ಉಪ್ಪಿ-ರಜನಿ ರಾಜಕೀಯ ಜುಗಲ್ ಬಂದಿ ಸಾಧ್ಯವಿಲ್ಲ ಎಂಬುದಕ್ಕೆ 5 ಕಾರಣ
Recommended Video

ಉಪ್ಪಿ- ರಜನಿ ಇಬ್ಬರೂ ಏಕ ಕಾಲಕ್ಕೆ ಸುದ್ದಿಯಲ್ಲಿದ್ದಾರೆ. ಅದೂ ರಾಜಕೀಯ ವಿಷಯಕ್ಕೆ. ಹಾಗೆ ನೋಡಿದರೆ ರಜನೀಕಾಂತ್ ಗಿಂತ ಉಪೇಂದ್ರ ರಾಜಕಾರಣದಲ್ಲಿ ಸೀನಿಯರ್ ಆಗಿಬಿಟ್ಟರು. ಏಕೆಂದರೆ ತಮ್ಮ ಕೆಪಿಜೆಪಿ ಪಕ್ಷದ ಆರಂಭವನ್ನು ಘೋಷಿಸಿ, ಪ್ರಸ್ತಾವಿತ ಪ್ರಣಾಳಿಕೆಯನ್ನು ಜನರ ಮುಂದೆ ತಂದು, ರಾಜ್ಯದೆಲ್ಲೆಡೆ ಸುತ್ತಾಡುತ್ತಾ ಸಂಘಟನೆ ಆರಂಭಿಸಿಬಿಟ್ಟರು.
ಆದರೆ, ರಜನಿ ತಮ್ಮ ರಾಜಕೀಯ ಪ್ರವೇಶವನ್ನು ಮಾತ್ರ ತಿಳಿಸಿದ್ದಾರೆ. ಪಕ್ಷದ ಹೆಸರು, ಚಿಹ್ನೆ, ಸ್ವರೂಪ ಮತ್ತೊಂದು ಏನೂ ಬಹಿರಂಗಪಡಿಸಿಲ್ಲ. ಆದರೆ ಪರಸ್ಪರರು ಶುಭ ಹಾರೈಸಿಕೊಂಡಿದ್ದಾರೆ ಎಂಬುದು ಜಗಜ್ಜಾಹೀರಾದ ಸುದ್ದಿ. ಈ ಮಧ್ಯೆ ಇಬ್ಬರೂ ಒಟ್ಟಿಗೆ ಕೈ ಜೋಡಿಸಿ ಅಖಾಡಕ್ಕಿಳಿಯುತ್ತಾರಾ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.
ಇಬ್ಬರದೂ ಪ್ರಾದೇಶಿಕ ಪಕ್ಷ. ಇನ್ನು ಸಿನಿಮಾ ರಂಗದಿಂದಲೇ ಇಬ್ಬರೂ ಬಂದಿದ್ದಾರೆ. ಕರ್ನಾಟಕದಲ್ಲೂ ರಜನಿ ಪ್ರಭಾವ ಹಾಗೂ ತಮಿಳುನಾಡಿನಲ್ಲೂ ಅಲ್ಪ ಪ್ರಮಾಣದಲ್ಲಿ ಉಪೇಂದ್ರ ಪ್ರಭಾವಳಿ ಇರುವುದರಿಂದ ಪರಸ್ಪರರು ಕೈ ಜೋಡಿಸುತ್ತಾರಾ ಎಂಬ ಪ್ರಶ್ನೆ ಗಿರಗಿಟ್ಲೆ ಆಡುತ್ತಿದೆ. ಈ ಬಗ್ಗೆ ಇಬ್ಬರೂ ತುಟಿ ಎರಡು ಮಾಡಿಲ್ಲ.
ಆದರೆ, ಮೇಲುನೋಟಕ್ಕೆ ಈ ಸಾಧ್ಯತೆ ಕಡಿಮೆ ಇದ್ದಂತಿದೆ. ಏಕೆಂದರೆ, ಎರಡೂ ಕಡೆಯ ರಾಜಕೀಯ ಆದ್ಯತೆಗಳು ಬೇರೆ. ಇನ್ನು ಕಾವೇರಿ ವಿಚಾರ ಬಂದಾಗ ಪ್ರಾದೇಶಿಕ ಪಕ್ಷವಾಗಿ ನಿಲುವನ್ನು ತಿಳಿಸಬೇಕಾಗುತ್ತದೆ. ಆಗ ಆಯಾ ರಾಜ್ಯದ ಜನರ ಹಿತಾಸಕ್ತಿಯೇ ಮುಖ್ಯವಾಗುತ್ತದೆ. ಸ್ನೇಹ-ಪ್ರೀತಿ-ವಿಶ್ವಾಸ ಏನೇ ಇರಬಹುದು. ಆದರೆ ರಾಜಕೀಯ ಪಕ್ಷಗಳ ಮುಂದಾಳುಗಳಾಗಿ ಕೈ ಜೋಡಿಸುವುದು ಸಾಧ್ಯವೇ ಇಲ್ಲ ಎಂಬುದು ಸದ್ಯಕ್ಕೆ ಕಂಡುಬರುತ್ತಿದೆ.
ಅಷ್ಟು ವಿಶ್ವಾಸದಿಂದ ಹೇಳಲು ಏನು ಕಾರಣ ಎಂಬುದಕ್ಕೆ ಇಲ್ಲಿದೆ ಐದು ಕಾರಣ.

