ತಮಿಳುನಾಡಲ್ಲಿ 61 ವರ್ಷಗಳಿಂದ ತಾಯ್ನಾಡಿನ ಪ್ರೀತಿ ಮೆರೆಯುತ್ತಿರುವ ಕನ್ನಡ ಶಾಲೆ
ಮೈಸೂರು, ನವೆಂಬರ್. 19: ಕರ್ನಾಟಕದಲ್ಲೇ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಈ ಸಂಕೀರ್ಣ ಕಾಲಘಟ್ಟದಲ್ಲಿ ತಮಿಳುನಾಡಿನಲ್ಲಿರುವ ಕನ್ನಡ ಸಂಘ ತಾಯ್ನಾಡಿನ ಲಹರಿ ಹರಿಸುತ್ತಿದೆ. ಹೌದು, ತಮಿಳುನಾಡಲ್ಲಿ ಕನ್ನಡಿಗರ ತಂಡವೊಂದು ಕನ್ನಡ ಡಿಂಡಿಮ ಬಾರಿಸಿದೆ.
ಬರೋಬ್ಬರಿ 61 ವರ್ಷಗಳಿಂದ ನಿರಂತರವಾಗಿ ಕನ್ನಡ ಪ್ರೇಮ ಮೊಳಗಿಸುತ್ತಿದೆ. ಅಷ್ಟೇ ಅಲ್ಲ, ತಮಿಳು ಮಕ್ಕಳಿಗೂ ಕನ್ನಡ ಭಾಷೆ ಕಲಿಸುತ್ತಿದೆ. ಇದು ಚೆನ್ನೈನಲ್ಲಿರುವ ಕನ್ನಡ ಸಂಘ'ದ ಕನ್ನಡ ಸೇವೆ...!
ಚೆನ್ನೈನಲ್ಲಿರುವ ಕನ್ನಡ ಸಂಘವು ಹೈಯರ್ ಸೆಕೆಂಡರಿ ಸ್ಕೂಲ್ (10+2 ತರಗತಿವರೆಗೆ) ನಡೆಸುತ್ತಿದೆ. ಆ ಶಾಲೆಯಲ್ಲಿ 1,200 ವಿದ್ಯಾರ್ಥಿಗಳಿದ್ದಾರೆ. 1969ರಲ್ಲಿ ಈ ಶಾಲೆ ಆರಂಭಗೊಂಡಿದೆ. ಆಗ ಪ್ರಥಮ ಭಾಷೆ ಇಂಗ್ಲಿಷ್, ದ್ವಿತೀಯ ಭಾಷೆ ಕನ್ನಡವಾಗಿತ್ತು. 2006ರಲ್ಲಿ ಅಲ್ಲಿನ ರಾಜ್ಯ ಸರ್ಕಾರ ತಮಿಳು ಭಾಷೆಯನ್ನು ಕಡ್ಡಾಯಗೊಳಿಸಿತು.
ಆಗ ಅನಿವಾರ್ಯವಾಗಿ ಕನ್ನಡ ಹಿನ್ನೆಲೆಗೆ ಸರಿಯಿತು. ಆದರೆ, ಈ ಶಾಲೆಯ ಆಡಳಿತ ಮಂಡಳಿಯ ಮಾತೃಭಾಷಾ ಮೇಲಿನ ಪ್ರೇಮ ಬದಲಿ ದಾರಿಯನ್ನೂ ಕಂಡುಕೊಂಡಿತು. ಅದೆಂದರೆ ತಮಿಳುನಾಡಿನಲ್ಲಿ 5ನೇ ತರಗತಿವರೆಗೆ ಯಾವುದೇ ಶಾಲೆ ತಮ್ಮ ಇಷ್ಟದಂತೆ ಭಾಷೆಯನ್ನು ಕಲಿಸಬಹುದಂತೆ. ಹಾಗಾಗಿ ಪ್ರಾಥಮಿಕ ಶಾಲೆಯಲ್ಲಿ ತೃತೀಯ ಭಾಷೆಯಾಗಿ ಕನ್ನಡವನ್ನು ಹೇಳಿಕೊಡಲಾಗುತ್ತಿದೆ. ಮುಂದೆ ಓದಿ...

ಒಟ್ಟು 6 ಕನ್ನಡ ಸಂಘಗಳಿವೆ
ಪ್ರತಿವರ್ಷ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ನವಂಬರ್. 1ರಂದು ಸಾಂಕೇತಿಕವಾಗಿ ಸಂಘದ ಕಚೇರಿಯಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಲಾಗುತ್ತದೆ. ತಮಿಳುನಾಡಿನಲ್ಲಿ ಒಟ್ಟು 6 ಕನ್ನಡ ಸಂಘಗಳಿವೆ. ಅವರೆಲ್ಲ ಒಟ್ಟಾಗಿ ಸೇರಿ ರಾಜ್ಯೋತ್ಸವ ಸಮಾರಂಭವನ್ನು ಏರ್ಪಡಿಸುತ್ತಾರೆ.

