ನ್ಯಾಯಾಲಯಗಳಲ್ಲಿ ಸದ್ದಾಗುತ್ತಿದೆ ತಲಾಖ್ ತಲಾಖ್ ತಲಾಖ್
ನವದೆಹಲಿ, ಜೂನ್ 28: ಮುಸ್ಲಿಮ್ ಸಮುದಾಯದಲ್ಲಿ ವ್ಯಾಪಕವಾಗಿ ಇರುವ ತಲಾಖ್-ಎ-ಹಸನ್ ಮಾದರಿಯ ವಿಚ್ಛೇದನ ಪದ್ಧತಿ ವಿರುದ್ಧ ನ್ಯಾಯಾಲಯಗಳಲ್ಲಿ ದೂರು ದಾಖಲಾಗಿದ್ದು ವಿಚಾರಣೆಗಳು ನಡೆಯುತ್ತಿವೆ.
ಸುಪ್ರೀಂ ಕೋರ್ಟ್ನಲ್ಲಿ ಬೇನಜೀರ್ ಹೀನಾ ಎಂಬಾಕೆ ಅರ್ಜಿ ಸಲ್ಲಿಸಿದ್ದು, ತಲಾಖ್-ಎ-ಹಸನ್ ಪದ್ಧತಿಯನ್ನು ರದ್ದು ಮಾಡಬೇಕೆಂದು ಮನವಿ ಮಾಡಿದ್ದಾರೆ. ಈ ಆಚರಣೆಯು ಸಂವಿಧಾನವಿರೋಧಿ ಮತ್ತು ಮಹಿಳಾ ಹಕ್ಕು ವಿರೋಧಿಯಾಗಿದೆ ಎಂದು ಈ ಮಹಿಳೆ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ತ್ರಿವಳಿ ತಲಾಕ್ ಕಾಯ್ದೆ ಜಾರಿ: ವಾಟ್ಸಾಪ್ನಲ್ಲಿ ತಲಾಕ್ ನೀಡಿದವನ ಮೇಲೆ ಕೇಸ್
ವಕೀಲೆ ಅಶ್ವಿನಿ ಉಪಾಧ್ಯಾಯ್ ಈ ಮಹಿಳೆಯ ಪರ ವಕಾಲತು ವಹಿಸಿದ್ದು, ತುರ್ತು ವಿಚಾರಣೆಯ ಅಗತ್ಯ ಇದೆ ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅದಂತೆ, ಇದೇ ಜೂನ್ 17ರಂದು ಈ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿದೆ. ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿಕ್ರಮ್ ನಾಥ್ ಇರುವ ಸುಪ್ರೀಂ ಕೋರ್ಟ್ನ ರಜಾಧಿನದ ಪೀಠ ಇದರ ವಿಚಾರಣೆ ನಡೆಸುತ್ತಿದೆ.
ಇನ್ನೊಂದೆಡೆ ಡೆಲ್ಲಿ ಹೈಕೋರ್ಟ್ನಲ್ಲಿ ತಲಾಖ್-ಎ-ಹಸನ್ ಸಂಬಂಧ ಇನ್ನೊಂದು ಪ್ರಕರಣದ ವಿಚಾರಣೆ ನಡೆಯುತ್ತಿದೆ. ಅದರಲ್ಲಿ ತಲಾಖ್-ಎ-ಹಸನ್ ಪದ್ಧತಿಯು ಸಂವಿಧಾನವಿರೋಧಿಯಾಗಿದೆ ಹಾಗು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ನಿಯಮಗಳಿಗೆ ವಿರೋಧಿಯಾಗಿದೆ ಎಂದು ಮುಸ್ಲಿಮ್ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ವಿವಿಧ ನ್ಯಾಯಾಲಯಗಳಲ್ಲಿ ಒಂದೇ ರೀತಿಯ ಪ್ರಕರಣಗಳು ಪ್ರತ್ಯೇಕವಾಗಿ ವಿಚಾರಣೆಯಲ್ಲಿರುವುದು ಕುತೂಹಲ.
ಏನಿದು ತಲಾಖ್-ಎ-ಹಸನ್?