ಪರಸ್ಪರ ಹೊಡೆತ
ಪ್ರಾದೇಶಿಕ ಪಕ್ಷ ಅಂತಾದಾಗ ಆ ರಾಜ್ಯದ ನೆಲ, ಜಲ, ಭಾಷೆ ವಿಚಾರವಾಗಿ ರಾಜಕೀಯ ಪಕ್ಷವೊಂದು ನಿಲುವನ್ನು ಸ್ಪಷ್ಟ ಪಡಿಸುವುದು ಅಗತ್ಯ ಹಾಗೂ ಅನಿವಾರ್ಯ. ಇನ್ನು ಕರ್ನಾಟಕ ಹಾಗೂ ತಮಿಳುನಾಡಿನ ಮಧ್ಯ ಕಾವೇರಿ ನೀರಿನ ವಿಚಾರವಾಗಿ ಈಗಾಗಲೇ ವಿವಾದವಿದೆ. ಎರಡೂ ಪಕ್ಷಗಳು ಒಂದಾಗಿ ಕೈ ಜೋಡಿಸಿದರೆ ಪರಸ್ಪರ ಹೊಡೆತ ಬಿದ್ದಂತಾಗುತ್ತದೆ.

ಇಬ್ಬರ ಮಧ್ಯೆ ಅಗಾಧ ವ್ಯತ್ಯಾಸ
ಇಬ್ಬರೂ ಚಿತ್ರರಂಗದವರೇ ಆದರೂ ಉಪೇಂದ್ರ ಹಾಗೂ ರಜನೀಕಾಂತ್ ಮಧ್ಯ ಅಗಾಧ ವ್ಯತ್ಯಾಸವಿದೆ. ಉಪೇಂದ್ರ ರಾಜಕೀಯ ಪ್ರವೇಶದ ವಿಚಾರಕ್ಕೂ ರಜನೀಕಾಂತ್ ಸ್ವಂತ ಪಕ್ಷ ಆರಂಭಿಸುವುದಕ್ಕೂ ಅಜಗಜಾಂತರ. ಇಬ್ಬರೂ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಧೋರಣೆ ಹಾಗೂ ಆಲೋಚನೆ ದೃಷ್ಟಿಯಿಂದ ಭಿನ್ನ ನೆಲೆಯಲ್ಲಿದ್ದಾರೆ.

