಗಳಿಗೆ ನಷ್ಟ ಉಂಟಾಗಲು ಆರಂಭವಾಯಿತು. ಇದರಿಂದಾಗಿ ಹಲವು ಕಂಪನಿಗಳು ಉದ್ಯೋಗ ಕಡಿತ ಮಾಡಿದವು. ಕೆಲವು ಕಂಪನಿಗಳು ವಿಮಾನ ಸೇವೆಯನ್ನು ಸ್ಥಗಿತಗೊಳಿದವು.
ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಜನರ ಸಂಚಾರ ಕಡಿಮೆ ಆಯಿತು. ಕೆಲವು ದೇಶಗಳು ಲಾಕ್ ಡೌನ್ ನಿಯಮಗಳನ್ನು ಸಡಿಲಿಸಿ ವಿಮಾನಗಳ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟವು. ಸರಕು ಸಾಗಣೆಗೆ ಬೇಡಿಕೆ ಹೆಚ್ಚಾಯಿತು.
ಭಾರತ ಹಲವು ದೇಶಗಳ ಜೊತೆ ಮಾತುಕತೆ ನಡೆಸಿ ಅಲ್ಲಿ ಸಿಲಕಿದ್ದ ಭಾರತೀಯರನ್ನು ವಾಪಸ್ ಕರೆತರಲು ಮುಂದಾಯಿತು. ಅಮೆರಿಕ, ಜರ್ಮನಿ, ಫ್ರಾನ್ಸ್ನಲ್ಲಿ ಸಿಲುಕಿದ್ದವರನ್ನು ವಾಪಸ್ ಕರೆಸಲಾಯಿತು. ಬಳಿಕ ಕೆನಡಾ, ಯುಕೆ ಮುಂತಾದ ದೇಶಗಳು ವಂದೇ ಭಾರತ್ ಮಿಷನ್ಗೆ ಒಪ್ಪಿಗೆ ನೀಡಿದವು.
ಕೋವಿಡ್ ಸೋಂಕಿನ ಭೀತಿ ಹಿನ್ನಲೆಯಲ್ಲಿ ವಿಶ್ವದ್ಯಾದ್ಯಂತ ಅಮೆರಿಕ, ಆಸ್ಟ್ರೇಲಿಯಾ, ಜಪಾನ್ಗೆ ವಿಮಾನಗಳ ಹಾರಾಟದ ಸಂಖ್ಯೆ ಶೇ 80ರಷ್ಟು ಕಡಿಮೆ ಆಯಿತು. ಚೀನಾಕ್ಕೆ ವಿಮಾನಗಳ ಸಂಚಾರ ಶೇ 94ರಷ್ಟು ಕಡಿಮೆ ಆಗಿದೆ ಎಂದು ವರದಿಗಳು ಹೇಳುತ್ತಿವೆ.












Click it and Unblock the Notifications