ತಲಾಖ್-ಎ-ಹಸನ್ ಎಂಬುದು ಬಹುತೇಕ ಮುಸ್ಲಿಮರಲ್ಲಿ ಇರುವ ವಿಚ್ಛೇದನಾ ಪದ್ಧತಿಯಾಗಿದೆ. ವಿವಾಹಿತರಲ್ಲಿ ಗಂಡನಿಗೆ ಇರುವ ವಿಚ್ಛೇದನಾ ಅಧಿಕಾರ ಇದಾಗಿದೆ. ಈ ಪದ್ಧತಿಯಲ್ಲಿ ಗಂಡನಾದವನು ತಿಂಗಳಲ್ಲಿ ಒಮ್ಮೆಯಂತೆ ಮೂರು ಬಾರಿ ತಲಾಖ್ ಎಂದು ಹೇಳಿದರೆ ಹೆಂಡತಿಗೆ ವಿಚ್ಛೇದನ ಕೊಟ್ಟಂತಾಗುತ್ತದೆ.
ಒಮ್ಮೆ ತಲಾಖ್ ಹೇಳಿದ ಬಳಿಕ ಒಂದು ತಿಂಗಳವರೆಗೂ ದಂಪತಿ ಒಟ್ಟಿಗೆ ಇರಬೇಕು. ಆಗ ಇಬ್ಬರ ವೈಮನಸ್ಸು ನಿಂತರೆ ತಲಾಖ್ ಹಿಂಪಡೆಯಬಹುದು. ಇಲ್ಲದಿದ್ದರೆ ಒಂದು ತಿಂಗಳ ನಂತರ ಎರಡನೇ ಬಾರಿ ತಲಾಖ್ ಹೇಳುತ್ತಾನೆ. ಮೂರನೇ ತಿಂಗಳೂ ತಲಾಖ್ ಹೇಳಿದಾಗ ಮದುವೆ ಸಂಬಂಧ ಅಂತ್ಯಗೊಂಡಂತಾಗುತ್ತದೆ.
ತ್ರಿಪಲ್ ತಲಾಖ್ ವಿರುದ್ಧ ಹೋರಾಟ ಮಾಡಿದ್ದ ಶಯರಾ ಬನೋ ಬಿಜೆಪಿ ಪಕ್ಷ ಸೇರ್ಪಡೆ
ತಲಾಖ್ ನಿಷೇಧವಾಗಿದೆಯಲ್ಲಾ?
ಕೇಂದ್ರ ಸರಕಾರ ಇತ್ತೀಚೆಗಷ್ಟೇ ತಲಾಖ್ ನಿಷೇಧ ಕಾನೂನು ಜಾರಿಗೆ ತಂದಿರುವುದು ನಿಮಗೆ ಗೊತ್ತಿರಬಹುದು. ಆ ತಲಾಖ್ಗೂ ಈಗ ಸುದ್ದಿಯಲ್ಲಿರುವ ತಲಾಖ್ಗೂ ಏನು ವ್ಯತ್ಯಾಸ ಎನಿಸಬಹುದು. ಇಲ್ಲಿ ಕೆಲ ಪ್ರಮುಖ ವ್ಯತ್ಯಾಸಗಳಿವೆ.
ತಲಾಖ್ನಲ್ಲೇ ಮೂರು ವಿಧಗಳಿವೆ. ತಲಾಖ್-ಎ-ಅಹಸಾನ್, ತಲಾಖ್-ಎ-ಹಸನ್ ಮತ್ತು ತಲಾಖ್-ಎ-ಬಿದ್ದತ್. ಕೇಂದ್ರ ಸರಕಾರ ನಿಷೇಧಿಸಿರುವುದು ತಲಾಖ್-ಎ-ಬಿದ್ದತ್ ಎಂಬ ಮಾದರಿಯ ವಿಚ್ಛೇದನಾ ಕ್ರಮವನ್ನು.