ಉಪೇಂದ್ರ ಸಿದ್ಧತೆ ಆರಂಭಿಸಿದ್ದಾರೆ
ಉಪೇಂದ್ರ ತಮ್ಮ ಪಕ್ಷದ ವಿಚಾರವಾಗಿ ಸ್ಪಷ್ಟ ಆಲೋಚನೆ ಇಟ್ಟುಕೊಂಡಿದ್ದಾರೆ. ಹಣವಿಲ್ಲದ ರಾಜಕಾರಣ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಈಗಾಗಲೇ ಪ್ರಣಾಳಿಕೆ ರೂಪಿಸಿದ್ದಾರೆ. ಅದರ ವಿಚಾರವಾಗಿಯೇ ಅಭಿಪ್ರಾಯ ಸಂಗ್ರಹ ಶುರುವಾಗಿದೆ. ಆರಂಭದಿಂದಲೂ ಸ್ಥಿರತೆ ಕಾಯ್ದುಕೊಂಡು ಉಪೇಂದ್ರ ಮುಂದಡಿ ಇಡುತ್ತಿದ್ದರೆ, ರಜನೀಕಾಂತ್ ರ ಸ್ವಂತ ಪಕ್ಷದ ಬಗ್ಗೆ ಯಾವ ವಿಚಾರವೂ ಹೊರಬಂದಿಲ್ಲ.

ರಜನಿ ಜನಪ್ರಿಯತೆಯಿಂದ ಉಪ್ಪಿಗೆ ಲಾಭ ಎಂಬ ವಾದ ಮುನ್ನೆಲೆಗೆ
ನಿರೀಕ್ಷೆಯ ವಿಚಾರಕ್ಕೆ ಬಂದರೆ ರಜನೀಕಾಂತ್ ರನ್ನು ಅದಾಗಲೇ ತಮಿಳುನಾಡಿನ ಮುಖ್ಯಮಂತ್ರಿ ಅಭ್ಯರ್ಥಿ ಅಂತಲೇ ಮಾತು ಹರಿದಾಡುತ್ತಿದೆ. ಇದು ಅಭಿಮಾನಿ ವಲಯದಲ್ಲೇ ಇರಬಹುದು ಅಥವಾ ಮಾಧ್ಯಮ ವಲಯದಲ್ಲೇ ಇರಬಹುದು. ಈ ಪರಿಯ ಅಥವಾ ಪ್ರಮಾಣದ ನಿರೀಕ್ಷೆ ಉಪೇಂದ್ರ ಹಾಗೂ ಕೆಪಿಜೆಪಿ ಬಗ್ಗೆ ಇಲ್ಲ. ರಜನೀಕಾಂತ್ ರ ಜನಪ್ರಿಯತೆಯಿಂದ ಉಪ್ಪಿಗೆ ಲಾಭ ಅನ್ನೋ ಮಾತು ಮುನ್ನೆಲೆಗೆ ಬರುವ ಸಾಧ್ಯತೆ ಇದೆ.

ಉಪೇಂದ್ರರಿಗೆ ಪ್ರಯತ್ನ ಹಾಗೂ ರಜನೀಕಾಂತ್ ಗೆ ಪ್ರತಿಷ್ಠೆ
ಉಪೇಂದ್ರ ರಾಜಕೀಯ ಪಕ್ಷ ಸ್ಥಾಪನೆ ಎಂಬುದು ಅವರೇ ಹೇಳಿಕೊಳ್ಳುವಂತೆ ಒಂದು ಪ್ರಯತ್ನ ಅಷ್ಟೇ. ಅದರಲ್ಲಿ ಸೋಲು- ಗೆಲುವು ಎಂಬ ಪ್ರಶ್ನೆಯೇ ಇಲ್ಲ. ಆದರೆ ರಜನೀಕಾಂತ್ ರಿಗೆ ಹೊಸ ಪಕ್ಷ ಎಂಬುದು ಪ್ರತಿಷ್ಠೆಯ ವಿಚಾರ. ಎರಡು ರಾಜಕೀಯ ಪಕ್ಷಗಳು ಕೈ ಜೋಡಿಸುವ ಸನ್ನಿವೇಶಗಳೇ ಬೇರೆಯಾಗಿರುತ್ತವೆ. ರಜನೀಕಾಂತ್ ರ ರಾಜಕೀಯ ಪ್ರವೇಶದ ಗಾಂಭೀರ್ಯವು ಮೇಲುನೋಟಕ್ಕೆ ಉಪೇಂದ್ರರಿಗಿಂತ ಸ್ವಲ್ಪ ಹೆಚ್ಚು ಎಂಬುದು ಸತ್ಯ.











Click it and Unblock the Notifications