ಕೋಲಾರದಿಂದ ಸಿದ್ದರಾಮಯ್ಯ? ಅಗಲು ಬಗಲಿನಲ್ಲೆಲ್ಲಾ ಹಿತ ಶತ್ರುಗಳೇ
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಎಲ್ಲಿಂದ ಸ್ಪರ್ಧಿಸಲಿದ್ದಾರೆ ಎನ್ನುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದ್ದ ವಿಚಾರವಾಗಿತ್ತು. ಬಹಳಷ್ಟು ಕ್ಷೇತ್ರಗಳ ಹೆಸರನ್ನು ತೇಲಿಬಿಡಲಾಗಿತ್ತು.
ಈ ವಿಚಾರ ಉದ್ದೇಶಪೂರ್ವಕವಾಗಿಯೇ ಸಿದ್ದರಾಮಯ್ಯನವರ ಆಪ್ತ ಬಳಗ ಹರಿಯ ಬಿಡುವ ಮೂಲಕ, ಕೇಳಿ ಬರುತ್ತಿದ್ದ ಕ್ಷೇತ್ರಗಳ ಜನರ ನಾಡಿಮಿಡಿತ ಅರಿಯಲು ಮುಂದಾಗಿದ್ದರೇ? ಅಥವಾ ಕರ್ನಾಟಕ ಕಾಂಗ್ರೆಸ್ ಮುಖಂಡರ ರಿಯಾಕ್ಷನ್ ಹೇಗಿರುತ್ತೆ ಎನ್ನುವ ಲೆಕ್ಕಾಚಾರ ಅಡಗಿತ್ತೇ ಎನ್ನುವುದೂ ಇಲ್ಲಿ ಎದುರಾಗುವ ಪ್ರಶ್ನೆ ಕೂಡಾ.
Siddaramaiah; ಕೋಲಾರದಿಂದ ಸ್ಪರ್ಧೆ, ಪ್ಲಸ್ ಪಾಯಿಂಟ್ಗಳು!
ಕೋಲಾರದಲ್ಲಿ ಭಾನುವಾರ (ನ 13) ಪೂರ್ತಿ ಭರ್ಜರಿ ಪ್ರಚಾರ ನಡೆಸಿದ ಸಿದ್ದರಾಮಯ್ಯ, ನಾಮಪತ್ರ ಸಲ್ಲಿಸಲು ಮತ್ತೆ ಬರುವುದಾಗಿ ಹೇಳುವ ಮೂಲಕ, ಬಹುತೇಕ ಕೋಲಾರ ಕ್ಷೇತ್ರವನ್ನು ತಮ್ಮ ಮುಂದಿನ ರಾಜಕೀಯ ಕರ್ಮಭೂಮಿ ಎಂದು ನಿಕ್ಕಿ ಮಾಡಿಕೊಂಡಿದ್ದಾರೆ.
ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸಲು ಬಯಸುತ್ತಾರೋ ಆ ಕ್ಷೇತ್ರಕ್ಕೆ ಹೈಕಮಾಂಡ್ ಕೂಡಾ ಅಸ್ತು ಎನ್ನಬಹುದು. ಆದರೆ, ಸಿದ್ದರಾಮಯ್ಯನವರಿಗೆ ಮೈಸೂರು ಹಳೇ ಭಾಗದ ಕ್ಷೇತ್ರವಾಗಿರುವ ಕೋಲಾರದಲ್ಲಿ ಜಯ ಅಷ್ಟು ಸುಲಭವೇ ಎನ್ನುವ ಪ್ರಶ್ನೆ ಎದುರಾದಾಗ, ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಉತ್ತರ ಸುಲಭವಲ್ಲ ಎನ್ನುವ ಮಾತು.
ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆಗೆ ಜಾಸ್ತಿ ಒತ್ತಡ ಇದೆ: ಸಿದ್ದರಾಮಯ್ಯ
ಇಬ್ಬರು ಮುಖಂಡರಾದ ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್
ಕೋಲಾರ ರಾಜಕೀಯದಲ್ಲಿ ಕಾಂಗ್ರೆಸ್ಸಿನ ಇಬ್ಬರು ಮುಖಂಡರಾದ ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ ಕುಮಾರ್ ಅವರ ಬಳಗದ ಕಾರುಬಾರುಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು. ರಮೇಶ್ ಕುಮಾರ್ ಅವರೇನೋ ಸಿದ್ದರಾಮಯ್ಯನವರ ಪರಮಾಪ್ತರು, ಆದರೆ ಮುನಿಯಪ್ಪ ಅಲ್ಲ ಎನ್ನುವುದು ಗೊತ್ತಿರುವ ವಿಚಾರ. ಅದಕ್ಕೆ ಭಾನುವಾರ ಕೋಲಾರದಲ್ಲಿ ಸಿದ್ದರಾಮಯ್ಯನವರಿದ್ದರೂ, ಮುನಿಯಪ್ಪ ಅಥವಾ ಅವರ ಪುತ್ರಿ, ಕೆ.ಜಿ.ಎಫ್ ಕ್ಷೇತ್ರದ ಜನಪ್ರಿಯ ಶಾಸಕಿ ರೂಪಾ ಶಶಿಧರ್ ಅವರಿರಲಿಲ್ಲ ಎನ್ನುವುದು ಇದಕ್ಕೆ ಕೊಡಬಹುದಾದ ಸಾಕ್ಷಿ.
ಶ್ರೀನಿವಾಸ ಗೌಡ್ರು, ಕಾಂಗ್ರೆಸ್ ಸೇರುವುದಾಗಿ ಅಧಿಕೃತವಾಗಿಯೇ ಹೇಳಿದ್ದಾರೆ
ಕಳೆದ ಚುನಾವಣೆಯಲ್ಲಿ ಕೋಲಾರದಿಂದ ಗೆದ್ದಿದ್ದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ್ರು, ಕಾಂಗ್ರೆಸ್ ಸೇರುವುದಾಗಿ ಅಧಿಕೃತವಾಗಿಯೇ ಹೇಳಿದ್ದಾರೆ. ಹಾಗಾಗಿ, ಮೇಲ್ನೋಟಕ್ಕೆ ಸಿದ್ದರಾಮಯ್ಯನವರಿಗೆ ಇಲ್ಲಿ ಕಾಂಗ್ರೆಸ್ಸಿನಿಂದ ಪ್ರತಿಸ್ಪರ್ಧಿಯಿಲ್ಲ. ಆದರೆ, ಜಿಲ್ಲೆಯ ಪ್ರಭಾವೀ ಕಾಂಗ್ರೆಸ್ ಮುಖಂಡರ ವಿಚಾರದಲ್ಲಿ ಹಲವು ಗೊಂದಲಗಳು ಇರುವುದು ಸಹಜ. ಕೋಲಾರ ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ, ಮುಳಬಾಗಿಲಿನಿಂದ ಪಕ್ಷೇತರ ಮತ್ತು ಕೋಲಾರದಿಂದ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದನ್ನು ಬಿಟ್ಟರೆ, ಮಿಕ್ಕ ಕಡೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು.