ಗಣ್ಯಾತಿಗಣ್ಯರು ಭಾಗಿ
ಪ್ರಸ್ತುತ ಈ ಕನ್ನಡ ಸಂಘದಲ್ಲಿ ಅಧ್ಯಕ್ಷರಾಗಿ ನಿವೃತ್ತ ರೈಲ್ವೆ ಉದ್ಯೋಗಿ ವಸಂತ್ ಹೆಗ್ಡೆ, ಕಾರ್ಯದರ್ಶಿಯಾಗಿ ರವಿ ಶರ್ಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳಿಗೆ ಮಾಜಿ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪ, ಡಿ.ದೇವರಾಜ ಅರಸ್, ರಾಮಕೃಷ್ಣ ಹೆಗಡೆ, ಆರ್.ಗುಂಡೂರಾವ್, ವೀರೇಂದ್ರ ಪಾಟೀಲ್, ಮಾಜಿ ಸಚಿವೆ ಸರೋಜಿನಿ ಮಹಿಷಿ ಅವರಂತಹ ಘಟಾನುಘಟಿಗಳು ಸಾಕ್ಷಿಯಾಗಿದ್ದಾರೆ. ಒಮ್ಮೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಕೂಡ ಪಾಲ್ಗೊಂಡಿದ್ದರು.

ಸರ್ವಜ್ಞ ಹುಟ್ಟುಹಬ್ಬ ಆಚರಣೆ
ತಮಿಳುನಾಡಿನಲ್ಲಿ ಸರ್ವಜ್ಞ ಪ್ರತಿಮೆ ಸ್ಥಾಪಿಸಿದ ನಂತರ, ಕನ್ನಡ ಸಂಘದ ವತಿಯಿಂದ ಸರ್ವಜ್ಞನ ಹುಟ್ಟುಹಬ್ಬವನ್ನು ಕೂಡ ಸಾಂಕೇತಿಕವಾಗಿ ಆಚರಿಸಲಾಗುತ್ತಿದ್ದು, ಮಕ್ಕಳಿಗೆ ಸರ್ವಜ್ಞನ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಕಳೆದ ಬಾರಿ ಕಾವೇರಿ ಗಲಾಟೆ ನಡೆದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರು ಕನ್ನಡ ಸಂಘಕ್ಕೆ ಸೂಕ್ತ ಭದ್ರತೆ ಒದಗಿಸಿದ್ದರಂತೆ. ಸಂಘದ ಕಟ್ಟಡದ ಸುತ್ತ 100 ಮೀ.ಅಂತರದಲ್ಲಿ ಪೊಲೀಸ್ ಪಹರೆ ಹಾಕಲಾಗಿತ್ತಂತೆ.

ಸಂಘ ಹುಟ್ಟಿದ್ದು ಹೀಗೆ...
1955ರಲ್ಲಿ ಹುಬ್ಬಳ್ಳಿ ರೈಲ್ವೆ ಇಲಾಖೆಯಲ್ಲಿ ಉದ್ಯೋಗಿಗಳಾಗಿದ್ದ ಸುಮಾರು 40 ಮಂದಿಯನ್ನು ಚೆನ್ನೈ(ಅಂದಿನ ಮದ್ರಾಸ್)ನಲ್ಲಿರುವ ಕೋಚ್ ತಯಾರಿಕೆ ಕಾರ್ಖಾನೆಗೆ ವರ್ಗಾವಣೆ ಮಾಡಲಾಯಿತು. ಅವರ ಪೈಕಿ ರವಿ ಶರ್ಮ ಅವರ ತಂದೆ ಎಸ್.ಎಲ್.ಶರ್ಮ, ಗಂಗಾಧರಯ್ಯ, ಕೃಷ್ಣಸ್ವಾಮಿ ಎಂಬುವವರೂ ಇದ್ದರು.
ತಮಿಳುನಾಡಿನಲ್ಲಿ ಒಂದೆಡೆ ವಾಸವಾಗಿದ್ದ ಇವರಲ್ಲಿ ತಾಯ್ನುಡಿ, ತಾಯಿನಾಡಿನ ಮೇಲಿನ ಸೆಳೆತ ಅದ್ಯಮವಾಗಿತ್ತು. ಅದರ ಫಲವಾಗಿ 1956ರಲ್ಲಿ ಸಂಘ ಸ್ಥಾಪಿಸಿದರು. ಚೆನ್ನೈನ ಐನಾವರಂನಲ್ಲಿ ಕನ್ನಡ ಸಂಘದ ಸ್ವಂತ ಕಟ್ಟಡವನ್ನು ನಿರ್ಮಿಸಲಾಗಿದೆ. ಪರಸ್ಪರ ಸಹಕಾರದಿಂದ ಸಂಘವನ್ನು ಮುನ್ನಡೆಸಿ, 1969ರಲ್ಲಿ ಶಾಲೆಯನ್ನೂ ತೆರೆದರು. ಕನ್ನಡ ಸೇವೆಗೆ ಹಲವು ದಾರಿ ತೆರೆದುಕೊಂಡಿತು. ಇದೀಗ ಕರ್ನಾಟಕದಿಂದ ಗಣ್ಯರು, ಕಲಾವಿದರನ್ನು ಆಹ್ವಾನಿಸುವುದನ್ನೂ ರೂಢಿಸಿಕೊಂಡಿದ್ದಾರೆ.











Click it and Unblock the Notifications