ತಲಾಖ್-ಎ-ಬಿದ್ದತ್ನಲ್ಲಿ ವಿಚ್ಛೇದನ ಪಡೆಯಲು ಬಯಸುವ ಗಂಡ ಒಮ್ಮೆಗೇ ಮೂರು ಬಾರಿ ತಲಾಖ್ ತಲಾಖ್ ತಲಾಖ್ ಎಂದು ಉಚ್ಚರಿಸಿದರೆ ಸಾಕು. ಇವತ್ತು ಡಿವೋರ್ಸ್ಗೆ ಅರ್ಜಿ ಹಾಕಿ ಇವತ್ತೇ ಪತ್ನಿಯನ್ನು ದೂರ ಮಾಡುವ ಅವಕಾಶವನ್ನು ಈ ತಲಾಖ್-ಎ-ಬಿದ್ದತ್ ನೀಡುತ್ತದೆ. ಈ ಮಾದರಿಯ ತಲಾಖ್ಗೆ ಕುರಾನ್ನಲ್ಲೂ ಸಮ್ಮತಿ ಇಲ್ಲ. ಇಸ್ಲಾಮ್ನ ಯಾವ ಹದಿತ್ ಗ್ರಂಥಗಳಲ್ಲೂ ಇದನ್ನು ಬರೆದಿಲ್ಲ. ಆದರೂ ಕೂಡ ಗಂಡಿನ ಲಾಭಕ್ಕೋಸ್ಕರ ಮತ್ತು ಸ್ವಾರ್ಥಕ್ಕೋಸ್ಕರ ತಲಾಖ್-ಎ-ಬಿದ್ದತ್ ಅಥವಾ ಟ್ರಿಪಲ್ ತಲಾಖ್ ಆಚರಣೆಯಲ್ಲಿತ್ತು.
ಹಲವು ಮುಸ್ಲಿಂ ರಾಷ್ಟ್ರಗಳು ತಲಾಖ್-ಎ-ಬಿದ್ದತ್ ಅನ್ನು ನಿಷೇಧಿಸಿವೆ. ಪಾಕಿಸ್ತಾನದಲ್ಲೂ ಇದು ನಿಷೇಧಿತವಾಗಿದೆ. ಭಾರತದಲ್ಲಿ ಇತ್ತೀಚೆಗಷ್ಟೇ ಇದರ ಅಂತ್ಯವಾಗಿರುವುದು.
ತಲಾಖ್-ಎ-ಅಹಸಾನ್ ಮತ್ತು ಹಸನ್ಗೂ ವ್ಯತ್ಯಾಸವೇನು?
ಭಾರತದಲ್ಲಿ ಈಗ ಮುಸ್ಲಿಮ್ ವಿವಾಹಿತ ಗಂಡಿಗೆ ವಿಚ್ಛೇದನ ಪಡೆಯಲು ಉಳಿದಿರುವ ಎರಡು ಪದ್ಧತಿ ಎಂದರೆ ತಲಾಖ್-ಎ-ಅಹ್ಸಾನ್ ಮತ್ತು ತಲಾಖ್-ಎ-ಹಸನ್ ಮಾತ್ರ.
ತಲಾಖ್-ಎ-ಹಸನ್ನಲ್ಲಿ ಮೇಲೆ ತಿಳಿಸಿದಂತೆ ಮೂರು ತಿಂಗಳಲ್ಲಿ ಮೂರು ಬಾರಿ ಬಾರಿ ತಲಾಖ್ ಎಂದರೆ ವಿಚ್ಛೇದನ ಪ್ರಾಪ್ತಿಯಾಗುತ್ತದೆ. ಆದರೆ, ತಲಾಖ್-ಎ-ಅಹಸಾನ್ ಪದ್ಧತಿಯನ್ನು ಬಹುತೇಕ ಹಿಂದೂ ವಿವಾಹ ಕಾಯ್ದೆಗೆ ಹೋಲಿಕೆ ಮಾಡಬಹುದು. ಅಹಸಾನ್ ತಲಾಖ್ ಮಾದರಿಯಲ್ಲಿ ಗಂಡನಾದವನು ಒಮ್ಮೆಗೇ ಮೂರು ಬಾರಿ ತಲಾಖ್, ತಲಾಖ್, ತಲಾಖ್ ಎಂದು ಹೇಳಬೇಕು. ಅದಾದ ಬಳಿಕ ಇಬ್ಬರೂ 'ಇದ್ದತ್' ಪಾಲಿಸಬೇಕು. ಅಂದರೆ, ತಲಾಖ್ ಹೇಳಿದ ಬಳಿಕ ಮೂರು ತಿಂಗಳವರೆಗೂ ಇಬ್ಬರೂ ಒಟ್ಟಿಗೆ ಇರಬೇಕು. ಈ ಅವಧಿಯನ್ನೇ ಇದ್ದತ್ ಎನ್ನುವುದು.