ಸಿದ್ದರಾಮಯ್ಯನವರಿಗೆ ಜೆಡಿಎಸ್ ಭಾರೀ ಪೈಪೋಟಿ ನೀಡುವ ಸಾಧ್ಯತೆ
ಸಿದ್ದರಾಮಯ್ಯನವರಿಗೆ ಜೆಡಿಎಸ್ ಭಾರೀ ಪೈಪೋಟಿ ನೀಡುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲೆಯ ಪ್ರಭಾವೀ ಮುಖಂಡರಲ್ಲೊಬ್ಬರಾದ ವರ್ತೂರು ಪ್ರಕಾಶ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. "ಸಿದ್ದರಾಮಯ್ಯನವರೇ ನಿಮಗೆ ಟೋಪಿ ಹಾಕುತ್ತಿದ್ದಾರೆ, ನನ್ನ ಸಮುದಾಯದ ನಾಯಕ ಎನ್ನುವ ಕಾರಣಕ್ಕಾಗಿ ನಿಮಗೆ ಹೇಳುತ್ತಿದ್ದೇನೆ. ಇಲ್ಲಿಂದ ಸ್ಪರ್ಧಿಸಬೇಡಿ, ಆದರೂ ಬರುವ ಹಾಗಿದ್ದರೆ ಬನ್ನಿ ನಾನು ಫೇಸ್ ಮಾಡುವುದಕ್ಕೆ ರೆಡಿ ಇದ್ದೀನಿ" ಎನ್ನುವ ಮಾತನ್ನು ವರ್ತೂರು ಪ್ರಕಾಶ್ ಬಹಿರಂಗವಾಗಿಯೇ ಹೇಳಿದ್ದಾರೆ. ಇನ್ನೊಂದು ಗಮನಿಸಬೇಕಾದ ಅಂಶವೇನಂದರೆ ಜಿಲ್ಲೆಯ ಮತ್ತೋರ್ವ ಪ್ರಮುಖ ರಾಜಕಾರಿಣಿ ಕೊತ್ತೂರು ಮಂಜುನಾಥ್ ಕೂಡಾ, ಸಿದ್ದರಾಮಯ್ಯನವರ ಕೋಲಾರದ ಪ್ರವಾಸದ ವೇಳೆ ಇರಲಿಲ್ಲ ಎನ್ನುವುದು.
ಜೆಡಿಎಸ್ ತನ್ನ ರಥಯಾತ್ರೆಯನ್ನು ಕೋಲಾರ ಜಿಲ್ಲೆಯಿಂದಲೇ ಆರಂಭಿಸಿದೆ
ಜೆಡಿಎಸ್ ತನ್ನ ರಥಯಾತ್ರೆಯನ್ನು ಕೋಲಾರ ಜಿಲ್ಲೆಯಿಂದಲೇ ಆರಂಭಿಸಿದೆ. ಕಳೆದ ಚುನಾವಣೆಗೆ ಹೋಲಿಸಿದರೆ, ಜೆಡಿಎಸ್ಸಿಗೆ ಅಲ್ಲಿ ಅನುಕೂಲಕರ ವಾತಾವರಣವಿದೆ ಎನ್ನುವುದು ಸದ್ಯದ ಗ್ರೌಂಡ್ ರಿಯಾಲಿಟಿ. ಜೊತೆಗೆ, ಮುನಿಯಪ್ಪನವರ ಮುನಿಸು ಕೂಡಾ ಸಿದ್ದರಾಮಯ್ಯನವರಿಗೆ ರಿವರ್ಸ್ ಆಗಬಹುದು. ಜೊತೆಗೆ, ತಮ್ಮ ಸಂಭಾವ್ಯ ಅಭ್ಯರ್ಥಿ ಯಾರು ಎನ್ನುವುದನ್ನು ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಗುರುತಿಸಿಯಾಗಿದೆ.
ರಮೇಶ್ ಕುಮಾರ್ ಮತ್ತು ಮುನಿಯಪ್ಪನವರಿಗೆ ಪಾಠ ಕಲಿಸಬೇಕೆಂದು ಒಂದಷ್ಟು ಬಣಗಳು, ಸಿದ್ದರಾಮಯ್ಯನವರನ್ನು ಸೋಲಿಸಬೇಕೆಂದು ಮತ್ತಷ್ಟು ಬಣಗಳಿವೆ ಎನ್ನುವುದು ಗೊತ್ತಿರುವ ವಿಚಾರ. ಹಾಗಾಗಿಯೇ, ಕೋಲಾರದಿಂದ ಸ್ಪರ್ಧಿಸಬೇಡಿ ಎನ್ನುವ ವರ್ತೂರು ಪ್ರಕಾಶ್ ಮಾತಿನಲ್ಲಿ ನಿಜವಿದ್ದರೂ ಇರಬಹುದು. ಇದೆಲ್ಲಾ ಒಂದು ಕಡೆಯಾದರೆ, ಜೆಡಿಎಸ್ಸಿನ ಸಂಭಾವ್ಯ ಅಭ್ಯರ್ಥಿ ವಕ್ಕಲೇರಿ ರಾಮು ಕ್ಷೇತ್ರದಲ್ಲಿ ಉತ್ತಮ ಹೆಸರನ್ನು ಹೊಂದಿದ್ದಾರೆ.