ಹೆಂಡತಿಯ ಮೂರು ಋತುಚಕ್ರ ಎಂಬ ಲೆಕ್ಕದಲ್ಲಿ ಮೂರು ತಿಂಗಳು ಇದ್ದತ್ ಅವಧಿ ನಿಗದಿ ಮಾಡಲಾಗಿದೆ. ಈ ಅವಧಿಯಲ್ಲಿ ದಂಪತಿಯಲ್ಲಿ ಮತ್ತೆ ಅನ್ಯೋನ್ಯತೆ ಬೆಳೆದರೆ ತಲಾಖ್ ಹಿಂಪಡೆಯಬಹುದು. ಇಲ್ಲದಿದ್ದರೆ ಇದ್ದತ್ ಅವಧಿಯ ಬಳಿಕ ಇಬ್ಬರ ಮದುವೆ ರದ್ದಾದಂತಾಗುತ್ತದೆ.
ತಲಾಖ್ ಜೊತೆಗೆ ಖುಲಾ ಮತ್ತು ಮುಬರಾತ್ ಕೂಡ ಇದೆ
ಇಸ್ಲಾಂ ಅಥವಾ ಷರಿಯಾ ಕಾನೂನಿನಲ್ಲಿ ಮೂರು ಮಾದರಿಯ ವಿಚ್ಛೇದನಾ ಕ್ರಮಗಳಿವೆ. ವಿವಾಹಿತ ಗಂಡಿಗೋಸ್ಕರ ತಲಾಖ್ ಇದೆ. ವಿವಾಹಿತ ಹೆಣ್ಣಿಗೋಸ್ಕರ ಖುಲಾ ಎಂಬ ವಿಚ್ಛೇದನಾ ಪದ್ಧತಿ ಇದೆ. ಹಾಗೆಯೇ, ಇಬ್ಬರೂ ಪರಸ್ಪರ ಒಪ್ಪಿ ವಿಚ್ಛೇದನ ಪಡೆಯಲು ಇಚ್ಛಿಸಿದರೆ ಮುಬಾರಾತ್ ಎನ್ನುವ ಕ್ರಮವೂ ಇದೆ.
ಗಂಡಿಗೆ ನೀಡಲಾಗಿರುವ ತಲಾಖ್ ಪದ್ಧತಿ ಮೂರು ಕವಲುಗಳನ್ನು ಪಡೆದುಕೊಂಡಿರುವುದನ್ನು ಗಮನಿಸಬಹುದು. ತಲಾಖ್-ಎ-ಅಹಸಾನ್ ಎಂಬ ವಿಚ್ಛೇದನಾ ಕ್ರಮ ಹೆಚ್ಚು ನ್ಯಾಯಯುತ, ಸಮಂಜಸ ಎಂಬ ಅಭಿಪ್ರಾಯ ಇದೆ. ಆದರೆ, ಹೆಚ್ಚಿನ ಮುಸ್ಲಿಮರಲ್ಲಿ ಆಚರಣೆಯಲ್ಲಿರುವುದು ತಲಾಖ್-ಎ-ಹಸನ್ ಪದ್ಧತಿ.
ಒಂದು ವೇಳೆ ತಲಾಖ್ ಪಡೆದ ವ್ಯಕ್ತಿ ಅದೇ ಹೆಣ್ಣನ್ನು ಮತ್ತೆ ಮದುವೆಯಾಗಬೇಕೆಂದರೆ ಅದು ಸುಲಭವಲ್ಲ. ಆತನ ವಿಚ್ಛೇದಿತ ಪತ್ನಿಯು ಬೇರೊಬ್ಬರನ್ನು ಮದುವೆಯಾಗಿ ಅವರಿಂದ ವಿಚ್ಛೇದನ ಪಡೆಯಬೇಕು, ಅಥವಾ ಆಕೆಯ ಹೊಸ ಪತಿ ಸಾವನ್ನಪ್ಪಿರಬೇಕು. ಆಗ ಮಾತ್ರ ವಿಚ್ಛೇದಿತ ಹೆಂಡತಿಯನ್ನು ಮರುಮದುವೆಯಾಗಲು ಸಾಧ್ಯವಾಗುತ್ತದೆ.
ಡೆಲ್ಲಿ ಹೈಕೋರ್ಟ್ನಲ್ಲಿರುವುದು ಕುತೂಹಲದ ಕೇಸ್
ತನ್ನ ಗಂಡ ತನಗೆ ತಲಾಖ್-ಎ-ಹಸನ್ ನೋಟೀಸ್ ನೀಡಿದ್ದಾರೆ. ಇದು ಸಂವಿಧಾನದ 14, 15, 21 ಮತ್ತು 25ನೇ ವಿಧಿಗೆ ವಿರುದ್ಧವಾಗಿದೆ ಎಂದು ಮುಸ್ಲಿಮ್ ಮಹಿಳೆಯೊಬ್ಬರು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿ ಹಾಕಿದ್ದಾರೆ. ಈ ಸಂಬಂಧ ಉತ್ತರ ಕೇಳಿ ನ್ಯಾಯಾಲಯವು ಈಕೆಯ ಗಂಡ ಹಾಗೂ ಡೆಲ್ಲಿ ಪೊಲೀಸರಿಗೆ ನೋಟೀಸ್ ನೀಡಿದೆ.
ಯಾವ ಧಾರ್ಮಿಕ ಸಂಸ್ಥೆಗಳಾಗಲೀ ನಾಯಕರಾಗಲೀ ಷರಿಯಾ ಕಾನೂನು ಪಾಲಿಸಬೇಕೆಂದು, ತಲಾಖ್-ಎ-ಹಸನ್ ಅನ್ನು ಒಪ್ಪಿಕೊಳ್ಳಬೇಕೆಂದು ಒತ್ತಡ ಹೇರದಂತೆ ನಿರ್ದೇಶನ ನೀಡಿ. ಧಾರ್ಮಿಕ ಗುಂಪುಗಳಿಂದ ಒತ್ತಡ ಬಂದರೆ ತನಗೆ ಪೊಲೀಸ್ ಭದ್ರತೆ ಒದಗಿಸಿ ಎಂದೂ ಈ ಮಹಿಳೆ ಹೇಳಿದ್ದಾರೆ.
2020ರ ಸೆಪ್ಟೆಂಬರ್ನಲ್ಲಿ ಈ ಮಹಿಳೆಯ ನಿಕಾ (ಮದುವೆ) ಆಗಿರುವುದು. ವರನ ಮನೆಯವರ ಬೇಡಿಕೆಯಂತೆ ಹುಡುಗನಿಗೆ ಭಾರೀ ವರದಕ್ಷಿಣೆ ಹಾಗೂ ಅದ್ಧೂರಿಯಾಗಿ ಮದುವೆ ಮಾಡಲಾಯಿತು. ಆದರೂ ಕೂಡ ಈಕೆಗೆ ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡಲಾಗುತ್ತಿತ್ತು. ಈಕೆ ದೆಹಲಿಯ ಮಹಿಳಾ ಆಯೋಗದೆದುರು ದೂರು ಕೂಡು ಕೊಟ್ಟು 2021, ಡಿಸೆಂಬರ್ನಲ್ಲಿ ಎಫ್ಐಆರ್ ಕೂಡ ಹಾಕಲಾಗಿತ್ತಂತೆ.
ತನ್ನ ವಿರುದ್ಧ ವಿಚಾರಣೆ ನಡೆದು ಕಾನೂನಿನ ಕ್ರಮ ಕೈಗೊಳ್ಳಬಹುದು ಎಂದು ಭಾವಿಸಿ ಈಕೆಯ ಗಂಡ ತಲಾಖ್ ಹಾದಿ ಹಿಡಿದಿದ್ದಾನೆ. ತಲಾಖ್-ಎ-ಹಸನ್ಂತೆ ಈಗಾಗಲೇ ಒಮ್ಮೆ ತಲಾಖ್ ಹೇಳಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ದೂರುದಾರೆ, ತನ್ನ ಮೇಲೆ ಒತ್ತಡ ಹಾಕಲು ಗಂಡ ತಲಾಖ್ ಅಸ್ತ್ರ ಪ್ರಯೋಗಿಸಿದ್ದಾರೆ. ಎಲ್ಲಾ ಪ್ರಕರಣಗಳನ್ನು ವಾಪಸ್ ಪಡೆಯಬೇಕೆಂದು ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ಧಾರೆ.
(ಒನ್ಇಂಡಿಯಾ ಸುದ್ದಿ)